ಸೋಮವಾರ, ಮೇ 18, 2026
ಧರ್ಮ ಯುದ್ಧ - ಡಾ. ನಾ. ಮೊಗಸಾಲೆ
ಡಾ. ನಾ. ಮೊಗಸಾಲೆ ಯವರ "ಧರ್ಮ ಯುದ್ಧ", 213 ಪುಟಗಳ ಕಾದಂಬರಿಯು ಅತ್ಯಂತ ಸುಂದರವಾದ ಓದಿಸಿಕೊಂಡು ಹೋಗುವ ಕೃತಿ. ಈ ಕಾದಂಬರಿಯನ್ನು ಮೊಗಶಾಲೆಯವರು 10/6/2020 ರಿಂದ 9/7/2020 . ಅಂದರೆ ಇತ್ತೀಚಿನ ಕಾಲಘಟ್ಟದಲ್ಲಿ ಒಂದು ತಿಂಗಳಲ್ಲಿ ಬರೆದ ಕೃತಿ. ಇದೊಂದು ಪ್ರಾದೇಶಿಕ ಕಾದಂಬರಿ, ಕರಾವಳಿ ಕರ್ನಾಟಕದಲ್ಲಿ, ಅದರಲ್ಲಿ ಮುಖ್ಯವಾಗಿ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯ ಬಹುದಾದ ವಸ್ತುವುಳ್ಳ ಕೃತಿ.
ಸುರಪುರ ಎಂಬ ಗ್ರಾಮದ ಹತ್ತಿರದಲ್ಲಿ ಒಂದು ಸಣ್ಣ ಗುಡ್ಡೆ (Hill) , ನಂತರ ಇದನ್ನು "ಪಂಜುರ್ಲಿ ಗುಡ್ಡೆ" ಎಂದು ಗ್ರಾಮಸ್ತರು ನಂಬಿದ್ದರು. ಅಲ್ಲಿಯ ಸೂರಪ್ಪನ ಮನೆಯ ಬಾವಿಯಲ್ಲಿ ಮೂರು ಕರಿ ಬೆಕ್ಕುಗಳು ಬಿದ್ದ ಘಟನೆಯಿಂದ ಪ್ರಾರಂಭವಾದ ಕಥೆ ಮುಂದೆ ಹಲವಾರು ಮಜಲುಗಳನ್ನು ದಾಟಿ, ಪಂಜುರ್ಲಿ ಗುಡ್ಡೆಯ ಅಭಿವೃದ್ದಿ, ಜನರ ನಂಬಿಕೆ, ಮೂಡ ನಂಬಿಕೆ, ರಾಜಕೀಯ ಒಳಸುಳಿವು, ಆಷ್ಟ ಮಂಗಳ ಪ್ರಶ್ನೆ, ಬ್ರಹ್ಮ ಕಳಶ, ಜನರ ಶ್ರಮದಾನ, ಇನ್ನೂ ಹಲವಾರು ವಿಷಯಗಳು ಬಂದು ಕಥೆ ಮುಂದುವರಿಯುತ್ತದೆ.
ಗ್ರಾಮದ ಪ್ರತಿಷಿತ ವ್ಯಕ್ತಿ ಜಯರಾಮ ಹೆಗ್ಡೆ, ಪಂಚಾಯತ್ ಅಧ್ಯಕ್ಷ ಶೇಶಪ್ಪ, ಇನ್ನೋರ್ವ ಪ್ರಭಾವಿ ವ್ಯಕ್ತಿ ಕೋಟೆಯವರು, ವೆಂಕಪ್ಪ ಮಾಸ್ತರು, ರಾಗು, ಹೊರಗಿನಿಂದ ಬಂದು ಊರಲ್ಲಿ ಪ್ರಭಾವಿಯಾದ ಸುಕುಮಾರ (ಸುಕ್ಕ, ಸುಕ್ಕಅಣ್ಣ), ಕೇಳು ಪಂಡಿತರು, ಪೊದುವಾಳರು, ಶ್ರೀಕಾಂತ ಭಟ್ಟರು, ತಂತ್ರಿಗಳು, ಇನ್ನೂ ಹಲವಾರು ವ್ಯಕ್ತಿಗಳು ಕಾದಂಬರಿಯಲ್ಲಿ ಬಂದು ಓದುಗರ ಗಮನ ಸೆಳೆಯುತ್ತದೆ.
















































