Wednesday, April 29, 2020

SHRADDHANJALI - SUNANDA SOMAYAJI (DODDA)

Wednesday, 29th April 2020
Bengaluru

Sunanda Atthige was married to my eldest brother Seetharama Somayaji when I was 5+ years old. I vaguely remember the event. My brother was working as hotel manager at Hubballi.


I used to eagerly wait to go to Hubballi during the school holidays. Atthige is very affectionate woman, she used to look after us very well, preparing nice eatables. Her brother Ramachandra Hebbar, almost my age, also used to come to Hubballi from Bangalore. We used to have nice time roaming around the the city, going to movie, running to hotel to hot idlies in the morning. 

Later, my brother shifted to Shimoga, to work in another hotel, they were living in a small house in Durgi Gudi. There also during school holidays, It was pleasure for me to go there and spend time and eat nice food prepared by atthige.They used to have lot of relations and friends visiting them and she was never tired to prepare breakfast, lunch and dinner. They have two daughters, Usha and Sandhya.

MEMORIES

Years passed, Usha got married to Suresh, Software Engineer, working in USA, my sister's son and Sandhya got married to Sadaram, who was working in the Bank. I also went abroad to work. When we come during holidays it was a must for us to visit them and spend few days.

They shifted to Bangalore and living with daughter, Usha, in Kengeri House. They also visited USA, couple of times, when Suresh was working there.

UTTARA KRIYA RITUALS AT VAIDIKA MANDIRA, CHAMARAJA PETE, BENGALURU


Sunday, 10/5/2020
In 2017 October, my brother Seetharama Somayaji passed away, and after that dodda became ill and deteriorating in her health conditions. She was suffering from dementia, weakness and she breathed her last in the morning of Wednesday, 29th April 2020.

Her remains were cremated at Kengeri Crematorium, where me and Rishi went to attend. As it was during lockdown period due to COVID19, I took permission/pass from police station to go.

UTTARA KRIYA RITUALS 10/5/2020

That was the end of very affectionate and God fearing lady. I must say that Sandhya and Sadaram looked after her very well when she was bedridden for a year.

REST IN PEACE

MAY HER SOUL REST IN PERFECT PEACE.

Posted Thursday, 30th April 2020




Sunday, April 26, 2020

SHRADDHANJALI - SUNANDA HEBBAR

Thursday, 23rd April 2020
Bengaluru

SUNANDA HEBBAR
Sunanda is the daughter of Radha-IPS Nagappaya at Shivamogga.

Radhakka is one of seven daughters, of my doddappa, Shankaranarayana Somayaji



Sunanda's husband is Dr. Hebbar, retired from services at Agricultural University, Bengaluru.

at a function in Vidyapeetha, Bengaluru

She passed away last Thursday, 23th April, due to cardiac arrest at the age of 67 years.

ನಮ್ಮನ್ನಗಲಿದ ಸೌಮ್ಯ ವದನೆ, ಮೃದುಭಾಷಿ, ಸಹನಾಶೀಲೆ.. 
ಸುನಂದಕ್ಕಳಿಗೆ ಅರ್ಪಿತವಾದ ಶ್ರದ್ಧಾಂಜಲಿ ಕವನ... 

1950ರ ಆಸು - ಪಾಸಿನಲಿ ಶ್ರೀ ನಾಗಪ್ಪಯ್ಯ - ಶ್ರೀಮತಿ ರಾಧಾ ದಂಪತಿಗಳ
ಮಡಿಲಲ್ಲಿ ಉದಯಿಸಿತು ದಿವ್ಯ ಜ್ಯೋತಿಯ ಹಾಗೆ ಒಂದು ಪುಟ್ಟ ಕಂದ ll
ಹರುಷದ ಹೊನಲು ಹರಿಸಿ ಆಗಮಿಸಿದ ಈ ಕನ್ನಿಕೆಯ
ಆಟ-ಪಾಠಗಳ ನೋಡುವುದರಲ್ಲೇ ಪಾಲಕರಿಗಾಯಿತು ನಿತ್ಯ ಆನಂದ ll1ll

ವರುಷಗಳು ಕಳೆದಂತೆ ನೋಡ ನೋಡುತ್ತಲೇ ಬೆಳೆದು ನಿಂತ ಮಗಳ
ಕುರಿತು ಹೆತ್ತವರು ಬಣ್ಣಿಸಲಾರಂಭಿಸಿದರು ಅವಳ ಅಂದ-ಚಂದ ll
ಆದರೇನು ಮಾಡುವುದು..? ಜನನಿ-ಜನಕರಿಗೆ ಅನಿವಾರ್ಯವಾಯಿತು
ಪ್ರೀತಿಯ ಪುತ್ರಿಗೆ ಹುಡುಕುವುದು ಅನುರೂಪನಾದ ಸಂಬಂಧ ll2ll

ದ್ವಾರಕಾಧೀಶ ಸಮಾನ ಪತಿಯ ಕೈ ಹಿಡಿದ ಬಳಿಕ ಈಕೆಗೆ ಎದುರಾಯಿತು
ಕುಟುಂಬ ನಿರ್ವಹಣೆಯ ಜೀವನ ಮಾರ್ಗದ ಬೇಕು-ಬೇಡಗಳ ಪದಬಂಧ ll
ವರುಷ ತುಂಬಿತು ಎನಲು ರತ್ನ ಸಮಾನ ಸುಪುತ್ರಿಯು ಜನಿಸಿ,
ಬೆಳಕ ಹೊತ್ತು ಬಂದಂತೆ ಮಾತೃ ಹೃದಯಕೆ ತಂದಳು ನಿತ್ಯ ಸೌಗಂಧ ll3ll

ಹೀಗೆ ಬದುಕು ಸಾಗಿರಲು, ಅಸಾಮಾನ್ಯ ಮುತ್ತು-ರತ್ನಗಳಂತೆ ಕಂಗೊಳಿಸುವ
ದ್ವಿ-ಪುತ್ರರು ಆಗಮಿಸಿ, ಮನೆಯನ್ನು ಪರಿವರ್ತಿಸಿದರು ಗೋಕುಲದ ನಂದ ll
ಪತಿಗೆ ನೆಚ್ಚಿನ ಸತಿಯಾಗಿ, ಕೈ ಜೋಡಿಸಿ ಮೆಲ್ಲನೆ ಉನ್ನತಿಯೆಡೆಗೆ ಹೆಜ್ಜೆಯ ಇಡುತ,
ಸದ್ದು ಮಾಡದೇ, ಮುದ್ದಿನ ಮಕ್ಕಳಿಗೆ ಅಕ್ಕರೆಯ ಅಮ್ಮನಾಗಿ ತುಂಬಿದಳು ಮಕರಂದ ll4ll

ಒಡಹುಟ್ಟಿದವರುಗಳು ಬದುಕು ಕಟ್ಟಿಕೊಳ್ಳಲು ಹಂತ-ಹಂತವಾಗಿ ಭದ್ರ ಬುನಾದಿ ರೂಪಿಸುತ್ತಾ,
ಸಂಸಾರ-ಸಂಸ್ಕಾರಗಳ ಅರಿವು ಮೂಡಿಸಿ, ನಾಂದಿ ಹಾಡಿದಳು ಕಲಿಸುತ್ತ ಅನುಬಂಧ ll
ತುಂಬಿದ ಮನೆಯಲ್ಲಿ ಮಕ್ಕಳು- ಮೊಮ್ಮಕ್ಕಳು- ನೆಂಟರಿಷ್ಟರು- ಪ್ರೀತಿ ಪಾತ್ರರಿಗೆ ಸಲಹುತ್ತ,
ಬಿಡುವಿನ ವೇಳೆಯಲ್ಲಿ ಭಗವನ್ನಾಮ ಸ್ಮರಿಸುತ್ತಾ, ನೆಮ್ಮದಿಯ ಮುಕ್ತಿ ಬೇಡಿದಳು ಸುದೈವದಿಂದ ll5ll

ಅದೇಕೋ ಕಾಣೆ..? ಇನ್ನೂ ಈಕೆಯ ಆಕಾಂಕ್ಷೆಗಳ ಪಟ್ಟಿ ತಯಾರಾಗುತ್ತಿದೆ ಎಂದೆಣಿಸಿರುವಾಗಲೇ..,
ಈಕೆ ಅಸೌಖ್ಯದೆಡೆಗೆ ಹೆಜ್ಜೆ ಇಡುವುದನ್ನು ಬಲ್ಲವನಾಗಿರುವಂತೆ ತೋರುತ್ತದೆ ದೇವ ಗೋವಿಂದ ll
ಅನಂತ ಮಮತಾಮಯಿ, ಅನನ್ಯ ವಾಮನಮೂರ್ತಿಯ "ಪ್ರಾಣ ವನ್ನು ಸ್ವರ್ಗದಲ್ಲಿ ಸ್ಥಾಪಿಸಲು ಸಿದ್ಧರಾಗಿ"
ಬಂದ ಕಾಲದೂತರು, ನಂಬಿದವರಿಗೆ ಸಿಡಿಲಾಘಾತ ನೀಡಿ, "ದೇವಿ ಸುನಂದೆ" ಯನು ಕರೆದೊಯ್ದರು ಅವಸರದಿಂದ.. ll6ll
🕯️🕯️💐💐🙏🙏
✍️ ಗೋಪಾಲ ರಾವ್ ಬಿ.ಎಸ್., ಶಿಕಾರಿಪುರ.

She has a daughter Roopa, owner and CEO of Wellness Center at SahakaraNagara, Bengaluru and two sons, one working in Australia and the other working in Bengaluru.


We missed their son's wedding couple of years ago, at Tamarind Tree Resort.


May her soul rest in Peace.

Posted 27th April 2020

Saturday, April 25, 2020

ಶೋಭಾಳ ಬರಹಗಳು (ಭಾಗ 2 ) - ಪರಿಸರ, ಅನುಭವ

April - May- June 2020

ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ  ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ.
===========================================================


82. ಹೊಂಗಿರಣ - ನೆನಪುಗಳು 
ನನಗಿನ್ನೂ ನಾವು ನಮ್ಮದೇ ಜಾಗದಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸಿದ ಆ ದಿನಗಳ ನೆನಪು ಹಸಿಯಾಗಿದೆ. ಕಟ್ಟಡ ಶಿಲಾನ್ಯಾಸವನ್ನು ಶ್ರೀಯುತ ಕೆ.ವಿ. ಸುಬ್ಬಣ್ಣನವರು ಮಾಡಿದರು. ಜೊತೆಗೆ "ಇಡುವ ಪ್ರತೀ ಹೆಜ್ಜೆಯನ್ನು ಆಲೋಚಿಸಿ ಇಡಿ" ಎನ್ನುವ ಕಿವಿ ಮಾತನ್ನು ಕೂಡ ಹೇಳಿದರು.
ಕಟ್ಟಡ ಕಟ್ಟೋಣ ಸುಲಭದ ಕೆಲಸವಲ್ಲ. ನಮ್ಮ ಗಡಿಬಿಡಿಗೆ ಬೇಕಾದ ವೇಗದಲ್ಲಿ ಕಟ್ಟಡ ಕಟ್ಟಿ ಮುಗಿಯುವುದಿಲ್ಲ. ಕೆಲಸಗಾರರು ತಮ್ಮದೇ ಆದ ಓಘದಲ್ಲಿ ಕಟ್ಟುತ್ತಿರುತ್ತಾರೆ. ನಮಗಿರುವ ಅವಸರ ಅವರಿಗಿರುವುದಿಲ್ಲವಲ್ಲ! ಅವರಿಗೆ ಒಟ್ಟಿನಲ್ಲಿ ಅವರ ಕೆಲಸ ಆದರಾಯಿತು. ತೆಗೆದುಕೊಳ್ಳುವ ಸಮಯ ಎಷ್ಟಾದರೂ ಆವರಿಗೇನೂ ತಲೆ ಬಿಸಿ ಇರುವುದಿಲ್ಲ. ನಮಗೆ ಜೂನ್ ತಿಂಗಳು ಪ್ರಾರಂಭವಾಗುವುದರ ಒಳಗೆ ಕಟ್ಟೋಣ ಮುಗಿಸಬೇಕಾದ ಧಾವಂತ ಇತ್ತು. ಎರಡನೇ ಶೈಕ್ಷಣಿಕ ವರ್ಷದ ದಾಖಲಾತಿ ಕೂಡಾ ಮಾಡಲು ಪ್ರಾರಂಭಿಸಿ ಆಗಿತ್ತು. ಏಳನೇ ತರಗತಿಯವರೆಗೆ ಒಂದೊಂದು ಸೆಕ್ಷನ್ ಕ್ಲಾಸ್ ನಡೆಸಲು ಎಂಟು ಕೊಠಡಿಗಳು, ಒಂದು ಆಫೀಸು ರೂಮ್, ಒಂದು ಹಾಸ್ಟೆಲ್ ಕೊಠಡಿ, ಒಂದು ಲೈಬ್ರರಿ ಮತ್ತು ಲ್ಯಾಬ್ ಕೊಠಡಿ... ಹೀಗೆ ಹತ್ತನ್ನೆರಡು ಕೊಠಡಿಗಳ ಅಗತ್ಯವಿತ್ತು. ಪ್ರೈಮರಿಗಂತೂ ನಮ್ಮ ಕಲ್ಪನೆಯ ಅಷ್ಟ ಭುಜಾಕೃತಿಯ ಕೊಠಡಿಗಳು ನಮ್ಮ ಆದ್ಯತೆಯಾಗಿತ್ತು. ಕತ್ತಲಾದರೂ ಕೆಲಸಗಾರರನ್ನು ಹೋಗಬಿಡದೆ ಕೆಲಸ ಮಾಡಿಸುತ್ತಿತ್ತು. ಅಲ್ಲಿ ಅಡುಗೆ ಮಾಡಲು ವ್ಯವಸ್ಥೆ ಇರದಿದ್ದ ಕಾರಣ ಕಟ್ಟಡ ಕಟ್ಟುವ ಜಾಗದಲ್ಲಿಯೇ ಕಲ್ಲುಗಳನ್ನಿಟ್ಟು ರೇಖಾ, ಶಂಕರಿ ಅನ್ನ ಮಾಡಿ ಬಸಿಯುತ್ತಿದ್ದರು. ಕೆಲಸಗಾರರಿಗೂ ಊಟ ಕೊಡಬೇಕಾಗಿದ್ದ ಕಾರಣ ಅಲ್ಲಿಯೇ ಜುಗಾಡ್ ಅಡುಗೆ ಮಾಡಲಾಗುತ್ತಿತ್ತು. ಆಗ ಅದೆಲ್ಲ ಕೆಲವೊಮ್ಮೆ ಕಿರಿಕಿರಿ ಅನಿಸಿದರೂ ಈಗ ಅದರ ಬಗ್ಗೆ ಯೋಚಿಸಿದಾಗ ಥ್ರಿಲ್ ಆಗುತ್ತದೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕನ್ನು ನಡೆಸಿ ಗೆದ್ದು ಬಂದ ಬಗ್ಗೆ ಹೆಮ್ಮೆ ಎನಿಸುತ್ತದೆ.
2004ರ ಜೂನ್ ನಲ್ಲಿ ಅರ್ಧಂಬರ್ಧ ಮುಗಿದ ಕಟ್ಟಡಗಳಲ್ಲಿ ಒಂದು ತಿಂಗಳು ತರಗತಿ ನಡೆಸಿದೆವು. ಜುಲೈ ಹೊತ್ತಿಗೆ ಹಿಡಿದಿದ್ದ ಕಟ್ಟಡ ಕೆಲಸ ಮುಗಿದು ನಾವೆಲ್ಲ ಹೊಂಗಿರಣ ಕ್ಯಾಂಪಸ್ ಗೆ ಶಿಫ್ಟ್ ಆದೆವು.
ಆಗೆಲ್ಲ ಒಂದಿದ್ದರೆ ಒಂದಿಲ್ಲದ ಕಾಲ. ಇನ್ನೂ ಕಚ್ಛಾ ಸ್ಥಿತಿಯಲ್ಲಿದ್ದ ಕ್ಯಾಂಪಸ್. ನಾನು, ರವಿ, ಮಕ್ಕಳು, ಶಂಕರಿ, ಅಡುಗೆಯ ಜಗ್ಗಣ್ಣ, ಕೆಲಸದವರು, ಹನ್ನೆರಡು ಹಾಸ್ಟೆಲ್ ಮಕ್ಕಳು, ಎಂಟ್ಹತ್ತು ಜನ ರೆಸಿಡೆನ್ಶಿಯಲ್ ಟೀಚರ್ಸ್... ಇದು 24/7 ಕ್ಯಾಂಪಸ್ಸಿನಲ್ಲಿ ಇರುತ್ತಿದ್ದ ಜನಸಂಖ್ಯೆ😊 ಉಳಿದಂತೆ ಆ ವರ್ಷ ಒಟ್ಟಿನಲ್ಲಿ 160+ ಮಕ್ಕಳು ಹೊಂಗಿರಣದ ಆಸ್ತಿಯಾಗಿದ್ದರು. ಇರುವ ಸೀಮಿತ ಸೌಲಭ್ಯಗಳಲ್ಲಿ ನಾವೆಲ್ಲರೂ ಖುಷಿಯಾಗಿ ನಮ್ಮ ಕೆಲಸಗಳಲ್ಲಿ ತೊಡಗಿಕೊಂಡದ್ದು, ಮಕ್ಕಳನ್ನು ಮುಕ್ತ ವಾತಾವರಣದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟದ್ದು ಎಲ್ಲವು ಒಂದು ಕನಸಿನಲ್ಲಿ ನಡೆದಂತೆ ಅನಿಸುತ್ತಿದೆ. ಮಾಡಲೇ ಬೇಕೆನ್ನುವ ಮನಸ್ಸಿದ್ದಲ್ಲಿ, ಛಲವಿದ್ದಲ್ಲಿ ಆಗಬೇಕಾದ ಕೆಲಸ ಆಗಿಯೇ ಆಗುತ್ತದೆ ಎನ್ನುವುದಕ್ಕೆ ಹೊಂಗಿರಣ ಒಳ್ಳೆಯ ಉದಾಹರಣೆಯಲ್ವೆ?

81. ಹೊಂಗಿರಣ - ನೆನಪುಗಳು 
ನಾವು 2003ರಲ್ಲಿ ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿಯ ಗೋಡೌನ್ ನಲ್ಲಿ ಶಾಲೆ ಪ್ರಾರಂಭಿಸಿದ್ದೇನೋ ಸರಿ. ನಮ್ಮದೇ ಆದ ಸ್ವಂತ ಜಾಗ ಆಗಬೇಕಿತ್ತು. ಜಾಗದ ಹುಡುಕಾಟ ಅಮಟೆಕೊಪ್ಪದಲ್ಲಿಯೇ ಆಗಬೇಕಿತ್ತು. ಅಲ್ಲೋ ಎಲ್ಲಾ ಕಡೆ ಬರೀ ನೀಲಗಿರಿ ಅಥವಾ ಅಕೇಶಿಯ ಪ್ಲಾಂಟೇಶನ್. ಯಾರೂ ಜಾಗ ಮಾರುವವರಿರಲಿಲ್ಲ. ಹೀಗಾಗಿ ಮೈನ್ ರಸ್ತೆಯಿಂದ ಸ್ವಲ್ಪ ಒಳಗಿರುವ ಜಾಗ ಹುಡುಕತೊಡಗಿತು. ಆಗ ಕಂಡದ್ದು ಹೆಗ್ಗೋಡಿನ ಹಿರಿಯಣ್ಣ ಭಾಗಿಯವರ ಆರು ಎಕರೆ ಜಾಗ. ಮುಖ್ಯ ರಸ್ತೆಯಿಂದ ಒಳಗಿದ್ದ ಕಾರಣ ಅದಕ್ಕೆ ಅಪ್ರೋಚ್ ರೋಡಿನ ಅಗತ್ಯವಿತ್ತು. ಹೀಗಾಗಿ ಮತ್ತಿಕೊಪ್ಪದ ಜಯಪ್ರಕಾಶ್ ಹೆಗ್ಡೆಯವರಿಂದ ಅಪ್ರೋಚ್ ರಸ್ತೆಗಾಗಿ ಹತ್ತು ಗುಂಟೆ ಜಾಗ ಖರೀದಿಸಲಾಯಿತು. ತದನಂತರ ಭಾಗಿಯವರ ಆರು ಎಕರೆ ಜಮೀನನ್ನು ಖರೀದಿ ಮಾಡಿದೆವು. ಅದೊಂದು ಸಹಜವಾಗಿ ಇಳಿಜಾರಿದ್ದ ಜಾಗವಾಗಿತ್ತು. ಮಳೆನೀರು ಹರಿದು ಹೋಗುತ್ತಾ ಮಣ್ಣಿನ ಫಲವತ್ತತೆಯನ್ನೂ ತೆಗೆದುಕೊಂಡು ಹೋಗಿತ್ತು. ಜಾಗದ ಜಾರಿಕೆ ಜಾಸ್ತಿ ಇತ್ತು. ಆದರೆ ಅದೊಂದು ಸಹಜ ಸುಂದರವಾದ ಜಾಗವಾಗಿತ್ತು. ಸೊಪ್ಪಿನ ಬೆಟ್ಟವಾಗಿದ್ದ ಕಾರಣ ಮರಗಳೆಲ್ಲ ಮೋಟಾಗಿದ್ದವು. ಕವಲು ಮರಗಳೇ ಹೆಚ್ಚಿದ್ದವು. ಹೀಗಾಗಿ ನಾವು ಕಟ್ಟಡ ಕಟ್ಟುವಾಗ ಮರಗಳನ್ನು ಕಡಿಯುವ ಪ್ರಸಂಗ ಬಂದದ್ದು ಕಡಿಮೆ. ನಾವು ಕಟ್ಟಡ ಕಟ್ಟುವುದರ ಜೊತೆಗೆ ಬರಡಾಗಿದ್ದ ಆ ಜಾಗದಲ್ಲಿ ಗಿಡಮರ ಬೆಳೆಸಿ ಹಸಿರಾಗಿಸಿದ ತೃಪ್ತಿ ನನಗಿದೆ.
ಜಾಗದ ಖರೀದಿ ಆದ ಮೇಲೆ ನೀರಿಗಾಗಿ ಬಾವಿ ತೋಡಿಸಿದ್ದಾಯಿತು. ತದನಂತರ ಜಾಗದ ಮೇಲ್ತಟ್ಟಿನ ಎಡ ಪಕ್ಕದಲ್ಲಿ ಅಷ್ಟ ಭುಜಾಕೃತಿಯ ಆರು ತರಗತಿಯ ಕೋಣೆಗಳನ್ನು ಕಟ್ಟಲು ಪ್ರಾರಂಭಿಸಿತು. ಜೊತೆ ಜೊತೆಗೆ ಬಲ ಭಾಗದಲ್ಲಿ 24/20ರ ಅಳತೆಯ ಐದು ತರಗತಿಗಳಿದ್ದ ಉದ್ದನೆಯ ಕಟ್ಟಡವನ್ನು ಸಿಮೆಂಟಿಗೆ ಬದಲು ಜಂಬಿಟ್ಟಿಗೆ ಹಾಗೂ ಮಣ್ಣು ಬಳಸಿ ಕಟ್ಟಲಾಯಿತು. ಅದಕ್ಕೆ ಅಕೇಶಿಯ ಮರದ ಬೊಡ್ಡೆಯಿಂದ ಮಾಡನ್ನು ಮಾಡಿ ಹೆಂಚು ಹೊದಿಸಲಾಯಿತು. ಅಷ್ಟ ಭುಜಾಕೃತಿಯ ಕಟ್ಟಡಗಳ ಕೆಳತಟ್ಟಿನಲ್ಲಿ ಮಣ್ಣು, ಜಂಬಿಟ್ಟಿಗೆ, ಅಕೇಶಿಯ ಮರದ ತುಂಡುಗಳನ್ನು ಬಳಸಿ ಒಂದು ಸಣ್ಣ ಅಡುಗೆ ಮನೆ ಹಾಗೂ ಅಡಿಕೆ ಸೋಗೆ ಬಳಸಿ ಮಾಡಿದ ಊಟದ ಮನೆ ಹಾಗೂ ನಾನು, ರವಿ, ಮಕ್ಕಳು ಉಳಿಯಲು ಅದಕ್ಕೆ ತಾಗಿಕೊಂಡಂತೆ ಮಣ್ಣು, ಜಂಬಿಟ್ಟಿಗೆ, ಕಲ್ಲಿನ ಕಂಬ ಬಳಸಿ ಕಟ್ಟಿದ 15/20 ಅಡಿಯ ಒಂದು ಹಾಲ್ ಕಟ್ಟಿ ನೆಲಕ್ಕೆ ಕಡಪ ಕಲ್ಲನ್ನು ಹಾಸಲಾಯಿತು. ಹೀಗೆ 2004ರ ಜುಲೈ ತಿಂಗಳಲ್ಲಿ ನರ್ಸರಿಯಿಂದ ಏಳನೇ ತರಗತಿಯವರೆಗೆ ಸುಮಾರು 160 ಮಕ್ಕಳಿದ್ದ ಹಾಗೂ ಹಾಸ್ಟೆಲ್ ನಲ್ಲಿ ಉಳಿಯುವ ಹನ್ನೆರಡು ಮಕ್ಕಳು ಎಂಟ್ಹತ್ತು ಟೀಚರ್ಸ್ ಇದ್ದ "ಹೊಂಗಿರಣ" ತನ್ನದೇ ಸ್ವಂತ ಸ್ಥಳದಲ್ಲಿ ಕಾರ್ಯ ಪ್ರವೃತ್ತವಾಯಿತು.

80. ಪರಿಸರ - ಭೀಮೇಶ್ವರ 

ಕೋಗಾರು ಘಾಟಿಯಲ್ಲಿರುವ ಭೀಮೇಶ್ವರ ನಮ್ಮಲ್ಲಿಂದ ಸುಮಾರು 80 ಕಿಮೀ ದೂರದಲ್ಲಿದೆ. ಅದೊಂದು ಅದ್ಭುತವಾದ ಸ್ಥಳ. ಕಾರ್ಗಲ್ ನಿಂದ ಮುಂದೆ ಅರಲಗೋಡು, ಸಂಪ, ಮುಪ್ಪಾನೆ, ಕಾನೂರು... ಈ ಎಲ್ಲಾ ಊರುಗಳನ್ನು ದಾಟುತ್ತಾ ಆ ರಸ್ತೆಯಲ್ಲಿ ಸಾಗುವಾಗ ಇಕ್ಕೆಲದಲ್ಲಿರುವ ದಟ್ಟ ಕಾಡುಗಳು ಕಣ್ತಣಿಸುತ್ತವೆ. ಹಾಗೇ ಸಾಗುತ್ತಾ ಮುಂದೆ ಹೋಗುವಾಗ ಬಲಗಡೆಯಲ್ಲೊಂದು "ಭೀಮೇಶ್ವರಕ್ಕೆ ದಾರಿ" ಎನ್ನುವ ಸಣ್ಣ ನಾಮ ಪಲಕ ಕಾಣಸಿಗುತ್ತದೆ. ಅಲ್ಲಿ ಮಣ್ಣ ರಸ್ತೆಯಲ್ಲಿ ಬಲಕ್ಕೆ ತಿರುಗಿ ಮೂರ್ನಾಲ್ಕು ಕಿಮೀ ಸಾಗಿದರೆ ಭೀಮೇಶ್ವರ ಸಿಗುತ್ತದೆ. ಅಲ್ಲಿ ಅರೆ ಕಾಮಗಾರಿಯಾದ ಸೇತುವೆಯ ಸಮೀಪ ವಾಹನ ನಿಲ್ಲಿಸಿ ಎರಡು ಕಿಮೀ ದೂರವನ್ನು ದಟ್ಟಕಾನನದ ನಡುವಿನ ಏರಿಳಿತದ ರಸ್ತೆಯಲ್ಲಿ ನಡೆಯುತ್ತಾ ಸಾಗುವುದೇ ಚಂದ. ಮೌನ ಸದೃಶವಾದ ಆ ದಾರಿಯಲ್ಲಿ ಸಾಗುವಾಗ ಹಕ್ಕಿಗಳ ಕಲರವ, ಚಿಟ್ಟೆಗಳ ಹಾರಾಟ, ಕಾಲ್ಕೆಳಗಿನ ಒಣ ಎಲೆಗಳ ಶಬ್ದ ಮನಸ್ಸಿಗೆ ಹಿತ ನೀಡುತ್ತದೆ. ಮಳೆಗಾಲದಲ್ಲಾದರೆ ಜಿಗಣೆಗಳು ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಕಾಲ್ಗಳನ್ನು ಅಲಂಕರಿಸಿ ಬಿಟ್ಟಿರುತ್ತವೆ😊ಭೀಮೇಶ್ವರದ ಭಟ್ಟರ ಮನೆಯಿಂದ ಮುಂದಿರುವುದು ಕೇವಲ ಏರು ನಡಿಗೆ. ಏದುಸಿರು ಬಿಡುತ್ತಾ ಮೇಲೇರಿದರೆ ಎಡಕ್ಕೆ ಕಾಣುವುದು ಶಿಲೆಗಲ್ಲಿನ ಒಂದು ಪುರಾತನ ದೇವಸ್ಥಾನ ಹಾಗೂ ಬಲಕ್ಕಿರುವುದು ಬಂಡೆಯ ಮೇಲಿಂದ ಅಗಾಧವಾಗಿ ಚಿಮ್ಮುವ ಜಲರಾಶಿ. ಅದೊಂದು ಅದ್ಬುತ ಸುಮನೋಹರ ದೃಶ್ಯ. ಸ್ವಲ್ಪ ಸರ್ಕಸ್ ಮಾಡಿ ಗುಡ್ಡವನ್ನೇರಿ ಜಲರಾಶಿ ಮೈಗೆ ರಾಚುವ ಸುಖವನ್ನು ಅನುಭವಿಸಬಹುದು ಕೂಡಾ. ಆ ಜಲಪಾತದಲ್ಲಿ ಉರಿ ಬೇಸಿಗೆಯಲ್ಲೂ ಸ್ವಲ್ಪವಾದರೂ ನೀರು ಇದ್ದೇ ಇರುತ್ತದೆ. ಅಲ್ಲಿ ನಾವು ಮಾತ್ರ ಇರುವುದಲ್ಲ; ಮಂಗಗಳ ಸೈನ್ಯವೇ ಇರುತ್ತದೆ. ಉಳಿದಂತೆ ದೇವಸ್ಥಾನದ ಭಟ್ಟರು ಬಿಟ್ಟರೆ ಮತ್ತಾವ ನರಪಿಳ್ಳೆಯೂ ಕಣ್ಣಿಗೆ ಕಾಣುವುದಿಲ್ಲ.
ನಾನು ಇತ್ತೀಚಿನ ವರ್ಷಗಳಲ್ಲಿ ಅಲ್ಲಿಗೆ ಹೋಗಿಲ್ಲ. ನಾಲ್ಕಾರು ಬಾರಿ ಹೋದದ್ದು ಕೂಡಾ ಈಗ್ಗ್ಯೆ ನಾಲ್ಕೈದು ವರ್ಷಗಳ ಹಿಂದೆ. ಈಗೇನಾದರೂ ರಸ್ತೆ ಅಭಿವೃದ್ಧಿ ಆಗಿರಬಹುದು. ಅದೇನೆ ಇರಲಿ, ನಾನು ಪ್ರತಿ ಬಾರಿ ಹೋದಾಗಿನ ನನ್ನ ಅನುಭವ ಅವಿಸ್ಮರಣೀಯವಾಗಿತ್ತು ಅಂದರೆ ಆಶ್ಚರ್ಯಪಡಬೇಕಾದ್ದಿಲ್ಲ. ಎಲ್ಲರೂ ತಪ್ಪದೆ ನೋಡಲೇಬೇಕಾದ ಬಹಳ ವಿಶಿಷ್ಟವಾದ ಜಾಗವದು!


79. ಹೊಂಗಿರಣ - ನೆನಪುಗಳು.
ನಾವು ಶಾಲೆ ಪ್ರಾರಂಭಿಸಿದ ವರ್ಷ. ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿಯ ಗೋಡೌನ್ ನ್ನು ನಮಗೆ ಬೇಕಾದ ಹಾಗೆ ವ್ಯವಸ್ಥೆ ಮಾಡಿಕೊಂಡು ಶಾಲೆಯ ಹೆಸರನ್ನು ಕಟ್ಟಡದ ಹೊರಗೆ ಬರೆಸಿಯೂ ಆಯಿತು. ಮೇ ತಿಂಗಳಲ್ಲಿ ಕೇವಲ ಆಫೀಸ್ ರೂಮ್ ನ ವ್ಯವಸ್ಥೆ ಮಾಡಿಕೊಂಡು ಹೆಗ್ಗೋಡಿನ ಸುತ್ತಮುತ್ತದ ಹಳ್ಳಿಗಳಿಗೆ ನಮ್ಮ ಅಂಬಾಸಿಡರ್ ಕಾರಿನಲ್ಲಿ ಪಬ್ಲಿಸಿಟಿಗಾಗಿ ತಿರುಗಾಟ ಶುರು ಮಾಡಿದ್ದಾಯಿತು. ಮಕ್ಕಳಿರಲಿ ಬಿಡಲಿ ಎಲ್ಲಾ ಮನೆಗಳಿಗೂ ಭೇಟಿ ನೀಡಿ ನಾವು ಶಾಲೆ ಪ್ರಾರಂಭಿಸುತ್ತಿರುವುದರ ಬಗ್ಗೆ ತಿಳಿಸಿ ಮಕ್ಕಳ ದಾಖಲಾತಿಗಾಗಿ ಅವರ ಸಹಾಯ ಹಸ್ತ ಕೇಳಿದ್ದಾಯಿತು. ಆಸಕ್ತ ಪಾಲಕರಿರುವ ಹಳ್ಳಿಗಳ ಯಾರದಾದರೂ ಒಬ್ಬರ ಮನೆಯಲ್ಲಿ ಎಲ್ಲರನ್ನು ಸೇರಿಸಿ ಮೀಟಿಂಗ್ ಮಾಡಿದ್ದಾಯಿತು. ಮೇ ತಿಂಗಳು ಕಳೆಯುತ್ತಾ ಬಂದರೂ ಒಂದೂ ಅಪ್ಲಿಕೇಶನ್ ತಗೊಂಡು ಹೋದವರಿಲ್ಲ, ಅಡ್ಮಿಷನ್ ಮಾಡಿಸಿದವರಿಲ್ಲ. ಈ ರೀತಿಯ ಪ್ರತಿಕ್ರಿಯೆ ಸ್ವಲ್ಪ ಮಟ್ಟಿಗೆ ನಮ್ಮ ಧೃತಿಗೆಡಿಸಿದ್ದಂತೂ ನಿಜ. ಏನಾದರೂ ಸರಿ ಎಂದು ಒಂದೈವತ್ತು ಮಕ್ಕಳಿಗಾಗುವಷ್ಟು ಡೆಸ್ಕ್ ಮಾಡಿಸಿ ಪುಟಾಣಿ ಖುರ್ಚಿಗಳನ್ನು ತರಿಸಿದೆವು. ನಾಲ್ಕು ಜನ ಟೀಚರ್ಸ್ ನ್ನು ಅಪಾಯಿಂಟ್ ಮಾಡಿದೆವು. ಜೂನ್ ಒಂದನೇ ತಾರೀಖು ಬಂದರೂ ಒಂದು ಮಗುವಿನ ದಾಖಲಾತಿ ಕೂಡಾ ಆಗಲಿಲ್ಲ. ಹೊರಗಿನ ಗೇಟ್ ಸ್ವಲ್ಪ ಶಬ್ದವಾದರು ಕೂಡಾ ಆಫೀಸಿನ ಒಳಗೆ ನಾವು ಅಲರ್ಟ್ ಆಗಿ ಬಂದವರನ್ನು ಎದುರುಗೊಳ್ಳಲು ತಯಾರಾಗಿ ಕುಳಿತುಕೊಳ್ಳುತ್ತಿದ್ದುದನ್ನು ಜ್ಞಾಪಿಸಿಕೊಂಡರೆ ಈಗ ನಗು ಬರುತ್ತದೆ. ಗೇಟ್ ಶಬ್ದವಾಗುತ್ತಿತ್ತೇ ವಿನಃ ಒಳಗೆ ಬರುವವರು ಯಾರೂ ಇರುತ್ತಿರಲಿಲ್ಲ 😊
ಏನಾದರಾಗಲಿ ಅಂತ "ಜೂನ್ 4ಕ್ಕೆ ತರಗತಿಗಳು ಪ್ರಾರಂಭವಾಗಲಿದೆ" ಎಂಬ ನೋಟ್ ಒಂದನ್ನು ಆಸಕ್ತ ಪಾಲಕರಿಗೆ ಕಳಿಸಿದೆವು. ಕೊನೆಗೂ ಆ ನೋಟ್ ಕೆಲಸ ಮಾಡಿತು ಅಂತ ಆಯಿತು. ಜೂನ್ ನಾಲ್ಕರಂದು ಸುಮಾರು ನಲವತ್ತು ಮಕ್ಕಳ ದಾಖಲಾತಿಯಾಯಿತು. ಸಣ್ಣ ಪೂಜೆ ಮಾಡಿ ಅಂದು ಪಾಠಪ್ರವಚನವನ್ನು ಪ್ರಾರಂಭಿಸಿದೆವು. ತದನಂತರದಲ್ಲಿ ಏಳೆಂಟು ಮಕ್ಕಳ ದಾಖಲಾತಿಯಾಗಿ ಶಾಲೆ ತನ್ನ ಕಾರ್ಯ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿತು.
ಆ ಒಂದೆರಡು ತಿಂಗಳುಗಳ ಆತಂಕದ ಕಾಯುವಿಕೆ ತುಂಬಾ ತಾಳ್ಮೆಯನ್ನು ಕಲಿಸಿತು. ಕಾಯುವಿಕೆಗಿಂತ ತಪವು ಬೇರೆ ಇಲ್ಲ; ತಾಳಿದವನು ಬಾಳಿಯಾನು ಎಂಬೆಲ್ಲ ವಿಷಯಗಳ ನಿಜರೂಪದ ಅರ್ಥವಾದದ್ದಂತೂ ಸತ್ಯ. ಯಾವುದೇ ಕೆಲಸವನ್ನು ನಾವು ಮಾಡುವಾಗ ನಮ್ಮ ಶ್ರಮ ಎಷ್ಟೇ ಇರಲಿ ಅದು ನಮ್ಮೆಣಿಕೆಯಂತೆಯೇ ಆಗದೆ ಅದರದ್ದೇ ಆದ ಓಘದಲ್ಲಿ, ರೀತಿಯಲ್ಲಿ ಆಗುತ್ತದೆನ್ನುವುದನ್ನು ನಾನು ಇಷ್ಟು ವರ್ಷಗಳ ಅನುಭವದಲ್ಲಿ ಅರಿತು ಕೊಂಡಿದ್ದೇನೆ. ಆದರೂ ಹಿಡಿದ ಕೆಂಕರ್ಯವನ್ನು ಮುಂದುವರಿಸುತ್ತಾ "ಬಿಡದೆ ಯತ್ನವ ಮಾಡು" ಎನ್ನುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿದ ಹೊಂಗಿರಣ ಈಗ ತನ್ನ ಹದಿನೆಂಟನೆಯ ಹರೆಯಕ್ಕೆ ಕಾಲಿಟ್ಟಿದೆ.

78. ಕವಲೇ ದುರ್ಗ - ಅನುಭವ 
ಕವಲೇದುರ್ಗ ನಮ್ಮಲ್ಲಿಂದ ಸುಮಾರು 70 ಕಿಮೀ ದೂರದಲ್ಲಿರುವ ಪ್ರವಾಸಿತಾಣ. 2017ರಲ್ಲಿ ನಾನು, ನನ್ನ ಮಕ್ಕಳು, ನನ್ನ ಕಸಿನ್ಸ್ ಎಲ್ಲಾ ಸೇರಿ ಸುಮಾರು ಹತ್ತನ್ನೆರಡು ಜನ ಬೆಳಿಗ್ಗೆ ತಿಂಡಿ ತಿಂದು, ಊಟ ಕಟ್ಟಿಕೊಂಡು ಮೂರು ಕಾರುಗಳಲ್ಲಿ ಕವಲೆದುರ್ಗದತ್ತ ಪಯಣಿಸಿತು. ಎರಡು ಗಂಟೆಗಳ ಪಯಣ. ಸೆಪ್ಟೆಂಬರ್ ನ ಮಳೆ ಸುರಿಯುತ್ತಿದ್ದ ಸಮಯ. ಮಳೆಯಲ್ಲಿಯೇ ಪಯಣ ಸಾಗಿತು. ಕವಲೆದುರ್ಗದ ಎರಡು ಕಿಮಿ ಹಿಂದೆ ವೆಹಿಕಲ್ ಪಾರ್ಕಿಂಗ್ ನಲ್ಲಿ ಕಾರುಗಳನ್ನು ನಿಲ್ಲಿಸಿ ಗದ್ದೆಯ ಅಂಚುಕಟ್ಟಿನ ಮೇಲೆ ನಮ್ಮ ನಡಿಗೆ ಪ್ರಾರಂಭವಾಯಿತು. ಆ ಅಂಚುಕಟ್ಟು ಊರಿನ ನೆನಪನ್ನು ತರಿಸಿತು. ಕವಲೆದುರ್ಗದ ಬುಡ ತಲುಪಿದಾಗ ನನ್ನನ್ನೂ ಸೇರಿ ನಮ್ಮಲ್ಲಿ ಕೆಲವರ ಶಕ್ತಿ ಉಡುಗಿ ಹೋಗಿತ್ತು. ಆದರೂ ಉಮೇದಿನಿಂದ ಮುಕ್ಕಾಲು ಕೋಟೆ ಹತ್ತಿದೆವು. ತದನಂತರ ನಾನು, ಜ್ವರ ಬಂದಿದ್ದ ನನ್ನ ಮಗಳು, ನನ್ನ ಅಕ್ಕ, ತಂಗಿ ದೇವಸ್ಥಾನದ ಕಟ್ಟೆಯಲ್ಲಿ ಕೈಲಾಗದೆ ಕುಳಿತು ಬಿಟ್ಟೆವು. ನಮ್ಮ ಡಿಂಗನಾದಿಯಾಗಿ ಉಳಿದವರೆಲ್ಲ ಕವಲೆದುರ್ಗದ ತುತ್ತತುದಿಯವರೆಗೆ ಹೋಗಿ ಅಲ್ಲಿನ ಅಭೂತಪೂರ್ವ ಸೌಂದರ್ಯವನ್ನು ಆಸ್ವಾದಿಸಿ ಬಂದರು. ನಾವು ಆ ದೇವಸ್ಥಾನದ ಸುತ್ತಮುತ್ತಲಿನ ಸೌಂದರ್ಯವನ್ನು ನೋಡಿ ತೃಪ್ತಿ ಪಟ್ಟೆವು.
ಕೋಟೆಯಲ್ಲಿದ್ದ ಅಲ್ಲಲ್ಲಿನ ದಿಡ್ಡಿ ಬಾಗಿಲುಗಳು, ಕೆರೆಗಳು, ಅಗಲವಾದ ಮೆಟ್ಟಿಲುಗಳು, ಕಾವಲುಗಾರರ ಕಾವಲು ಕೊಠಡಿಗಳು, ಚಿತ್ತಾರದ ದೊಡ್ಡ ಗೋಡೆಗಳು, ಕಣ್ತಣಿಯುವ ಹಸಿರ ಸಿರಿ, ಮೇಲೇರುತ್ತಿದ್ದಂತೆ ಕೆಳಗೆ ಕಾಣುವ ಬಳುಕುತ್ತಾ ಹರಿಯುವ ನದಿ, ತೋಟಗಳು, ಪುಟ್ಟಪುಟ್ಟದಾಗಿ ಕಾಣುವ ಊರುಗಳು, ಮೋಡಾವೃತ ಗುಡ್ಡಗಳು...‌ ಒಂದೇ ಎರಡೇ! ಬಣ್ಣನೆಗೆ ಮೀರಿದ ಸೌಂದರ್ಯದ ಕಣಜವದು. ದುರ್ಗದ ತುತ್ತತುದಿಗೆ ಹೋದವರಿಗೆ ಸ್ವರ್ಗ ಲೋಕವನ್ನೇ ಕಂಡ ಅನುಭವ.ಅದೊಂದು ರೀತಿ ಧರೆಗಿಳಿದ ಸ್ವರ್ಗ ಅಂದರೆ ತಪ್ಪಾಗಲಾರದು.


77. ಅನುಭವ - ನೆನಪುಗಳು (ಮೇಘಾಲಯ)
ನನ್ನ ಶಿಕ್ಷಣ ಮಿತ್ರೆಯಾದ ಮಾಲತಿಯ ಒತ್ತಾಯಕ್ಕೆ ಮಣಿದು ಮೇಘಾಲಯದ ತುರಾದಲ್ಲಿ 2018ರ ನವೆಂಬರ್ ನಲ್ಲಿ ಅಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕರ ತರಬೇತು ಕಾರ್ಯಾಗಾರಕ್ಕೆ ತರಬೇತುದಾರಳಾಗಿ ಹೋಗಿದ್ದೆ. ಶಿಕ್ಷಕರಿಗೆ ತರಬೇತಿಗಿಂತ ಬೇಕಾದುದು ಕಲಿಕೆಯ ಪ್ರಕ್ರಿಯೆಯನ್ನು ಗ್ರಹಿಸುವ ಮನಸ್ಥಿತಿ ಎಂಬುದು ಒಬ್ಬ ಶಿಕ್ಷಕಿಯಾಗಿ ನನ್ನ ಅನಿಸಿಕೆಯಾದರೂ ತರಬೇತಿ ನೀಡಲು ಒಪ್ಪಿದ್ದೆ.
ಭಾರತದ ಈಶಾನ್ಯ ರಾಜ್ಯಕ್ಕೆ ನನ್ನ ಪ್ರಥಮ ಭೇಟಿ ಅದು. ನನ್ನ ಜೊತೆಗೆ ನನಗೆ ಹಿಂದೆ ನವೋದಯದಲ್ಲಿ ಪ್ರಾಂಶುಪಾಲರಾಗಿದ್ದ ಶ್ರೀಮತಿ ಶೋಭಾ ಡವ್ ರವರೂ ಇದ್ದರು. ಗೌಹಾತಿಯ ಏರ್ ಪೋರ್ಟಿನಿಂದ ನಮ್ಮನ್ನು ತುರಾಕ್ಕೆ ಕರೆದೊಯ್ಯಲು ಟ್ಯಾಕ್ಸಿಯ ವ್ಯವಸ್ಥೆ ಇತ್ತು. ಸುಮಾರು 4 ಘಂಟೆಯ ಪ್ರಯಾಣ. ಪಯಣ ಸಾಗುತ್ತಿದ್ದಂತೆ ನನಗೆ ನಾನು ಮಲೆನಾಡಿನ ಯಾವುದೋ ಪ್ರದೇಶದಲ್ಲಿ ಇದ್ದಂತಹ ಅನುಭವ. ತಿರುವು ಮುರುವಿನ ಒಳ್ಳೆಯ ಗುಣಮಟ್ಟದ ಘಾಟ್ ರಸ್ತೆ. ಕಾಡಿನೊಳಗೆ ಸಹಜವಾಗಿ ಬೆಳೆದ ಅಡಿಕೆ ಮರಗಳು. ರಸ್ತೆಯ ಇಕ್ಕೆಲದಲ್ಲೂ ದಟ್ಟವಾದ ಕಾಡುಗಳು. ಪ್ರತಿ ತಿರುವಿನಲ್ಲೂ ಕಾಣುವ ಸುಂದರ ಬೆಟ್ಟದ ಸಾಲುಗಳು, ಕಣಿವೆಗಳು. ಆಚೀಚೆಯ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ದಾರಿ ಸವೆದದ್ದೇ ಗೊತ್ತಾಗಲಿಲ್ಲ. ಅಲ್ಲಿ ಸಂಜೆ ನಾಲ್ಕೈದು ಗಂಟೆಗೆಲ್ಲ ಸೂರ್ಯಾಸ್ತವಾಗುವ ಕಾರಣ ನಮ್ಮ ಪಯಣದ ಬಹಳ ಭಾಗ ಸೂರ್ಯಾಸ್ತಮಾನದ ಕಿತ್ತಳೆ ವರ್ಣದ ಆಕಾಶವನ್ನು ನೋಡುವ ಭಾಗ್ಯ ನಮಗೆ ಸಿಕ್ಕಿತು. ಊರಿದ್ದಲ್ಲಿ ರಸ್ತೆಯ ಪಕ್ಕದಲ್ಲಿ ನೀರಿನ ಹರವು, ಆದರ ಮೇಲೊಂದು ಬಿದಿರಿನ ಸಂಕ, ನಂತರದಲ್ಲಿ ಮನೆಗಳು. ಆ ನೀರಿನಲ್ಲಿ ತಾವರೆ ಹೂವುಗಳು , ತಾವರೆಯ ಅಗಲವಾದ ಎಲೆಗಳು. ಒಂದು ರೀತಿಯ ಸಸ್ಯ ಸಮೃದ್ಧತೆ. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲಿ ನೋಡಿದರೂ ಅಲ್ಲಿ ಕಣ್ಣಿಗೆ ಹಿತವಾಗಿ ಕಾಣುವ ಪರಿಸರ.
ಉಳಿಯಲು ವ್ಯವಸ್ಥೆ ಮಾಡಿದ ಜಾಗವೂ ಚೆನ್ನಾಗಿತ್ತು. ಗೌಜು ಗದ್ದಲದಿಂದ ದೂರವಿದ್ದ ಹಸಿರಿನ ತಪ್ಪಲಲ್ಲಿದ್ದ ಜಾಗವದು. ತರಬೇತು ಕೇಂದ್ರ ಮಾತ್ರ ನಗರದ ನಡುವಿನಲ್ಲಿತ್ತು. ಸ್ವಲ್ಪ ಅಳುಕಿನಲ್ಲಿಯೇ ನನಗೆ ಕೊಟ್ಟಿದ್ದ ಐವತ್ತು ಶಿಕ್ಷಕರೊಡನೆ ಸಂವಹನ ಮಾಡಲು ತೊಡಗುತ್ತಿದ್ದಂತೆಯೆ ಅವರ ಮುಗ್ಧ ಮನಸ್ಸು, ಪಾಠ ಪ್ರವಚನಗಳಲ್ಲಿ ಅವರಿಗಿದ್ದ ಸೀಮಿತ ಅನುಭವ, ತಂತ್ರಜ್ಞಾನದ ಉಪಯೋಗಿಸುವಿಕೆಯ ಅನನುಭವ, ಶಿಕ್ಷಣ ಕ್ಷೇತ್ರದ ನವನವೀನ ವಿಧಾನಗಳ ಪರಿಚಯದ ಕೊರತೆಗಳ ಅರಿವಾಯಿತು. ಪ್ರಪ್ರಥಮ ಬಾರಿಗೆ ಅವರಿಗೆ ತರಬೇತಿ ಸಿಗುತ್ತಿದ್ದ ಕಾರಣ ಅದನ್ನವರು ಹಾರ್ದಿಕವಾಗಿ ಸ್ವೀಕರಿಸಿದ್ದರು. ನಮ್ಮಲ್ಲಿರುವ ವಿಪುಲ ಅವಕಾಶಗಳಿಗೂ ಯಾವುದೇ ಅವಕಾಶಗಳು ಸಿಗದೇ ಇರುವ ಅವರ ಸ್ಥಿತಿಗೂ ಇರುವ ಅಗಾಧ ಅಂತರವನ್ನು ಕಂಡು ಖೇದವಾಯಿತು. ಮೊದಲ ದಿನ ಅಪರಿಚಿತರಾಗಿದ್ದ ಅವರೆಲ್ಲ ಆರನೇ ದಿನಕ್ಕೆ ನನ್ನವರಾಗಿದ್ದರು. ಅವರು ತರಬೇತಿಯಲ್ಲಿ ಒಳಗೊಳ್ಳುತ್ತಿದ್ದ ರೀತಿ, ಅವರ ಮುಕ್ತ ಹಾಗೂ ನೇರ ನಡೆನುಡಿಯಿಂದಾಗಿ ಅವರು ನನಗೆ ಇನ್ನಷ್ಟು ಹತ್ತಿರವಾದರು. ಆರ್ಥಿಕವಾಗಿ ಅಷ್ಟು ಸಬಲರಲ್ಲದ ಅವರೆಲ್ಲ ಬೀಳ್ಕೊಡುಗೆಯ ದಿನ ನನಗೆ ಕೊಟ್ಟ ನೆನಪಿನ ಕಾಣಿಕೆಗಳು ಹಾಗೂ ತೋರಿಸಿದ ನಿಷ್ಕಲ್ಮಶ ಪ್ರೀತಿ ನನ್ನ ಮನಸ್ಸನ್ನು ದ್ರವೀಕರಿಸಿ ಬಿಟ್ಟಿತು. ತುಂಬು ಪ್ರೀತಿಯ ಮುಂದೆ ಸೋಲದವರಾರು? ಅಲ್ಲಿ ನಾನು ಕಲಿಸಿದ್ದಕ್ಕಿಂತ ಕಲಿತದ್ದೇ ಜಾಸ್ತಿ ಎನ್ನುವುದು ನನ್ನೊಳಗಿನ ಸತ್ಯ!


76. ನೆನಪುಗಳು - ಕಿಪ್ಪಡಿ (ಹಿನ್ನೀರಿನ ನಡುಗುಡ್ಡೆ )
ಕಿಪ್ಪಡಿ ಶರಾವತಿ ಹಿನ್ನೀರಿನ ನಡುಗಡ್ಡೆ. ನಮ್ಮ ಹೊಂಗಿರಣದಿಂದ ಸುಮಾರು ಇಪ್ಪತ್ತೈದು ಕಿಮೀ ದೂರದಲ್ಲಿದೆ. ಅಲ್ಲಿನ ಜಲ ಸಾಹಸ ಚಟುವಟಿಕೆ ನಡೆಸುವವರು ಶ್ರೀಯುತ ಗಂಗಾಧರ್. ಹೆಗ್ಗೋಡಿನ ಹತ್ತಿರದ ಜಳ್ಳಾರೆಯವರು. ಸರಳ, ಸಜ್ಜನ, ಕವಿ ಹೃದಯದ ವ್ಯಕ್ತಿ. ಅದು ಡಿಸೆಂಬರ್ 30, 2017. ನನ್ನ ಮಗ, ಮಗಳು, ಅವರ ಹಾಗೂ ನನ್ನ ಸ್ನೇಹಿತರು, ನನ್ನ ಕಸಿನ್ಸ್ ಎಲ್ಲಾ ಸೇರಿ ಸುಮಾರು ಹದಿನಾರು ಜನ ಹಿನ್ನೀರಿನ ನಡುಗಡ್ಡೆಯಲ್ಲಿ ಒಂದಿರುಳು ಉಳಿಯುವ ಯೋಜನೆ ಹಾಕಿ ಗಂಗಣ್ಣನವರಿಗೆ ತಿಳಿಸಿ ಕಿಪ್ಪಡಿಯ ತಟ ತಲುಪಿದೆವು. ಗಂಗಣ್ಣ ಕೊಟ್ಟ ಲೈಫ್ ಜಾಕೆಟ್ ಧರಿಸಿ ಎರಡು ಕಿಮೀ ದೂರವಿದ್ದ ನಡುಗಡ್ಡೆ ತಲುಪಲು ಈಜಲು ಪ್ರಾರಂಭಿಸಿದೆವು. ನಮ್ಮಲ್ಲಿ ಕೆಲವರಿಗೆ ನೀರ ಭಯ. ಇನ್ನು ಕೆಲವರಿಗೆ ಆ ಹಿನ್ನೀರಿನ ಆಳ, ವಿಸ್ತಾರವನ್ನು ನೋಡಿ ಅಳುಕು. ಅಂತಹವರ ಭಯವನ್ನು ತನ್ನ ನಯವಾದ ಮಾತುಗಳಲ್ಲಿ ಹೋಗಲಾಡಿಸಿ, ಅವರಲ್ಲಿ ಧೈರ್ಯ ಸ್ಥೈರ್ಯ ತುಂಬಿ ಗಂಗಣ್ಣ ಮುನ್ನಡೆಸಿದರು. ನೀರಸ್ನೇಹಿಯಾದ ನಮ್ಮಂತವರು ಉತ್ಸಾಹದಿಂದ ಈಜಿದ್ದೇ ಈಜಿದ್ದು. ನಡುಗಡ್ಡೆ ತಲುಪಲು ಸುಮಾರು ಎರಡು ಗಂಟೆ ತಗುಲಿತು. ಮಧ್ಯಾಹ್ನ ಮೂರಕ್ಕೆ ಹೊರಟ ನಾವು ಐದರ ಆಸುಪಾಸು ಅಲ್ಲಿಗೆ ತಲುಪಿದೆವು. ನಂತರವೂ ಬಹಳಷ್ಟು ಹೊತ್ತು ನೀರಾಟವಾಡಿ ಭೂಸ್ಪರ್ಶ ಮಾಡಿದೆವು. ನಂತರದಲ್ಲಿ ಮಟ್ಟಿ ಸಂಧಿಯಲ್ಲಿ ಬಟ್ಟೆ ಬದಲಿಸಿ ಆ ನಡುಗಡ್ಡೆಯಲ್ಲಿ ವಾಕಿಂಗ್ ಮಾಡಿ ಟೆಂಟ್ ಹಾಕಿ ಶಿಬಿರಾಗ್ನಿಯ ಮುಂದೆ ಗಂಗಣ್ಣ ವ್ಯವಸ್ಥೆ ಮಾಡಿದ ಊಟ ಮಾಡಿದಾಗ ಹಸಿದ ಹೊಟ್ಟೆ ತುಂಬಿ ತೃಪ್ತಿಯಾದದ್ದಂತೂ ಹೌದು. ರಾತ್ರಿ ಬಹಳ ಹೊತ್ತು ನಮ್ಮ ಹರಟೆ, ಹಾಡು, ಕುಣಿತ ನಡೆದು ಟೆಂಟಿನೊಳಗೆ ಪವಡಿಸಿದಾಗ ಅಡಿಯಿಂದ ಒತ್ತುತ್ತಿದ್ದ ಕಲ್ಲುಗಳ ಆಕ್ಯುಪಂಚರ್ ನೊಂದಿಗೆ ಸೊಗಸಾದ(?) ನಿದ್ದೆ ಮಾಡಿದೆವು. ಬೆಳಗ್ಗೆ ಎದ್ದು ನಿಸರ್ಗದ ಮಡಿಲಲ್ಲಿ ಬಹಿರ್ದೆಸೆಗೆ ಹೋದದ್ದು ಇನ್ನೊಂದು ಕಥೆ😊 ತದನಂತರ ಗಂಗಣ್ಣ ತರಿಸಿದ ಇಡ್ಲಿ, ಚಟ್ನಿ, ಅವಲಕ್ಕಿ ತಿಂದು ಚಹಾ ಕುಡಿದು ಮತ್ತೊಮ್ಮೆ ನೀರಿಗೆ ಬಿದ್ದ ನಾವೆಲ್ಲ ಮೈನ್ ಲ್ಯಾಂಡ್ ತಲುಪಿದಾಗ ಸೂರ್ಯ ನೆತ್ತಿಯ ಮೇಲೆ ಬಂದಾಗಿತ್ತು. ನಂತರ ಯಥಾಪ್ರಕಾರ ಮನೆಯ ಕಡೆಗೆ ಪಯಣ ..... ಜಲಸಾಹಸಿಗರು, ಪ್ರಕೃತಿ ಪ್ರೇಮಿಗಳು ಇಷ್ಟ ಪಡಬಹುದಾದ ಜಾಗ ಕಿಪ್ಪಡಿ.

75. ಅನುಭವ - ನೆನಪುಗಳು 
ನನ್ನ ಅಣ್ಣನ ನೆನಪಿಗಾಗಿ ಹಾಗೂ ಆ ನೆಪದಲ್ಲಿ ಕುಟುಂಬಸ್ಥರು, ಸ್ನೇಹಿತ ವರ್ಗ, ಊರವರು ಒಟ್ಟು ಸೇರಲು ಪ್ರತಿ ವರ್ಷ ಡಿಸೆಂಬರ್ ನಲ್ಲಿ ಅಭಿ ಒಂದು ಸಂಗೀತ ಸಂಜೆಯನ್ನು ಆಯೋಜಿಸುತ್ತಾಳೆ. ನಾವೆಲ್ಲ ಆ ಕಾರ್ಯಕ್ರಮಕ್ಕೆ ತಪ್ಪದೆ ಹೋಗುತ್ತೇವೆ. ಈಗ್ಗ್ಯೆ ಎರಡು ವರ್ಷಗಳ ಹಿಂದೆ ಅಂತಹ ಕಾರ್ಯಕ್ರಮ ಮುಗಿಸಿ ರಾತ್ರಿ ಊಟ ಮಾಡಿ ನಾವೊಂದಿಷ್ಟು ಜನ ಆರೂರಿನಲ್ಲಿ ನಡೆದಿದ್ದ ಕೋಲಕ್ಕೆ ಹೋಗಿತ್ತು. ನಾನು ಸುಮಾರು ಮೂವತ್ತೈದು ವರ್ಷಗಳ ನಂತರ ನೋಡಿದ ಕೋಲವದು. ಇದು ರಾತ್ರಿಯಿಡೀ ನಡೆಯುವ ಕಾರ್ಯಕ್ರಮ. ನಾವು ರಾತ್ರಿ ಸುಮಾರು ಒಂದು ಗಂಟೆಯವರೆಗೆ ಕೋಲ ನೋಡಿ ಹಿಂದಿರುಗಿತು. ಮರೆತು ಹೋದದ್ದೆಲ್ಲವನ್ನು ಪುನಃ ರಿಫ್ರೆಶ್ ಮಾಡಿದ ಕೋಲವದು. ಚೆಂದದ ವೇಷಭೂಷಣ, ಚಂಡೆವಾದನ, ಲಯಬದ್ಧ ಕುಣಿತ, ನೋಡುಗರಿಗೆ ಬಿಸಿ ಬಿಸಿ ಚಹಾ, ಅಂಬೊಡೆ, ಅಲ್ಲಿನ ಸ್ಥಳಾಲಂಕಾರವೆಲ್ಲ ಖುಷಿ ಕೊಟ್ಟಿತು.
ಮಾರನೇ ದಿನ ನಮ್ಮೆಲ್ಲರ ಪಯಣ ಸೋಮೇಶ್ವರದ ಬಳಿ ಇರುವ ಕೂಡ್ಲು ಫಾಲ್ಸ್ ಗೆ. ಕೊಟ್ಟೆ ಕಡುಬು, ಚಟ್ನಿ, ಬಾಯಾಡಲು ಒಂದಿಷ್ಟು ತಿಂಡಿ ತೆಗೆದುಕೊಂಡು ಆರೇಳು ಕಾರುಗಳಲ್ಲಿ ನಾವು ಸುಮಾರು ಇಪ್ಪತ್ತೈದು ಜನ ಹೋಗಿತ್ತು. ನಮ್ಮಲ್ಲಿ ವಯಸ್ಸಿನಲ್ಲಿ ಕಿರಿಯರು ತಿಂಡಿಯ ಚೀಲಗಳನ್ನು ಹಿಡಿದುಕೊಂಡು ನಡೆದರೆ ಇನ್ನು ಕೆಲವರು ಪ್ರಾಯ ಸಂದ ನಮ್ಮಂತವರನ್ನು ಸಂಭಾಳಿಸಿ ಕರಕೊಂಡು ಹೋಗುವವರು. ಕಾರಿನಿಂದಿಳಿದ ಮೇಲೆ ಸುಮಾರು ಎರಡು ಕಿಮೀ ದೂರ ಮೇಲೆ ಕೆಳಗೆ ಹತ್ತಿ ಇಳಿದು ಕ್ರಮಿಸಬೇಕಾದ ದುರ್ಗಮ ದಾರಿಯದು. ಪ್ರಯಾಸಪಟ್ಟುಕೊಂಡು ನಡೆದುಕೊಂಡು 'ಇನ್ನು ನನ್ನಿಂದಾಗದು' ಎನ್ನುವ ಮನಸ್ಥಿತಿ ತಲುಪುವ ಹೊತ್ತಿಗೆ ಆಗುವ ಆ ಜಲಪಾತ ದರ್ಶನ ಆವರೆಗಿನ ಕಷ್ಟಗಳೆನ್ನೆಲ್ಲ ಐಸಿನಂತೆ ಕರಗಿಸಿ ನೀರಾಗಿಸುವುದಂತೂ ನಿಜ. ಎತ್ತರವಾದ ಕೋಡುಗಲ್ಲಿಂದ ಬೀಳುವ ನೀರಿನಡಿ ನಿಂತಾಗ ಛಡಿಯೇಟು ಹೊಡೆದಂತಹ ಅನುಭವ. ತಣ್ಣನೆಯ, ಶುಭ್ರವಾದ ನೀರಹೊಂಡದಲ್ಲಿ ಈಜುವುದೊಂದು ಮೋಜು. ನೀರಿನ ಮೇಲೆ ಅಂಗಾತವಾಗಿ ಮಲಗಿ ತೇಲುತ್ತಾ ಮೇಲೆ ನೋಡಿದರೆ ಬೀಳುತ್ತಿರುವ ನೀರ ಹರವಿನ ಹಚ್ಚಹಸಿರಿನ ಗುಡ್ಡ ಒಂದು ಕಡೆ, ಶುಭ್ರ ಆಕಾಶ ಮತ್ತೊಂದು ಕಡೆ. ಭುವಿಯ ಮೇಲಿನ ಸ್ವರ್ಗ ಇದೇ ಏನೋ ಅಂತನಿಸುವ ಅನುಭವ. ನಿಜಕ್ಕೂ ಅಲ್ಲಿಗೆ ಹೋಗಿ ಪ್ರಕೃತಿ ಸೌಂದರ್ಯ ನೀಡುವ ಸುಖದ ಸುಕೂನತೆಯ ಅನುಭವಿಸಬೇಕಾದ ಅದ್ಭುತ ಜಾಗವದು!


74. ಪ್ರವಾಸ (ಗೋವಾ) - ಅನುಭವ 
ನಾನು ಈವರೆಗೆ ನಾಲ್ಕಾರು ಬಾರಿ ಗೋವಾಕ್ಕೆ ಹೋಗಿದ್ದೇನೆ. ಒಂದು ಬಾರಿ ಉಡುಪಿಯಿಂದ ರೈಲಿನಲ್ಲಿ, ಇನ್ನೊಂದು ಬಾರಿ ಸಾಗರದಿಂದ ಬಸ್ಸಿನಲ್ಲಿ, ಉಳಿದೆಲ್ಲಾ ಬಾರಿ ಕಾರಿನಲ್ಲಿ ಹೋದದ್ದು.
ಉಡುಪಿಯಿಂದ ರೈಲಿನಲ್ಲಿ ಹೋದದ್ದು ದೂದ್ ಸಾಗರ್ ನೋಡಲು ಸಿಗುತ್ತದೆಂಬ ನಿರೀಕ್ಷೆಯಲ್ಲಿ. ನಾವು ಒಟ್ಟಿಗೆ ಏಳು ಜನರಿದ್ದ ಕಾರಣ ರೈಲು ಪಯಣವನ್ನು ಎಂಜಾಯ್ ಮಾಡಿದೆವು. ದೂದ್ ಸಾಗರ್ ಆ ರೂಟಿನಲ್ಲಿ ಇಲ್ಲವೆಂದು ಗೊತ್ತಾದಾಗ ಬೇಜಾರಾದರೂ ದಾರಿಯಲ್ಲಿ ಸಿಗುವ ಟನಲ್ ಗಳು ಖುಷಿ ಕೊಟ್ಟವು. ಮಳೆಗಾಲವಾಗಿದ್ದ ಕಾರಣ ಇಕ್ಕೆಲದ ಹಸಿರಿನ ಸಿರಿ ಕಣ್ತಣಿಯುವಂತಿತ್ತು. ದಾರಿ ಸಾಗಿದ್ದೇ ಗೊತ್ತಾಗಲಿಲ್ಲ.
ಇನ್ನೊಮ್ಮೆ ಹೋದದ್ದು ಸಾಗರದಿಂದ, ನಮ್ಮ ಸಿಯಾಜ್ ಕಾರಿನಲ್ಲಿ, ಅದೂ ಮಳೆಗಾಲದಲ್ಲಿ, ಅದು ನೆನಪಿನಲ್ಲಿ ಉಳಿಯುವಂತಹ ಪಯಣ. ದಾರಿಯುದ್ದಕ್ಕೂ ಮರಗಳ ಸಾಲು. ಆಚೀಚೆಗೆ ದಟ್ಟವಾದ ಕಾಡು. ಜೊತೆಗೆ ಮಳೆರಾಯನ ಪ್ರತಾಪ. ಅಲ್ಲಲ್ಲಿ ಮೋಡಾವೃತ ಜಾಗ, ಸಣ್ಣ ಸಣ್ಣ ಜಲಪಾತಗಳು. ಎರಡೂ ಕಡೆ ಗುಡ್ಡಗಳಿದ್ದು ನಾವು ಅದರ ನಡುವೆ ಪಯಣಿಸಿದಾಗ "ಆಲಿಸ್ ಇನ್ ವಂಡರ್ ಲಾ" ನಲ್ಲಿ ಇದ್ದಂತಹ ಬೇರಾವುದೋ ನಾಡಿನಲ್ಲಿ ಸಾಗುವಂತಹ ಅನುಭವ. ಸಾಗುವ ದಾರಿ ಯಾವುದೋ ನಿಗೂಢವಾದ ಗಮ್ಯಸ್ಥಾನಕ್ಕೆ ಹೋಗುತ್ತಿರುವಂತಿತ್ತು. ದಾರಿಯಲ್ಲಿ ಸಿಕ್ಕ ಮಿರ್ಜಾನ ಕೋಟೆಯ ಭೇಟಿ ಮನಕ್ಕೆ ಮುದ ಕೊಟ್ಟಿತು. ತೆಳುವಾದ ಹಸಿರು ಹುಲ್ಲು ಹಾಸಿನಿಂದ ಆವರಿಸಿದ್ದ ಅದರ ಗೋಡೆಗಳು, ಕಲ್ಲು ಬಂಡೆಗಳು ಆ ಜಾಗವನ್ನು ಬಿಟ್ಟು ಬರಲು ಕಷ್ಟವಾಗುವಂತಹ ಸೆಳೆತ ಹುಟ್ಟಿಸಿದವು. ಒಟ್ಟಿನಲ್ಲಿ ಮತ್ತೊಮ್ಮೆ, ಮಗದೊಮ್ಮೆ ಆ ರೀತಿಯ ಪಯಣ ಮಾಡಬೇಕು ಎನ್ನುವ ಹಂಬಲ ಹುಟ್ಟಿಸಿದ ಪಯಣವದು.
ಗೋವಾಕ್ಕೆ ಅದರದ್ದೇ ಆದ ವಿಭಿನ್ನ ಭೌಗೋಳಿಕ ಲಕ್ಷಣಗಳಿದ್ದು ನೋಡಲು ಬಹಳ ಚೆಂದ. ಹಳೆಯ ಕಾಲದ ಕಟ್ಟಡಗಳು, ಹಳ್ಳಿಯ ಸಣ್ಣದಾದ ಆದರೆ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳು, ಸ್ವಚ್ಛವಾದ ಊರುಗಳು, ಒಂದೆಡೆ ಕಡಲತಡಿ ಇದ್ದರೆ ಮತ್ತೆಲ್ಲೋ ಗುಡ್ಡವಿರುವ ಪ್ರದೇಶ. ಹಳೆಯ ತಲೆಮಾರಿನವರ ವಿಭಿನ್ನ ವೇಷಭೂಷಣ ಎಲ್ಲವೂ ಮನಾಕರ್ಷಕ. ಗೋವಾದಲ್ಲಿರುವ ನಮ್ಮ ಕುಟುಂಬ ಸ್ನೇಹಿತ ಶ್ರೀರಾಮ, ನನ್ನ ಹಳೆಯ ವಿದ್ಯಾರ್ಥಿನಿ ಸಗ್ಗೂಬಾಯಿ, ನನ್ನ ಶಿಕ್ಷಣ ಮಿತ್ರೆ ಸುಜಾತ ನೊರೋನ್ಹಾ.. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿ ಬಾರಿಯ ನಮ್ಮ ಗೋವಾದ ಉಳಿಕೆಯನ್ನು ಹಿತವಾಗಿಸಿದವರು.
ಅಲ್ಲಿನ ಹಳೆ ಚರ್ಚುಗಳು, ಮ್ಯೂಸಿಯಂ ಗಳು, ದೇವಸ್ಥಾನಗಳು ಮತ್ತು ಎಲ್ಲದ್ದಕ್ಕಿಂತ ಮುಖ್ಯವಾದುದು ಅಲ್ಲಿನ ಕಡಲತೀರ. ಎಷ್ಟೇ ದೂರ ನೀರೊಳಗೆ ಸಾಗಿದರೂ ಆಳವಿಲ್ಲದ ಕಡಲು. ಕಡಲ ನೀರಾಟಕ್ಕೆ ಹೇಳಿ ಮಾಡಿಸಿದ ಸ್ಥಳವದು. ಹೀಗೆ ತನ್ನದೇ ಆದ ಸರಳತೆ, ಭೌಗೋಳಿಕ ಸಮೃದ್ಧತೆಯಿಂದಾಗಿ ಸದಾ ಎಲ್ಲರನ್ನು ತನ್ನೆಡೆಗೆ ಸೆಳೆಯುತ್ತದೆ ಗೋವಾ!


73. ನೆನಪುಗಳು - ಪ್ರವಾಸ 
ನಾನು 1984ರಲ್ಲಿ ರೈಲಿನಲ್ಲಿ ಅಪ್ಪ, ಅಮ್ಮ, ತಂಗಿಯೊಟ್ಟಿಗೆ ಉತ್ತರ ಭಾರತ ಪ್ರವಾಸ ಮಾಡಿದ್ದು ಬಿಟ್ಟರೆ ಇತ್ತೀಚಿನ ಆರೇಳು ವರ್ಷಗಳವರೆಗೆ ಆ ದಿಕ್ಕಿಗೆ ತಲೆ ಹಾಕಿಯೂ ಮಲಗಿರಲಿಲ್ಲ😊 ಆ ಪ್ರವಾಸವು ಬಹಳ ಚೆನ್ನಾಗಿತ್ತು. ಡೆಲ್ಲಿ, ಆಗ್ರಾ, ಡೆಹ್ರಾಡೂನ್... ಹೀಗೆ ನಮ್ಮ ತಿರುಗಾಟ. ಎಲ್ಲಾ ಕಡೆಯೂ ನೆಂಟರ ಮನೆ ಇದ್ದಿದ್ದ ಕಾರಣ ಉಳಿಕೆ ಮತ್ತು ಆಹಾರದ ಸಮಸ್ಯೆ ಆಗಿರಲಿಲ್ಲ. ವಾಪಾಸು ಹಿಂದಿರುಗುವಾಗ ನಾವು ಬೆಂಗಳೂರಿಗೆ ತಲುಪುವುದು ಎಂಟ್ಹತ್ತು ಗಂಟೆ ಬಾಕಿ ಇದ್ದಾಗ ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯಾಗಿ ನಾವು ತದನಂತರದ ಗೊಂದಲಮಯ ವಾತಾವರಣದಲ್ಲಿ ಊರು ತಲುಪಿದ್ದೇ ದೊಡ್ಡ ಪವಾಡ. ಆ ಪ್ರವಾಸ ಕಾಲದಲ್ಲಿ ನಾನಿನ್ನೂ ಚಿಕ್ಕವಳಿದ್ದ ಕಾರಣ ನನ್ನ ಗಮನ ಸೆಳೆದದ್ದು ಅಲ್ಲಿನ ಬದುಕಲ್ಲ ಸ್ಮಾರಕಗಳು ಮಾತ್ರ!
ಈಗ್ಗ್ಯೆ ಆರೇಳು ವರ್ಷಗಳ ಹಿಂದೆ ನಾನು ಮತ್ತು ಅಭಿ ಲಖ್ನೋಗೆ ವಿಮಾನದಲ್ಲಿ ಹೋಗಿತ್ತು. ಉಳಿದಿದ್ದ ಜಾಗ, ಕಾರ್ಯಾಗಾರವಿದ್ದ ಜಾಗ ಎಲ್ಲಾ ಹೈಫೈ ವ್ಯವಸ್ಥೆಯ ಜಾಗವಾಗಿತ್ತು. ಕೊನೆಯ ದಿನ ನಾನು, ಅಭಿ ಅವಳಿಗೆ noise reducer ತರಲು ಹೊರ ಹೋದಾಗ ಅಲ್ಲಿನ ಜನಜೀವನವನ್ನು ಹತ್ತಿರದಿಂದ ನೋಡುವ ಅವಕಾಶವಾಯಿತು. ನಮ್ಮ ವಿಮಾನ ಮಧ್ಯಾಹ್ನ ಒಂದು ಗಂಟೆಗೆ ಇದ್ದ ಕಾರಣ ನಾವು ಒಂಬತ್ತು ಗಂಟೆಯೊಳಗೆ ಲಖ್ನೋದ ಬಜಾರಿಗೆ ಹೊರಟೆವು. ನಾವಿದ್ದ ಜಾಗದಿಂದ ಒಂದು ಶೇರಿಂಗ್ ರಿಕ್ಷಾದಲ್ಲಿ ಅಲ್ಲಿಂದ ಹತ್ತಿರವಿದ್ದ ಬಜಾರಿಗೆ ಹೋದೆವು. ಯಾವ ಅಂಗಡಿಯೂ ತೆರೆದಿರಲಿಲ್ಲ. ಅಲ್ಲಿ ಎಲ್ಲೂ ಕಾಲಿಡಲಾಗದಂತಹ ಕೊಳಕು. ಅದರ ಮಧ್ಯೆಯೇ ಕೂಲಿ ಮಾಡುವವರು ಮಲಗಿದ್ದರು. ಅದನ್ನು ನೋಡಿ ಮನ ಮರುಗಿತು. ನಂತರ ಒಂದು ಸೈಕಲ್ ರಿಕ್ಷಾ ಹತ್ತಿ ಬಟ್ಟೆ ಖರೀದಿಗೆ ಹೋಯಿತು. ಸೈಕಲ್ ತುಳಿಯುತ್ತಾ ಸೈಕಲ್ ರಿಕ್ಷದಾತ ತನ್ನ ಬಡತನದ ಬೇಗೆಯನ್ನು ನಮ್ಮಲ್ಲಿ ಹೇಳಿಕೊಂಡ. ಬಟ್ಟೆ ಖರೀದಿ ಮಾಡಿದ ನಂತರ ಬಿಲ್ಲನ್ನು ತನಗೆ ಕೊಡಲು ಹೇಳಿದ. ಕೇಳಲಾಗಿ ಆ ಬಿಲ್ ಅಂಗಡಿಯವರಿಗೆ ಕೊಟ್ಟರೆ ಆವರು ಅವನಿಗೆ ಒಂದು ಕೆಜಿ ಅಕ್ಕಿ ಕೊಡುತ್ತಾರೆಂದು ಹೇಳಿದ. ಅಯ್ಯೋ ಪಾಪ ಎಂದೆನಿಸಿತು. ಅಲ್ಲಿಯವರಿಗೆ ಒಂದು ಹೊತ್ತಿನ ಕೂಳಿಗೂ ಬರ. ಅಂತಹ ಬಡತನ ಅಲ್ಲಿದೆ! ನಂತರ ಬಸ್ಸಿನಲ್ಲಿ ಹೋಗುವಾಗ ಕೆಲಸಕ್ಕೆ ಹೋಗುವ ಹುಡುಗಿಯೊಬ್ಬಳ ಪರಿಚಯ ಆಯಿತು. ಅವಳು ಮಾತನಾಡುತ್ತಾ ಅಲ್ಲಿನ ಹೆಣ್ಣು ಮಕ್ಕಳ ಆಭದ್ರತೆಯ ಬಗ್ಗೆ ಹೇಳಿದಳು. ಪೇಟೆಯಾದರೆ ಸ್ವಲ್ಪ ಪರವಾಗಿಲ್ಲ; ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಅಭದ್ರತೆ, ಶೋಷಣೆ ಹೆಚ್ಚು ಅಂತ ಹೇಳಿದಳು. ವರದಕ್ಷಿಣೆಯಿಂದಾಗಿ ಹೆಣ್ಣು ಹೆತ್ತವರ ಗೋಳು ಹೇಳಲಸಾಧ್ಯವೆಂದಳು. ನಮ್ಮ ಖರೀದಿ ಎಲ್ಲಾ ಮುಗಿಸಿ ರಿಕ್ಷಾದಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆದ ಕಾರಣ ಆ ರಿಕ್ಷಾ ಡ್ರೈವರ್ ಜೊತೆ ಕಥೆ ಹೊಡೆಯುವ ಅವಕಾಶ ಸಿಕ್ಕಿತು. ಅವನು ಅಲ್ಲಿನ ಹೊಲಸು ರಾಜಕೀಯದ ಬಗ್ಗೆ ಒಂದಿಷ್ಟು ಮಾತನಾಡಿ ತನ್ನ ಬದುಕಿನ ಕಷ್ಟಗಳನ್ನು ಹೇಳಿಕೊಂಡ. ಅದನ್ನೆಲ್ಲ ನೋಡಿದಾಗ, ಕೇಳಿದಾಗ ನಾವು ದಕ್ಷಿಣ ಭಾರತದವರು ಅದರಲ್ಲೂ ಕರ್ನಾಟಕದವರು ಪುಣ್ಯ ಮಾಡಿದವರು ಅಂತನಿಸಿದ್ದು ನಿಜ. ನಮ್ಮ ನಮ್ಮ ಜಾಗದ, ಜನರ ಬೆಲೆ ಗೊತ್ತಾಗುವುದು ನಾವು ನಾವಿರುವಲ್ಲಿಂದ ಹೊರಗೆ ಕಾಲಿಟ್ಟಾಗ ತಾನೇ?


72. ಅನುಭವ - ಸ್ವಚಿಂತನೆ 
ಎಷ್ಟೋ ಬಾರಿ ನಮಗೆ ನಾವೇನು, ನಮ್ಮಲ್ಲಿರುವ ತಾಕತ್ತೇನು ಎಂದು ಗೊತ್ತಿರುವುದೇ ಇಲ್ಲ. ನನ್ನ ಅಂತಹ ತಾಕತ್ತಿನ ಪರಿಚಯ ನನಗೆ ಮಾಡಿಸಿದವಳು ಅಭಿ. ನಾವಿಬ್ಬರು ಈಗ್ಗ್ಯೆ ಆರೇಳು ವರ್ಷಗಳ ಹಿಂದೆ ಒಂದು ತರಬೇತಿಯಲ್ಲಿ ಭಾಗವಹಿಸುವುದಕ್ಕೆ ಲಖ್ನೋಗೆ ಹೋಗಿತ್ತು. ಅದು ನನ್ನ ಪ್ರಥಮ ವಿಮಾನಯಾನ. ಏನೇನೋ ಕಲ್ಪಿಸಿ ವಿಮಾನ ಹತ್ತಿದ್ದೆ. ಮೋಡದೊಳಗಣ/ಮೋಡದ ಮೇಲಿನ ಪಯಣ ಸ್ವಲ್ಪ ಹೊತ್ತು ಖುಷಿ ಕೊಟ್ಟರೂ ವಿಮಾನದೊಳಗಿನ ಸ್ತಬ್ಧ ವಾತಾವರಣ ಬೇಸರ ತರಿಸಿತು. ಆದರೆ ಕೇವಲ ಎರಡ್ಮೂರು ಗಂಟೆಯೊಳಗೆ ಲಖ್ನೊ ತಲುಪಿದ್ದು ಖುಷಿಯ ವಿಷಯ. ವಿಮಾನ ಟೇಕಾಫ್ ಆಗುವಾಗ/ಲ್ಯಾಂಡ್ ಆಗುವಾಗ ಅಭಿಗೆ ಜೀವ ಹೋಗುವಷ್ಟು ಕಿವಿ ನೋವು ಬರುತ್ತಿತ್ತು. ನೋವಿನಿಂದ ಅವಳು ಬಿಳಿಚಿಕೊಳ್ಳುತ್ತಿದ್ದಳು. ಅವಳ ಯಾತನೆ ನೋಡಿ ನನಗೆ ಸಂಕಟವಾಗುತ್ತಿತ್ತು. ನನ್ನ ಹೋಮಿಯೋಪತಿ ಡಾಕ್ಟರ್ ಗೆ ಫೋನ್ ಮಾಡಿ ಪರಿಹಾರ ಕೇಳಿದಾಗ noise reducer ಹಾಕಿಕೊಂಡರೆ ನೋವು ಸ್ವಲ್ಪ ಪ್ರಮಾಣದಲ್ಲಿ ಶಮನವಾಗುತ್ತದೆ ಎಂದು ಹೇಳಿದರು. ಸರಿ. ಟ್ರೈನಿಂಗ್ ನ ಕೊನೆಯ ದಿನ ನಮ್ಮ ವಿಮಾನ ಮಧ್ಯಾಹ್ನ ಒಂದು ಗಂಟೆಗಿತ್ತು. ಬೆಳಿಗ್ಗೆ ನಾವಿಬ್ಬರು noise reducerನ್ನು ಹುಡುಕುತ್ತಾ ಮೊದಲು ಶೇರಿಂಗ್ ರಿಕ್ಷಾದಲ್ಲಿ ನಂತರ ಸೈಕಲ್ ರಿಕ್ಷಾದಲ್ಲಿ ತದನಂತರ ಬಸ್ಸಿನಲ್ಲಿ ಪಯಣಿಸಿ ನಮಗರಿವಿಲ್ಲದೆ ನಾವಿದ್ದ ಜಾಗದಿಂದ ಸುಮಾರು ಇಪ್ಪತ್ತೈದು ಕಿಮೀ ದೂರ ಬಂದು ಬಿಟ್ಟಿದ್ದೆವು. ಬೆಳಗಿನ ಹನ್ನೊಂದು ಗಂಟೆಯಾದರೂ ಅಂಗಡಿ ತೆಗೆಯುವ ಯಾವ ಲಕ್ಷಣವೂ ಕಾಣಲಿಲ್ಲ. ಕಾದು ಕಾದು ಸುಸ್ತಾಗಿ ಸುಮಾರು ಹನ್ನೊಂದು ಮುಕ್ಕಾಲಿಗೆ ಅಂಗಡಿ ತೆರೆದು ನಾವು ಖರೀದಿ ಮುಗಿಸಿ ಹಿಂದಿರುಗುವಾಗ ಬೇರಾವ ವಾಹನಕ್ಕೂ ಕಾಯದೆ ಸೀದಾ ರಿಕ್ಷಾ ಹತ್ತಿದ್ದೆ! ಆದರೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ನಾವು ಉಳಿದುಕೊಂಡಿದ್ದ ಜಾಗ ತಲುಪಿ ನಂತರದಲ್ಲಿ ಏರ್ ಪೋರ್ಟ್ ಮುಟ್ಟಿದ್ದು ಒಂದು ಸಾಹಸವೇ ಸರಿ.
ಇದನ್ನೆಲ್ಲ ನೋಡಿ ಅಭಿ ಹೇಳಿದ ಮಾತು, "Noise reducer ತೆಗೆದುಕೊಳ್ಳಲೇ ಬೇಕು ಅನ್ನುವ ನಿನ್ನ ಹಠ, ಅದಕ್ಕಾಗಿ ಎಡೆಬಿಡದೆ ಹುಡುಕಾಡಿದ್ದು, ಗುರುತು ಪರಿಚಯ ಇರದ ಊರಿನಲ್ಲಿ ಸಮಯದ ಅಭಾವದ ನಡುವೆಯೂ noise reducerನ್ನು ಖರೀದಿಸಿಯೇ ಬಿಟ್ಟದ್ದು ಎಲ್ಲವೂ ಕೈಗೆತ್ತಿಕೊಂಡ ಕೆಲಸವನ್ನು ನೀನು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಾಡುವ ನಿನ್ನ ಛಾತಿಯನ್ನು ತೋರಿಸುತ್ತದೆ. ನೀನು ಹೊಂಗಿರಣದಂತಹ ಶಾಲೆ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದುದರಲ್ಲಿ ಆಶ್ಚರ್ಯವಿಲ್ಲ" ಎಂದು.
ಹೀಗೆ ನನ್ನ ಗುಣವೊಂದರ ಅರಿವನ್ನು ಅಭಿ ನನ್ನೊಳಗೆ ಮೂಡಿಸಿದ್ದಳು. ಏಕೆಂದರೆ ನಾವು ನಮ್ಮ ಕೆಲಸವನ್ನು meticulous ಆಗಿ ಮಾಡುತ್ತಿರುತ್ತೇವೆಯೇ ಹೊರತು ನಮಗೆ ನಮ್ಮ ಗುಣಾವಗುಣಗಳ ಅವಲೋಕನ ಮಾಡುವ ವ್ಯವಧಾನ ಇರುವುದಿಲ್ಲ. ಇನ್ನೊಬ್ಬರು ಅದನ್ನು ಗುರುತಿಸಿ ತಿಳಿಸಿದಾಗ ಮಾತ್ರ ನಮಗದರ ಅರಿವಾಗುವುದೆನ್ನುವುದು ನಿಜ ತಾನೆ?


71. ಅನುಭವ - ಕಡಲು, ಕಡಲುತೀರ
ನಾನು ಕಡಲತೀರದ ಕುವರಿ. ಹೀಗಾಗಿ ಕಡಲೆಂದರೆ ನನಗಿಷ್ಟ. ಕಡಲಿನ ಅಗಾಧತೆ, ಅಲೆಗಳ ನರ್ತನ, ಸುಂಯ್ಗುಡುವ ಗಾಳಿ ನನ್ನನ್ನು ಯಾವಾಗಲೂ ಸೆಳೆಯುತ್ತದೆ. ಕಡಲ ನೀರಿನಾಟವಾಡಿ ಮರಳ ಬಿಸುಪಿನ ಸುಖ ಆನುಭವಿಸುತ್ತಾ ಮಲಗಿದರೆ ವರ್ಣಮಯ ಆಕಾಶ ದರ್ಶನ, ಸೂರ್ಯಾಸ್ತಮಾನದ ಕೆಂಬಣ್ಣದ ದಿಗಂತ ದರ್ಶನ ಆವರ್ಣನೀಯ. ವಿವರಣೆಗೆ ಮೀರಿದ ಸೌಂದರ್ಯವದರದ್ದು.
ಕುಂದಾಪುರದಲ್ಲಿದ್ದಾಗ ನಾವು ಔಟಿಂಗ್ ಅಂತ ಕೆಲವೊಮ್ಮೆ ಸಾಯಂಕಾಲದ ಸಮಯ ಹೋಗುತ್ತಿದ್ದದ್ದು ಮರವಂತೆಗೆ. ಅಲ್ಲಿ ಒಂದು ಬದಿ ಸಮುದ್ರವಾದರೆ ಇನ್ನೊಂದು ಬದಿ ನದಿ. ಅವೆರಡರ ಮಧ್ಯೆ ತಲೆಯ ಮೇಲಿನ ಬೈತಲೆಯಂತೆ ನ್ಯಾಶನಲ್ ಹೈವೆ. ಸುರ ಸುಂದರ ಸ್ಥಳವದು. ಅದು ಆಳವಾದ ಕಡಲು. ಅಲೆಗಳ ರಭಸವೂ ಜಾಸ್ತಿ. ಅದರ ನೀರಿನಲ್ಲಿ ತುಂಬಾ ಮುಂದೆ ಹೋಗಲು ಆಗುವುದಿಲ್ಲ. ಆದರೂ ಅದರ ತೀರದಲ್ಲಿ ಆಟವಾಡುವುದು ಸೊಗಸೇ ಸೈ. ಸಣ್ಣವರಿದ್ದಾಗ ಮರಳ ರಾಶಿಯಲ್ಲಿ ಗೂಡು ಮಾಡುವುದೊಂದು ಮೋಜು. ಪಾದವನ್ನು ಮರಳಿನ ಒಳಗಿಟ್ಟು ಮೇಲೆ ಮರಳನ್ನು ಒತ್ತಿ ಇಟ್ಟು ನಂತರ ನಿಧಾನವಾಗಿ ಕಾಲನ್ನು ತೆಗೆಯಬೇಕು. ಸ್ವಲ್ಪ ಏಮಾರಿದರೂ ಗೂಡು ಮಟಾಷ್. ಗೂಡು ಹಾಳಾಗದೆ ಚೆಂದ ಇದ್ದರೆ ಅದರ ಸುತ್ತ ಮನೆಯಾಟವಾಡುತ್ತಿತ್ತು. ನಂತರ ಬೇಕಂತಲೇ ಇನ್ನೊಬ್ಬರ ಗೂಡನ್ನು ತುಳಿದು ಹಾಳು ಮಾಡುತ್ತಿತ್ತು. ಜಗಳ ತಾರಕಕ್ಕೆ ಹೋದಾಗ ಹಿರಿಯರ ಮಧ್ಯಸ್ಥಿಕೆಯ ಅಗತ್ಯ ಹುಟ್ಟುತ್ತಿತ್ತು😊
ಇನ್ನೊಂದು ಮೋಜಿನ ವಿಷಯವೆಂದರೆ ಕವಡೆ, ಕಪ್ಪೆಚಿಪ್ಪುಗಳನ್ನು ಹೆಕ್ಕಿ ಒಟ್ಟು ಮಾಡುವುದು. ಆ ಚಿಪ್ಪುಗಳ ಮೇಲೆ ವಿಚಿತ್ರವಾದ ಡಿಸೈನ್ ಇದ್ದರೆ ನಮಗೆ ಖುಷಿ. ತುಂಬಾ ಚಿತ್ತಾರದ ಚಿಪ್ಪುಗಳನ್ನು ಒಟ್ಟು ಮಾಡಿ ಮನೆಗೆ ತಗೊಂಡು ಹೋಗಿ ಅಮ್ಮನತ್ರ ಬೈಸಿಕೊಂಡದ್ದಿದೆ. ಆ ಚಿಪ್ಪುಗಳನ್ನು ರಟ್ಟಿನ ಮೇಲೆ ಅಂಟಿಸಿ ಚೆಂದದ ಡಿಸೈನ್ಸ್ ಮಾಡಿದ್ದಿದೆ.
ನಾವು ಸಮುದ್ರದಲ್ಲಿ ನೀರಾಟವಾಡುವಾಗ ಆಪ್ಪನೂ ಕೂಡ ಜೊತೆ ಸೇರುತ್ತಿದ್ದರು. ನೀರಿನೊಳಗೆ ಚಂಡಾಟ ಆಡುತ್ತಿತ್ತು ಕೂಡಾ. ಆ ಅಲೆಗಳ ಹೊಡೆತಕ್ಕೆ ಬೆನ್ನು ಮಾಡಿ ನಿಂತಾಗ, ಎತ್ತರದ ಅಲೆ ಬಂದು ಆದರೊಡನೆ ಹಾರುವಾಗ, ನಂತರದಲ್ಲಿ ನೆಲದಲ್ಲಿ ಕಾಲೂರಲಾಗದೆ ನೀರಿನೊಳಗೆ ಮುಳುಗಿ ಉಪ್ಪು ನೀರು ಮೂಗಿನೊಳಗೆ ಹೋಗಿ ಉರಿ ಹತ್ತುವುದೆಲ್ಲ ಒಂದು ರೀತಿಯ ಥ್ರಿಲ್! ನಾವು ತುಂಬ ಜನ ಹೋದಾಗ ನಮ್ಮನ್ನು ಹಿಡಿಯುವವರೇ ಇಲ್ಲ. ಒಂದು ರೀತಿಯ ಕ್ರೇಜಿವರ್ಲ್ಡ್ ಸೃಷ್ಟಿಯಾಗುತ್ತಿತ್ತಾಗ!
ಕೆಲವೊಮ್ಮೆ ಕೆಲವೇ ಕೆಲವು ಮಂದಿ ಹೋಗಿ ನಿಶ್ಶಬ್ದವಾಗಿ ಕುಳಿತು ಸಮುದ್ರದಲೆಗಳ ಸಪ್ಪಳ ಕೇಳುವುದೂ ಅಷ್ಟೇ ಚೆಂದ. ಬೇಸರಾದಾಗ ಸಮುದ್ರ ತೀರಕ್ಕೆ ಹೋಗಿ ಮುಳುಗುವ ಸೂರ್ಯನನ್ನು ನೋಡಿದರೆ ಆ ಬಣ್ಣಗಳ ಓಕುಳಿಯಾಟ ಮನಸ್ಸಿನ ದುಗುಡವನ್ನು ಓಡಿಸುವುದು ನಿಸ್ಸಂಶಯ. ಕತ್ತಲಾಗುತ್ತಿದ್ದಂತೆ ಬಹು ದೂರದಲ್ಲಿ ಕಾಣುವ ಹಡಗುಗಳ ಮಿಣುಕು ದೀಪ ಸಮುದ್ರದ ನಿಗೂಢತೆಗೆ ಕನ್ನಡಿ ಹಿಡಿದಂತೆನಿಸುತ್ತದೆ. ಮನೆಗೆ ಮರಳಿದ ನಂತರ ಬಾವಿಕಟ್ಟೆಯಲ್ಲಿ ಬಾವಿಯಿಂದ ನೀರೆಳೆದು ತಣ್ಣನೆಯ ನೀರನ್ನು ಹೊಯ್ದುಕೊಳ್ಳುತ್ತಾ ಮೈಗಂಟಿದ ಮರಳನ್ನು ತೊಳೆಯುತ್ತಾ ಬಂದಂತೆ ಮನಕ್ಕಂಟಿದ ಚಿಂತೆಗಳು ತೊಳೆದು ಹೋಗುತ್ತಾ ಮನ ಹಗುರವಾಗುತ್ತಾ ಹೋಗುವ ಅನುಭವ ಹಿತವಾದದ್ದು.
ಕಡಲ ತೀರವೇ ಹಾಗೆ. ಮನದಲ್ಲಿದ್ದ ಯೋಚನೆಗಳ ಭಾರ ತಗ್ಗಿಸಿ ನಿರ್ಯೋಚನಾ ಸ್ಥಿತಿ ತಲುಪಿಸುತ್ತದೆ. ಕಡಲ ಕರೆಯೇ ಮೋಹಕ. ಆದರೀಗ ಘಟ್ಟದ ಮೇಲಿರುವ ನನಗೆ ಕಲ್ಪನೆಯ ಕಡಲೇ ಗತಿ☺️


70. ಅನುಭವ - ಸ್ವಚಿಂತನೆ
ಅಭಿ ಯಾವಾಗಲೂ ನನಗೆ ಹೇಳ್ತಾ ಇರ್ತಾಳೆ, "ಶೋಭಾ, ನಿನ್ನಲ್ಲಿರುವ ಮಗುತನ ನಿನ್ನನ್ನು ಉಳಿದವರಿಗಿಂತ ವಿಭಿನ್ನವಾಗಿಸುತ್ತದೆ. ಅದು ನಿನ್ನ ಶಕ್ತಿ" ಎಂದು. ಇಂತಹುದರ ಬಗ್ಗೆ ಅಷ್ಟಾಗಿ ಯೋಚಿಸಿರದ ನಾನು ನನ್ನಲ್ಲಿರುವ ಗುಣಸ್ವಭಾವಗಳ ಬಗ್ಗೆ ಗಮನಿಸತೊಡಗಿದಾಗ ನನ್ನಲ್ಲಿ ಮಗುವಿನಂತೆ ಸಣ್ಣ ಸಣ್ಣ ವಿಷಯಗಳಿಂದ ಸಂತಸ ಪಡೆದುಕೊಳ್ಳುವ ಗುಣ, ಥಟ್ಟನೆ ಎಲ್ಲರನ್ನು ನಂಬುವ ಮುಗ್ಧತೆ, ಮಕ್ಕಳಂತೆ ಕಲ್ಪನಾಲೋಕದಲ್ಲಿ ವಿಹರಿಸುವ ಮನಸ್ಥಿತಿ, ಸಣ್ಣ ವಿಷಯಗಳಲ್ಲಿ ಪಡೆಯುವ ತೃಪ್ತಿ(ಸ್ವಂತ ಬದುಕಿನಲ್ಲಿ), ಮಕ್ಕಳೊಂದಿಗೆ ಒಂದಾಗುವ ಗುಣ, ಉಳಿದವರ ಬಗ್ಗೆ ನನ್ನೊಳಗೆ ಹುಟ್ಟುವ ಸಹಜ ಪ್ರೀತಿಯ ಭಾವ, ಮಕ್ಕಳಂತೆ ವಿಪರೀತ ಉಮೇದಿನ ಸ್ವಭಾವ... ಈ ಎಲ್ಲಾ ಗುಣಗಳಿರುವುದು ಅರಿವಿಗೆ ಬಂದಿತು. ಪ್ರಾಯಶಃ ಇವೆಲ್ಲವುದರಿಂದಾಗಿ ನನ್ನ ಬದುಕಿನ ಕಟು ಸಮಸ್ಯೆಗಳು/ಪರೀಕ್ಷೆಗಳು ನನ್ನ ಬದುಕನ್ನು ಯಾವತ್ತೂ ಅಸಹನೀಯವಾಗಿಸಲೇ ಇಲ್ಲವೇನೋ ಎಂದನಿಸಿತು.
ಜೀವನವನ್ನು, ಸಂಬಂಧಗಳನ್ನು ಅನಗತ್ಯವಾಗಿ ಕಾಂಪ್ಲಿಕೇಟ್ ಮಾಡಿಕೊಳ್ಳುವ ಮನಸ್ಥಿತಿಯ ಪ್ರತಿಯೊಬ್ಬರೂ ಇಂತಹ ಮಗುತನದಿಂದ ತುಂಬು ಬದುಕನ್ನು ಬದುಕಬಹುದು ಎನ್ನುವುದು ನಾನು ಈವರೆಗೆ ಕಂಡುಕೊಂಡ ಸತ್ಯ. ಖುಷಿಯಾಗಿರಲು ಮನಸ್ಥಿತಿ ಮುಖ್ಯವೇ ವಿನಃ ಪರಿಸ್ಥಿತಿಯಲ್ಲ. ನನ್ನ ಜೀವನದ ಅತ್ಯಂತ ನಿರ್ಣಾಯಕ ಪರಿಸ್ಥಿತಿಯಲ್ಲೂ ನನ್ನನ್ನು ನನ್ನ ಈ ಮಗುತನ ಕುಸಿದು ಹೋಗಲು ಬಿಟ್ಟಿಲ್ಲ ಅನ್ನುವುದಂತೂ ನಿಜ.
ಖುಷಿಯಾಗಿರಲಿಕ್ಕೆ ದೊಡ್ಡಂತಸ್ತಿನ ಅರಮನೆ ಬೇಕೆಂದಿಲ್ಲ. ಸಹಜ ಕುತೂಹಲವಿದ್ದರೆ ಒಂದು ಇರುವೆಯ ಸಾಲು, ಚೆಂದದ ಹಕ್ಕಿ, ಪ್ರಾಣಿಗಳ ಮರಿಗಳು, ಹಳ್ಳಿಯ ಬೊಚ್ಚುಬಾಯಿಯ ಮುಗ್ದ ವೃದ್ಧರ ನಗು ಕೂಡಾ ಖುಷಿ ಕೊಡುತ್ತದೆ. ಜೀವನದಲ್ಲಿ ಸರಳತೆಯಿದ್ದಲ್ಲಿ ಮರಗಿಡ, ಗುಡ್ಡಬೆಟ್ಟ, ನದಿ ಸಮುದ್ರ ತಟಗಳು ಸಹಜ ಸುಖದ ಸುಷುಪ್ತಿಯೊಳಗೆ ನಮ್ಮನ್ನು ಒಯ್ಯುತ್ತವೆ. ನಮ್ಮೊಳಗಿನ ಮಗುತನ ಸಕಾರಾತ್ಮಕ ಭಾವದ ಬೆಳವಣಿಗೆಗೆ ಒತ್ತು ಕೊಟ್ಟು ನಮ್ಮನ್ನೆಲ್ಲ ಒಳಿತಿನೆಡೆಗೆ ಕೊಂಡೊಯ್ದರೆ ಬದುಕು ಸ್ವಾರಸ್ಯಕರವಾಗುವುದು ನಿಜವಲ್ಲವೆ?

69. ನೆನಪುಗಳು

ಇತ್ತೀಚಿನ ದಿನಗಳಲ್ಲಿ ನನಗೆ ಒಲಿದು ಬಂದದ್ದು ಬರವಣಿಗೆಯ ಹವ್ಯಾಸ. ಅದರಿಂದ ಮೂಡಿ ಬಂದ ಲೇಖನಗಳಿಗೆ ಪೂರಕವಾದ ಹಳೆಯ ಫೋಟೊಗಳನ್ನು ಹುಡುಕುವಾಗ ಕಳೆದುಹೋದ ಸಮಯದ ನಿಚ್ಚಳರೂಪ ಕಾಣತೊಡಗಿತು. ಹಳೆಯ ಫೋಟೊಗಳು ಹಳೆಯ ನೆನಪುಗಳನ್ನು, ತಾರುಣ್ಯದ ದಿನಗಳನ್ನು ನನ್ನ ಯೋಚನೆಯ ಮುಂಚೂಣಿಗೆ ತಂದವು. ಆ ಹಳೆಯ ನೆನಪುಗಳೆಲ್ಲ ಮರುಕಳಿಸಿ ಸುತ್ತುತ್ತಾ ನಿಜಕ್ಕೂ ಒಂದು ಹಂತದಲ್ಲಿ ನನ್ನನ್ನು ಒಳಗೊಳಗೆ ಅಲ್ಲಾಡಿಸಿ ಬಿಟ್ಟವು ಅಂದರೆ ಸುಳ್ಳಲ್ಲ. ತಾರುಣ್ಯದ ಆ ಕನಸುಗಣ್ಣಿನ ಹೊಳಪು, ಬಳಕುವ ದೇಹಾಕೃತಿ, ತಲೆಬಿಸಿ ಇಲ್ಲದ ಸ್ವಚ್ಛಂದ ಬದುಕು...... ಹೀಗೆ ಮನಕ್ಕೆ ಮುದ ನೀಡುವ ನೆನಪುಗಳು ಖುಷಿ ಕೊಟ್ಟರೆ ಹುಡುಗಾಟಿಕೆಯಲ್ಲಿ ನನ್ನವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸ್ಪಂದಿಸದೆ ಇರುವ ಅಪರಾಧಿ ಭಾವ ಕೂಡ ಕಾಡತೊಡಗಿತು. ಬರೀ ಕಳಕೊಂಡಿದ್ದು ಮಾತ್ರವಲ್ಲ ಪಡಕೊಂಡಿದ್ದು ಹಲವಾರಿವೆ ಎನ್ನುವ ಸತ್ಯ ಸಾಕ್ಷಾತ್ಕಾರವಾಯಿತು ಕೂಡಾ. ಯೌವ್ವನ ಕಳೆದು ಹೋದರೂ ಚಿಂತನೆಯ ಪ್ರೌಢಿಮೆ ದೊರೆತಿದೆ; ವ್ಯಕ್ತಿಗಳನ್ನು ಕಳಕೊಂಡರೂ ಅವರೊಡನೆ ಕಳೆದ ಕ್ಷಣಗಳ ಭಂಡಾರವಿದೆ; ಊರು ಬಿಟ್ಟು ಹೊರಬಂದರೂ ಅದರೊಟ್ಟಿಗಿನ ನಂಟಿನ ಅಂಟಿನ ಅನುಭವವಿದೆ; ಜೀವನದ ಪಯಣದ ದಾರಿಯಲ್ಲಿ ಸಿಕ್ಕ ಹೊಸ ಆಪ್ತರ ಸಹವಾಸವಿದೆ; ನಮ್ಮ ಮಕ್ಕಳ ಆರೋಗ್ಯಕರ ಬೆಳವಣಿಗೆಯನ್ನು, ಅವರ ಚಿಂತನೆಯ ಮಾಗುವಿಕೆಯನ್ನು ನೋಡುವ ಭಾಗ್ಯವಿದೆ. ಕಳೆದುಕೊಳ್ಳವುದು, ಪಡೆದುಕೊಳ್ಳುವುದು ಬದುಕಿನ ಹಾಸಿನ ದಾಳದಾಟ ಎನ್ನುವ ಅರಿವೂ ಮೂಡಿದೆ.
ಇಲ್ಲಿ ತಿಳಿದುಕೊಂಡ ಇನ್ನೊಂದು ಸತ್ಯವೇನೆಂದರೆ ತಲೆಕೂದಲು ಹಣ್ಣಾಗುವುದಕ್ಕೂ ಜೀವನಾಸಕ್ತಿ ಉಳಿಸಿಕೊಳ್ಳುವುದಕ್ಕೂ ಯಾವುದೇ ತಾಳಮೇಳ ಇಲ್ಲವೆನ್ನುವುದು. ಇದು ಕನಕದಾಸರು ಹೇಳಿದ " ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊll ನೀ ದೇಹದೊಳಗೊ ನಿನ್ನೊಳು ದೇಹವೊll" ಎಂಬಂತೆ ವಿಶ್ಲೇಷಣೆಗೆ ಮೀರಿದ ವಿಷಯ. ಕಾಲ ಸಾಗುತ್ತಿರುತ್ತದೆ; ಅದರೊಟ್ಟಿಗೆ ಸಾಗುವ ನಾವು ಎಲ್ಲೋ ಒಂದು ಕಾಲಘಟ್ಟದಲ್ಲಿ ಬಿಡುವು ತೆಗೆದುಕೊಂಡು ಹಿಂದಿರುಗಿ ನೋಡಿದಾಗ ನಾವು ನಡೆದು ಬಂದ ಜೀವನ ದರ್ಶನವಾಗುತ್ತದೆ. ಹಾಗೆಯೇ ಮುಂದೆ ಸಾಗಲಿರುವ ದಾರಿಯೂ ಕಾಣತೊಡಗುತ್ತದೆ. ಈ ಪಯಣದಲ್ಲಿ ಸಾಗುತ್ತಿರುವುದಷ್ಟೇ ನಮ್ಮ ಆಯ್ಕೆಯೇನೋ ಅಂತ ಕೆಲವೊಮ್ಮೆ ಅನಿಸುತ್ತದೆ. ಆದರೂ ಮನದ ಮೂಲೆಯಲ್ಲೆಲ್ಲೋ ನಾನು ನನ್ನ ತಾರುಣ್ಯದಲ್ಲೇ ಇದ್ದಿದ್ದಿದ್ದರೆ ಎಂಬ ಭಾವ ಕಾಡುತ್ತಿರುತ್ತದೆ!?

68. ಪರಿಸರ - ಅನುಭವ (ಗ್ರಹಣ)
1980ರ ಫೆಬ್ರವರಿ 16ರಂದು ಕುಂದಾಪುರದಲ್ಲಿ ಕಂಡ ಸಂಪೂರ್ಣ ಸೂರ್ಯಗ್ರಹಣ ಹಾಗೂ 2019 ಡಿಸೆಂಬರ್ 26ರಂದು ಮಂಗಳೂರಿನಲ್ಲಿ ಕಂಡ ಕಂಕಣ ಸೂರ್ಯಗ್ರಹಣವನ್ನು ನೋಡಿದ ಭಾಗ್ಯಶಾಲಿ ನಾನು.
ನಾನಾಗ 8ನೇ ತರಗತಿಯಲ್ಲಿ ಕುಂದಾಪುರದಲ್ಲಿ ಓದುತ್ತಿದ್ದೆ. ಫೆಬ್ರವರಿ 16ರಂದು ಸಂಪೂರ್ಣ ಸೂರ್ಯಗ್ರಹಣ ಎಂದು ನಾವೆಲ್ಲ ಮನೆಯೊಳಗೆ ಇದ್ದೆವು. ನನ್ನಪ್ಪ ಕಿಟಕಿಯ ಬಳಿ ಸಣ್ಣ ಕನ್ನಡಿಯನ್ನಿಟ್ಟು ಗ್ರಹಣದ ಪ್ರತಿಫಲನ ಮನೆಯೊಳಗೆ ಬೀಳುವ ಏರ್ಪಾಡು ಮಾಡಿದ್ದರು. ಆದರೂ ನಾನು, ನನ್ನ ತಂಗಿ ಕಿಟಕಿಯ ಸಂಧಿಯಿಂದ ಎಕ್ಸ್ ರೆ ಶೀಟ್ ಹಿಡಿದುಕೊಂಡು ಹೊರಗೆ ನೋಡುವ ಪ್ರಯತ್ನ ಮಾಡಿದ್ದೆವು. ಮಧ್ಯಾಹ್ನ ಸುಮಾರು ಹನ್ನೆರಡುವರೆಯ ಆಸುಪಾಸು. ಕೆಲವು ನಿಮಿಷಗಳು ಸಂಪೂರ್ಣ ಸಂಜೆಗತ್ತಲು ಆವರಿಸಿ ಹಕ್ಕಿಗಳೆಲ್ಲ ಚಿಲಿಪಿಲಿಗುಡುತ್ತಾ ಗೂಡಿಗೆ ಹಿಂದಿರುಗುವ ದೃಶ್ಯ ಇನ್ನೂ ನನ್ನ ಕಣ್ಣು ಕಟ್ಟಿದಂತಿದೆ(ಅರೆತೆರೆದ ಕಿಟಕಿಯ ಸಂಧಿಯಿಂದ ನೋಡಿದ್ದು ಮತ್ತೇ!) ಸುಮಾರು ನಾಲ್ಕೈದು ಘಂಟೆಗಳ ಕಾಲ ಇದ್ದ ಗ್ರಹಣವದು. ಗ್ರಹಣ ಮುಗಿದ ಮೇಲೆ ಸಂಜೆ ಅಪ್ಪ ಅಷ್ಟು ಹೊತ್ತು ಒಳಗಿದ್ದ ಬೇಸರ ಕಳೆಯಲು ಕಾರಿನಲ್ಲಿ ನದಿತೀರಕ್ಕೆ ಕರೆದುಕೊಂಡು ಹೋಗಿದ್ದರು. ತದನಂತರದ ದಿನಗಳಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯವರು ಗ್ರಹಣ ಕಾಲದ ಒಂದು ಗಂಟೆಯ ಡಾಕ್ಯುಮೆಂಟರಿಯನ್ನು ಮೊಬೈಲ್ ವ್ಯಾನಿನಲ್ಲಿ ಬಂದು ಊರೂರುಗಳಲ್ಲಿ ತೋರಿಸಿದ್ದರು. ವಜ್ರದುಂಗುರದಂತೆ ಕಾಣುತ್ತಿದ್ದ ಆ ಗ್ರಹಣದ ಚಿತ್ರಣ ಅದ್ವಿತೀಯವಾಗಿತ್ತು. ಆ ಗ್ರಹಣ ಸಂಪೂರ್ಣವಾಗಿ ಕಾಣುವ ಸ್ಥಳಗಳಲ್ಲಿ ಒಂದು ಸ್ಥಳ ಕುಂದಾಪುರವೂ ಆಗಿತ್ತು.
2019ರ ಡಿಸೆಂಬರ್ 26ರ ಕಂಕಣ ಸೂರ್ಯಗ್ರಹಣವನ್ನು ನಾನು, ನನ್ನ ಮಗಳು ಹಾಗೂ ಡಿಂಗ ಮಂಗಳೂರಿನ ನವೋದಯ ಕ್ಯಾಂಪಸ್ಸಿನಲ್ಲಿ ನೋಡಿತು. ರೇಖಾ - ಅಶೋಕರನ್ನು ಭೇಟಿಯಾಗಲು ಹೋದ ನಮಗೆ ಅಲ್ಲೇ ಗ್ರಹಣ ನೋಡುವ ಅವಕಾಶ ಸಿಕ್ಕಿತು. ನಮ್ಮ ಬಳಿ ಟಿನ್ ಫಾಯಿಲ್ ನ ಸೌರ ಕನ್ನಡಕ ಇದ್ದ ಕಾರಣ ನಾವು ಇಡೀ ಗ್ರಹಣವನ್ನು ಮನೆಯ ಹೊರಗಿನಂಗಳದಲ್ಲಿ ನೋಡಿ ಖುಷಿ ಪಟ್ಟಿತು. ಅದೊಂತರ ಥ್ರಿಲ್ಲಿಂಗ್ ಎಕ್ಸ್ಪೀರಿಯನ್ಸ್! ದುಡ್ಡು ಕೊಟ್ಟರೂ ಸಿಗುವ ಅನುಭವ ಅದಲ್ಲ. ಈ ಬಾರಿ ಗ್ಧಹಣದ ಸಮಯದಲ್ಲಿ ಸ್ವಲ್ಪ ಬೆಳಕು ಕಡಿಮೆ ಆಯಿತೇ ಹೊರತು ಕತ್ತಲಾಗಲಿಲ್ಲ. ಆದರೂ ಗ್ರಹಣ ಹಿಡಿಯುವ, ಸಂಪೂರ್ಣವಾಗಿ ಆವರಿಸುವ ಹಾಗೂ ಗ್ರಹಣ ಬಿಡುವ ಪ್ರತಿಯೊಂದು ಕ್ಷಣವೂ ಅಪರೂಪದ ಅನುಭವ. ಇದೊಂದು ದೊಡ್ಡ ಸುಯೋಗವೇ ಸರಿ!
ನನಗೆ 2018ರ ಜುಲೈ 27ರಂದು ನಡೆದ ಶತಮಾನದ ಸಂಪೂರ್ಣ ಸುದೀರ್ಘ ರಕ್ತ ಚಂದ್ರಗ್ರಹಣವನ್ನು ಕೊಯಮತ್ತೂರಿನ ಆದಿಯೋಗಿಯ ಸನ್ನಿಧಿಯಲ್ಲಿ ಸದ್ಗುರುವಿನ ಜೊತೆ ನೋಡಿದ ಸ್ಮರಣೀಯ ಅನುಭವವೂ ಇದೆ. ಅದು ಸುಮಾರು ಒಂದೂ ಮುಕ್ಕಾಲು ಘಂಟೆ ನಡೆದ ಗ್ರಹಣ. ಹೊರಾಂಗಣದಲ್ಲಿ ನೂರಾರು ಜನ ಭಕ್ತ ಸಮೂಹದಲ್ಲಿ ಅಂತಹ ಭಕ್ತರಲ್ಲದ ನಾನು ಮತ್ತು ನನ್ನ ತಂಗಿ ತಾಸುಗಟ್ಟಲೆ ಕೂತು ನೋಡಿದ ಆ ಚಂದ್ರಗ್ರಹಣವನ್ನು ಮರೆಯಲು ಸಾಧ್ಯವೇ ಇಲ್ಲ. ವೆಳ್ಳಿಯಂಗಿರಿ ಪರ್ವತ ಸಾಲಿನ ಹಿನ್ನೆಲೆಯಲ್ಲಿ ಆದಿಯೋಗಿಯ ಬೃಹತ್ ವಿಗ್ರಹದ ಪಕ್ಕದಲ್ಲಿ ಗ್ರಹಣದ ಬಗ್ಗೆ ಸದ್ಗುರುವಿನ ನಿರೂಪಣೆಯನ್ನು ಕೇಳುತ್ತಾ ನೋಡಿದ ಆ ಚಂದ್ರಗ್ರಹಣ ನನ್ನ ಜೀವನದ ಅಪರೂಪದ ಘಳಿಗೆಗಳಲ್ಲೊಂದು.
ಗ್ರಹಣದ ಬಗ್ಗೆ ಯಾರ್ಯಾರ ಕಲ್ಪನೆ ಹೇಗೋ ನಾನರಿಯೆ‌. ನನಗಂತೂ ಅದೊಂದು ತಪ್ಪದೆ ನೋಡಲೇಬೇಕಾದ ದೃಶ್ಯ ಅಂತ ಅನಿಸುವುದಂತು ನಿಜ.


67. ಹೊಂಗಿರಣ ಶಾಲೆ  - ಪ್ರಾರಂಭದ ನೆನಪುಗಳು.
ಹೊಂಗಿರಣವನ್ನು ನಾವು ಪ್ರಾರಂಭಿಸಿದ್ದೇ ಮುಕ್ತ ವಾತಾವರಣದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ. ಆ ಮುಕ್ತ ವಾತಾವರಣದ ಸೃಷ್ಟಿ ಸುಲಭವಲ್ಲ. ಹೀಗಾಗಿ ಪ್ರಾರಂಭಿಕ ವರ್ಷದಿಂದಲೂ ಹೊಂಗಿರಣ ಹಲವಾರು ಪ್ರಯತ್ನಗಳನ್ನು/ಪ್ರಯೋಗಗಳನ್ನು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಮಾಡತೊಡಗಿತು. ಮೊದಲ ವರ್ಷದಲ್ಲಿ ಇದ್ದ 47 ಮಕ್ಕಳಿಗೆ ಹಾಗೂ 4 ಟೀಚರ್ಸ್ ಗಳಿಗೆ ಜೀರ್ಣಿಸಿಕೊಳ್ಳಲಾರದಷ್ಟು ಕಲಿಯುವ ಅವಕಾಶ ಸಿಕ್ಕಿದವು. ಶಾಲೆ ಬಿಟ್ಟ ಮೇಲೂ ಆ ದಿನದ ಕಾರ್ಯ ಚಟುವಟಿಕೆಗಳ ಅವಲೋಕನವನ್ನು ಟೀಚರ್ಸ್ ಗಳ ಜೊತೆಗೆ ಕುಳಿತು ಮಾಡುತ್ತಿದ್ದೆ.
ನಮ್ಮ ಪ್ರಯೋಗಗಳಿಗೆ ಮೊಟ್ಟ ಮೊದಲ ಸಹಾಯ ಪಡಕೊಂಡಿದ್ದು ನನ್ನ ಸ್ನೇಹಿತೆಯಾದ ಮೈಸೂರಿನ ಡೆಮಾನ್ಸ್ಟ್ರೇಶನ್ ಶಾಲೆಯ ಇಂಗ್ಲಿಷ್ ಶಿಕ್ಷಕಿ ಶ್ರೀಮತಿ ತ್ರಿವೇಣಿ ಯವರಿಂದ ಮಕ್ಕಳಿಗೆ ಹಾಗೂ ಟೀಚರ್ಸ್ ಗಳಿಗೆ ಬರವಣಿಗೆಯ ಸರಿಯಾದ ಕ್ರಮದ ಬಗ್ಗೆ ನಾಲ್ಕೈದು ದಿನಗಳ ಕಾರ್ಯಾಗಾರ ಮಾಡಿಸುವುದರ ಮೂಲಕ. ತದನಂತರದಲ್ಲಿ ಐ.ಕೆ. ಬೋಳುವಾರರಿಂದ ನಾಲ್ಕೈದು ದಿನಗಳ activity based learning ಬಗೆಗಿನ ಕಾರ್ಯಾಗಾರದಲ್ಲಿ ಥ್ರೋಬಾಲ್ ಆಡುತ್ತಾ ಚರಿತ್ರೆ ಪಾಠ ಮನನ ಮಾಡುವುದು, ವ್ಯಾಕರಣ ಕಲಿಯುವುದು, ಜಿಬಲಿ/ಜುಬುಲಿ ಆಟವಾಡುತ್ತಾ ಭೂಗೋಳ ಕಲಿಯುವುದು, ಕೈ ತೋಟದ ಮಧ್ಯೆ ಹಾಡುತ್ತಾ ಪರಿಸರ ಅಧ್ಯಯನ ಮಾಡುವುದು.... ಇವೆಲ್ಲವನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಅವುಗಳನ್ನು ನಾವು ರೂಢಿಸಿಕೊಂಡಿದ್ದೆವು ಕೂಡಾ. ಬಂದಗದ್ದೆ ರಾಧಾಕೃಷ್ಣರ ಕಥೆ ಹೇಳುವ ಹಾಗೂ ನೈಸರ್ಗಿಕ ಬಣ್ಣ ಉಪಯೋಗಿಸಿ ಮಾಡುವ ಹಸೆ ಚಿತ್ರದ ಕಾರ್ಯಾಗಾರ ಇನ್ನೂ ಅಚ್ಚಳಿಯದ ನೆನಪಾಗಿ ಉಳಿದಿದೆ. ಆಗಿನ ಸಂಗೀತ ಶಿಕ್ಷಕರಾಗಿದ್ದ ಅನನ್ಯ ಭಾರ್ಗವರವರು ಕಲಿಸಿದ "ಆಕಾಶದವರೆಗೂ ನಾ ಹೋಗಿ... ಹಾಗೂ ತುಂಗೆಯ ತೀರದಲ್ಲಿ ಕನ್ನಡ ನಾಡಿನಲ್ಲಿ..." ಹಾಡುಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿವೆ. ಆ ವರ್ಷದ ಗಾಂಧಿಜಯಂತಿಯಂದು ನಮ್ಮ ಪುಟ್ಟ ಮಕ್ಕಳು ನೀಡಿದ ಮುಕ್ಕಾಲು ಘಂಟೆಯ ಮೌಲ್ಯಾಧಾರಿತ ಕಾರ್ಯಕ್ರಮ ಹೊಂಗಿರಣದ ಹೊಸಹವೆಯನ್ನು ಜನರಿಗೆ ಪೂರ್ಣ ಪ್ರಮಾಣದಲ್ಲಿ ಪರಿಚಯಿಸಿತೆಂದರೆ ಸುಳ್ಳಲ್ಲ. ಪ್ರತಿಭಾಕಾರಂಜಿಯಲ್ಲಿ ನಮ್ಮ ಮಕ್ಕಳು ಭಾಗವಹಿಸಿದ ಹೆಚ್ಚಿನ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊಂಗಿರಣದ ಇರುವನ್ನು ಎಲ್ಲೆಡೆ ಪ್ರಚುರ ಪಡಿಸಿದರು.
ಆ ವರ್ಷದ ವಾರ್ಷಿಕೋತ್ಸವವಂತೂ ಮರೆಯಲಾಗದ್ದು. "ವಿಜಯನಗರ ವೈಭವ" ಎನ್ನುವ ಒಂದು ಕಥೆಯೊಳಗೆ ಚರಿತ್ರೆಯ ಪುಟಗಳನ್ನು ತಿರುವುತ್ತಾ ಮಕ್ಕಳಿಗೆ ಬೇಕಾದ ನೃತ್ಯ, ಹಾಡುಗಳನ್ನು ಸೇರಿಸಿ ಗದ್ದೆಮನೆ ರಾಘುವಿನಿಂದ ನಿರ್ದೇಶಿಸಲ್ಪಟ್ಟ ಒಂದೂವರೆ ಘಂಟೆಯ ಆ ನಾಟಕ ಪಾಲಕ - ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು. ಆ ವರ್ಷದ ನಮ್ಮ ಶ್ರಮ ವ್ಯರ್ಥವಾಗದೆ ಮಕ್ಕಳ ಕಲಿಕೆಗೆ ಪೂರಕವಾದ ಮುಕ್ತ ವಾತಾವರಣದ ಸೃಷ್ಟಿ ಕಾರ್ಯ ಪ್ರಾರಂಭವಾಯಿತು ಎಂದರೆ ತಪ್ಪಿಲ್ಲ. ನಮ್ಮ ಶಾಲೆಗೆ ಸೇರಿಸಿದ ಪಾಲಕರ ಮುಖದಲ್ಲಿ ತೃಪ್ತಿಯನ್ನು ಕಂಡಾಗ ನಮ್ಮಲ್ಲಿ ಹುಟ್ಟಿದ ಧನ್ಯತಾ ಭಾವ ನಮ್ಮ ಮುಂದಿನ ಹೆಜ್ಜೆಯನ್ನು ಇನ್ನೂ ಧೃಡವಾಗಿ ಇಡಲು ಒತ್ತು ನೀಡಿ ನಮ್ಮ ಕಾರ್ಯಕ್ಷೇತ್ರದ ವಿಸ್ತರತೆ ಹೆಚ್ಚಿಸಿತು.


66. ಹೊಂಗಿರಣ - ನೆನಪುಗಳು.

ನಾವು ಹೊಂಗಿರಣ ಪ್ರಾರಂಭಿಸಿದಾಗ ಶಾಲೆ ನಡೆಸಲು ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿ ಗೋಡೌನ್ ಸಿಕ್ಕಿತಷ್ಟೇ! ಹಾಗಾದರೆ ನಮ್ಮ ಉಳಿಕೆಯ ಕಥೆ? ಹಳ್ಳಿಯಾಗಿದ್ದರಿಂದ ಬಾಡಿಗೆ ಮನೆ ಸಿಗುವ ಛಾನ್ಸ್ ಇರಲಿಲ್ಲ. ಆಗ ನಮ್ಮ ಉಳಿಕೆಗೆ ಮುಫತ್ತಾಗಿ ಜಾಗ ಕೊಟ್ಟವರು ಶ್ರೀ ಪ್ರಸನ್ನರವರು. ಉಪ್ಪಿನಕಾಯಿ ಫ್ಯಾಕ್ಟರಿಯ ರಸ್ತೆಯ ಆಚೆ ಪಕ್ಕದಲ್ಲಿದ್ದ ಅವರ ಮನೆಯ ಆಚೀಚೆಗೆ ಎರಡು ಔಟ್ ಹೌಸ್ ಗಳಿದ್ದವು. ಎರಡೂ ಕೂಡ ಟಾಯ್ಲೆಟ್, ಬಾತ್ರೂಂಗಳನ್ನು ಹೊಂದಿದ ಸುಮಾರು ಹತ್ತು/ಹನ್ನೆರಡು ಅಡಿ ಆಯಳತೆಯ ಕೊಠಡಿಗಳಾಗಿದ್ದವು. ನಾನು ಇರುತ್ತಿದ್ದ ರೂಂ ರಸ್ತೆಯ ಪಕ್ಕಕ್ಕಿತ್ತು. ನಾನಿರುತ್ತಿದ್ದ ರೂಮಿನ ಹಿಂಬಾಗಿಲು ತೆರೆದರೆ ಬಲಪಕ್ಕದಲ್ಲಿ ಟಾಯ್ಲೆಟ್ ಮತ್ತು ಬಾತ್ರೂಂ. ಅಲ್ಲೇ ಎಡ ಪಕ್ಕದಲ್ಲಿದ್ದ ಎರಡು x ಮೂರಡಿ ಅಳತೆಯ ಖಾಲಿ ಜಾಗದ ಕಟ್ಟೆಯ ಮೇಲೆ ನಮ್ಮ ಅಡುಗೆ ತಯಾರಾಗುತ್ತಿತ್ತು. ಇನ್ನೊಂದು ಪಕ್ಕಕ್ಕಿದ್ದ ರೂಮಿನಲ್ಲಿ ಮೂರ್ನಾಲ್ಕು ಜನ ಲೇಡಿ ಟೀಚರ್ಸ್ ಉಳಿಯುತ್ತಿದ್ದರು. ಇದ್ದ ಇಬ್ಬರು ಮೇಲ್ ಟೀಚರ್ಸ್ ಶಾಲಾ ಕಟ್ಟಡದಲ್ಲಿಯೇ ಉಳಿಯುತ್ತಿದ್ದರು. ಎಲ್ಲರಿಗೂ ಊಟತಿಂಡಿಯ ತಯಾರಿ ಆ ಪುಟ್ಟ ಕಟ್ಟೆಯ ಮೇಲೆಯೆ! ಒಮ್ಮೊಮ್ಮೆ ಅಶೋಕ್, ರೇಖಾ ಮತ್ತು ಮಕ್ಕಳು, ಸುರೇಶ, ಉಷಕ್ಕ ಮತ್ತು ಮಕ್ಕಳು ಬಂದಾಗ ನಾವಷ್ಟೂ ಜನ ಆ ಪುಟ್ಟ ರೂಮಿನ ಇಕ್ಕಟ್ಟಿನಲ್ಲಿ ಮಲಗಿದ್ದಿದೆ. ಒಟ್ಟಿಗಿರುವ ಮನಸ್ಸಿದ್ದಲ್ಲಿ ಜಾಗದ ಅಳತೆ ಒಂದು ದೊಡ್ಡ ವಿಷಯವೇ ಆಗುವುದಿಲ್ಲ ಎನ್ನುವ ಸತ್ಯವನ್ನು ತೋರಿಸಿದ ಜಾಗವದು.
ಪ್ರಸನ್ನರವರು ಊರಿನಲ್ಲಿ ಇರುತ್ತಿದ್ದದ್ದು ಕಡಿಮೆ ಇದ್ದ ಕಾರಣ ಆ ಇಡೀ ವಠಾರವೇ ನಮ್ಮ ಸಾಮ್ರಾಜ್ಯವಾಗಿತ್ತು.
ನಮ್ಮೆಲ್ಲರ ಅಡುಗೆಗೆ ನಾನು ಹೆಡ್ ಕುಕ್. ನಮ್ಮ ಲೇಡಿ ಟೀಚರ್ಸ್ ನನ್ನ ಹೆಲ್ಪರ್ಸ್ ಆಗಿದ್ದರು. ಬಗೆಬಗೆಯ ಸರಳ ಅಡುಗೆ ಮಾಡುವುದು ನಮ್ಮ ವಿಶೇಷವಾಗಿತ್ತು. ಬೆಳಿಗ್ಗೆ ವೆರೈಟಿ ದೋಸೆಗಳು, ಇಡ್ಲಿ, ಅವಲಕ್ಕಿ, ಉಪ್ಪಿಟ್ಟಾದರೆ ಸಂಜೆ ಒಂದು ಚಾ, ರಾತ್ರಿ ಸಾಂಬಾರ್/ಸಾರು/ ತಂಬುಳಿ/ಪಲ್ಯ/ ಗೊಜ್ಜನ್ನೊಳಗೊಂಡ ಸರಳ ಊಟ ಆ ರೂಮಿನ ಕಟ್ಟೆಯಡುಗೆಮನೆಯಲ್ಲಿ ತಯಾರಾಗುತ್ತಿತ್ತು. ನಂತರ ಉಂಡವರೆಲ್ಲ ಸೇರಿ ಪಾತ್ರೆ ಪರಡಿ ತೊಳೆದು ಸೇರಿಸಿಡುತ್ತಿದ್ದರು. ಮಧ್ಯಾಹ್ನದ ಊಟ ಶಾಲೆಯಲ್ಲಿ. ಎಲ್ಲರಿಗೂ ಹೆಗ್ಗೋಡಿನ ಅನುಪಮಾ ಎನ್ನುವವರಿಂದ ಪ್ಲೇಟಿಗೆ ಇಂತಿಷ್ಟು ಎನ್ನುವ ಲೆಕ್ಕಾಚಾರದಲ್ಲಿ ರೆಡಿ ಫುಡ್ ತರಿಸುತ್ತಿತ್ತು.
ಯಾವುದೇ ಮೂಲಭೂತ ಸೌಕರ್ಯಗಳು ಸರಿಯಿಲ್ಲದಿದ್ದರು ಅದನ್ನು ಅರಿತು ಬಾಳುವ ಮನಸ್ಥಿತಿ ಸರಿಯಿದ್ದ ಆ ಕಾಲಘಟ್ಟ ಬದುಕಿನ ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಸಿತೇ ವಿನಃ ಗೊಣಗುಟ್ಟುವುದನ್ನು ಕಲಿಸಲಿಲ್ಲ. ಎಷ್ಟೋ ಬಾರಿ ನಾವೆಲ್ಲ ಒಟ್ಟಿಗೆ ಹೋಗಿ ದಾರಿಯುದ್ದಕ್ಕೂ ಬಿದ್ದಿರುತ್ತಿದ್ದ ಕಟ್ಟಿಗೆಯನ್ನು ಆರಿಸಿ ತಂದು ನೀರನ್ನು ಕಾಯಿಸಿದ ದಿನಗಳಿವೆ. ನಮ್ಮ ಒದ್ದಾಟ ನೋಡಲಾಗದೆ ನಮಗೆ ಹಾಲು ಕೊಡುತ್ತಿದ್ದ ಅಮಟೆಕೊಪ್ಪದ ಶ್ರೀಧರ್ ರವರು ಒಂದು ಲೋಡ್ ಕಟ್ಟಿಗೆಯನ್ನು ನಮಗೆ ಮುಫತ್ತಾಗಿ ಕೊಟ್ಟ ಘಟನೆಗಳೂ ಇವೆ. ಬೇಸಿಗೆಯಲ್ಲಿ ಬಾವಿಯಲ್ಲಿ ನೀರಿಲ್ಲದೆ ಬುಡದಲ್ಲಿರುತ್ತಿದ್ದ ಹುಳ ಬಂದಿರುತ್ತಿದ್ದ ನೀರನ್ನು ಸೋಸಿ ಬಳಸಿದ್ದಿದೆ. ಈಗ ಇವನ್ನೆಲ್ಲ ನೆನಪಿಸಿಕೊಂಡಾಗ ಬದುಕು ಹೀಗೂ ಇತ್ತೇ ಎಂದು ಆಶ್ಚರ್ಯವಾಗುತ್ತದೆ. ಅಂತಹ ಬದುಕನ್ನೂ ಆಸ್ವಾದಿಸಿ ಖುಷಿಯಿಂದಿದ್ದ ಆ ಶಿಕ್ಷಕರ ಬಗ್ಗೆ ಹೆಮ್ಮೆ ಎನಿಸುತ್ತದೆ.



65. ಶಾಲೆ ನೆನಪುಗಳು 
ಶಾಲೆ ಅಂದ ಕೂಡಲೆ ನೆನಪಾಗುವುದು ಪಾಠ ಹಾಗೂ ಪಠ್ಯ ಪೂರಕ ಚಟುವಟಿಕೆಗಳು. ಆಗೆಲ್ಲ ಈಗಿನಂತೆ ಸ್ಕೂಲ್ ಡೇ ಪ್ರತಿ ವರ್ಷ ಮಾಡುತ್ತಿರಲಿಲ್ಲ ಅಂತ ಕಾಣುತ್ತದೆ. ಏಕೆಂದರೆ ಒಂದರಿಂದ ಮೂರನೇ ತರಗತಿಯವರೆಗೆ ಹೆಬ್ರಿಯ ಸ.ಕಿ.ಪ್ರಾ. ಶಾಲೆಯಲ್ಲಿ ಕಲಿತ ನಾನು ಸ್ಟೇಜ್ ಮೇಲೆ ಒಮ್ಮೆ ಸಮೂಹ ನೃತ್ಯ ಮಾಡಿದ ನೆನಪಿದೆ. ನಂತರದಲ್ಲಿ ಆರನೇ ತರಗತಿಯವರೆಗೆ ಶಿವಮೊಗ್ಗದ ಸೈಂಟ್ ಮೇರೀಸ್ ಕಾನ್ವೆಂಟ್ ನಲ್ಲಿ ಓದಿದ ನನಗೆ ಒಮ್ಮೆಯೂ ಸ್ಟೇಜ್ ಪರ್ಫಾಮೆನ್ಸ್ ಕೊಟ್ಟ ನೆನಪಿಲ್ಲ. ನಂತರ ಕುಂದಾಪುರದಲ್ಲಿ ಒಂಬತ್ತನೆಯ ಕ್ಲಾಸ್ ನಲ್ಲಿ ಓದುವಾಗ ಸ್ಕೂಲ್ ಡೇಯಲ್ಲಿ ಒಂದು ನಾಟಕ ಮಾಡಿದ ನೆನಪಿದೆ. ನಮಗೆ ಲೆಕ್ಕ ಹೇಳಿಕೊಡುತ್ತಿದ್ದ ವಾಲ್ಟರ್ ಮಾಸ್ಟರ್ ಒಂದು ನಾಟಕ ಮಾಡಿಸಿದ್ದರು. ಅದರಲ್ಲಿ ನನ್ನದು ಹುಡುಗನ ಪಾರ್ಟ್. ಅದಕ್ಕಾಗಿ ಒಂದು ಕಪ್ಪು ಪ್ಯಾಂಟ್, ಗೆರೆ ಗೆರೆ ಶರ್ಟ್ ಹೊಲಿಸಿದ್ದೆ. ನನ್ನ ಕೈಕಾಲುಗಳು ಯಾವಾಗಲೂ move ಆಗುತ್ತಿದ್ದ ಕಾರಣ ಮಾಸ್ಟರ್ ನನ್ನ ಎಡಗೈಯನ್ನು ಹೆಚ್ಚು ಅಲ್ಲಾಡಿಸದೆ ಮಡಚಿ ಇರಿಸುವಂತೆ ಮಾಡುತ್ತಿದ್ದರು. ನಾಟಕದ ದಿವಸ ನನಗರಿವಿಲ್ಲದೆ ಅಭ್ಯಾಸಬಲದಿಂದ ಎಡಗೈಯನ್ನು ಮಡಚಿ ಇಟ್ಟುಕೊಂಡು ಬಲಗೈಯೊಂದನ್ನೇ ಉಪಯೋಗಿಸುತ್ತಾ ನಾಟಕ ಮಾಡಿದ್ದು ನೆನಪಿದೆ😊
ನಂತರ ನಾಟಕ ಮಾಡಿದ್ದು ಪಿಯುಸಿಯಲ್ಲಿ. ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ನಾಟಕದಲ್ಲಿ ಮರ್ಜೀನಳ ಪಾತ್ರ.ಶಿವಮೊಗ್ಗದಲ್ಲಿ ಡಿಗ್ರಿ ಮಾಡುವಾಗ ನಾವೊಂದಿಷ್ಟು ಫ್ರೆಂಡ್ಸ್ ಬೀದಿ ನಾಟಕ ಮಾಡುತ್ತಿದ್ದೆವು. ಉಡುಪಿಯ ಎಂಜಿಎಂ ನಲ್ಲಿ ಫೈನಲ್ ಡಿಗ್ರಿ ಮಾಡುವಾಗ ಯೂನಿಯನ್ ಡೇ ಗೆ ನಾವೊಂದಿಷ್ಟು ಹುಡುಗಿಯರು ಫ್ಯಾಷನ್ ಶೋ ಮಾಡಿದ್ದೆವು. ತದನಂತರ ನನ್ನ ಸ್ಟೇಜ್ ಪರ್ಫಾಮೆನ್ಸ್ ಇದ್ದದ್ದು ಬಿಎಡ್ ಕಾಲೇಜಿನಲ್ಲಿ. ಇದಿಷ್ಟು ಪಾಠಕ್ಕೆ ಹೊರತಾಗಿ ಸಾಂಸ್ಕೃತಿಕವಾಗಿ ನನಗೆ ಸಿಕ್ಕ ಸೀಮಿತ ಅವಕಾಶಗಳು.
ಮಕ್ಕಳಿಗೆ ಇಂತಹ ಅವಕಾಶಗಳು ಸೀಮಿತವಾಗದಿರಲೆಂದು ಹೊಂಗಿರಣದಲ್ಲಿ ನಾವು ಪ್ರತಿ ವರ್ಷ 3 ದಿನಗಳ ಕಾಲ ಹೊಂಗಿರಣೋತ್ಸವ ಮಾಡಿ ಪ್ರತಿ ಮಗುವೂ ಸ್ಟೇಜಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಗೂ ಅದಕ್ಕಾಗಿ ನಡೆಯುವ ಹತ್ತು ಹದಿನೈದು ದಿನಗಳ ಪ್ರಾಕ್ಟೀಸ್ನಲ್ಲಿ passive ಆಗಿ ಅನೇಕ ಕೌಶಲ್ಯಗಳನ್ನು ಕಲಿಯುವ ಅವಕಾಶ ಕಲ್ಪಿಸಿ ಕೊಡುತ್ತೇವೆ. ನನಗನಿಸುವ ಪ್ರಕಾರ ಈ ರೀತಿಯ ಅನುಭವಗಳು ಕ್ಲಾಸ್ ರೂಂ ಕಲಿಕೆಗಿಂತ ನಮ್ಮ ನೆನಪಿನಲ್ಲಿ ಹೆಚ್ಚಾಗಿ ಉಳಿಯುವಂತಹವು. ನಮ್ಮ ಹೊಂಗಿರಣದ ಮಕ್ಕಳು ಆ ಸಮಯದಲ್ಲಿ ತೋರಿಸುವ ಲವಲವಿಕೆ ಹಾಗೂ ಕಲೆಯನ್ನು ಕಲಿಯುವ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ರೀತಿ ತದನಂತರ ಅವರ ವ್ಯಕ್ತಿತ್ವದಲ್ಲಾಗುವ ಬದಲಾವಣೆ ಎಲ್ಲವೂ ಇಂತಹ ಪಠ್ಯ ಪೂರಕ ಚಟುವಟಿಕೆಗಳ ಪರಿಣಾಮವನ್ನು ಸ್ಪಷ್ಟವಾಗಿ ತೋರಿಸುತ್ತವೆ. ನನಗೆ ಯಾರಾದರೂ "ನೀನು ನಿನ್ನ ಶಾಲಾ ದಿನಗಳಲ್ಲಿ ಏನು ಕಲಿತೆ?" ಎಂದು ಕೇಳಿದರೆ ನೆನಪಾಗುವುದು ಕಲಿತ ಪಾಠಗಳಲ್ಲ; ಅನುಭವಯುಕ್ತವಾಗಿ ಕಳೆದ ಕ್ಷಣಗಳಷ್ಟೆ! ಪ್ರತಿಯೊಬ್ಬರೂ ಇದನ್ನು ಅರಿತುಕೊಂಡು ಅಂತಹ ಅನುಭವಗಳನ್ನು ಕಟ್ಟಿಕೊಡುವಂತಹ ವಾತಾವರಣವನ್ನು ತಮ್ಮ ಶಾಲೆಗಳಲ್ಲಿ ಏಕೆ ಸೃಷ್ಟಿಸಬಾರದು? ಮಗು ಕೇವಲ ನಾಲ್ಕು ಗೋಡೆಯ ನಡುವೆ ಸಿಕ್ಕಿ ಹಾಕಿಕೊಂಡು ಬರೀ ಪಠ್ಯ ಕಲಿಕೆಯ ಹೊರೆಯಲ್ಲಿ ನಲುಗುವ ಬದಲು ಇಂತಹ ಮುಕ್ತ ವಾತಾವರಣ ಕೊಟ್ಟಾಗ ಮಗುವಿನ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಆಗುವುದು ಸಹಜ ತಾನೆ?


64. ಪರಿಸರ - ನೆನಪುಗಳು (ಬಸ್ಸಿನ ಪ್ರಯಾಣ)
ನಾನು ಸುಮಾರು ಮೂರು ವರುಷ ನಮ್ಮೂರಿನಿಂದ ಉಡುಪಿಗೆ ಓದಿಗಾಗಿ ಪಯಣಿಸುವಾಗಿನ ಅನುಭವ. ಉಡುಪಿಯಲ್ಲಿ ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಸರ್ವಿಸ್ ಬಸ್ ಸ್ಟ್ಯಾಂಡ್ ಅಂತ ಎರಡು ಬಸ್ ಸ್ಟ್ಯಾಂಡ್ ಗಳಿದ್ದವು. ನಾನು ಬೆಳಿಗ್ಗೆ ಊರಿನಿಂದ ಬಂದವಳು ಸಿಟಿ ಬಸ್ ಸ್ಟ್ಯಾಂಡ್ ಗೆ ಹೋಗದೆ ಕಲ್ಸಂಕದಲ್ಲಿ ಇಳಿದು ಸಿಟಿಬಸ್ ಹಿಡಿದು ಕಾಲೇಜಿಗೆ ಹೋಗುತ್ತಿದ್ದೆ. ಮಣಿಪಾಲಕ್ಕೆ ಹೋಗುವ ರೂಟ್ ಆದ ಕಾರಣ ಆ ಬಸ್ಸುಗಳಲ್ಲಿ ಬಹಳ ರಶ್ ಇರುತ್ತಿತ್ತು. ಎಷ್ಟೋ ಬಾರಿ ಫುಟ್ ಬೋರ್ಡಿನ ಮೇಲೆ ನಿಂತು ಕಾಲೇಜಿನ ತನಕ ಜೋತಾಡಿಕೊಂಡು ಹೋದದ್ದಿದೆ. ಬಸ್ಸಿನೊಳಗೆ ಇದ್ದರೆ ಆ ಇಕ್ಕಟ್ಟಿನಲ್ಲಿ ನಮಗೆ ಉಪದ್ರ ಕೊಡುವ ಒಂದು ವರ್ಗವೇ ಇತ್ತು. ಸುಮಾರು ಹತ್ತು ಹದಿನೈದು ನಿಮಿಷಗಳ ಪ್ರಯಾಣದಲ್ಲಿ ನಮಗೆ ವಿಚಿತ್ರ ಪ್ರಪಂಚ ದರ್ಶನವೇ ಆಗುತ್ತಿತ್ತು. ಒಮ್ಮೆಯಂತೂ ನನ್ನ ಗೆಳತಿಯೊಬ್ಬಳು ಉಪದ್ರ ಕೊಟ್ಟ 60ರ ಮುದುಕನಿಗೆ ಹೊಡೆದೇ ಬಿಟ್ಟಿದ್ದಳು😢
ಸಂಜೆ ಹಿಂದಿರುಗುವಾಗ ಸರ್ವಿಸ್ ಸ್ಟ್ಯಾಂಡ್ ಗೆ ಹೋಗಿ ಊರಿನ ಬಸ್ ಹಿಡಿಯಬೇಕಿತ್ತು. ಅಲ್ಲೋ ಭಿಕ್ಷುಕರದ್ದೇ ದಂಡು. ನಮ್ಮ ಬಸ್ ಹೊರಡುವ ತನಕ ಅವರು ಬಸ್ಸಿನಿಂದ ಇಳಿಯುತ್ತಿರಲಿಲ್ಲ. ಮಕ್ಕಳನ್ನು ಬಗಲಲ್ಲಿ ಇರಿಸಿಕೊಂಡು ಹಾಡುತ್ತಾ ಅವರು ಭಿಕ್ಷೆ ಬೇಡುವ ಪರಿ ವಿಶಿಷ್ಟವಾಗಿತ್ತು. ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುವ ಅವರ ಹಾಡುಗಳಲ್ಲೊಂದು "ಸಾಯದ ಮೇರಾ ಸಾದಿ ಕಾ ಕಯಾಲ್ ದಿಲ್ ಮ ಆಯಾ ಹೆ". 'ಶ' ಕಾರ ಅವರ ಬಾಯಿಯಲ್ಲಿ 'ಸ' ಕಾರವಾಗುತ್ತಿತ್ತು. ಅವರದ್ದೇ ಆದ shrill voiceನಲ್ಲಿ ಹಾಡುತ್ತಾ ಭಿಕ್ಷೆ ಕೇಳುವ ಅವರ ರೀತಿ ಕೆಲವೊಮ್ಮೆ ಕಿರಿಕಿರಿ ಎನಿಸಿದರೂ ಅವರ "ಬಿಡದೆ ಯತ್ನವ ಮಾಡು" ಎನ್ನುವ ಮನಸ್ಥಿತಿ ಕಂಡು ಖುಷಿ ಆಗುತ್ತಿತ್ತು. ನಾವು ಭಿಕ್ಷೆ ಕೊಡದಾಗ ನಮ್ಮನ್ನು ಮುಟ್ಟಿ ಮುಟ್ಟಿ ಚೊರೆ ಮಾಡಿಯಾದರೂ ಭಿಕ್ಷೆ ಸಿಗುವ ಹಾಗೆ ಮಾಡುತ್ತಿದ್ದರು.
ನಾನಂತು ಅವರ ರಗಳೆಯೇ ಬೇಡವೆಂದು ಒಂದಿಷ್ಟು ಚಿಲ್ಲರೆ ರೆಡಿ ಇಟ್ಟುಕೊಂಡು ಭಿಕ್ಷೆ ಹಾಕಿ ಬಿಡುತ್ತಿದ್ದೆ. ಸಂಗೀತದ ಗಂಧಗಾಳಿಯಿಲ್ಲದ, ವಿದ್ಯೆ ನೈವೇದ್ಯವಾಗಿದ್ದ ಆ ವರ್ಗ ಬರೀ ಕೇಳಿ ಕೇಳಿ ಹಾಡುಗಳನ್ನು ಕಲಿತು ಹಾಡುತ್ತಿದ್ದದ್ದು ಅವರ ಬದುಕುವ ಕಲೆಯ ಒಂದು ಸಾಮರ್ಥ್ಯವೇ ತಾನೆ?
ಹೀಗೆ ಮೂರು ವರ್ಷಗಳ ಉಡುಪಿಯ ಪಯಣ ನೂರಾರು ಅನುಭವಗಳನ್ನು ಕಟ್ಟಿ ಕೊಟ್ಟಿದೆ. ಸಿಟಿ ಬಸ್ಸಿನ ನುಗ್ಗು ಪಯಣ, ಸರ್ವಿಸ್ ಬಸ್ಸಿನಲ್ಲಿ ಜಾಗಕ್ಕಾಗಿ ಹೋರಾಟ, ಭಿಕ್ಷುಕರ ಎಡೆಬಿಡದ ಗಾಯನ, ಫ್ರೆಂಡ್ಸ್ ಜೊತೆಗಿನ ಮೋಜುಮಸ್ತಿ, ಗುಂಡಿ ಬಿದ್ದ ರಸ್ತೆಯಲ್ಲಿನ ಕುಲುಕಾಟದ ಪಯಣ, ಸಹ ಪಯಣಿಗರ ವರ್ತನೆ... ಇವೆಲ್ಲವೂ ನನ್ನ ನೆನಪಿನ ಬುತ್ತಿಯನ್ನು ತುಂಬಿಸಿರುವ ಮರೆಯಲಾಗದ ಅಂಶಗಳು. ಪ್ರಾಯಶಃ ಬದುಕಿನ ಈ ಪಯಣದಲ್ಲೇ ನಾನು ಬಹಳಷ್ಟು ಜೀವನ ಕೌಶಲ್ಯಗಳನ್ನು ಕಲಿತೆನೇನೋ ಅಂತ ಕೆಲವೊಮ್ಮೆ ಅನಿಸುವುದಂತೂ ಸತ್ಯ!


63. ದೊಂಬರಾಟ - ನೆನಪುಗಳು 
ದೊಂಬರಾಟ ನನ್ನ ಬಾಲ್ಯದ ನೆನಪುಗಳಲ್ಲೊಂದು. ದೊಂಬರ ಕುಟುಂಬವೊಂದು ಇಡೀ ಪ್ರದರ್ಶನವನ್ನು ನೀಡುತ್ತಿತ್ತು. ನನ್ನ ನೆನಪಿನಲ್ಲಿ ಹೆಚ್ಚಾಗಿ ಉಳಿದಿರುವುದು ಒಬ್ಬ ಬಾಲೆ ತಂದೆಯ ಆದೇಶದ ಪ್ರಕಾರ ಹಗ್ಗ/ಬಿದಿರಿನ ಕೋಲಿನ ಮೇಲೆ ನಡೆಯುವುದು, ಬಿದಿರಿನ ಕೋಲಿನ ತುದಿಯಲ್ಲಿ ಹೊಟ್ಟೆಯ ಮೇಲೆ ಮಲಗುವುದು, ನಂತರ ಜರ್ರನೆ ಅದರ ತುದಿಯಿಂದ ಕೆಳಗಿಳಿಯುವುದು, ಬಿದಿರಿನ ಬೊಂಬನ್ನು ಹಿಡಿದುಕೊಂಡು ಲಾಗ ಹಾಕುವುದು, ಮರಗಾಲುಗಳನ್ನು ಕಟ್ಟಿ ನಡೆಯುವುದು, ಕಬ್ಬಿಣದ ಸಣ್ಣ ಬಳೆಯೊಳಗೆ ನುಸುಳುವುದು. ತಂದೆಯಾದವನು ನೆಲದ ಮೇಲೆ ಅಂಗಾತ ಮಲಗಿ ಭಾರವಾದ ಗುಂಡುಕಲ್ಲುಗಳನ್ನು ಎದೆಯ ಮೇಲೆ ಇರಿಸಿಕೊಳ್ಳುವುದು, ಎತ್ತಿನ ಬಂಡಿಯನ್ನು ತನ್ನ ಕೂದಲಿಗೆ ಕಟ್ಟಿ ಎಳೆಯುವುದು, ನೀರು ತುಂಬಿದ ಕೊಡಗಳನ್ನು ಹಲ್ಲುಗಳಿಂದ ಎತ್ತುವುದು, ನಾಲ್ಕೈದು ಇಟ್ಟಿಗೆಗಳನ್ನು ಒಂದರ ಮೇಲೆ ಒಂದನ್ನಿರಿಸಿ ಒಂದೇ ಏಟಿಗೆ ತುಂಡರಿಸುವುದು, ಮಗುವೊಂದನ್ನು ಬಿದಿರಿನ ಕೋಲಿನ ತುದಿಗಿರಿಸಿ ಅದನ್ನು ಆಕಾಶದೆತ್ತರಕ್ಕೇರಿಸಿ ಸರಕ್ಕನೆ ಕೋಲನ್ನೆಸೆದು ಮೇಲಿನಿಂದ ಬೀಳುವ ಮಗುವನ್ನು ಹಿಡಿಯುವುದು. ಎಂತಹ ಮೈ ಝಂ ಎನ್ನುವ ಕಸರತ್ತುಗಳಿವು! ಇವೆಲ್ಲ ಆಗುವಾಗ ತಾಯಿ ಮಗುವೊಂದನ್ನು ಹಿಡಿದುಕೊಂಡು ಹಾಡುತ್ತಾ ಎಲ್ಲರ ಬಳಿ ಹೋಗಿ ಹಣಕ್ಕಾಗಿ ಕೈ ಚಾಚುವುದು. ದೊಂಬರಾಟದ ನೆನಪಾದಾಗ ನನ್ನ ಕಣ್ಣ ಮುಂದೆ ಬರುವ ದೃಶ್ಯಗಳಿವು.
ದೊಂಬರು ಜೀವನ ನಡೆಸಲಿಕ್ಕಾಗಿ ರೂಢಿಸಿಕೊಂಡ ಮನೋರಂಜನಾ ಕಲೆ ಈ ದೊಂಬರಾಟ. ಇದು ಸಾಮಾನ್ಯವಾಗಿ ಎರಡು ರಸ್ತೆ ಸೇರುವಲ್ಲಿ ಅಥವಾ ಹಳ್ಳಿಯ ಮಧ್ಯಭಾಗದಲ್ಲಿ ನಡೆಯುತ್ತದೆ. ಹೆಬ್ರಿಯ ಬಸ್ ಸ್ಟ್ಯಾಂಡ್ ಬಳಿಯ ಸರ್ಕಲ್ ಅದಕ್ಕೆ ಸೂಕ್ತ ಜಾಗವಾಗಿತ್ತು. ನಮ್ಮಂತಹ ಮಕ್ಕಳಿಗಂತೂ ಅದೊಂದು ಅದ್ಭುತ ಪ್ರಪಂಚ. ಪ್ರದರ್ಶನ ನೀಡುವ ಹೆಣ್ಣುಮಕ್ಕಳು ಬಣ್ಣಬಣ್ಣದ ದಿರಿಸು ಧರಿಸಿ ಮಣಿಸರಗಳನ್ನು ಹಾಕಿಕೊಂಡು ಕಸರತ್ತು ಮಾಡುವುದನ್ನು ನೋಡಲು ಎರಡು ಕಣ್ಣುಗಳು ಸಾಲವು. ಕಸರತ್ತಿನ ನಡು ನಡುವೆ ಇರುವ ಅವರ ಕುಣಿತವೂ ಚೆಂದ. ಕೋಡಂಗಿಯ ಮಂಗಾಟಗಳು ನಮ್ಮನ್ನು ನಗೆಗಡಲಲ್ಲಿ ಮುಳುಗಿಸುತ್ತಿತ್ತು. ಹೀಗೆ ಬಗೆಬಗೆಯ ಪ್ರದರ್ಶನ ನೀಡಿ ನಮ್ಮೆಲ್ಲರನ್ನು ಒಂದು ಜಾದು ಲೋಕಕ್ಕೆ ಕರೆದೊಯ್ಯುವ ಶಕ್ತಿ ದೊಂಬರಾಟಕ್ಕಿತ್ತು. ಅವರು ಮಾಡುತ್ತಿದ್ದ ಅಷ್ಟೂ ಕಸರತ್ತುಗಳು ಪ್ರಾಣಾಂತಿಕವಾಗಿದ್ದರೂ ಅವರುಗಳ ಮುಖದಲ್ಲಿ ಎಳ್ಳಷ್ಟು ಅಂಜಿಕೆಯನ್ನು ನೋಡಿದ ನೆನಪು ನನಗಿಲ್ಲ. ತುತ್ತಿನ ಚೀಲ ತುಂಬಲು ಏನೆಲ್ಲ "ದೊಂಬರಾಟ"ವಲ್ಲವೆ? ಆದರೆ ಅದನ್ನವರು ಆರಾಧಿಸುತ್ತಿದ್ದರು, ಪ್ರೀತಿಸುತ್ತಿದ್ದರು. ಅದರೊಡನೆ ಅವರ ಭಾವನಾತ್ಮಕ ಬಂಧವಿದ್ದದ್ದಕ್ಕೆ ತಮ್ಮ ಪ್ರದರ್ಶನಗಳಲ್ಲಿ ಅವರು ತೋರುತ್ತಿದ್ದ ತಾದಾತ್ಮ್ಯತೆ ಸಾಕ್ಷಿ. ಅಂತಹ ಪೂರ್ಣ ಪ್ರಮಾಣದ ದೊಂಬರಾಟಗಳು ಈಗ ಕಾಣ ಸಿಗುತ್ತಿಲ್ಲ. ನಮ್ಮ ನಮ್ಮ ಧಾವಂತದ ಬದುಕಿನ ದೊಂಬರಾಟದಲ್ಲಿ ನಾವು ನಿಜವಾದ ದೊಂಬರ ಆಟವನ್ನೇ ಮರೆತು ಬಿಟ್ಟಿರುವುದು ಬದುಕಿನ ಕಟು ವಾಸ್ತವವಲ್ಲವೆ?

62. ಪರಿಸರ - ನೆನಪುಗಳು 
ನಾನು ಚಿಕ್ಕವಳಿದ್ದಾಗ ನೋಡಿದ ಹಾಗೂ ಮರೆಯಲಾಗದ ಒಂದು ಅದ್ಭುತ ವಿಷಯ ಸೈಕಲ್ ಸರ್ಕಸ್. ಹೆಬ್ರಿಯ ಪೋಲಿಸ್ ಸ್ಟೇಶನ್ ನ ಮೇಲ್ಭಾಗದಲ್ಲಿ ಒಂದು ಖಾಲಿ ಜಾಗ ಇದ್ದ ನೆನಪು. ಅಲ್ಲಿಯೇ ವರ್ಷದಲ್ಲಿ ಒಂದೆರಡು ಬಾರಿ ಹತ್ತು ಹದಿನೈದು ದಿನಗಳ ಕಾಲ ಸೈಕಲ್ ಸರ್ಕಸ್ ನಡೆಯುತ್ತಿತ್ತು. ಆ ಸರ್ಕಸ್ ಮಾಡುವ ವ್ಯಕ್ತಿ ಒಮ್ಮೆ ಸೈಕಲ್ ಏರಿದರೆ ಅದರಿಂದ ಇಳಿಯುತ್ತಿದ್ದದ್ದು ಹತ್ತು ಹನ್ನೆರಡು ದಿನಗಳ ನಂತರವೇ ಅಂತ ನಮಗೆ ಹೇಳುತ್ತಿದ್ದರು. ಆ ಸೈಕಲ್ ಮೇಲೆಯೇ ಆತ ಮಲಗುತ್ತಿದ್ದ. ಆದರೆ ಬಹಿರ್ದೆಸೆಗೆ ಅವನು ಏನು ಮಾಡುತ್ತಿದ್ದ ಎನ್ನುವುದು ನಮಗೆಲ್ಲ ಒಂದು ಯಕ್ಷಪ್ರಶ್ನೆಯಾಗಿತ್ತು😊
ಸುಮಾರು ಇಪ್ಪತ್ತೈದು ಅಡಿ ವ್ಯಾಸದ ಜಾಗಕ್ಕೆ ವೃತ್ತಾಕಾರವಾಗಿ ಹಗ್ಗ ಕಟ್ಟಿ ಜನ ಒಳ ನುಗ್ಗದಂತೆ ವ್ಯವಸ್ಥೆ ಮಾಡಿಕೊಂಡು ಅದರೊಳಗೆ ಅತ್ಯಾಕರ್ಷಕ ರೀತಿಯ ಚಮತ್ಕಾರಿಕ ಸರ್ಕಸ್ ನ್ನು ಸೈಕಲ್ ಮೇಲಿಂದಳಿಯದೆ ಮಾಡುವುದನ್ನು ನಾವೆಲ್ಲ ಬಾಯಿಬಿಟ್ಟುಕೊಂಡು ನೋಡುತ್ತಿತ್ತು. ಟ್ಯೂಬ್ ಲೈಟ್ ಒಡೆಯುವುದು, ಕಬ್ಬಿಣ ತಿನ್ನುವುದು, ಬೆಂಕಿಯೊಂದಿಗೆ ಸರಸಾಟ ಇದನ್ನೆಲ್ಲಾ ಮಾಡುತ್ತಿದ್ದ ನೆನಪು. ಆ ವ್ಯಕ್ತಿ ಮಾಡುವ ಎಲ್ಲಾ ಕಸರತ್ತಿಗೆ ಇನ್ನೊಬ್ಬ ವ್ಯಕ್ತಿ ಮೈಕ್ ನಲ್ಲಿ ಕಮೆಂಟರಿ ಹೇಳುತ್ತಿದ್ದ. ಕೊನೆಯ ದಿನ ಅವನು ಸೈಕಲ್ ನಿಂದ ಇಳಿದು ಒಂದು ಗುಂಡಿಯೊಳಗೆ ಕುಳಿತ ಕೂಡಲೆ ಆ ಗುಂಡಿಯನ್ನು ಮಣ್ಣು ಹಾಕಿ ಮುಚ್ಚುತ್ತಿದ್ದರು. ಅದರೊಳಗೆ ಅವನು ಹಾಗೆಯೆ ಹಲವಾರು ಗಂಟೆಗಳ ಕಾಲ ಕುಳಿತಿರುತ್ತಿದ್ದ. ಅವನು ಹೊರಬಂದ ಮೇಲೆ ಅವನನ್ನು ದುಡ್ಡಿನ ಹಾರ ಹಾಕಿ ಸನ್ಮಾನಿಸಲಾಗುತ್ತಿತ್ತು. ನಮಗೆಲ್ಲ ಅವನು ಪವಾಡ ಪುರುಷನ ತರಹ ಕಾಣಿಸುತ್ತಿದ್ದ. ಆ ವ್ಯತ್ತದ ಸುತ್ತ ಹಾಗೂ ನಟ್ಟ ನಡುವೆ ಇರುತ್ತಿದ್ದ ನಾಲ್ಕೈದು ಟ್ಯೂಬ್ ಲೈಟ್ ಗಳ ಬೆಳಕು, ಸುತ್ತಲೂ ಇದ್ದ ಡೆಕೊರೇಟಿವ್ ಲೈಟ್ಸ್ , ಧ್ವನಿ ಪೆಟ್ಟಿಗೆಯಿಂದ ದೊಡ್ಡ ಸ್ವರದಲ್ಲಿ ಬರುತ್ತಿದ್ದ ಹಳೆ ಸಿನಿಮಾ ಹಾಡುಗಳು, ಸೈಕಲ್ ಮೇಲೆಯೇ ಇರುತ್ತಿದ್ದ ಸವಾರ, ಅವನ ಜೊತೆ ಇರುತ್ತಿದ್ದ ಅವನ ಪಟಾಲಂ.... ಇವೆಲ್ಲ ನಮಗೊಂದು ಆಕರ್ಷಕ ಹಾಗೂ ಅಷ್ಟೇ ನಿಗೂಢವಾಗಿ ಕಾಣುತ್ತಿದ್ದ ವಿಷಯಗಳು. ಅದೊಂದು ವಿಸ್ಮಯೀ ದುನಿಯವಾಗಿತ್ತು. ನಮ್ಮಂತ ಪೋರ ಪೋರಿಯರಿಗೆ ಸಮಯ ಕಳೆಯಲು, ಮಾತನಾಡಿಕೊಳ್ಳಲು ಸೈಕಲ್ ಸರ್ಕಸ್ ಒಳ್ಳೆಯ ಸರಕಾಗಿತ್ತು.
ಆ ಸವಾರ ಜೀವನ ನಡೆಸುವುದಕ್ಕಾಗಿ ಮಾಡುತ್ತಿದ್ದ ಬದುಕಿನ ಹೋರಾಟದ ಸರ್ಕಸ್ ಅದಾಗಿತ್ತು ಎನ್ನುವುದು ಈಗ ಅದರ ಬಗ್ಗೆ ಯೋಚಿಸಿದಾಗ ಅರಿವಾಗುತ್ತದೆ. ಹೊಟ್ಟೆಪಾಡಿಗಾಗಿ ಎಂತೆಂತಹ ಸರ್ಕಸ್ ಮಾಡಬೇಕಲ್ಲವೆ?

61. ಪರಿಸರ - ರಸ್ತೆಗಳು 
ಇತ್ತೀಚಿನ ವರ್ಷಗಳಲ್ಲಿ ಎಲ್ಲಿಂದೆಲ್ಲಿಗೆ ಪಯಣಿಸುವುದು ಒಂದು ಸಮಸ್ಯೆಯೇ ಅಲ್ಲ. ಸ್ವಂತ ವಾಹನವಿದ್ದರಂತೂ ಇನ್ನೂ ಆರಾಮ. ಅತ್ಯುತ್ತಮ ರಸ್ತೆ, ವಾಹನ ವ್ಯವಸ್ಥೆ, ಸೀಟ್ ಬುಕಿಂಗ್ ವ್ಯವಸ್ಥೆ ಎಲ್ಲವೂ ನಮ್ಮ ಪಯಣದ ಸಮಯವನ್ನು ಕಡಿತಗೊಳಿಸಿವೆ ಹಾಗೂ ಆರಾಮದಾಯಕವಾಗಿಸಿವೆ.
ನಾವು ಶಾಲೆ ಪ್ರಾರಂಭಿಸಿದ ಶುರುವಿನ ವರ್ಷಗಳಲ್ಲಿ ಪಬ್ಲಿಸಿಟಿಗಾಗಿ ನಾನು, ರವಿ ನಮ್ಮ ಅಂಬಾಸಿಡರ್ ಕಾರಿನಲ್ಲಿ ಸುತ್ತಮುತ್ತಲ ಹಳ್ಳಿಗಳಲ್ಲಿ ಮನೆಮನೆಗೂ ಹೋಗುತ್ತಿತ್ತು. ಆಗಿನ ರಸ್ತೆಗಳ ಅವಸ್ಥೆ ನೆನಪಿಸಿಕೊಂಡರೆ ಮೈ ಝಮ್ ಅನ್ನುತ್ತದೆ. ಆಗ ಹಳ್ಳಿಯ ರಸ್ತೆ ಬಿಡಿ ಮೈನ್ ರೋಡಿನಲ್ಲೂ ಸರಿಯಾದ ಸ್ಥಿತಿಯಲ್ಲಿದ್ದ ರಸ್ತೆಗಳನ್ನು ಹಾಡುಹಗಲು ಟಾರ್ಚ್ ಹಿಡಿದುಕೊಂಡು ಹುಡುಕುವ ಸ್ಥಿತಿ! ಹೊಂಡಗಳ ಸಮೂಹದಲ್ಲಿ ದಾರಿ ಮಾಡಿಕೊಂಡು ಮುಂದೆ ಸಾಗುವುದೇ ಒಂದು ಸವಾಲಾಗಿತ್ತು. ಹೀಗಾಗಿ ಒಂದು ದಿನದ ತಿರುಗಾಟ ಮುಗಿದು ಸಂಜೆಯಾಗುತ್ತಲೇ ಮೈಯ್ಯ ಮೂಳೆಗಳೆಲ್ಲ ನೋವಿನಲ್ಲಿ ತಾವೆಲ್ಲಿದ್ದೇವೆ ಎಂದು ತಿಳಿಸುತ್ತಿದ್ದವು. ನಾನೋ ಮೊದಲೇ ಸೊಂಟ ನೋವಿನ ಪ್ರಾಣಿ. ಗಾಡಿಯ ಕುಲುಕುವಿಕೆಯಿಂದಾಗಿ ಎಷ್ಟೋ ಬಾರಿ ಸೊಂಟನೋವು ಜಾಸ್ತಿಯಾಗಿ ನನ್ನ ಕಾಲು ಮರಗಟ್ಟಿ ಸ್ಪರ್ಶ ಜ್ಞಾನ ಕಳಕೊಂಡದ್ದಿದೆ. ಮಾರನೇ ದಿನ ಪುನಃ ಟೊಂಕಕಟ್ಟಿ ಮರಳಿಯತ್ನವ ಮಾಡು ಎಂದು ಕಾರ್ಯ ಸನ್ನಧ್ಧವಾಗುತ್ತಿದ್ದ ದಿನಗಳವು.
ಈಗಿನ ರಸ್ತೆಗಳಿಗೂ ಆಗಿನ ರಸ್ತೆಗಳಿಗೂ ಅಜಗಜಾಂತರ ವ್ಯತ್ಯಾಸ. ಆಗಿದ್ದ ಕೊಳಕು ರಸ್ತೆಗಳಿಂದಾಗಿ ನಮ್ಮ ಶಾಲಾ ವಾಹನಗಳು ಯಾವಾಗಲೂ ಗ್ಯಾರೇಜ್ ಕಡೆಗೆ ಮುಖ ಮಾಡಿ ಇರುತ್ತಿದ್ದದ್ದಂತೂ ನಿಜ. ಆಗಿದ್ದ ಹೊಂಡಯುಕ್ತ ರಸ್ತೆಗಳಿಂದಾಗಿ ಬಸ್ಸುಗಳು ದಾರಿಯಲ್ಲಿ "ಕರು"(😊) ಹಾಕುತ್ತಿದ್ದ ಕಾರಣ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದು ಮತ್ತು ಸರಿಯಾದ ಸಮಯಕ್ಕೆ ಮನೆಗೆ ಹಿಂದಿರುಗುವುದು ದೊಡ್ಡ ಸಮಸ್ಯೆಯೇ ಆಗಿತ್ತು. ಈಗ ಹಾಗಿಲ್ಲ. ಮುಖ್ಯ ರಸ್ತೆಗಳಲ್ಲದೆ ಹಳ್ಳಿ ಹಳ್ಳಿಗಳಲ್ಲಿಯ ಹೆಚ್ಚಿನ ರಸ್ತೆಗಳು ಸರ್ಕಾರದ ಕೃಪೆಯಿಂದ ಉತ್ತಮ ಸ್ಥಿತಿಯಲ್ಲಿವೆ. ಹೀಗಾಗಿ ನಮ್ಮ ಶಾಲಾ ವಾಹನಗಳು ತಲೆನೋವಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಆ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
ಸರ್ಕಾರ ಕಲ್ಪಿಸಿದ ಉತ್ತಮ ಸೌಕರ್ಯಗಳನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಂಡು ಸದ್ಬಳಕೆ ಮಾಡುವ ಮನಸ್ಥಿತಿ ನಮ್ಮೆಲ್ಲರಲ್ಲೂ ಬೆಳೆದರೆ ಅದೇ ನಾವು ಮಾಡುವ ದೊಡ್ಡ ದೇಶಸೇವೆಯಲ್ಲವೆ?


60. ಪರಿಸರ - ನೆನಪುಗಳು 
ಅಜ್ಜಯ್ಯನ ಮನೆಯ ಸುತ್ತಮುತ್ತ ನಮಗೆ ನಮ್ಮದೇ ಆದ 3 - 4 ತುಂಡು ಗದ್ದೆಗಳಿವೆ. ಅದರ ಅಡಿ ಅಳತೆಗಳು ನನಗೆ ಗೊತ್ತಿಲ್ಲ. ಅಜ್ಜಯ್ಯ ಇದ್ದಾಗ ಹಾಗೂ ಅಜ್ಜಯ್ಯ ಹೋದ ಮೇಲೂ ಕೆಲವು ವರ್ಷ ಬೇಸಾಯ ಮಾಡುತ್ತಿದ್ದೆವು. ನಾವು ಬೇಸಾಯ ಮಾಡುವುದನ್ನು ಬಿಟ್ಟ ಮೇಲೆ ಕಾಸಾನ್ ಹಿತ್ಲು ನಾಯಕರಿಗೆ ಗೇಣಿಗೆ ಕೊಟ್ಟಿದ್ದೆವು. ಈಗ ಗೇಣಿ ಮಾಡುವವರು ಕೂಡಾ ಯಾರೂ ಇಲ್ಲ.
ಈ ಕೃಷಿ ಕಾಯಕದ ಬಗ್ಗೆ ನನ್ನ ಅನುಭವ ಸೊನ್ನೆ. ಆದರೆ ಮಳೆಯ ಪ್ರಾರಂಭದಲ್ಲಿ ಕೋಣ/ಎತ್ತುಗಳನ್ನಿಟ್ಟು ಗದ್ದೆ ಹೂಡುವುದು, ಹೂಡುವಾಗಿನ ಲಯಬಧ್ಧ ಹೈ ಹಚ್ ಎನ್ನುವ ಹೂಡುವವನ ವಿಚಿತ್ರ ಧ್ವನಿಗಳು, ಗೊರ್ಬು, ಹಾಳೆ ಟೋಪಿ ಹಾಕಿಕೊಂಡು ಸೀರೆಯನ್ನು ಮೇಲಕ್ಕೆತ್ತಿ ಕಟ್ಟಿ ಬಗ್ಗಿ ನಟ್ಟಿ ಮಾಡುವ ಹೆಂಗಸರು, ಕೇಯ್ ಹೊರುವ ಅರೆನಗ್ನ ಗಂಡಸರು..... ಹೀಗೇ ಮಳೆಗಾಲದ ಸಾಗುವಳಿ ಚಿತ್ರಣವನ್ನಷ್ಟೆ ನಾನು ಬಲ್ಲೆ. ವಿಸ್ತಾರವಾದ ಗದ್ದೆ ಬೈಲಿನಲ್ಲಿ ಅಂಚುಕಟ್ಟಿನ ಮೇಲೆ ನಡೆಯುತ್ತಾ ಶಾಲೆಗೆ ಹೋಗುವಾಗ ಮಳೆಗಾಲದಲ್ಲಿ ಕಾಣುತ್ತಿದ್ದ ಸರ್ವೇ ಸಾಮಾನ್ಯ ಕೃಷಿ ದೃಶ್ಯವಿದು. ಮಧ್ಯ ವಯಸ್ಸಿನ ಹೆಂಗಸರು, ಗಂಡಸರು ಭಾರ ಹೊರುತ್ತಾ, ಭಾರ ಇಳಿಸುತ್ತಾ, ತಾಸುಗಟ್ಟಲೇ ಬಗ್ಗಿಯೇ ಕೆಲಸ ಮಾಡುತ್ತಿದ್ದರೂ ಅವರ ಮುಖಗಳಲ್ಲಿ ಮಾಸದ ಮಂದಹಾಸವಿರುತ್ತಿತ್ತು. ಕೆಲಸ ಮಾಡುತ್ತಲೇ ಕೆಲಸದ ಬಿಸಿ ತಾಗದಿರಲೆಂದು ಸಣ್ಣಗೆ ಗುನುಗುತ್ತಿದ್ದ ಹಾಡುಗಳು ನಮ್ಮ ಕಿವಿಗಳಿಗೆ ದುಂಬಿಯ ಗುಂಯ್ ಗುಡುವಿಕೆಯಂತೆ ಕೇಳಿಸುತ್ತಿತ್ತು. ಸಂಜೆ ತಮ್ಮತಮ್ಮ ಮನೆಗಳತ್ತ ಬಿರು ಬಿರುಸಿನಲ್ಲಿ ಹೋಗುವ ಅವರ ನಡಿಗೆಯಲ್ಲಿ ದಣಿವಿರದ ಜೀವಂತಿಕೆಯಿರುತ್ತಿತ್ತು. ಕೊಯ್ಲು ಸಮಯದಲ್ಲಿ ಹೊರೆಹೊತ್ತು ತರುವ ಗಂಡಸರು ಒಂದೆಡೆಯಾದರೆ ಹಡಿಮಂಚದಲ್ಲಿ ಹುಲ್ಲಿನ ಹೊರೆಯನ್ನು ಜಪ್ಪುವವರು ಇನ್ನೊಂದೆಡೆ. ಬತ್ತವನ್ನು ಗಾಳಿಗೆ ಹಿಡಿದು ತೂರುವವರು ಮತ್ತೊಂದೆಡೆ. ಅಂಗಳದ ತುಂಬಾ ಆಳುಕಾಳುಗಳದೇ ಕಾರುಬಾರು. ಅವರಿಗೆ ಕಾಫಿ ಚಾ ವ್ಯವಸ್ಥೆ ಮಾಡುವ ತರಾತುರಿಯಲ್ಲಿ ಮನೆಯವರು. ನಂತರ ಬತ್ತವನ್ನು ಹುಲ್ಲುಕುತ್ರೆಯೊಳಗೆ ಶೇಖರಿಸಿ ಇಡುವ ರೀತಿಯೂ ನೋಡುವಂತಿತ್ತು. ಆ ಹುಲ್ಲುಕುತ್ರೆ ಅಂಗಳಕ್ಕೆ ಶೋಭೆಯನ್ನು ತರುತ್ತಿತ್ತು. ನಮ್ಮ ಕಣ್ಣಾಮುಚ್ಚಾಲೆ ಆಟಕ್ಕೆ ಆ ಹುಲ್ಲುಕುತ್ರೆ ಹೇಳಿ ಮಾಡಿಸಿದ ಜಾಗವಾಗಿತ್ತು.
ಬೇಸಾಯ ಅಂದ ಕೂಡಲೆ ನೆನಪಾಗುವುದು ಆಚೆಮನೆ ಸಣ್ಣಮಾಣಿ. ಅವನು ಬ್ಯಾಂಕ್ ನೌಕರನಾಗಿದ್ದರೂ ಕೃಷಿಪ್ರೇಮಿ. ಬೆಳಿಗ್ಗೆ ಬೇಗ ಎದ್ದು ಕೃಷಿ ಸಂಬಂಧಿ ಕೆಲಸ ಮುಗಿಸಿಯೇ ಅವನು ಬ್ಯಾಂಕ್ ಗೆ ಹೋಗುತ್ತಿದ್ದದ್ದು. ಭಾನುವಾರ ಹಾಗೂ ರಜಾದಿನಗಳಲ್ಲಿ ಅವನು ತನ್ನ ಇಡೀ ದಿನವನ್ನು ವ್ಯಯಿಸುತ್ತಿದ್ದದ್ದು ಗದ್ದೆಗಳಲ್ಲಿಯೇ. ಕೃಷಿ ಹಾಗೂ ಕೊಟ್ಟಿಗೆ ಕೆಲಸ, ಜಾನುವಾರುಗಳ ಆರೈಕೆ ಅವನ ಪ್ರೀತಿಯ ಕೆಲಸಗಳಾಗಿದ್ದವು. ಅವನೊಬ್ಬ passionate ಕೃಷಿಕನಾಗಿದ್ದ. ಆದರೆ ನಮ್ಮ ಮನೆಯಲ್ಲಿ ಅದೊಂದು ಬೆಳೆ ಬೆಳೆಯುವ ಪ್ರಕ್ರಿಯೆಯಷ್ಟೇ!
ಈಗ ಹಾಳೆ ಟೋಪಿ, ಗೊರ್ಬುಗಳಿಲ್ಲ. ಅವುಗಳನ್ನು ಚಿತ್ರಗಳಲ್ಲಿ ಕಂಡಾಗ ನನ್ನ ಮನದ ಮೂಲೆಯೊಳಗೆ ಗೊರ್ಬಿನೊಳಗೇ ಜೀವಂತಿಕೆ ಸ್ಫುರಿಸುತ್ತಿದ್ದ ಕೃಷಿಕರ್ಮಿಗಳು ಎದ್ದು ಇಣುಕು ಹಾಕುತ್ತಾರೆ. ಈಗ ಎಲ್ಲೆಡೆಯು ಕೃಷಿ ಚಟುವಟಿಕೆಗಳಿಲ್ಲದೆ ಪಾಳು ಬಿದ್ದ ಗದ್ದೆಗಳು ನಮ್ಮ ಬರಡು ಮನಸ್ಥಿತಿಯನ್ನು ಬಿಂಬಿಸುತ್ತಿವೆಯೇನೋ ಎಂದೆನಿಸುತ್ತದೆ!

59. ಪರಿಸರ - ಆಚರಣೆಗಳು 
ನನ್ನ ಅಜ್ಜಯ್ಯ ಈಗ್ಗೆ ಐವತ್ತು ಅರವತ್ತು ವರ್ಷಗಳ ಹಿಂದೆ ಸಾಲಿಕೇರಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದರು. ಸಾಲಿಕೇರಿಯ ದೊಡ್ಡ ದೇವಸ್ಥಾನವದು. ಆ ದೇವಸ್ಥಾನದೊಡನೆ ನನ್ನ ನೆನಪುಗಳು ಹೆಣೆದಿರುವುದು ಅಲ್ಲಿನ ವಾರ್ಷಿಕ ಜಾತ್ರೆಯಲ್ಲಿ ನಡೆಯುವ ಢಕ್ಕೆಬಲಿಯೊಂದಿಗೆ. ನನಗೆ ಮೊದಲಿನಿಂದಲೂ ಡೊಳ್ಳಿನ ಸದ್ದು, ಅದರೊಟ್ಟಿಗಿನ ಕುಣಿತ ಒಂದು ಮನ ಸೆಳೆಯುವ ವಿಷಯ. ಅಂತಹ ಸೆಳೆತವನ್ನು ಹೊಂದಿದ ಢಕ್ಕೆಬಲಿ ನಡೆಯುವುದು ರಾತ್ರಿ ಹೊತ್ತಿನಲ್ಲಿ.
ತುಳುನಾಡಿನಲ್ಲಿ ದೈವಾರಾಧನೆ ವಿಶೇಷ. ಢಕ್ಕೆಬಲಿ ಈ ದೈವಾರಾಧನೆಯ ಒಂದು ಆಚರಣೆ. ಅದಕ್ಕಾಗಿಯೆ ಇರುವ ಪಾತ್ರಿಯನ್ನು ವಿಶೇಷವಾಗಿ ಸೇವಂತಿಗೆ, ಸಿಂಗಾರದ ಹೂವುಗಳಿಂದ ಅಲಂಕರಿಸಿ ಪೂಜೆಗೆ ಏರ್ಪಾಡು ಮಾಡುತ್ತಾರೆ. ಗೆಜ್ಜೆ, ಚಲ್ಲಣ ತೊಟ್ಟು ವರ್ಣರಂಜಿತ ಮುಖಾಲಂಕಾರ ಮಾಡಿಕೊಂಡ ಪಾತ್ರಿಗೆ ತೀರ್ಥಪ್ರೋಕ್ಷಣೆ ಮಾಡಿದಾಗ ಮೈಮೇಲೆ ದೈವ ಬಂದು ಥರಥರನೆ ನಡುಗಿ ಕುಣಿಯತೊಡಗುತ್ತಾನೆ. ವಾದ್ಯ ಹಾಗೂ ಢಕ್ಕೆಯ ಧ್ವನಿಯೊಂದಿಗೆ ಆ ಪಾತ್ರಿ ಕುಣಿಯುವ ರೀತಿ, ಅವನನ್ನು ಉಪಚರಿಸಲು ತಯಾರಾಗಿ ನಿಂತಿರುವ ಅವನ ಪರಿಚಾರಕರ ಚುರುಕು ನಡೆಯ ಓಡಾಟ, ಅಲ್ಲಿ ನಮ್ಮಂತೆ ಕುತೂಹಲಭರಿತ ಆಸಕ್ತಿಯಿಂದ ನೋಡುವ ಜನಸಮೂಹದ ನಡುವೆ ನಾವು ಮಂತ್ರಮುಗ್ಧರಾಗಿ ಕಳೆದು ಹೋಗುವ ಪರಿ ಇನ್ನೂ ನನ್ನೊಳಗೆಲ್ಲೋ ಇಣುಕು ಹಾಕುತ್ತಿದೆ. ಇದು ಬೆಳಗಿನ ಜಾವದ ತನಕ ನಡೆಯುವ ಪ್ರಕ್ರಿಯೆ. ಆ ಪಾತ್ರಿಗೆ ಕುಣಿದು ಸುಸ್ತಾದಾಗ ಎಳನೀರು ಕುಡಿದು ಖಾಲಿ ಬುರುಡೆಯನ್ನು ಸುಯ್ಯನೆ ಎಸೆದಾಗ ನಮ್ಮ ತಲೆಬುರುಡೆಗೆ ಹೊಡೆದು ಬಿಡುತ್ತದೇನೋ ಅನ್ನುವ ಭಯ ಕೂಡಾ ಕಾಡುತ್ತಿದ್ದ ನೆನಪು.
ಒಟ್ಟಾರೆಯಾಗಿ ಢಕ್ಕೆಬಲಿಗಾಗಿ ತಯಾರಾದ ಪ್ರಾಂಗಣ, ರಂಗಸ್ಥಳ, ಸುತ್ತಲಿನ ಅಲಂಕಾರ, ದೀಪಜ್ವಾಲೆ, ಜನರ ಕಲರವ, ಪ್ರಾರ್ಥನೆ, ಪಾತ್ರಿಯ ಅಲಂಕಾರ, ಮೈಮೇಲೆ ಬಂದಾಗ ಪಾತ್ರಿಯ ಕೂಗು ಹಾಗೂ ಕುಣಿತ, ಪರಿಚಾರಕರ ಓಡಾಟ..... ಇವೆಲ್ಲ ನಮಗೆ ಗೊತ್ತಿರದಂತೆ ಅದಕ್ಕೆ ಬೇಕಾದ ಪೂರಕ ಸನ್ನಿವೇಶವನ್ನು, ಭಯಭಕ್ತಿಯನ್ನು ಸೃಷ್ಟಿಸಿ ಬಿಡುತ್ತದೆ ಅಂದರೆ ಸುಳ್ಳಲ್ಲ. ತುಂಬಾ ಜೀವಂತಿಕೆಯಿಂದ ಕೂಡಿದ ವರ್ಣಮಯ ಆಚರಣೆಯಿದು.
ಇದರೊಡನೆ ಸಾಲಿಕೇರಿ ಜಾತ್ರೆಯಲ್ಲಿ ತಿರುಗುವುದು ಇನ್ನೊಂದು ಆಕರ್ಷಣೆ. ದೊಡ್ಡ ಜಾತ್ರೆಯೇನಲ್ಲ. ಆದರೆ ಎಲ್ಲಾ ಕಡೆಯ ಜಾತ್ರೆಯಂತೆ ಸಣ್ಣ ತೊಟ್ಟಿಲುಗಳು, ತಿರುಗುವ ಆಟಗಳು, ಬೆಂಡು ಬತ್ತಾಸು, ಜಿಲೇಬಿ, ಬಳೆ, ರಬ್ಬರ್ ಬ್ಯಾಂಡ್, ತರಹೇವಾರಿ ಕ್ಲಿಪ್ ಗಳು, ಆಟಿಕೆಗಳು ಇರುತ್ತಿದ್ದ ಜಾತ್ರೆಯದು. ಮಕ್ಕಳಾಗಿದ್ದ ನಮ್ಮನ್ನು ಅವೆಲ್ಲ ಒಂದು ರೀತಿಯಾಗಿ ಸೆಳೆಯುತ್ತಿದ್ದವು. ಮನೆಮಂದಿಯೊಂದಿಗೆ ಜಾತ್ರೆಗುಡ್ಡೆ ತಿರುಗುವುದೇ ಒಂದು ಮೋಜು.
ಒಂದು ಊರು, ಅದರ ದೇವಸ್ಥಾನವೊಂದು ಇಷ್ಟೆಲ್ಲಾ ಅನುಭವಗಳನ್ನು ಕಟ್ಟಿ ಕೊಡುತ್ತದೆನ್ನುವುದೇ ಸೋಜಿಗದ ವಿಷಯವಲ್ಲವೇ?

58. ಸಾಲಿಕೇರಿ - ನೆನಪುಗಳು 
ಅಜ್ಜಯ್ಯನ ಮನೆ ಇರುವುದು ಸಾಲಿಕೇರಿಯಲ್ಲಿ. ಆ ಊರಿಗೆ ಆ ಹೆಸರು ಬರಲು ಕಾರಣ ಅಲ್ಲಿನ ನೇಯ್ಕಾರರು. ಸಾಲೇರ ಕೇರಿ ಎನ್ನುವುದು ಸಾಲಿಕೇರಿ ಆಯ್ತೆಂದು ಬಲ್ಲವರ ಅಂಬೋಣ. ಆ ನೇಯ್ಕಾರರಿಗೆ ಶೆಟ್ಟಿಗಾರ್ ಎನ್ನುವ surname ಇದೆ.
ಅಪ್ಪನ ವರ್ಗಾವಣೆಯಿಂದಾಗಿ
ಊರಿನಲ್ಲಿ ನಾನಿದ್ದದ್ದು ಕೆಲವೇ ವರ್ಷಗಳಾದರೂ ಅಲ್ಲಿನ ಪ್ರತಿ ಮನೆಗಳಿಂದ ಬರುತ್ತಿದ್ದ ಮಗ್ಗದ ಟಕ್ ಟಕಾ ಟಕ್ ಶಬ್ದ ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. ಅಲ್ಲಿ ತಯಾರಾಗುತ್ತಿದ್ದ ಪಾಣಿಪಂಚೆ, ಬೈರಾಸ, ಚೆಕ್ಸ್ ಸೀರೆಗಳು ಇನ್ನೂ ಕಣ್ಣಿಗೆ ಕಟ್ಟಿದಂತಿವೆ.
ಅಜ್ಜಯ್ಯನ ಮನೆ ಇದ್ದದ್ದು ಮೈನ್ ರಸ್ತೆಯಿಂದ ಸ್ವಲ್ಪ ದೂರದ ಗದ್ದೆಗಳ ಮಧ್ಯೆ. ಹೀಗಾಗಿ ಬಸ್ ಇಳಿದು ಮನೆಗೆ ಹೋಗಬೇಕೆಂದರೆ ದಾರಿ ಬದಿಯಲ್ಲಿದ್ದ ಶೆಟ್ಟಿಗಾರರ ಮನೆಗಳನ್ನು ದಾಟಿ ಗದ್ದೆಯ ಅಂಚುಕಟ್ಟಿನ ಮೇಲೆ ಹೋಗಬೇಕಿತ್ತು. ಬಸ್ಸಿಗೆ ಕಾಯುವಾಗಲೂ ಕೂಡ ರಸ್ತೆ ಬದಿಯ ಶೆಟ್ಟಿಗಾರರ ಮನೆಯ ಪಕ್ಕ ನಿಲ್ಲಬೇಕಿತ್ತು. ಹೀಗಾಗಿ ಆ ಮನೆಗಳಿಂದ ಬರುತ್ತಿದ್ದ ಮಗ್ಗದ ನಿರಂತರ ಶಬ್ದ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಪುರುಸೊತ್ತು ಇದ್ದಾಗ ಆವರ ನೇಯುವಿಕೆಯನ್ನು ಆಸಕ್ತಿಯಿಂದ ನೋಡುತ್ತಿತ್ತು ಕೂಡಾ. ಆ ನೇಯುವಿಕೆಯಲ್ಲಿರುವ rhythm ತುಂಬಾ ಕೌತುಕಮಯವಾಗಿತ್ತು. ವಿದ್ಯುತ್ತನ್ನು ಬಳಸದೆ ಒಬ್ಬನೇ ನೇಕಾರ ಮಗ್ಗದ ಮುಂದೆ ಕುಳಿತು ಕೈಕಾಲುಗಳ ಬಲವನ್ನಷ್ಟೇ ಪ್ರಯೋಗಿಸಿ ನೇಯಬಹುದಾಗಿದ್ದ ಕೈ ಮಗ್ಗ ಅದಾಗಿತ್ತು. ಬಿಗಿದಿಟ್ಟ ಹಾಸು ನೂಲುಗಳ ನಡುವೆ ಹೊಕ್ಕು ಎಳೆಗಳನ್ನು ನುಸುಳಿಸಿ ಬಟ್ಟೆಯನ್ನು ನೇಯುವ ಆ ಪರಿ ನೋಡುವ ನಮ್ಮಂತವರ ಮನಸ್ಸನ್ನು ಸೆಳೆದು ಬಿಡುತ್ತಿತ್ತು.
ಟಕ್ ಟಕಾ ಟಕ್ ಎನ್ನುವ ಶಬ್ದ ಬರುವುದು ಕಾಲುಗಳನ್ನು ಇಟ್ಟು ಕಾಲುಮಣೆಯನ್ನು ಒತ್ತಿದಾಗ ಹಾಸು ನೂಲುಗಳ ಒಂದು ಸಮೂಹ ಮೇಲಕ್ಕೆ ತಳ್ಳಲ್ಪಟ್ಟು ಇನ್ನೊಂದು ಕೆಳಗುಳಿಯುವ ಆ ಪ್ರಕ್ರಿಯೆಯಲ್ಲಿ. ಆ ಇಡೀ ನೇಯುವಿಕೆಯನ್ನು ವಿವರಿಸುವುದು ಕಷ್ಟ. ಆದರೆ ನೇಯುವುದನ್ನು ನೋಡುವುದು ರೋಮಾಂಚಕ.
ಅಲ್ಲಿನ ಜನರ ಇನ್ನೊಂದು ಮುಖ್ಯ ಕಸುಬು ಬೀಡಿ ಕಟ್ಟುವುದಾಗಿತ್ತು. ಅದಕ್ಕಾಗಿಯೆ ಇರುವ ಒಣಗಿದ ಎಲೆಗಳನ್ನು ಒಂದೇ sizeನಲ್ಲಿ ತುಂಡರಿಸಿ ಅದರೊಳಗೆ ತಂಬಾಕಿನ ಪುಡಿಯನ್ನು ತುಂಬಿ ಅದನ್ನು ಕೈ ಬೆರಳಿಗೆ ಸಿಕ್ಕಿಸಿದ ಚೂಪಾದ ಮೆಟಲ್ ತುಂಡಿನಿಂದ ಒತ್ತಿ ಮುಚ್ಚಿ ಅದಕ್ಕಾಗೇ ಇರುವ ನೂಲಿನಿಂದ ಮಧ್ಯದಲ್ಲಿ ಸುತ್ತಿ ಕಟ್ಟುತ್ತಿದ್ದರು. ಅದು ಕೂಡಾ ನಾವು ಕುತೂಹಲದಿಂದ ನೋಡುತ್ತಿದ್ದ ಇನ್ನೊಂದು ವಿಷಯವಾಗಿತ್ತು. ಈಗ ಅಲ್ಲಿ ನೇಯುವಿಕೆಯೂ ಇಲ್ಲ; ಬೀಡಿ ಕಟ್ಟುವಿಕೆಯೂ ಇಲ್ಲ. ಆದರೆ ಅದರ ನೆನಪುಗಳು ನಮ್ಮೊಳಗೆ ಜ್ವಲಂತವಾಗಿ ಉಳಿದಿವೆ.


57. ಅನುಭವ - ನಿರೀಕ್ಷೆ 
ಕಳೆದ ಭಾನುವಾರದ ವಿಜಯವಾಣಿಯಲ್ಲಿ ರವಿ ಬೆಳಗೆರೆಯವರ "ಸಂಬಂಧಗಳ ಮರು ಜೋಡಣೆಯಾಗುತ್ತಿರಬೇಕು" ಎನ್ನುವ ಲೇಖನ ಓದಿದೆ. ಮಕ್ಕಳು ಬೆಳೆಯುತ್ತಿದ್ದಂತೆಯೆ ಅಪ್ಪ ಅಮ್ಮನಿಗೆ ತಿರುಗಿ ಬೀಳುವ ಕ್ಷಣ, ಪಾಲಕರಿಗಾಗುವ ನೋವು, ಅದರ ಹಿಂದಿರುವ ಕಾರಣಗಳು, ಪ್ರಜ್ಞಾವಂತ ಪಾಲಕರು ಅದನ್ನು ಮರು ಜೋಡಿಸುವ ಪ್ರಯತ್ನ ಮಾಡುವ ರೀತಿ... ಇದೆಲ್ಲದರ ಬಗ್ಗೆ ಚೆಂದವಾಗಿ ಬರೆದಿದ್ದಾರೆ.
ಸಂಬಂಧ ನಿರ್ವಹಣೆಯೇ ದೊಡ್ಡ ಸವಾಲು. ಅದರಲ್ಲಿ ನಿರೀಕ್ಷೆಗಳೇ ದೊಡ್ಡ blockಗಳು. ಇದು ಗೊತ್ತಿದ್ದೂ ನಿರೀಕ್ಷೆ ಮಾಡುವುದನ್ನು ನಿಲ್ಲಿಸಲಾಗದ ಮನಸ್ಥಿತಿಯಲ್ಲಿ ನಾವಿರುತ್ತೇವೆ. ನಿರೀಕ್ಷೆ ಮಾಡುವ ಗುಣ ನಮ್ಮೆಲ್ಲರೊಳಗೆ ಸಹಜವಾಗಿ ಹಾಸುಹೊಕ್ಕಾಗಿ ಬೆಳೆದು ಬಿಟ್ಟಿದೆ.
ಮಕ್ಕಳ ಬಗ್ಗೆ ಪಾಲಕರ ನಿರೀಕ್ಷೆ ಎನ್ನುವುದು ಮಕ್ಕಳು ಅವರಿಗೆ ತಲೆನೋವಾಗಿ ಪರಿವರ್ತಿಸುವಂತೆ ಮಾಡುತ್ತದೆ. ನನ್ನ ಬಳಿ ಬಹಳಷ್ಟು ಪಾಲಕರು ಕೊಡುವ ದೂರು - "ಮೇಡಂ, ನನ್ನ ಮಗ 7ರ ತನಕ ಹೇಳಿದ ಮಾತು ಕೇಳುತ್ತಿದ್ದ. ಒಳ್ಳೆಯ ಅಂಕ ಗಳಿಸುತ್ತಿದ್ದ. ಈಗ ಏನು ಹೇಳಿದರೂ ಎದುರು ಮಾತನಾಡುತ್ತಾನೆ. ಸಿಟ್ಟು ಮಾಡುತ್ತಾನೆ. ನಮ್ಮನ್ನು avoid ಮಾಡುತ್ತಾನೆ. ಓದೋ ಮಗನೆ ಅಂದರೆ ನನಗೆ ಗೊತ್ತಿದೆ; ನೀವು ಹೇಳುವುದೇನು ಬೇಡ ಅಂತ ಅನ್ನುತ್ತಾನೆ" ಅಂತ. ಹೆಣ್ಣು ಮಕ್ಕಳದ್ದು ಸ್ವಲ್ಪ cold protest. ಈ ದೂರನ್ನು ಪ್ರತಿ ಬಾರಿ ಕೇಳಿದಾಗಲೂ ನನಗೆ ನಮ್ಮ adulthoodನ ಪ್ರೌಢಿಮೆಯ ಕೊರತೆ ಎದ್ದು ಕಾಣುತ್ತದೆ. ಮಗು ಮಗುವೇ. ಇನ್ನೂ ಬಾಲಿಶತೆಯ ಮುಸುಕಿನಲ್ಲಿರುವ ಮಕ್ಕಳಿಗೆ ಅರಿವು ಮೂಡಿಸಬೇಕಾದ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಮಕ್ಕಳು ಬೆಳೆಯುತ್ತಾ ಅವರ prioritiesಗಳು ಬದಲಾಗುವುದನ್ನು ಗಮನಿಸುತ್ತೇವೆ; ಅವರ ಮೇಲಿರುವ peer pessureನ್ನು ಗಮನಿಸುತ್ತೇವೆ; ಸ್ವ ನಿರ್ಧಾರಗಳನ್ನು ತೆಗೆದುಕೊಳ್ಳುವ ತಾಕತ್ತು ಆವರೊಳಗೆ ಬೆಳೆಯುತ್ತಿರುವುದನ್ನು ಗಮನಿಸುತ್ತೇವೆ ಎನ್ನುವ ವಿಷಯಗಳನ್ನು ನಾವು reflect ಮಾಡಬೇಕು. "ನನ್ನ ಮಗು" ಅನ್ನುವ possessive feelingನಿಂದ ನಾವು ಹೊರ ಬಂದು ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ ಸಂಯಮದಿಂದ ವರ್ತಿಸಿದಾಗ ಸಮಸ್ಯೆಗಳು ಉದ್ಭವಿಸುವುದೇ ಇಲ್ಲವೇನೋ? ಇದಕ್ಕೆ ಬೇಕಾಗುವುದು ನಮ್ಮ ಮನಸ್ಥಿತಿ ಹಾಗೂ ದೃಷ್ಟಿಕೋನದಲ್ಲಾಗಬೇಕಾದ ಸಣ್ಣ ಬದಲಾವಣೆಗಳು. ಮಕ್ಕಳ ಅಭಿಪ್ರಾಯಗಳಿಗೂ ಬೆಲೆ ಕೊಟ್ಟು, ಅವರಿಗೂ ಅವರದೇ ಆದ space ಕೊಟ್ಟು, ಅವರ ಜವಾಬ್ದಾರಿಯ ಅರಿವು ಮೂಡಿಸಿ ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದರೆ ನಿಸ್ಸಾರವಾಗುತ್ತಿರುವ ಸಂಬಂಧಗಳ ಮರು ಜೋಡಣೆಯಾಗಿ ಭಾವನೆಗಳ ಸಾರವನ್ನು ತುಂಬಬಹುದೇನೋ?


56. ಕಾಲೇಜು ದಿನಗಳು - ನೆನಪು 

ಶಿವಮೊಗ್ಗದ ನನ್ನ ಸ್ನೇಹಿತರ ಕೂಟದಲ್ಲಿ ವಾಗ್ದೇವಿ ಪಕ್ಕದ ಮನೆಯ ಸ್ನೇಹಿತೆಯಾದರೆ ಕಾಲೇಜಿನಲ್ಲಿ ಚೆನ್ನಿ, ಮಲ್ಲಿ, ಪ್ರಭಾ ನನ್ನ ಆಪ್ತ ಸ್ಹೇಹಿತೆಯರು. ಇವರೊಟ್ಟಿಗೆ ಹರಿ, ಪ್ರವೀಣ ಕೂಡಾ ಅಷ್ಟೇ ಕ್ಲೋಸ್. ಇದು ಅತೀ ಒಳವಲಯದ ಸ್ನೇಹ. ಇದಕ್ಕೆ ಮೀರಿ ಎರಡನೇ ವಲಯದ ಸ್ನೇಹಿತರು ಇನ್ನಷ್ಟು - ಶಾರಿ, ಆರತಿ, ಕಿಟ್ಟಿ, ಅಂಚಿ, ಬದರಿ, ಜೀತು, ಜಯು... ಹೀಗೆ. ನನ್ನ ಸ್ನೇಹಿತರ ಪಟ್ಟಿ ಸ್ವಲ್ಪ ದೊಡ್ಡದೆ!
ವಾಗ್ದೇವಿ ನನಗಿಂತ ಒಂದು ವರ್ಷ ಚಿಕ್ಕವಳು. ಹೀಗಾಗಿ ಕಾಲೇಜಿನಲ್ಲಿ ಅವಳೊಡನಾಟ ಕಡಿಮೆ. ಅವಳು ಸ್ವಲ್ಪ ಮೃದು ಸ್ವಭಾವದವಳು. ನೋಡಲು ಸುರಸುಂದರಿ. ಅವಳ ಕೃಪಾದೃಷ್ಟಿಗೆ ಬೀಳಲು ಬಹಳ ಜನ ಹಾತೊರೆಯುತ್ತಿದ್ದರು. ಆದರವಳು ಅದ್ಯಾವುದರ ಗೊಡವೆಗೂ ಹೋಗದ ಸಜ್ಜನಿ.
ನಾನು, ಚೆನ್ನಿ, ಮಲ್ಲಿ, ಪ್ರಭಾ ಯಾವಾಗಲೂ ಜೊತೆಯಾಗಿರುತ್ತಿದ್ದೆವು. ನಾವೆಲ್ಲ ಒಂದು ರೀತಿಯ ಸಿಡಿಮದ್ದುಗಳಿದ್ದಂತೆ. ನಮ್ಮ ಸುದ್ದಿಗೆ ಯಾರಾದರೂ ಬಂದರೆ ಢಂ ಅಂತ ಸ್ಫೋಟಿಸಿ ಬಿಡುತ್ತಿದ್ದೆವು. ಹೀಗಾಗಿ ಎಲ್ಲರೂ ನಮಗೆ ದೂರದಿಂದಲೇ ನಮಸ್ಕಾರ ಮಾಡುತ್ತಿದ್ದರು. ನಮ್ಮ ಕ್ಲಾಸ್ ನವರಲ್ಲಿ ಒಳ್ಳೆಯ ಒಗ್ಗಟ್ಟಿತ್ತು. ನಮ್ಮ ಕ್ಲಾಸ್ ನ ಹುಡುಗರು ನಮ್ಮ ರಕ್ಷಕರಾಗಿದ್ದರು. ಹೀಗಾಗಿ ನಾವೆಲ್ಲ ನಿರ್ಬೀಢೆಯಿಂದ ಇರುತ್ತಿದ್ದೆವು.
ನಮ್ಮೆಲ್ಲರ ಸಂಬಂಧದಲ್ಲಿ ಒಂದು ನಿಷ್ಕಲ್ಮಶ ಭಾವವಿತ್ತು. ಸ್ನೇಹದಲ್ಲಿ ಮುಕ್ತತೆ ಇತ್ತು. ಹುಡುಗರು ಹುಡುಗಿಯರ ನಡುವೆ ಲಿಂಗ ತಾರತಮ್ಯತೆ ಇಲ್ಲದ ಬಂಧವಿತ್ತು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸುವ ಮನಸ್ಸಿತ್ತು. ಅದೊಂದು ವಿವರಣೆಗೆ ಮೀರಿದ ಸಂಬಂಧವಿದ್ದ ಹದುಳವಾದ ಸ್ನೇಹ ವಲಯವಾಗಿತ್ತು. ಈಗಲೂ ಕೂಡ ಅದೇ ಮೃದು ಮಧುರ ಭಾವನೆ ನನ್ನೆಲ್ಲ ಸ್ನೇಹಿತರೊಟ್ಟಿಗಿರುವುದು ಮನಸ್ಸಿಗೆ ಮುದ ನೀಡುವ ಸಂಗತಿ. ನಮ್ಮೆಲ್ಲರ ಭೇಟಿ ಅಪರೂಪದ್ದಾದರೂ ಭಾವ ಬಹುರೂಪದ್ದಾಗಿ ಉಳಿದಿದೆ🙏 


55. ನೆನಪುಗಳು - ಪರಿಸರ 

80ರ ದಶಕದಲ್ಲಿ ಶಿವಮೊಗ್ಗದಲ್ಲಿ ನಾವಿದ್ದದ್ದು ಹೊಸಮನೆ ಎಕ್ಸ್ಟೆನ್ಶನ್ ನಲ್ಲಿ. ಓನರ್ ಮನೆಯ ಮೇಲಿದ್ದ ಬಾಡಿಗೆ ಮನೆಯಲ್ಲಿ. ಕಾಂಪೌಂಡಿನೊಳಗೆ ಓನರ್ ಮನೆಯ ಪಕ್ಕದ ಸಣ್ಣ ಓಣಿಯಲ್ಲಿ ಹದಿನೈದು ಇಪ್ಪತ್ತು ಹೆಜ್ಜೆ ನಡೆದರೆ ಮನೆಯ ಹಿಂದೆ ಮೇಲೇರಲು ಸಣ್ಣ ಮೆಟ್ಟಿಲುಗಳ ಸಾಲು. ಆದನ್ನೇರಿ ಬಂದರೆ ಒಂದು ಸಾಧಾರಣ ಹಾಲ್, ಎರಡು ಬೆಡ್ ರೂಂ, ಒಂದು ಡೈನಿಂಗ್ ರೂಂ ಹಾಗೂ ಅಡುಗೆ ಮನೆ ಇದ್ದ ತಾರಸಿ ಮನೆ. ಇರಲು ಆರಾಮವಾಗಿತ್ತು. ನಾನು ನನ್ನ ತಂಗಿ ರಸ್ತೆ ಪಕ್ಕಕ್ಕಿದ್ದ ರೂಂನಲ್ಲಿ ಮಲಗುತ್ತಿದ್ದೆವು. ನನ್ನ ತಂಗಿ ಎಷ್ಟು ಹೆದರು ಪುಕ್ಕಲಿಯಾಗಿದ್ದಳೆಂದರೆ ಹಾಲಿಗೆ ತಾಗಿಯೇ ರೂಂ ಇದ್ದರೂ ಒಬ್ಬಳೇ ಮಲಗಲು ಹೋಗುತ್ತಿರಲಿಲ್ಲ. ಜೊತೆಗೆ ಜನ ಬೇಕೇ ಬೇಕಾಗಿತ್ತವಳಿಗೆ. ಅವಳು ನನ್ನನ್ನು ಮಲಗಲು ಕರೆದಾಗ ನಾನು ಕೂಡಲೇ ಹೋಗದೆ ಅವಳನ್ನು ಸರೀ ಸತಾಯಿಸುತ್ತಿದ್ದೆ😊
ನಮ್ಮ ಮನೆಯ ಎದುರಿನಲ್ಲಿ ಸಾಲು ಸಾಲು ಬಾಡಿಗೆಮನೆಗಳಿದ್ದವು. ಇಲ್ಲಿ ನನಗೆ ಸಿಕ್ಕ ಅಕ್ಕಪಕ್ಕದ ಮನೆಯವರೆಲ್ಲ ಹುಡುಗಿಯರೇ. ಎದುರು ಮನೆಯಲ್ಲಿದ್ದ ನನ್ನ ಓರಗೆಯ ವಾಗ್ದೇವಿ ನನ್ನ ಆಪ್ತ ಸ್ನೇಹಿತೆಯಾದಳು. ಅವಳೇನು ಅವಳ ಅಮ್ಮ ಸೀತಮ್ಮ, ಅವಳ ಅಪ್ಪ, ಅವಳ ಅಣ್ಣಂದಿರು, ಅವಳ ನೆಂಟರಿಷ್ಟರು ಎಲ್ಲರೂ ನನ್ನ ಆಪ್ತರಾದರೆಂದರೆ ಸುಳ್ಳಲ್ಲ. ಬಹಳ ಒಳ್ಳೆಯ ಸುಸಂಸ್ಕೃತ ಕುಟುಂಬ. ನಾನು ನಮ್ಮ ಮನೆಯಲ್ಲಿ ಇದ್ದದ್ದಕ್ಕಿಂತ ಅವರ ಮನೆಯಲ್ಲಿಯೇ ಇರುತ್ತಿದ್ದದ್ದು ಹೆಚ್ಚು. ಅವರೆಲ್ಲರಿಗೂ ಅಷ್ಟೆ ನಾನು ಒಂದು ದಿನ ಅವರ ಮನೆಗೆ ಹೋಗಲಿಲ್ಲವೆಂದರೆ ಬೇಸರ. ಈಗಲೂ ಕೂಡ ಅವರ ಮನೆಮಂದಿಯೊಟ್ಟಿಗೆ ನನಗೆ ಅದೇ ಆಪ್ತ ಸಂಬಂಧವಿದೆ. ಊರು ಬಿಟ್ಟರೂ ಸ್ನೇಹ ಬಿಟ್ಟಿಲ್ಲ.
ನಮ್ಮ ಮನೆಯ ತಾರಸಿಯ ಮೇಲೆ ನಾನು ವಾಗ್ದೇವಿ ಕಂಬೈಂಡ್ ಸ್ಟಡಿ ಮಾಡುತ್ತಿತ್ತು. ಅದಕ್ಕಾಗಿ ನನ್ನ ಅಪ್ಪ ಲೈಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ನಿದ್ರೆ ಬರಬಾರದು ಅಂತ ಚಾ ಕುಡಿಯುವುದು, ಈರುಳ್ಳಿ ಮೂಸುವುದು, ಹರಟೆ ಹೊಡೆಯುವುದರಲ್ಲೇ ನಮ್ಮ ಸ್ಟಡಿ ಮುಗಿದು ಹೋಗುತ್ತಿತ್ತು. ನಿದ್ದೆ ಬಿಟ್ಟದ್ದೊಂದೇ ಭಾಗ್ಯ!
ನಾನಾಗ ಪ್ರಥಮ ಬಿ.ಎ.ಯಲ್ಲಿದ್ದೆ. ಓದಿನ ಗಂಭೀರತೆಯ ಕೊರತೆ ಇತ್ತು. ಎದ್ದುಬಿದ್ದು ಓದುತ್ತಿರಲಿಲ್ಲ. ಒಮ್ಮೆ ಓದಿದರೆ ಸಾಕಷ್ಟು ಗ್ರಹಿಸುವ ಬುಧ್ಧಿಮತ್ತೆ ಇದ್ದ ಕಾರಣ ಅಕಾಡೆಮಿಕ್ ಪರ್ಫಾಮೆನ್ಸ್ ಚೆನ್ನಾಗಿತ್ತು. ಅಲ್ಲದೆ ಒಂದು ವಿಷಯದ ಪರೀಕ್ಷೆ ಮುಗಿದ ಮೆಲೆ ಇನ್ನೊಂದು ವಿಷಯಕ್ಕೆ ವಾರಗಟ್ಟಲೆ ಬಿಡುವು ಇರುತ್ತಿತ್ತು ಕೂಡಾ. ಕೆಲವೊಮ್ಮೆ ಈ long gap ನನ್ನನ್ನು ರಜೆಯ ಮೂಡ್ ಗೆ ತಗೊಂಡು ಹೋಗಿ ಬಿಡುತ್ತಿತ್ತು. ಮನೆಯಲ್ಲಿ ಅಪ್ಪ ಅಮ್ಮ ನನ್ನ ಓದಿನ ಜವಾಬ್ದಾರಿ ನನಗೇ ಬಿಟ್ಟಿದ್ದ ಕಾರಣ ನನ್ನ ಓದಿನ ಹೊಣೆಗಾರಿಕೆಯ ಅರಿವು ನನಗಿತ್ತು. ಹೀಗಾಗಿ ನನ್ನದೇ ಓಘದಲ್ಲಿ ನನ್ನ ಓದು ಸಾಗಿತು.
ನಮ್ಮ ಬಾಡಿಗೆ ಮನೆ ಲೊಕೇಶನ್ ಚೆನ್ನಾಗಿತ್ತು. ಹತ್ತಿರದಲ್ಲೇ ಟೈಪ್ ರೈಟಿಂಗ್ ಹಾಗೂ ಶಾರ್ಟ್ ಹ್ಯಾಂಡ್ ಸೆಂಟರ್ ಇತ್ತು. ಅದನ್ನೂ ಕಲಿತಾಯ್ತು. ಸುತ್ತಮುತ್ತಲು ಹುಡುಗಿಯರ ಪಾಳ್ಯ ಇದ್ದ ಕಾರಣ ಆಡಲು ಬರ ಇರಲಿಲ್ಲ. ವಾಗ್ದೇವಿಯಂತಹ ಸ್ನೇಹಿತೆ ಹಾಗೂ ಅವಳ ಮನೆಯವರೆಲ್ಲ ನನ್ನ ಶಿವಮೊಗ್ಗದ ದಿನಗಳನ್ನು ಸ್ಮರಣೀಯವಾಗಿಸಿದರು. ಅಲ್ಲಿ ಕಳೆದ ಎರಡು ವರ್ಷ ಎರಡು ಕ್ಷಣಗಳಂತೆ ಕಳೆದುಹೋದವು. ಒಳ್ಳೆಯ ನೆರೆಹೊರೆಯವರು, ಸ್ನೇಹಿತರು ನಮ್ಮ ಜೀವನವನ್ನು ಹಸನಾಗಿಸುತ್ತಾರೆ ಎನ್ನುವುದು ಸತ್ಯವಲ್ಲವೆ?


54. ನೆನಪು - ಕಾಲೇಜು ದಿನಗಳು 

ನಾನು ನನ್ನ ಫೈನಲ್ ಡಿಗ್ರಿ ಮಾಡಿದ್ದು ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ.
ಶಿವಮೊಗ್ಗದ ಡಿವಿಎಸ್ ಕಾಲೇಜಿನ ಸ್ನೇಹಿತರನ್ನು ಬಿಟ್ಟು ಬರುವಾಗ ಬಹಳ ಬೇಸರವಾಗಿತ್ತು. ನಮ್ಮೆಲ್ಲರಲ್ಲಿ ಒಂದು ನಿಷ್ಕಳಂಕ ಸ್ನೇಹವಿತ್ತು. ಡಿವಿಎಸ್ ನ ಪರಿಸರಕ್ಕೂ ಎಂಜಿಎಂ ನ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸ. ನಾನು ಕರ್ನಾಟಕದಲ್ಲಿದ್ದೇನೋ ಇಲ್ಲವೇ ಫಾರಿನ್ ನಲ್ಲಿ ಇದ್ದೇನೋ ಎಂದು ಸಂದೇಹ ಬರುವಷ್ಟು ಆಂಗ್ಲ ವಾತಾವರಣವಿದ್ದ ಕಾಲೇಜು ಅದಾಗಿತ್ತು. ಒಂದೇ ಆಂಗ್ಲ ಭಾಷೆ, ಇಲ್ಲವೆ ತುಳು. ಇವೆರಡೇ ಅಲ್ಲಿ ಹೆಚ್ಚು ಬಳಕೆಯಲ್ಲಿದ್ದವು.
ಫೈನಲ್ ಇಯರ್ ಆಗಿದ್ದ ಕಾರಣ, ಎಲ್ಲರಿಗೂ ಅವರವರ ಫ್ರೆಂಡ್ಸ್ ಈಗಾಗಲೇ ಇದ್ದ ಕಾರಣ ನಾನು ಬಹಳ ದಿನಗಳು ಅಲ್ಲಿ ಪರಕೀಯಳಾಗಿ ಉಳಿದೆ. ಅಲ್ಲಿನ ಹೈಫೈ ಸಂಸ್ಕೃತಿಗೆ ಹೊಂದಿಕೊಳ್ಳಲು ಒದ್ದಾಡಿದೆ. ಆಗಿನ ಕಾಲದಲ್ಲೇ ಕಾಲೇಜಿಗೆ ಮಿನಿ ಡ್ರೆಸ್ ಹಾಕಿಕೊಂಡು ಬರುವವರನ್ನು ಕಂಡು ಆಶ್ಚರ್ಯ ಪಟ್ಟೆ.
ಸಮಯ ಎಲ್ಲವನ್ನು ಸರಿಪಡಿಸುತ್ತದೆ. ತರಗತಿಯಲ್ಲಿ ನನ್ನ ಒಳ್ಳೆಯ ಅಕಾಡೆಮಿಕ್ ಪರ್ಫಾಮೆನ್ಸ್ ನಿಂದಾಗಿ ನಿಧಾನವಾಗಿ ಎಲ್ಲರೂ ನನ್ನತ್ತ ಸ್ನೇಹ ಹಸ್ತ ನೀಡತೊಡಗಿದರು. ಅವರ ಕಲಿಕೆಗೆ ನನ್ನ ಸಹಾಯ ಪಡೆಯತೊಡಗಿದರು. ಸ್ಪೋಕನ್ ಇಂಗ್ಲಿಷ್ ಮೇಲೆ ಅಷ್ಟು ಹಿಡಿತ ಇರದ ನಾನು ಕನ್ನಡ ಬಾರದವರಿಗೆ ಕನ್ನಡ ಮಾತನಾಡಲು ಕಲಿಸಿದೆ. ಆತ್ಮೀಯ ಭಾವ ಹುಟ್ಟುವುದೇ ನಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗಲ್ಲವೇ? ಸ್ನೇಹಿತರ ಜೊತೆ ಕನ್ನಡದಲ್ಲಿ ಮಾತನಾಡಿದಾಗ ಸಿಗುವ ಖುಷಿ, ಆಪ್ತತೆ ಆಂಗ್ಲ ಭಾಷೆಯಲ್ಲಿ ಮಾತನಾಡಿದಾಗ ನನಗಂತೂ ಸಿಗುವುದಿಲ್ಲ. ಆವರ ಶೋಕಿಯನ್ನು ನೋಡಿ ದಂಗಾಗಿದ್ದ ನಾನು ಅದರ ಹಿಂದಿರುವ ಸರಳ ಮನಸ್ಸನ್ನು ಅರಿತೆ. ಧರಿಸುವ ಬಟ್ಟೆಗೂ ಮನಸ್ಸಿನ ಭಾವಕ್ಕೂ ತಾಳಮೇಳವಿಲ್ಲ ಅನ್ನುವುದನ್ನು ಅಲ್ಲಿ ಕಂಡುಕೊಂಡೆ. ಪ್ರಪಂಚವನ್ನು ನೋಡುವ ನನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಂಡೆ. ಇನ್ನೊಬ್ಬರ ಬದುಕಿನ ಕ್ರಮವನ್ನು judgemental ಆಗಿ ನೋಡುವುದನ್ನು ಕಡಿಮೆಗೊಳಿಸಿದೆ. ನಮಗೆ ಬೇಕಾದಲ್ಲಿ ಎಲ್ಲರನ್ನು ಅವರವರು ಇರುವ ಹಾಗೆ ಸ್ವೀಕರಿಸಬೇಕಾದ ಅನಿವಾರ್ಯತೆಯನ್ನು ಅರಿತುಕೊಂಡೆ. ಅಲ್ಲಿನ ಒಂದು ವರ್ಷದ ಓದು ನನಗೆ ಒಳ್ಳೆಯ ಗುರುಗಳ ಪಾಠ ಕೇಳುವ ಅವಕಾಶ ಕಲ್ಪಿಸಿತು. ನನ್ನ ಓದನ್ನು ಇನ್ನಷ್ಟು ಪುಷ್ಟೀಕರಿಸಿ ಅಂತಿಮ ಪರೀಕ್ಷೆಯಲ್ಲಿ ನಾನು ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವಂತಾಯಿತು. ವಿಭಿನ್ನ ವಾತಾವರಣದ ಜಾಗದಲ್ಲಿ ಹೊಂದಿಕೊಳ್ಳುವುದನ್ನು ಕಲಿಸಿತು. ಒಂದು ಅಪರಿಚಿತ ವಾತಾವರಣದಲ್ಲಿ ಪರಿಚಿತತೆ ಬೆಳೆಸಿಕೊಳ್ಳುವುದನ್ನು ಕಲಿಸಿತು. ಅಲ್ಲಿ ಕಳೆದ ಆ ಒಂದು ವರ್ಷ ನನ್ನ ವ್ಯಕ್ತಿತ್ವದಲ್ಲಿ, ಚಿಂತನೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿತೆಂದರೆ ಸುಳ್ಳಲ್ಲ. "ಬದಲಾವಣೆ" ಬದುಕಿನ ನಿತ್ಯ ನಿರಂತರ ಸತ್ಯವಲ್ಲವೆ?


53. ನೆನಪುಗಳು - ಅನುಭವ 
Facebook ನಲ್ಲಿ ಯಾರೋ ರುಬ್ಬುವಕಲ್ಲಿನ ಫೋಟೊವನ್ನು ಪೋಸ್ಟ್ ಮಾಡಿದ್ದರು. "ನೀವು ಇದನ್ನು ಬಳಸಿದವರಾದರೆ ಶೇರ್ ಮಾಡಿ" ಅನ್ನುವ ವಾಕ್ಯ ಕೂಡಾ ಅದರೊಂದಿಗೆ ಇತ್ತು. ತಕ್ಷಣ ನನಗೆ ಅಜ್ಜಯ್ಯನ ಮನೆಯ ರುಬ್ಬುವಕಲ್ಲಿನ ನೆನಪಾಯಿತು. ಥೇಟ್ ಆ ಫೋಟೊದಲ್ಲಿರುವ ಕಲ್ಲಿನಂತೆಯೆ ಇತ್ತದು. ಆ ಕಲ್ಲಿನಲ್ಲಿ ರುಬ್ಬದ ಯಾವ ವ್ಯಕ್ತಿಯೂ ನಮ್ಮ ಮನೆಯಲ್ಲಿ ಇರಲಿಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ನಾವೆಲ್ಲ ಅದರಲ್ಲಿ ರುಬ್ಬಿದವರೇ! ನಂತರ ಜೀವನದ ರುಬ್ಬುಕಲ್ಲಿನಲ್ಲಿ ರುಬ್ಬಲ್ಪಟ್ಟದ್ದು ಬೇರೆ ಬಿಡಿ😌
ನಾನು ಪ್ರಾಯಶಃ ಹೈಸ್ಕೂಲಿನ ದಿನಗಳಲ್ಲಿ ರುಬ್ಬಲು ಕಲಿತೆ ಅಂತ ಕಾಣಿಸುತ್ತದೆ. ಮನೆಯಲ್ಲಿದ್ದ ನನ್ನ ಸೋದರತ್ತೆ ನನ್ನ ಗುರುವಿರಬೇಕು? ಮೊದಮೊದಲಿಗೆ ಉದ್ದನ್ನು ಹಾಕಿ ಆ ದೊಡ್ಡ ಕಲ್ಲನ್ನು ತಿರುಗಿಸುವಾಗ ಇಡೀ ಮೈ ಅದರೊಡನೆ ತಿರುಗುತ್ತಿತ್ತು. ಒಂದು ಕೈ ಕಲ್ಲನ್ನು ತಿರುಗಿಸುವಾಗ ಇನ್ನೊಂದು ಕೈಯಿಂದ ನುರಿಯುತ್ತಿರುವ ಉದ್ದನ್ನು ಕಲ್ಲೊಳಗೆ ದೂಡಬೇಕು. ಅದು ನೋಡಲು ಸುಲಭ. ಮಾಡಲು ಕಷ್ಟ. ಮೊದಮೊದಲು ರುಬ್ಬುವಾಗ ಆ ಎರಡು actions ಒಟ್ಟಿಗೆ ಆಗುವುದೇ ಇಲ್ಲ. ಕೆಲವೊಮ್ಮೆ ಉದ್ದಿನ ಬದಲು ಕೈಬೆರಳು ಕಲ್ಲಿನಡಿ ಹೋಗಿ ಚಟ್ನಿಯಾದದ್ದಿದೆ. ಆ ನೋವು ಬಹಳ ದಿನ ಉಳಿಯುತ್ತದೆ. ಹಾಗೆಯೇ ನೀರು ಜಾಸ್ತಿ ಹಾಕಿಕೊಂಡರೆ ರುಬ್ಬುವಾಗ ಪಚಪಚನೆ ಹಾರಿ ಮೈಮುಖವೆಲ್ಲ ಹಿಟ್ಟುಮಯ. ಹಾಕಿದ ಬಟ್ಟೆ ಬದಲಿಸಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು. ತುಂಬಾ ರುಬ್ಬುವ ಪ್ರಸಂಗ ಬಂದಾಗ ಕೈ,ಭುಜವೆಲ್ಲ ಸೋತು ಬರುತ್ತಿತ್ತು. ಆದರೆ ಆ ಕಲ್ಲಿನಲ್ಲಿ ರುಬ್ಬಿ ಮಾಡಿದ ತಿಂಡಿ ಹಾಗೂ ಅಡುಗೆಗೆ ರುಚಿ ಜಾಸ್ತಿ ಇರುವುದಂತೂ ನಿಜ. ಹಾಗೆಯೆ ಇನ್ನೊಂದು ನೆನಪೆಂದರೆ ಆ ಕಲ್ಲನ್ನು ತೊಳೆದು ಕ್ಲೀನ್ ಮಾಡಿದ ನೀರು ತೆಗೆಯಲಿಕ್ಕೆ ಗೆರಟೆಯನ್ನು ಕೆರೆದು ನುಣುಪಾಗಿ ಮಾಡಿಡುವುದು.
ಸಾಗರದಲ್ಲಿ ನನ್ನ ಗಂಡನ ಮನೆಯಲ್ಲಿದ್ದ ರುಬ್ಬುಗುಂಡಿಗೆ ಗೂಟ ಇರಲಿಲ್ಲ. ಬೋಳು ಬೋಳು. ಅದರಲ್ಲಿ grip ಇಟ್ಟುಕೊಂಡು ರುಬ್ಬುವುದು ಬಹಳ ಕಷ್ಟ. ನಾವು ಸೊಸೆಯಂದಿರೆಲ್ಲ ಅಂತಹ ರುಬ್ಬುವಕಲ್ಲಿನಲ್ಲಿ ಹಲಸಿನ ಹಪ್ಪಳಕ್ಕೆ ರುಬ್ಬಿ ಸಾವಿರಾರು ಹಪ್ಪಳ ಮಾಡಿದ ದಾಖಲೆ ಇದೆ. ಹಲಸಿನ ಹಪ್ಪಳದ ಹಿಟ್ಟನ್ನು ನೀರು ಹಾಕಿಕೊಳ್ಳದೆ ರುಬ್ಬಿ ready ಮಾಡುವುದು ಬಹಳ ತ್ರಾಸದಾಯಕವೇ ಸರಿ. ಆದರೆ ಹಪ್ಪಳವನ್ನು ಕರಿದು ತಿನ್ನುವುದು ಕ್ಷಣಮಾತ್ರದ ಕೆಲಸ🥴
ಹಳೆಯ ಇಂತಹ ವಸ್ತುಗಳನ್ನು ನೋಡಿದಾಗ ನನ್ನ ನೆನಪಿನ ಧಾರೆ ಹಾಗೆಯೆ ಹರಿದು ಬರುತ್ತದೆ. ಈಗ ಕೂತು ಒಮ್ಮೆ ಅವಲೋಕನ ಮಾಡಿದಾಗ ಆಗ ಗೊಣಗುತ್ತಾ ಮಾಡುತ್ತಿದ್ದ ಆ ಕೆಲಸಗಳೆಲ್ಲ ನಮ್ಮೊಳಗೆ ನೆನಪಿನ ಮೂಟೆಯನ್ನೇ ಕಟ್ಟಿರುವ ಅರಿವು ಉಂಟಾಗುತ್ತದೆ. ಅದನ್ನು ಸಕಾರಾತ್ಮಕವಾಗಿ ನೋಡಿದಾಗ ಬದುಕಿನ ಸುಪ್ತ ಸತ್ಯಗಳು ಅದರೊಳಗೆ ಅಡಗಿರುವುದು ಗೊತ್ತಾಗುತ್ತದೆ. ಅಂತಹ ರುಬ್ಬುವಿಕೆ, ಮಜ್ಜಿಗೆ ಕಡೆಯುವಿಕೆ, ನೀರನ್ನು ಬಾವಿಯಿಂದ ಸೇದುವ ಕೆಲಸ... ಹೆಂಗಸರನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಸ್ತರನ್ನಾಗಿಸಿ ಅವರ ಜೀವನವನ್ನು ಸಹ್ಯವಾಗಿಸುತ್ತಿದ್ದವೋ ಏನೋ? ಅಂತಹ ದೈಹಿಕ ಕೆಲಸಗಳು ಅವರನ್ನು ಆರೋಗ್ಯವಂತರನ್ನಾಗಿಯೂ ಇಟ್ಟಿರಬಹುದು. ಪುನಃ ಹೇಳುತ್ತೇನೆ ಇಂತಹ ಹೊಳಹು ಸಿಗುವುದು ಅವುಗಳ positive side ನೋಡಿದಾಗ ಮಾತ್ರ!


52. ಬಾಲ್ಯ - ನೆನಪುಗಳು 

ನಮ್ಮ ಮನೆಯಲ್ಲಿ ಅಮ್ಮ ಮಾಡುತ್ತಿದ್ದ ವಿಶೇಷವಾದ ತಿಂಡಿ ಬಾಳೆಹಣ್ಣು ಮತ್ತು ಹೀರೆಕಾಯಿ ದೋಸೆ. ನಾವೆಲ್ಲ ಬಾಯಿಬಿಟ್ಟುಕೊಂಡು ತಿನ್ನಲು ಕಾಯುತ್ತಿದ್ದ ಬಹಳ ರುಚಿಯಾದ ತಿಂಡಿಯದು. ಅದನ್ನು ಮಾಡುವುದು ಒಂದು lengthy process.
ಹಿಟ್ಟು ferment ಆಗುವ ಅಗತ್ಯವಿಲ್ಲ. ನೆನೆಸಿದ ಅಕ್ಕಿಯೊಟ್ಟಿಗೆ ಕಾಯಿಗೆ ಕುತ್ತುಂಬರಿ, ಕೆಂಪು ಮೆಣಸು, ಹುಣಸೆ ಹುಳಿ ...ಅಗತ್ಯವಿರುವ ಮಸಾಲೆ ಸೇರಿಸಿ ಹದವಾಗಿ ರುಬ್ಬಬೇಕು. ಆ ಹಿಟ್ಟು ಸ್ವಲ್ಪ ಸಿಹಿ, ಸ್ವಲ್ಪ ಖಾರ, ಸ್ವಲ್ಪ ಉಪ್ಪು, ಸ್ವಲ್ಪ ಮಸಾಲೆಯ ಸವಿಯನ್ನು ಹೊಂದಿರುತ್ತದೆ. ಹಿಟ್ಟೇನೊ ತಯಾರಾಯಿತು. ಇನ್ನು ದೋಸೆ ಮಾಡಿ ತಿಂದರಾಯಿತು ಅಂತ ಖುಷಿ ಪಡುವ ಹಾಗಿಲ್ಲ. ಹೀರೆಕಾಯಿಯ ಸಿಪ್ಪೆಯನ್ನು ತೆಳುವಾಗಿ ತೆಗೆದು, ಕಹಿ ಇದೆಯೋ ಇಲ್ಲವೋ ಎಂದು ರುಚಿ ನೋಡಿ, ಕಹಿ ಇಲ್ಲದ ಹೀರೆಕಾಯಿಯನ್ನು ತೆಳುವಾಗಿ ಹೆಚ್ಚಿಟ್ಟುಕೊಳ್ಳಬೇಕು. ಬಾಳೆಹಣ್ಣಾದರೆ ಪಚ್ಚಬಾಳೆ ಅಥವಾ ಮೈಸೂರು ಬಾಳೆಹಣ್ಣನ್ನು ಬಳಸಬೇಕು. ಗಳಿತ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಹಣ್ಣನ್ನು ಉರುಟುರುಟಾಗಿ ಹೆಚ್ಚಿಟ್ಟುಕೊಳ್ಳಬೇಕು. ನಂತರದಲ್ಲಿ ಕಾವಲಿ ಕಾದ ಮೇಲೆ ತಯಾರಿಸಿಟ್ಟ ಹಿಟ್ಟಿಗೆ ಕತ್ತರಿಸಿಟ್ಟ ಹೀರೆಕಾಯಿಯನ್ನು ಅದ್ದಿ ಒಂದರ ಪಕ್ಕಕ್ಕೆ ಒಂದರಂತೆ ಜೋಡಿಸಿಡಬೇಕು. ಬಾಳೆಹಣ್ಣು ದೋಸೆ ಬೇಕೆಂದರೆ ಕತ್ತರಿಸಿದ ಬಾಳೆಹಣ್ಣನ್ನು ಹಿಟ್ಟಿಗೆ ಅದ್ದಿ ಕಾವಲಿಯ ಮೇಲೆ ಇಟ್ಟರಾಯಿತು. ನಂತರ ಸಣ್ಣ ಬೆಂಕಿಯಲ್ಲಿ ಒಂದೊಂದು ದೋಸೆಯನ್ನೂ ಸುಮಾರು ಹತ್ತು ನಿಮಿಷಗಳ ಆಸುಪಾಸು ಎಣ್ಣೆ ಹಾಕಿ ಕಾಯಿಸಬೇಕು. ಬಿಸಿಬಿಸಿಯಾದ ದೋಸೆಯನ್ನು ಬೆಣ್ಣೆಯೊಟ್ಟಿಗೆ ತಿನ್ನಲು ಬಹಳ ರುಚಿ. ಆ ದೋಸೆಯ ಸ್ವಾದ ತಿಂದವನೇ ಬಲ್ಲ.
ನಾವು ಸಣ್ಣವರಿದ್ದಾಗ ನಮಗೆ ತಿನ್ನುವುದನ್ನು ನಿಲ್ಲಿಸಲಿಕ್ಕೆ ಗೊತ್ತಾಗುತ್ತಿರಲಿಲ್ಲ. ರುಚಿರುಚಿಯಾದ ತಿಂಡಿಯಾದರೆ ಅಮ್ಮನೇ "ಇನ್ನು ತಿಂದದ್ದು ಸಾಕು" ಅನ್ನುವವರೆಗೆ ತಿನ್ನುತ್ತಿತ್ತು. ಕಸಿನ್ಸ್ ಎಲ್ಲ ಬಂದರೆ ತಿನ್ನುವುದರಲ್ಲಿ ಸ್ಪರ್ಧೆ. ಎಲ್ಲರೂ ಕಲಿಯಲು, ಆಡಲು ಸ್ಪರ್ಧೆ ನಡೆಸಿದರೆ ನಾವು ತಿನ್ನಲು ಸ್ಪರ್ಧೆ ಮಾಡುತ್ತಿತ್ತು. ಮಾಡಿ ಹಾಕುವವರಿಗೆ ಸುಸ್ತಾಗಬೇಕಿತ್ತೇ ವಿನಃ ನಮಗೆ ತಿಂದು ತೃಪ್ತಿ ಆಗುತ್ತಿರಲಿಲ್ಲ. ಹುರುಪಿನಲ್ಲಿ ಹೊಟ್ಟೆ ಬಿರಿಯುವಷ್ಟು ತಿಂದ ಮೇಲೆ ಹೊಟ್ಟೆ ತುಂಬಿದ ಹೆಬ್ಬಾವಿನ ಸ್ಥಿತಿ! ಎಷ್ಟೋ ಸಾರಿ ತಿಂಡಿ ತಿಂದದ್ದು ಜಾಸ್ತಿಯಾಗಿ ನಾವು ಬೆಳಗ್ಗೆಯೇ ನಿದ್ರಿಸಿ ಗೊರೆದದ್ದಿದೆ. ನಿದ್ದೆಯಿಂದ ಎದ್ದ ಮೇಲೆ ಪುನಃ ತಿನ್ನಲು ಹುಡುಕಾಟ. ಒಮ್ಮೆಯೂ ಅಜೀರ್ಣ ಆದದ್ದಿಲ್ಲ; ಹೊಟ್ಟೆ ನೋವು ಬಂದದ್ದಿಲ್ಲ. ಆದರೀಗ? ಆರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತ ಅನ್ನುವ ಸ್ಥಿತಿ. ತಿನ್ನಲು ವಿವಿಧ ತಿಂಡಿ ತಿನಿಸುಗಳಿದ್ದರೂ ತಿಂದು ಅರಗಿಸಿಕೊಳ್ಳುವ ತಾಕತ್ತಿಲ್ಲ. ಹೊಟ್ಟೆಬಟ್ಟೆಗಾಗಿಯೇ ದುಡಿಯುತ್ತಿದ್ದರೂ ಅದನ್ನೇ ಸರಿಯಾಗಿ ನಿರ್ವಹಿಸದ ಧಾವಂತದ ಜೀವನ ಎಲ್ಲರದ್ದಾಗಿದೆ. ಎಲ್ಲರೂ ಒಟ್ಟಿಗೆ ಕೂತು ತಿನ್ನುವ ಅವಕಾಶ ಕಡಿಮೆಯಾಗುತ್ತಿದೆ. ತಿನ್ನುತ್ತಿರುವುದನ್ನು ಸವಿಯುವ ಮನಸ್ಥಿತಿ ಇಲ್ಲದಾಗುತ್ತಿದೆ. ತಿನ್ನುವ ತಿಂಡಿಗಳ ಗ್ರಾಮ್ಯತೆಯ ಸೊಗಡು ಮಾಯವಾಗುತ್ತಿದೆ. ತಿಂಡಿ ತಿನ್ನುವ ವೇಳೆಯಲ್ಲಾದರೂ ನಡೆಯುತ್ತಿದ್ದ ಸಂವಾದ - ಸಂವಹನ ಮರೆಯಾಗುತ್ತಿದೆ. ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಕಳೆದುಕೊಂಡದ್ದನ್ನು ಹಿಂಪಡೆಯೋಣವಲ್ಲವೆ?


51. ಕಾಲೇಜು ದಿನಗಳು - ನೆನಪು 
ನಾನು ಬಿ.ಎಡ್ ಮಾಡಿದ್ದು ಕುಂಜಿಬೆಟ್ಟಿನ ಟಿ.ಎಂ.ಎ. ಪೈ ಕಾಲೇಜ್ ಆಫ್ ಎಜುಕೇಶನ್ ನಲ್ಲಿ. ನಾನು, ಜೂಲಿಯೆಟ್, ಜಾನೆಟ್, ರೋಹಿಣಿ, ನಯನ... ಹೀಗೆ ಬ್ಯಾಚಲರ್ಸ್ ಡಿಗ್ರಿ ಫ್ರೆಶ್ ಆಗಿ ಮುಗಿಸಿದ ಬಹಳಷ್ಟು ಜನ ಆ ವರ್ಷ ಬಿ.ಎಡ್ ಕೋರ್ಸ್ ಗೆ ಸೇರಿತ್ತು. ಸಿಕ್ಕಾಪಟ್ಟೆ ಹುಡುಗಾಟದ ಬುಧ್ಧಿ ಇನ್ನೂ ಕೆಲಸ ಮಾಡುತ್ತಿದ್ದ ವಯಸ್ಸದು. ಇದರೊಂದಿಗೆ ಶಿಕ್ಷಕರಾಗಬೇಕೆಂಬ ಕನಸೂ ಇತ್ತು. ಸುಮಾರು ನೂರ ಹತ್ತು ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ವಾತಾವರಣವಿದ್ದ ತರಗತಿಯ ಕೊಠಡಿ ಅದಾಗಿತ್ತು. ಮೆಥಡಾಲಜಿಗಳಿಗೆ ಮಾತ್ರ ಬೇರೆ ಬೇರೆ ತರಗತಿಯ ಕೊಠಡಿಗಳಿದ್ದವು. ಅದೃಷ್ಟವಶಾತ್ ನಮ್ಮ ಬ್ಯಾಚಿನಲ್ಲಿ ದಾಖಲಾತಿ ಪಡೆದ ಹೆಚ್ಚಿನವರು ಫ್ರೆಶರ್ಸ್. 30+ ನವರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಜೀವಂತಿಕೆ ಉಕ್ಕಿ ಹರಿಯುತ್ತಿದ್ದ ತರಗತಿ ನಮ್ಮದಾಗಿತ್ತು. ಉತ್ತಮ ಉಪನ್ಯಾಸಕರ ಆಸಕ್ತ ಉಪನ್ಯಾಸಗಳನ್ನು ಕೇಳುವ ಯೋಗ ನಮ್ಮದಾಗಿತ್ತು. ಆಗ ನಮ್ಮ ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ ವಿಶ್ವನಾಥರವರ ಸೈಕಾಲಜಿ ಪಾಠಗಳಂತೂ ಅದ್ವಿತೀಯವಾಗಿದ್ದವು. ಕಾರಂತ ಮಾಸ್ಟರ್ ರ ಇತಿಹಾಸದ ಕ್ಲಾಸ್ಗಳೂ ಬಹಳ ಆಸಕ್ತದಾಯಕವಾಗಿದ್ದವು. ಇನ್ನು ಫಿಲಾಸಫಿ, ಇಂಗ್ಲಿಷ್.. ಇತ್ಯಾದಿ ವಿಷಯಗಳಿಗೂ ಒಳ್ಳೆಯ ಉಪನ್ಯಾಸಕರಿದ್ದರು.
ಬಿ.ಎಡ್ ನಲ್ಲಿ ಮಾಡಿ ಮುಗಿಯದಷ್ಟು ಕೆಲಸ ಇರುತ್ತದೆ. ಬರೆದು ಮುಗಿಯಲಾರದಷ್ಟು ಅಸೈನ್ಮೆಂಟುಗಳ ಹೊರೆ. ನಮ್ಮ ಬ್ಯಾಚಿನಲ್ಲಿದ್ದ ನಾವೊಂದಿಷ್ಟು ಜನ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಹೊರೆಯನ್ನು ಹಂಚಿಕೊಂಡು ಕೆಲಸವನ್ನು ಹಗುರಗೊಳಿಸಿಕೊಂಡು ಬಿ.ಎಡ್ ಅನ್ನು ತಲೆಬಿಸಿ ಇಲ್ಲದೆ ಯಶಸ್ವಿಯಾಗಿ ಮುಗಿಸಿದ ಕೀರ್ತಿಗೆ ಭಾಜನರಾಗಿದ್ದೇವೆ😊 ನಾವು ಕಲಿಕೆಯಲ್ಲೂ ಮುಂದು ಹಾಗೂ ಉಳಿದೆಲ್ಲ ವಿಚಾರಗಳಲ್ಲೂ ಮುಂದು(ತರಲೆಯಲ್ಲಿ ಕೂಡಾ). ಏನೇ ಕಾರ್ಯಕ್ರಮವಿರಲಿ ಅಲ್ಲಿ ಭಾಗವಹಿಸಲು, ಜವಾಬ್ದಾರಿ ತೆಗೆದುಕೊಳ್ಳಲು ನಾವಿದ್ದೇವೆ ಎಂಬುದು ಸರ್ವ ವಿದಿತ. ನಾಟಕ, ಆಟ, ನೃತ್ಯ, ಹಾಡು, ಭಾಷಣ.... ಪ್ರೈಜ್ ಬರುತ್ತೋ ಬಿಡುತ್ತೋ ನಾವೊಂದಿಷ್ಟು ಜನ participate ಮಾಡುತ್ತಿತ್ತು. ನಮ್ಮ ಹತ್ತು ದಿನಗಳ ಟೂರ್ ಆಗಲಿ, ಶಿಬಿರಗಳಾಗಲಿ ಎಲ್ಲೆಡೆಯೂ ನಮ್ಮ ಛಾಪನ್ನು ಒತ್ತಿಯೇ ಬಿಡುತ್ತಿತ್ತು. ಇನ್ನೂ ಮಗುತನವನ್ನು ಉಳಿಸಿಕೊಂಡಿದ್ದ ನಮ್ಮಂತವರಿಂದ ಕ್ಲಾಸಿನಲ್ಲಿ ಜೀವ ಇರುತ್ತಿತ್ತು. ಹೀಗಾಗಿ ಲೆಕ್ಚರರ್ಸ್ ಯಾರೂ ನಮ್ಮನ್ನು academic bent mindನವರು ಎಂದು ಪರಿಗಣಿಸಿರಲಿಲ್ಲ. ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ನಾನು rank ಪಡೆದದ್ದು ನೋಡಿ ನಮ್ಮ ಉಪನ್ಯಾಸಕರು ಆಶ್ಚರ್ಯಪಟ್ಟರು. ಪುಸ್ತಕದ ಬದನೆಕಾಯಿಯಾಗಿರದೆ ಜೀವನಪ್ರೀತಿ ಇದ್ದು ಎಲ್ಲಾ ಚಟುವಟಿಕೆಗಳಲ್ಲಿ ಇರುವವರು ಸಹಾ rank ಪಡೆಯಬಹುದು ಎಂದು ಅವರಿಗಂದು ಮನದಟ್ಟಾಯಿತೇನೋ! ಗ್ರಹಿಕಾ ಮಟ್ಟ ಮತ್ತು ಗ್ರಹಣ ಶಕ್ತಿ ಎನ್ನುವುದು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ ಹಾಗೂ ಅದನ್ನು ವ್ಯಕ್ತ ಪಡಿಸುವ ರೀತಿಯೂ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ ಎನ್ನುವ ಸತ್ಯ ದರ್ಶನವನ್ನು ಪ್ರತಿ ಶಿಕ್ಷಕರು ಮಾಡಿಕೊಂಡರೆ ನಾವು ಮಕ್ಕಳೊಡನೆ ಹೇಗೆ ವ್ಯವಹರಿಸಬೇಕೆಂಬ ಸರಿಯಾದ ಅರಿವು ನಮ್ಮಲ್ಲಿ ಮೂಡುತ್ತದೆ ಎನ್ನುವುದು ನಿಜವಲ್ಲವೆ?


50. ಬಾಲ್ಯ - ನೆನಪುಗಳು.
ನಾನು ಸಣ್ಣವಳಿದ್ದಾಗಿನಿಂದಲೂ ಆಚೆಈಚೆಯ ಮನೆಗಳ ಮಕ್ಕಳ ಠೋಳಿಯೊಟ್ಟಿಗೇ ಬೆಳೆದವಳು. ಸಂಘ ಜೀವಿ😊 ನಮ್ಮ ಠೋಳಿಯಲ್ಲಿ ಹುಡುಗರ ಸಂಖ್ಯೆ ಜಾಸ್ತಿ ಇದ್ದ ಕಾರಣ ಆಡುತ್ತಿದ್ದದ್ದು ಬರೀ ಹುಡುಗರ ಆಟಗಳನ್ನು. ಆಗೆಲ್ಲ ನಾವು ಹೆಚ್ಚಾಗಿ ಆಡುತ್ತಿದ್ದ ಆಟ - ಚಿನ್ನಿದಾಂಡು, ಲಗೋರಿ, ಗೋಲಿ ಮತ್ತು ಮರಕೋತಿ. ಯಾವ ಆಟ ಆಡಿದರೂ ನನ್ನನ್ನು ಎಲ್ಲಾ ಸೇರಿ ಮಂಗ ಮಾಡಿ ಆಟದಿಂದ ಹೊರಗಿಡುತ್ತಿದ್ದರು. ನಾನೋ ಗಟ್ಟಿಗಿತ್ತಿ. ಹಾಗೆಲ್ಲ ಸಣ್ಣಪುಟ್ಟ ಮಂಗಾಟಕ್ಕೆಲ್ಲ ಜಗ್ಗುತ್ತಿರಲಿಲ್ಲ. ಹಠಮಾಡಿಯಾದರೂ ಆಟದೊಳಗೆ ವಾಪಾಸ್ ಸೇರುತ್ತಿದ್ದೆ. ಮರಕೋತಿ ಆಡುವಾಗ ಮರದ ಮೇಲಿನಿಂದ ಬಹಳಷ್ಟು ಸಲ ಬಿದ್ದದ್ದಿದೆ. ಗಾಯ ದೊಡ್ಡದಾಗಿದ್ದಾಗ ಮಾತ್ರ ಅದು ಅಮ್ಮನ ಗಮನಕ್ಕೆ ಬರುತ್ತಿತ್ತೇ ವಿನಃ ಉಳಿದಂತೆ ವಿಷಯ ಮುಚ್ಚಿ ಹೋಗಿ ಬಿಡುತ್ತಿತ್ತು.
ಮಳೆಗಾಲದಲ್ಲಿ ನಾವು ಆಡುತ್ತಿದ್ದ ಆಟ ಕಾಗದದ ದೋಣಿಯಾಟ. ಎರಡು ಮೂರು ರೀತಿಯ ದೋಣಿ ಮಾಡುತ್ತಿದ್ದದ್ದು ನೆನಪು - ಕತ್ತಿ ದೋಣಿ, ಸಣ್ಣ ದೋಣಿ, ದೊಡ್ಡ ದೋಣಿ, ಹಾಯಿ ದೋಣಿ.... ಹೀಗೆ ಏನೇನೋ ಮಾಡುತ್ತಿತ್ತು. ನಂತರ ಹತ್ತಿರದಲ್ಲಿರುವ ತೋಡಿನಲ್ಲಿ ದೋಣಿ ಬಿಡುವಾಟ. ಯಾರ ದೋಣಿ ಎಷ್ಟು ಬೇಗ ಎಷ್ಟು ದೂರ ಮುಳುಗದೆ ಹೋಗುತ್ತದಂತ ಸ್ಪರ್ಧೆ ಬೇರೆ. ಕೆಲವೊಮ್ಮೆ ದೋಣಿಗಳು ಡಿಕ್ಕಿ ಹೊಡೆದಾಗ ಅವುಗಳನ್ನು ಅನುಸರಿಸಿಕೊಂಡು ಬರುವ ನಾವುಗಳು ಜಗಳ ಮಾಡಿಕೊಂಡ ಪ್ರಸಂಗಗಳು ಹಲವಾರಿವೆ. ಕೆಲವೊಮ್ಮೆ ಮಾಡಿನ ನೀರು ಬಿದ್ದು ನೀರು ಹರಿಯುವ ಜಾಗದಲ್ಲಿ ಸಣ್ಣಸಣ್ಣ ದೋಣಿ ಬಿಟ್ಟು ಖುಷಿ ಪಟ್ಟದ್ದಿದೆ. ಈಗ ಅದೆಲ್ಲ ಎಣಿಸಿದರೆ ನಗು ಬರುತ್ತದೆ. ಆದರೆ ಆಗ ಆ ಕಾಗದದ ದೋಣಿಗಳು ನಮ್ಮ ಮುಂದೆ ಒಂದು ಹೊಸ ಪ್ರಪಂಚವನ್ನು ತೆರೆದಿಡುತ್ತಿದ್ದುದಂತೂ ನಿಜ.
ಎಷ್ಟೋ ಬಾರಿ ಆ ದೋಣಿಯೊಳಗೆ ಜೀವಂತ ಇರುವೆಗಳನ್ನು ಇಟ್ಟು ದೋಣಿ ಬಿಟ್ಟದ್ದಿದೆ. ಹಾಗಂತ ಇರುವೆಗಳನ್ನು ಸಾಯಲು ಬಿಡುತ್ತಿರಲಿಲ್ಲ. ಪ್ರಾಣಿ, ಕೀಟ, ಪಕ್ಷಿಗಳ ಬಗ್ಗೆ ನಮಗೆ ಕಾಳಜಿ ಇತ್ತು. ಆದರೂ ಕೀಟಲೆಗೆ ಮೆತ್ತಗೆ ಇರುವೆಗಳನ್ನು ಹಿಡಿದು ದೋಣಿಯೊಳಗೆ ಬಿಡುತ್ತಿದ್ದೆವಷ್ಟೇ!
ಮಳೆಗಾಲದ ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ವಿಶೇಷ ಜಂತುಗಳಾದ ನರ್ಕುಳ(ಎರೆಹುಳ) ಮತ್ತು ಚಾರಟೆ(centipede). ನಮಗೆಲ್ಲ ನರ್ಕುಳ ಅಂದರೆ ಅಷ್ಟಕ್ಕಷ್ಟೇ. ಆದರೆ ಚಾರಟೆ ಮುಟ್ಟಿ ಅದು ಚಕ್ಕುಲಿ ತರ ಸುತ್ತಿಕೊಳ್ಳುವುದನ್ನು ನೋಡಲು ಖುಷಿ. ದೊಡ್ಡ ಚಾರಟೆಯನ್ನು ಕೈಯಲ್ಲಿ ಹಿಡಿದವರನ್ನು ಮಹಾ ಸಾಧಕರ ತರ ನಾವೆಲ್ಲ ನೋಡುತ್ತಿತ್ತು. ಹೀಗೆ ಕಾಗದದ ದೋಣಿ, ಈ ರೀತಿಯ ಕ್ರಿಮಿಕೀಟಗಳೆಲ್ಲ ನಮ್ಮ ಬಾಲ ಪ್ರಪಂಚದ ರೋಚಕತೆಯನ್ನು ಹೆಚ್ಚಿಸುತ್ತಾ ನಮ್ಮನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ವ್ಯಸ್ತವಾಗಿಟ್ಟು ನಮ್ಮ ಸಂತಸವನ್ನು ಹೆಚ್ಚಿಸುತ್ತಿದ್ದವು.

49. ನೆನಪುಗಳು - ಅನುಭವ 
ಮೂರ್ನಾಲ್ಕು ದಿನಗಳಿಂದ ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದೇ ಹದವಾದ ಸೋನೆಮಳೆ ಹೊಯ್ಯುತ್ತಿದೆ. ಹೊರಗೆ ಬರುತ್ತಿರುವ ಮಳೆಯಂತೆ ಹಳೆ ನೆನಪುಗಳು ಕೂಡಾ ನನ್ನೊಳಗೆ ಮಳೆಗರೆಯತೊಡಗಿದ್ದಾವೆ.
1988ರಲ್ಲಿ ನಾನು BEd ಮುಗಿಸಿದ ತಕ್ಷಣ ಅದೇ ಕಾಲೇಜಿನ ಡೆಮಾನ್ಸ್ಟ್ರೇಶನ್ ಸ್ಕೂಲ್ ನಲ್ಲಿ ನನಗೆ ಕೆಲಸ ಸಿಕ್ಕಿತು. ಆದರದು morning school. ಬೆಳಿಗ್ಗೆ 7.45 ರಿಂದ 1.30ರವರೆಗೆ ಶಾಲೆ. ನಾನಾದರೋ ಬೆಳಿಗ್ಗೆ ಆರು ಕಾಲಿಗೆ ಮನೆಬಿಟ್ಟು ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಉಪ್ಪಿನಕೋಟೆಗೆ ನಡೆದುಕೊಂಡು ಹೋಗಿ ರೂಟ್ ಬಸ್ಸು ಹತ್ತಿ ಕಲ್ಸಂಕದಲ್ಲಿ ಇಳಿದು ಸಿಟಿ ಬಸ್ಸಲ್ಲಿ ಹೋಗಿ ಶಾರದಾ ಕಲ್ಯಾಣ ಮಂಟಪ ಸ್ಟಾಪ್ ನಲ್ಲಿ ಇಳಿದು ನಡೆದು ಶಾಲೆ ತಲುಪುವಾಗ 7.30ರ ಆಸುಪಾಸು ಆಗುತ್ತಿತ್ತು. ಸ್ವಲ್ಪ ತ್ರಾಸದಾಯಕ ಪಯಣವೇ ಅದು. ಆ ವರ್ಷ ಮಳೆಯ ವೈಭವ ಹೇಳಲಸದಳ! ಹುಚ್ಚು ಮಳೆ. ನಾನು ಆರು ಕಾಲಕ್ಕೆ ಮನೆ ಬಿಡುವುದು ಗೊತ್ತಾದಂತೆ ಮಳೆ ರೊಯ್ಯನೆ ಹೊಯ್ಯಲಿಕ್ಕೆ ಶುರುಮಾಡುತ್ತಿತ್ತು. ಉಪ್ಪಿನಕೋಟೆ ಮುಟ್ಟುವಾಗ ಮುಕ್ಕಾಲು ಮೈ ಒದ್ದೆಯಾಗುತ್ತಿತ್ತು. ಅದೇ ಒದ್ದೆ ಬಟ್ಟೆಯಲ್ಲಿಯೇ ಪಯಣಿಸಿ, ಶಾಲೆಯಲ್ಲೂ ಅದೇ ಅರ್ಧಂಬರ್ಧ ಒದ್ದೆ ಬಟ್ಟೆಯಲ್ಲೇ ಪಾಠ ಮಾಡಿ, ಪುನಃ ಮಧ್ಯಾಹ್ನ ಉಡುಪಿ ಮೇನ್ ಬಸ್ ಸ್ಟ್ಯಾಂಡ್ ಗೆ ಬಂದು ಸಿಪಿಸಿ ಬಸ್ಸು ಹತ್ತಿ ಉಪ್ಪಿನಕೋಟೆಯಲ್ಲಿ ಇಳಿದು ಮಳೆಯಲ್ಲಿ ಕೊಡೆ ಹಿಡಿದು ಮನೆ ತಲುಪುವಾಗ ಗಂಟೆ ಮೂರೂವರೆಯಾಗಿರುತ್ತಿತ್ತು. ನಂತರ ಬೆಚ್ಚಗಿನ ಬಟ್ಟೆ ಹಾಕಿಕೊಂಡು ಊಟ ಮುಗಿಸುವಾಗ ಗಂಟೆ ನಾಲ್ಕಾಗಿರುತ್ತಿತ್ತು. ಆ ವರ್ಷ ನನ್ನ ದುರಾದೃಷ್ಟಕ್ಕೋ ಏನೋ ಮಳೆ ಜಾಸ್ತಿಯಾಗಿ ಸುಮಾರು ಅಕ್ಟೋಬರ್ ತಿಂಗಳು ಮುಗಿಯುವ ತನಕವೂ ಮಳೆ ಹೊಡೆದಿತ್ತು. ಮೂವತ್ತೆರಡು ವರ್ಷಗಳ ಹಿಂದಿನ ಅನುಭವ ಇಂದೋ ನಿನ್ನೆಯದೋ ಅಂತ ಅನಿಸುತ್ತಿದೆ. ನನಗೆ ಕೆಲಸ ಮಾಡುವ ಅನಿವಾರ್ಯತೆ ಇಲ್ಲದಿದ್ದರೂ ನಾನು ಊಟ ತಿಂಡಿ ಹೊತ್ತಿಗೆ ಸರಿಯಾಗಿ ಸಿಗದೆ ಅಷ್ಟು ಒದ್ದಾಡಿ ಕೆಲಸಕ್ಕೆ ಹೋದ ಪರಿ ಆಶ್ಚರ್ಯಕರ! ಪ್ರಾಯಶಃ ಅದು ಕೆಲಸದ ಬಗ್ಗೆ ನನಗಿದ್ದ ಬಧ್ಧತೆಯಾಗಿತ್ತೇನೋ?
ಒಮ್ಮೆ ಹೀಗೆಯೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ನಾನು ಬಸ್ಸಿನ ಕಿಟಕಿ ಬಳಿ ಕಣ್ಣು ಮುಚ್ಚಿ ಕುಳಿತಿದ್ದೆ. ಟೈರ್ ನ ಹಿಂದಿನ ಸೀಟ್. ಮುಖಕ್ಕೆ ತುಂತುರು ಹನಿ ಬೀಳುತ್ತಿತ್ತು. ಮಳೆಯ ಹನಿ ಮುಖದ ಮೇಲೆ ಹನಿಯುತ್ತಿದೆ ಎಂದು ಅದರ ಸುಖವನ್ನು ಕಣ್ಣು ಮುಚ್ಚಿ ಅನುಭವಿಸುತ್ತಿದ್ದೆ. ನಂತರ ಕಣ್ಣು ಬಿಟ್ಟಾಗ ನನ್ನ ಮುಖಕ್ಕೆ ಹನಿದಿದ್ದೆಲ್ಲ ಟೈರ್ ನಿಂದ ಹಾರಿದ ರಸ್ತೆಯ ಪವಿತ್ರ ನೀರು ಅಂತ ಗೊತ್ತಾದಾಗ ನನ್ನ ಕಥೆ ಹೈಲಾಗಿತ್ತು!😊
ಸಣ್ಣವಳಿದ್ದಾಗ ಶಾಲೆಗೆ ಮಳೆಗಾಲದಲ್ಲಿ ನೆನೆಯುತ್ತಾ(ಕೈಯಲ್ಲಿ ಕೊಡೆ ಇದ್ದರೂ) ನಡೆದುಕೊಂಡು ಹೋಗುವಾಗ ಆಗುತ್ತಿದ್ದ ಗಮ್ಮತ್ತೇ ಬೇರೆ. ಮಳೆಯಲ್ಲಿ ನೆನೆದು ಜ್ವರ ಗಿರ ಬಂದ ನೆನಪೇ ಇಲ್ಲ. ಜೋರು ಗಾಳಿಮಳೆ ಬರುವಾಗ ನಮ್ಮ ಸ್ಕರ್ಟ್ ಹಾರುವುದು, ಕೊಡೆ ಮಡಚಿ ಹೋಗುವುದು, ಕೊಡೆ ಕಡ್ಡಿ ತುಂಡಾಗುವುದು... ಇವೆಲ್ಲ ನಿತ್ಯ ನಿರಂತರ ಅನುಭವಗಳಾಗಿದ್ದವು. ಕೊಡೆ ಹಾಳಾದರೆ ಅದನ್ನೇ ರಿಪೇರಿ ಮಾಡಿಸಿ ಉಪಯೋಗಿಸಬೇಕಿತ್ತೇ ವಿನಃ ಹೊಸ ಕೊಡೆ ತೆಗೆಸಿಕೊಡುತ್ತಿರಲಿಲ್ಲ. ಸಣ್ಣಪುಟ್ಟ ರಿಪೇರಿಯನ್ನು ನಾವೇ ಮಾಡಿಕೊಳ್ಳುವಷ್ಟು ಸಾಮರ್ಥ್ಯ ನಮ್ಮ ಕಾಲದವರಿಗಿತ್ತು. ಹೀಗೆ ಮಳೆಗಾಲ ಆಂದರೆ ಸಾಲುಸಾಲಾಗಿ ಬರುವ ನೆನಪುಗಳ ಬುತ್ತಿ.


48. ಅನುಭವ - ಗಾಜನೂರು ಶಾಲೆ 


ಗಾಜನೂರಿನ ನಮ್ಮ ಕ್ವಾರ್ಟರ್ಸ್ ಅಂದರೆ ಒಂದು ರೀತಿಯ ಜನರ ಸಂತೆ ಇದ್ದ ಹಾಗಿತ್ತು. ಮನೆಯಲ್ಲಿ ಜನ ತಪ್ಪಿದ್ದೇ ಇಲ್ಲ. ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಕಾರ್ಯಗಾರ ನಡೆದ ಎರಡು ವರ್ಷಗಳಂತೂ ನನಗೆ ನಮ್ಮ ಮನೆಯೇ ಒಂದು ಚೌಕಿಮನೆಯಾದ ಅನುಭವ. ಅಷ್ಟು ಜನ, ಅಷ್ಟು ಗದ್ದಲ. ಭಾಗವತರಂತೂ ದೇವರಂತಹ ಮನುಷ್ಯ. ಅವರು ನಮ್ಮೊಡನೆ ಒಂದೆರಡು ವರ್ಷ ಇದ್ದ ಬಗ್ಗೆ ನನಗೆ ತುಂಬಾ ಖುಷಿ ಇದೆ. ಅಂತಹವರ ಒಡನಾಟ, ನಮ್ಮ ಕಲಾಸಕ್ತಿ, ನವೋದಯದಲ್ಲಿ ಶ್ರೀ ಜತಿನ್ ದಾಸ್ ರವರ ನಿರ್ದೇಶನಲ್ಲಿ ನಡೆದ ಹದಿನೈದು ದಿನಗಳ ರಾಷ್ಟ್ರೀಯ ಮಟ್ಟದ ಕಲಾ ಕಾರ್ಯಗಾರ, ಶಿಕ್ಷಣರಂಗದ ಚಿಂತಕರ ಸ್ನೇಹ...ಎಲ್ಲವೂ ನಮ್ಮೊಳಗೆ ಶಿಕ್ಷಣದ ಬಗೆಗೆ ವಿನೂತನ ವಿಚಾರಗಳ ಹೊಳಹನ್ನು ಹುಟ್ಟಿಸಿದ್ದವು. ಪಠ್ಯ ಮತ್ತು ಪಠ್ಯೇತರ(?) ಚಟುವಟಿಕೆಗಳ ಮಿಳಿತ ಮಗುವಿನ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ನಾನು, ರವಿ, ಅಶೋಕ್, ರೇಖಾ ಎಲ್ಲಾ ಆಗಾಗ ಕೂತು ಹರಟುವಾಗ ವಿಚಾರ ಮಾಡುತ್ತಿದ್ದೆವು. ಅದಕ್ಕೆ ಸರಿಯಾಗಿ ನಮ್ಮ ಇಬ್ಬರು ಮಕ್ಕಳು ಶಾಲೆಯ ಬಗ್ಗೆ ವಿಮುಖತೆ ತೋರಿಸುತ್ತಿದ್ದುದು ಕೂಡಾ ಶಾಲಾ ಕಲಿಕಾ ಕ್ರಮ ಮತ್ತು ಕಲಿಕಾ ವಾತಾವರಣದ ಬಗೆಗಿನ ನಮ್ಮ ಚಿಂತನೆಯನ್ನು ತ್ವರಿತಗೊಳಿಸಿತು ಅಂದರೆ ಸುಳ್ಳಲ್ಲ. ವಿಜೇತ ಸುಮಾರು ಐದನೆ ತರಗತಿಯ ತನಕ ಅವನು ಹೋಗುತ್ತಿದ್ದ ಶಾಲೆಗೆ 'ಅತಿಥಿ' ವಿದ್ಯಾರ್ಥಿಯಾಗಿದ್ದ. ವಿಭಾನನ್ನು ಶಾಲೆಯ ಮೆಟ್ಟಿಲಿನ ತನಕವೂ ಕರೆದೊಯ್ಯಲಾಗುತ್ತಿರಲಿಲ್ಲ. ಆದರೆ ಶಾಲೆಗೆ ಹೋಗದಿದ್ದರೂ ಇಬ್ಬರಿಗೂ ಕಲಿಕಾ ಸಮಸ್ಯೆ ಇರಲಿಲ್ಲ. ಶಾಲೆಗೆ ಹೋಗದೆಯು ಕೂಡಾ ಅವರಿಬ್ಬರ ಕಲಿಕಾ ಸಾಮರ್ಥ್ಯ ಅತ್ಯುತ್ಕೃಷ್ಟವಾಗಿತ್ತು. ಹೀಗಾಗಿ ಶಾಲೆ ಹೇಗಿರಬೇಕು, ಏನನ್ನು ಕೊಡಬೇಕು, ಎಂತಹ ಪರಿಸರವನ್ನು ನಿರ್ಮಿಸಬೇಕು... ಎನ್ನುವ ವಿಷಯಗಳು ನಮ್ಮನ್ನು ಎಡೆಬಿಡದೆ ಕಾಡತೊಡಗಿದವು. ಈ ಬಗ್ಗೆ ನಮ್ಮ ಸತತ ಮಾತುಕತೆಗಳು, ಶಿಕ್ಷಣ ರಂಗದ ಸಂಪನ್ಮೂಲ ವ್ಯಕ್ತಿಗಳೊಡನಾಟ, ತೊತ್ತೋಚಾನ್ ಹಾಗೂ ಹಗಲುಗನಸಿನಂತಹ ಶಿಕ್ಷಣ ಸಂಬಂಧಿ ಪುಸ್ತಕಗಳ ಓದು, ಪರ್ಯಾಯ ಶಿಕ್ಷಣ ಕ್ರಮವನ್ನನುಸರಿಸುತ್ತಿರುವ ಶಾಲೆಗಳ ಭೇಟಿ... ಇವೆಲ್ಲವೂ ಮಕ್ಕಳು ಆನಂದದಿಂದ ಕಲಿಯುವಂತಹ ಒಂದು ಸಕಾರಾತ್ಮಕ ಪರಿಸರ ಹೊಂದಿರುವ ಶಾಲೆಯ ಪರಿಕಲ್ಪನೆಗೆ ಮೂರ್ತ ರೂಪು ಕೊಟ್ಟವು ಅಂದರೆ ಸುಳ್ಳಲ್ಲ. ನವೋದಯದ ನಮ್ಮ 24/7 ಕೆಲಸ, ಮಕ್ಕಳೊಟ್ಟಿಗಿನ ನಿರಂತರ ಒಡನಾಟ, ಸೃಜನಶೀಲತೆಯ ಬಗ್ಗೆ ನಮಗಿದ್ದ ಒಲವು, ಮಕ್ಕಳ ಕಲಿಕೆಯನ್ನು ಖುಷಿಯ ಪ್ರಕ್ರಿಯೆಯನ್ನಾಗಿಸಬೇಕೆಂಬ ನಮ್ಮ ಹಂಬಲ ಹೊಂಗಿರಣದ ಹುಟ್ಟಿಗೆ ಕಾರಣವಾಯಿತು. ಕಳೆದ ಹದಿನೇಳು ವರುಷಗಳಿಂದ ಹೊಂಗಿರಣ ಅಂತಹ ವಾತಾವರಣ ನಿರ್ಮಾಣದಲ್ಲಿ ವ್ಯಸ್ತವಾಗಿದೆ ಹಾಗೂ ತನ್ನ ಮೂಲ ಪರಿಕಲ್ಪನೆಯನ್ನು ಬಹಳಷ್ಟು ಮಟ್ಟಿಗೆ ಸಾಕಾರಗೊಳಿಸಿದೆ ಅಂದರೆ ತಪ್ಪಲ್ಲ. ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಹೀಗಾಗಿ ಈ ಬಗೆಗಿನ ಕಾರ್ಯ ಯೋಜನೆಗಳು ಕೂಡಾ ನಿತ್ಯ ನವೀನ. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳ ಅಗತ್ಯಕ್ಕೆ ಸ್ಪಂದಿಸುತ್ತಾ ಸಾಗುತ್ತಿರುವ ಹೊಂಗಿರಣದ ಮುಂದಿರುವ ಸವಾಲುಗಳು ಹಲವಾರು. ಹೊಂಗಿರಣ ಅದಕ್ಕೆ ಉತ್ತರ ಕಂಡುಕೊಳ್ಳುತ್ತಾ ಸಾಗುತ್ತಾ ಇದೆ......

47. ಪರಿಸರ - ಅನುಭವ 
ನಿನ್ನೆಯಿಂದ ಮಳೆಗಾಲದ ಛಾಯೆ ಮೂಡಲು ಪ್ರಾರಂಭವಾಗಿದೆ. ಸಣ್ಣ ಸೋನೆಮಳೆ ಬರುತ್ತಿದೆ. ಆ ಮಳೆ ಹನಿ ಮಾಡಿನ ಮೇಲೆ ಬಿದ್ದಾಗ ಬರುವ ಒಂದು ರೀತಿಯ ಕಣಕಣ ಶಬ್ದ ಹಾಗೂ ಮರದ ಎಲೆಗಳ ಮೇಲೆ ಬಿದ್ದಾಗ ಬರುವ ಇನ್ನೊಂದು ರೀತಿಯ ಪರಪರ ದನಿ ಮನಸ್ಸಿಗೆ ಮುದ ನೀಡುತ್ತದೆ. ಒಂದೇ ಮಳೆಯ ದನಿಯ ಈ ವಿಭಿನ್ನತೆ ಗಮನವಿಟ್ಟು ಆಲಿಸಿದಾಗ ಮಾತ್ರ ಅನುಭವಕ್ಕೆ ಬರುವಂತಹುದು. ಇಂತಹ ಮಳೆಯ ಹನಿಗಳ ಇನಿದನಿಯನ್ನು ಮುಸ್ಸಂಜೆಯ ಕತ್ತಲೂ ಅಲ್ಲದ ಬೆಳಕೂ ಇಲ್ಲದ ಹೊತ್ತಿನಲ್ಲಿ ನೋಡುವಾಗ, ಆಲಿಸುವಾಗ ಗಂಧರ್ವ ಲೋಕದಲ್ಲಿದ್ದೇವೋ ಅಂತನಿಸುವ ಅನುಭವ! ಒಟ್ಟಿನಲ್ಲಿ ಈ ಹದವಾದ ಮಳೆ ಬರುತ್ತಿದ್ದರೆ ಬೇಸಿಗೆಯ ಉರಿ ಮರೆತು ಮಳೆಯ ತಂಪಿಗೆ ಮೈ ಒಡ್ಡಿಕೊಳ್ಳುವ ಕಾತರ.
ನಮ್ಮ ಉಡುಪಿಯ ಕಡೆ ಮಳೆ ಅಂದರೆ ರಭಸವಾದ ಜೋರು ಮಳೆ ಅಷ್ಟೇ. ಆದರೆ ಸೋನೆ ಮಳೆಯ ಅನುಭವ ಪಡೆಯಲು ಮಲೆನಾಡಿಗೇ ಬರಬೇಕು. ಒಂದೇ ಹದದಲ್ಲಿ ಬೀಳುವ ಮಳೆಯಲ್ಲಿ ದಟ್ಟವಾದ ಕಾಡು ಅಥವಾ ಅಡಿಕೆ ತೋಟದ ಬಳಿ ಇರುವ ಒಂಟಿ ಮನೆಯ ಕಟ್ಟಿಗೆ ಒಲೆಯ ಬುಡದಲ್ಲಿ ಚಳಿ ಕಾಸುತ್ತಾ, ಹಪ್ಪಳ ಸುಟ್ಟುಕೊಂಡು ತಿನ್ನುತ್ತಾ, ಬಿಸಿ ಬಿಸಿ ಚಾ ಕುಡಿಯುತ್ತಾ ಆಲಸ್ಯತನದಲ್ಲಿ ಕೂರುವ ಸುಖವೇ ಬೇರೆ! ಆ ಸುಖದ ಅನುಭವ ಪಡೆಯುವುದಕ್ಕಾದರೂ ಮಳೆಗಾಲದಲ್ಲಿ ಮಲೆನಾಡಿಗೆ ಹೋಗಿ ಒಂದೆರಡು ದಿನಗಳಾದರೂ ಇರಲೇ ಬೇಕು. ಇಃತಹ ಪ್ರಕೃತಿ ಸಹಜ ಅನುಭವಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಾಗ ಒಂದು ವಿಚಿತ್ರ ಅನುಭೂತಿ ಸಿಗುವುದಂತೂ ನಿಜ. ಪ್ರಾಯಶಃ ಹುಡುಕುತ್ತಾ ಹೋದರೆ ನೂರಾರು ಪ್ರಕೃತಿ ಸಹಜ ಅನುಭವಗಳ ಭಂಡಾರವೇ ನಮಗೆ ಸಿಗಬಹುದು. ಆದರೆ ಅದನ್ನು ಕಾಣುವ ಕಣ್ಣು ಮತ್ತು ಗ್ರಹಿಸುವ ಮನಸ್ಸು ಇರಬೇಕಷ್ಟೇ!


46. ಅನುಭವ - ನೆನಪುಗಳು 
ನಿನ್ನೆಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪಿ. ಶೇಷಾದ್ರಿಯವರು ಬರೆದ "ಕೊರೋನ ಹಿನ್ನೆಲೆಯಲ್ಲಿ ಒಂದು ಧ್ಯಾನ" ಎನ್ನುವ ಲೇಖನವನ್ನು ಓದಿದೆ. ಅದರಲ್ಲಿ ಅವರು ತಾವು ಆನ್ಲೈನ್ನಲ್ಲಿ attend ಆದ Guided Meditation ಬಗ್ಗೆ ಬರೆದಿದ್ದಾರೆ. ಗುರುವಿನ ಧ್ವನಿ ಕೇಳುತ್ತಾ ಅವರ ಆದೇಶದ ಪ್ರಕಾರ ಧ್ಯಾನ ಮಾಡುವಾಗ ಹಿಡಿತದಲ್ಲಿರುವ ಮನಸ್ಸು ನಾವೇ ಕುಳಿತು ಧ್ಯಾನಿಸುವಾಗ ಮರ್ಕಟವಾಗುವ ಬಗ್ಗೆ ಬರೆದಿದ್ದಾರೆ. ಲೇಖನ ಚೆನ್ನಾಗಿದೆ. ಎಲ್ಲರ ಅನುಭವವನ್ನೇ ಚೆನ್ನಾಗಿ ಶಬ್ದ ರೂಪದಲ್ಲಿ ಇಳಿಸಿದ ಹಾಗಿದೆ.
ಅದನ್ನು ಓದಿದಾಗ ಅದು ನನ್ನ ಅನುಭವ ಕೂಡ ಅಂತ ನನಗೆ ಅನಿಸಿತು. ನಾನೂ ಕೂಡ ಬಹಳಷ್ಟು ಧ್ಯಾನ - ಯೋಗ - ಪ್ರಾಣಾಯಾಮ ಅಂತ ಸರ್ಕಸ್ ಮಾಡಿದ್ದೇನೆ, ಮಾಡುತ್ತಿದ್ದೇನೆ ಕೂಡ. ಯಾವುದೋ ಒಂದು ಸಿಧ್ಧ ವಾತಾವರಣದಲ್ಲಿ ಮನಸ್ಸು, ಯೋಚನೆಗಳು ಸ್ಥಿಮಿತಕ್ಕೆ ಬರುವ ಅನುಭವ ಕೂಡಾ ಪಡೆದಿದ್ದೇನೆ. ಅಂತಹ ಯೋಗ ಕ್ರಿಯೆಯ ದೀಕ್ಷೆ ಪಡೆದ ಕೆಲವು ತಿಂಗಳು ಮನಸ್ಸು ಉಲ್ಲಸಿತವಾಗಿರುವುದು, ಕಾರ್ಯಕ್ಷಮತೆ ಹೆಚ್ಚುವುದು, ಉದ್ವಿಗ್ನತೆ ಹತೋಟಿಯಲ್ಲಿರುವುದು.... ಈ ಎಲ್ಲಾ ವಿಷಯಗಳ ಅನುಭವ ನನಗಾಗಿದೆ. "ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು" ಎನ್ನುವ ಗಾದೆಯಂತೆ ಮನಸ್ಸು ಪುನಃ ಯಥಾ ಸ್ಥಿತಿಗೆ ಮರಳುವುದನ್ನು ಕೂಡಾ ಗಮನಿಸಿದ್ದೇನೆ.

ನನ್ನ ಕೆಲಸದ ಒತ್ತಡವನ್ನು ಸಮತೋಲಿತವಾಗಿ ನಿರ್ವಹಿಸಲು, ಮನಸ್ಸಿನ ಏಕಾಗ್ರತೆ ಪಡೆಯಲು, ಏನಾದರೂ ಅಲೌಕಿಕ ಅನುಭವವಾಗಬಹುದೇನೋ ಎನ್ನುವ ನಿರೀಕ್ಷೆಯಿಂದ ನಾನು ನನ್ನನ್ನು ಇಂತಹ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು ಅದರ ಅಲ್ಪ ಸ್ವಲ್ಪ ಪ್ರಯೋಜನ ಪಡೆದದ್ದು ನಿಜ. ಆದರೆ ಅದರ ನಿರಂತರ ಅಭ್ಯಾಸದ ಕೊರತೆ, ಕೆಲಸದ ಒತ್ತಡ, ಧ್ಯಾನದ ಪ್ರಕ್ರಿಯೆಯಲ್ಲಿ ಇರುವ ಅರೆಬರೆ ನಂಬಿಕೆಯಿಂದಾಗಿ ನಾನ್ಯಾವತ್ತೂ ಅದರ ಪೂರ್ಣ ಪ್ರಯೋಜನ ಪಡೆಯಲಾಗಲೇ ಇಲ್ಲ ಅನ್ನುವ ಬೇಸರ ನನ್ನಲ್ಲಿರುವುದಂತೂ ನಿಜ. ಪ್ರಾಯಶಃ ಧ್ಯಾನದ ಪೂರ್ಣ ಪ್ರಯೋಜನ ಪಡೆಯಲು, ಅದರ ಸತ್ಯ ಸಾಕ್ಷಾತ್ಕಾರವಾಗಲು ನನ್ನ ಸಂಪೂರ್ಣ ಮಾಗುವಿಕೆಗಾಗಿ ನಾನು ಕಾಯಬೇಕೇನೊ😌?


45. ನೆನಪುಗಳು - ಹೊಂಗಿರಣ 
ಇಸವಿ 2003. ನಾವು ಅಮಟೆಕೊಪ್ಪದಲ್ಲಿ ಶಾಲೆಗಾಗಿ ಕಟ್ಟಡ ತಲಾಶ್ ಮಾಡುತ್ತಿದ್ದ ಸಮಯ. ಮೊದಲೇ ಬೈಪಾಸ್ ರೋಡ್. ಕಟ್ಟಡಗಳೇನು ನರಪಿಳ್ಳೆಯೂ ಇರದ ಜಾಗವದು. ಆಗ ಹರುಡಿಕೆಯಿಂದ ಹೊನ್ನೆಸರದ ನಡುವಣ ಸುಮಾರು ನಾಲ್ಕು ಕಿಮೀ ವ್ಯಾಪ್ತಿಯ ಆ ಬೈಪಾಸ್ ರಸ್ತೆಯ
ಪಕ್ಕದಲ್ಲಿದ್ದ ಏಕೈಕ ದೊಡ್ಡ ಕಟ್ಟಡವೆಂದರೆ ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿ. ಉಳಿದಂತೆ ರಸ್ತೆಯ ಎರಡೂ ಪಕ್ಕದಲ್ಲಿ ನೈಸರ್ಗಿಕ ಕಾಡು ಅಥವಾ ಅಕೇಶಿಯ ವನಗಳಿದ್ದವು. ಪುಣ್ಯಕ್ಕೆ ಕಾಕಾಲ್ ಫ್ಯಾಕ್ಟರಿಯ ಹಿಂಭಾಗದಲ್ಲಿ ಒಂದು 50::30ರ ಅಳತೆಯ ಗೋಡೌನ್ ಇತ್ತು. ಅದರ ಮಾಲಿಕರಾದ ಶ್ರೀ ಗಣೇಶ್ ಕಾಕಾಲ್ ರವರು ಕಟ್ಟಡವನ್ನು ಬಾಡಿಗೆಗೆ ಕೊಡಲೊಪ್ಪಿದಾಗ ನಮಗೆ ಹೋದ ಜೀವ ವಾಪಾಸು ಬಂದ ಹಾಗೆ ಆಗಿತ್ತು. ನಮ್ಮ ಉಳಿಕೆಗೆ ರಸ್ತೆಯ ಮತ್ತೊಂದು ಪಕ್ಕದಲ್ಲಿದ್ದ ಪ್ರಸನ್ನನವರ ಔಟ್ ಹೌಸ್ನಲ್ಲಿ ವ್ಯವಸ್ಥೆಯಾಯಿತು..
ಆ ಗೋಡೌನ್ ನ ಎಂಟ್ರಿಯಲ್ಲಿ ಒಂದು ಷಟ್ಟರ್ ಇತ್ತು. ಅದನ್ನೆತ್ತಿ ಒಳಗೆ ಹೋಗುತ್ತಿದ್ದಂತೆಯೆ ಎಡಭಾಗದಲ್ಲಿ ಹದಿನೈದು ಹತ್ತರ ಅಳತೆಯ ಒಂದು ಆಫೀಸ್ ಕೋಣೆ ಇತ್ತು. ಬಲಭಾಗದಲ್ಲಿ ಒಳಹೋಗಲು ಒಂದು ದೊಡ್ಡ ಓಪನಿಂಗ್ ಇತ್ತು. ನಂತರದಲ್ಲಿ 15:30ರ ಅಳತೆಯ ಎರಡು ಹಾಲ್ ಗಳು plywoodನಿಂದ ಬೈಫರ್ಕೇಟ್ ಮಾಡಿದ್ದು ಇದ್ದವು. ನಂತರ ಹಿಂದಿನ ಬಯಲು ಜಾಗಕ್ಕೆ ಒಂದು ಬಾಗಿಲಿತ್ತು. ನಾವು ಆ ಬಾಗಿಲನ್ನು back opening ಆಗಿ ಇಟ್ಟುಕೊಂಡು ಕಟ್ಟಡಕ್ಕೆ ತಾಗಿಕೊಂಡು ಅಡಕೆ ಅಡ್ಡೆ, ಅಡಕೆ ಸೋಗೆ ಬಳಸಿ 15:30ರ extension ತಗೊಂಡೆವು. ಇವಿಷ್ಟು ನಮ್ಮ ಹೊಂಗಿರಣದ ಪ್ರಾರಂಭಿಕ ಬಾಡಿಗೆ ಕಟ್ಟಡದ ವಿವರಣೆ.

ಕಟ್ಟಡದ ಎದುರು ಸುಮಾರು ನೂರಡಿಯ ಖಾಲಿ ಜಾಗವಿತ್ತು. ಅದನ್ನು ಮಕ್ಕಳ ಆಟಕ್ಕೆ ಹಾಗೂ ಚಟುವಟಿಕೆಗಳಿಗೆ ಬಳಸುತ್ತಿತ್ತು. ಅಂತಹ ಪುಟ್ಟ ಜಾಗದಲ್ಲಿ ನಾವು ನಡೆಸಿದ ಶೈಕ್ಷಣಿಕ ಪ್ರಯೋಗಗಳು ಹತ್ತು ಹಲವಾರು. ನಮ್ಮ ಪ್ರಯತ್ನಗಳಿಗೆ ಆ ಪುಟ್ಟ ಸ್ಥಳ ಯಾವುದೇ ರೀತಿಯ ತಡೆಯಾಗಲೇ ಇಲ್ಲ. ಇದ್ದ 47 ಮಕ್ಕಳಿಗೆ ಅಲ್ಲಿ ಕಥೆ ಹೇಳುವ ಕಾರ್ಯಗಾರಗಳಾದವು, ರಂಗ ಚಟುವಟಿಕೆಗಳು ನಡೆದವು, ನೈಸರ್ಗಿಕ ಬಣ್ಣ ಬಳಸಿ ಮಾಡುವ ಹಸೆ ಚಿತ್ರದ ಕಲಿಯುವಿಕೆ ನಡೆಯಿತು, ಶಿಕ್ಷಕರಿಗೆ ಹೊಸ ಬೋಧನಾ ಕ್ರಮದ ಮೇಲೆ ಹತ್ತು ಹಲವಾರು ಕಾರ್ಯಗಾರಗಳಾದವು. ಹೀಗೆ ವರ್ಷವಿಡೀ ಕ್ರಮಬದ್ಧವಾಗಿ ಹಲವಾರು ಕಲಿಕಾ ಚಟುವಟಿಕೆಗಳು ನಡೆದವು. ಅಲ್ಲದೇ ಮಳೆಯ ಆತಂಕದ ನಡುವೆಯೇ ನಮ್ಮ ಪ್ರಥಮ ವಾರ್ಷಿಕೋತ್ಸವ ಕೂಡಾ ಯಶಸ್ವಿಯಾಗಿ ನಡೆಯಿತು. ಇಡೀ ವರ್ಷ ನಡೆಸಿದ ವೈವಿಧ್ಯಮಯ ಪ್ರಯೋಗ, ಪ್ರಯತ್ನಗಳಿಗೆ ಆ ಗೋಡೌನ್ ಸಾಕ್ಷಿಯಾಯಿತೆಂದರೆ ಆಶ್ಚರ್ಯ ವಾಗುತ್ತದೆ. ನಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಲು ಸ್ಥಳ ಒಂದು hurdle ಆಗಲೇ ಇಲ್ಲ. ಮಾಡುವ ಮನಸ್ಸಿದ್ದರೆ ಸ್ಥಳ ಒಂದು ಅಡಚಣೆಯಾಗುವುದಿಲ್ಲ ಎನ್ನುವುದನ್ನು ನಮ್ಮ ಪ್ರಥಮ ವರ್ಷದ ಯಶಸ್ವಿ ಪ್ರಯೋಗಗಳು ನಿರೂಪಿಸಿ ನಮ್ಮ ಎರಡನೇ ವರ್ಷದ ಪ್ರಾರಂಭಕ್ಕೆ ಉತ್ತಮ ಅಡಿಪಾಯ ಹಾಕಿದವೆಂದರೆ ಸುಳ್ಳಲ್ಲ. A good beginning is most important part of any venture ಅಂತ ಒಂದು quote ಇದೆ. ಪ್ರಾಯಶಃ ಅಂತಹ ಒಂದು good beginningಗೆ ಆ ಗೋಡೌನ್ ನಾಂದಿ ಹಾಡಿತೆಂದರೆ ಸುಳ್ಳಲ್ಲ.


44. ಪರಿಸರ - ಹಣ್ಣುಗಳು 
ಬೇಸಿಗೆ ಕಾಲದಲ್ಲಿ ವಿವಿಧ ರೀತಿಯ ಕಾಡುಹಣ್ಣುಗಳದ್ದೇ ರಾಜ್ಯ. ಈ ಸಲ ಇನ್ನೂ ಅಷ್ಟೊಂದು ಪ್ರಮಾಣದಲ್ಲಿ ಹಣ್ಣುಗಳು ಕಾಣಿಸಿಲ್ಲ.
ನಾನು ಸಾಲಿಕೇರಿಯಲ್ಲಿದ್ದಾಗ ಈ ಸಮಯದಲ್ಲಿ ಕಾಣಿಸುತ್ತಿದ್ದ ಕಾಡು ಹಣ್ಣುಗಳು - ಕರಂಡೆ/ಕವಳಿ , ಕಿಸ್ಕಾರ, ಸೂರಿಮುಳ್ಳಣ್ಣು/ಪರಗಿ, ರಂಜಲು, ನೇರಳೆ ಮತ್ತು ನಮ್ಮನಿಮ್ಮೆಲ್ಲರ ಮಾವು, ಗೇರು ಹಾಗೂ ಹಲಸು. ಹೆಬ್ಬಲಸಂತೂ ಬಹಳ ರುಚಿ. ಒಂದು ರೀತಿಯ ಹುಳಿ ಸಿಹಿಯ ರುಚಿ. ಕರಂಡೆ ಹಣ್ಣಾದಾಗ ತಿಂದರೆ ಕರಿ ದ್ರಾಕ್ಷಿ ತಿಂದ ಅನುಭವ, ರಂಜಲು/ಬಾಗಳ ಹಣ್ಣು ತಿಂದರೆ ನಾಲಿಗೆ ದಪ್ಪವಾಗುವ ಅನುಭವ, ಕಿಸ್ಕಾರ ಹಣ್ಣು ತಿಂದರೆ ನಾಲಿಗೆ ಸಪ್ಪೆ ಅನಿಸುವ ಅನುಭವಗಳೆಲ್ಲ ಇನ್ನೂ ಹಸಿಹಸಿಯಾಗಿ ನನ್ನೊಳಗಿವೆ. ಕೆಲವನ್ನು ಮುಳ್ಳುಕಂಟಿಯಲ್ಲಿ ಕೊಯ್ದು ತಿನ್ನುವುದು ಮತ್ತೆ ಕೆಲವನ್ನು ಗದ್ದೆಬೈಲಿನಲ್ಲಿ ಆರಿಸಿ ತೊಳೆಯದೆ ತಿನ್ನುವುದು ಬಹಳ ಥ್ರಿಲ್ಲಿಂಗ್ ಎಕ್ಸ್ಪೀರಿಯನ್ಸ್! ಅವೆಲ್ಲ ಸುಲಭವಾಗಿ ಸಿಗುವ ಹಣ್ಣುಗಳಲ್ಲ. ತುಂಬಾ ರುಚಿಯೂ ಅಲ್ಲ. ಆದರೂ ಕಷ್ಟಪಟ್ಟು ಕೊಯ್ದು ತಿನ್ನುವುದು ಒಂದು ರೀತಿಯ ಆಟದ ಹಾಗೆ. ಸಿಗುವುದಿಲ್ಲ ಅನ್ನುವುದನ್ನು ಪಡೆಯುವುದರಲ್ಲಿ ಇರುವ ಖುಷಿ ಪಡಕೊಂಡವನೇ ಬಲ್ಲ.
ಸಾಗರದ ಕಡೆ ಇದರೊಡನೆ ಇನ್ನೂ ಹೆಚ್ಚಿನ ವೆರೈಟಿಯ ಕಾಡುಹಣ್ಣುಗಳು ಲಭ್ಯ - ಸಂಪಿಗೆ, ಮುಳ್ಳಣ್ಣು, ಹಲಗೆ .... ಇನ್ನೂ ಹಲವು. ಹೆಸರು ಸರಿಯಾಗಿ ಗೊತ್ತಿಲ್ಲ. ಸೊಪ್ಪಿನ ಬೆಟ್ಟದಲ್ಲಿ, ಕಾನಿನಲ್ಲಿ ಸರಿಯಾಗಿ ಹುಡುಕಿದರೆ ಈ ಹಣ್ಣುಗಳು ಲಭ್ಯ. ಮನೆಯ ಹಿರಿಯರ ಹತ್ರ ಬೈಸಿಕೊಂಡು ಹುಡುಕುವ ವ್ಯವಧಾನ ಇರಬೇಕಷ್ಟೆ😊

ದುಡ್ಡು ಕೊಟ್ಟರೆ ಸಿಗುವ ಹಣ್ಣುಗಳು ಇವಲ್ಲ. ಕಷ್ಟ ಪಟ್ಟು ಹುಡುಕಿದರೆ ಸಿಗುವ ಹಣ್ಣುಗಳಿವು. ಇವು ರುಚಿ ಅನಿಸುವುದೇ ಆ ಹುಡುಕುವ processನಿಂದಾಗಿ. ಹಣ್ಣುಗಳನ್ನು ಹುಡುಕುವ ಹೆಳೆಯಲ್ಲಿ ಗುಡ್ಡಬೆಟ್ಟ ಸುತ್ತುವ ಸುಖ ಯಾರಿಗುಂಟು ಯಾರಿಗಿಲ್ಲ? ಹೊರಹೋಗಿ ಮಸ್ಕರಿ ಮಾಡುವುದಕ್ಕೆ ಹಣ್ಣೊಂದು ಹೆಳೆ ಅಂದರೂ ತಪ್ಪಲ್ಲ. ಮನೆಗೆ ಹಿಂದಿರುಗುವಾಗ ಮೈ ಕೈ ಮೇಲೆಲ್ಲ ಮುಳ್ಳು ಕೊರೆದ ಸಣ್ಣ ಸಣ್ಣ ತರಿ ಗಾಯಗಳ ಉರಿ ಗೊತ್ತಾಗುತ್ತಿತ್ತು. ಅದಕ್ಕೊಂದಿಷ್ಟು ಬೈಸಿಕೊಂಡು ಅರಿಶಿನ ಎಣ್ಣೆ ಹಚ್ಚಿಕೊಂಡರೆ ಎರಡು ದಿನಗಳಲ್ಲಿ ಗಾಯ ಮಾಯ! ರಜೆಯ ಮಜಾವನ್ನು ಹೆಚ್ಚಿಸುತ್ತಿದ್ದ ಕಾಡು ಹಣ್ಣುಗಳಿವು, ಅವುಗಳೊಟ್ಟಿಗೆ ನೇಯ್ದ ನೆನಪುಗಳು ಸದಾ ಸವಿ.


43. ನೆನಪುಗಳು - ಅನುಭವ 
ನಿನ್ನೆ ನಮ್ಮ ಕಿಟ್ಟಣ್ಣ ನನ್ನ ಮಗಳಿಗಾಗಿ ಹಲಸಿನ ಹಣ್ಣು ತಂದು ಕೊಟ್ಟರು. ತಕ್ಷಣ ಅವಳದೊಂದು ಹಲಸಿನ ತಿಂಡಿಗಳ ಲಿಸ್ಟ್ ರೆಡಿಯಾಯಿತು - ಕಡುಬು/ಇಡ್ಲಿ, ದೋಸೆ, ಮುಳ್ಕ, ಕೇಸರಿಬಾತ್....
ಆಗ ನಮ್ಮಉಡುಪಿ ಕಡೆ ಮಾಡುತ್ತಿದ್ದ ಹಲಸಿನ ಗಿಡ್ಡೆ ನೆನಪಾಯಿತು. ಅಮ್ಮ ಹಲಸಿನ ಹಣ್ಣಿನ ಗಿಡ್ಡೆ ಮಾಡಿದಳೆಂದರೆ ನಮಗೆಲ್ಲ ಕೊಡುತ್ತಿದ್ದ ಮೈ ತುಂಬಾ ಕೆಲಸದ ನೆನಪಾಯ್ತು. ಕೈಗೆ ಎಣ್ಣೆ ಹಚ್ಚಿಕೊಂಡು ಹೆಚ್ಚಿದ ಹಲಸಿನ ಸೇಡೆಯನ್ನು ತಗೊಂಡು ಒಂದೊಂದಾಗಿ ಸೊಳೆ ತೆಗೆದು ಪಾತ್ರೆಗೆ ಹಾಕಬೇಕಿತ್ತು. ಪಾತ್ರೆಗೆ ಹೋದದ್ದಕ್ಕಿಂತ ಹೆಚ್ಚು ಸೊಳೆ ನಮ್ಮ ಹೊಟ್ಟೆಗೆ ಹೋಗುತ್ತಿತ್ತು😊 ಕೆಲವೊಮ್ಮೆ ಸೊಳೆಯ ಪ್ರಮಾಣ ಕಡಿಮೆಯಾಗಿ ಅಮ್ಮ ನೆನೆಸಿಟ್ಟ ಅಷ್ಟೂ ಅಕ್ಕಿಯನ್ನು ರುಬ್ಬಲಿಕ್ಕೆ ಹಾಕದ ಪ್ರಸಂಗ ಬರುತ್ತಿತ್ತು. ಗಿಡ್ಡೆಗೆ ರುಬ್ಬುವಾಗ ಅಮ್ಮ ಹಲಸಿನ ಸೊಳೆಯ ಜೊತೆಗೆ ತೆಂಗಿನಕಾಯಿ ಕೂಡ ಹಾಕುತ್ತಿದ್ದಳು. ರುಬ್ಬಿ ತಯಾರಾದ ಹಿಟ್ಟನ್ನು ತೇಗದ ಎಲೆಯಲ್ಲಿ ಹಾಕಿ ಮಡಚಿ ಅಟ್ಟದಲ್ಲಿ ಬೇಯಿಸುತ್ತಿದ್ದಳು. ಬೆಂದ ಗಿಡ್ಡೆಗೆ ತೇಗದ ಎಲೆಯ ಬಲಿಯುವಿಕೆಯನ್ನಾಧರಿಸಿ ಬೇರೆ ಬೇರೆ ಬಣ್ಣ ಇರುತ್ತಿತ್ತು. ಕೆಲವು ಗುಲಾಬಿ ಬಣ್ಣದ್ದಾಗಿದ್ದರೆ, ಕೆಲವು ಹಳದಿ, ಕೆಲವು ಕೆಂಪೊತ್ತಿನವಾಗಿರುತ್ತಿದ್ದವು. ಅದರ flavour ಬಹಳ ಹಿತವಾಗಿರುತ್ತಿತ್ತು. ಗಿಡ್ಡೆಯ texture ಸ್ವಲ್ಪ ಮೃದು - ಸ್ವಲ್ಪ ಗಟ್ಟಿಯಾಗಿರುತ್ತಿತ್ತು. ಅದಕ್ಕೆ ತುಪ್ಪ ಹಾಕಿಕೊಂಡು ತಿಂದರೆ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನಿಸುತ್ತಿತ್ತು.. ಅಂತಹ aromatic flavour ಅದರದ್ದು. ಅವತ್ತಿಡೀ ಗಿಡ್ಡೆಯನ್ನು ಕದ್ದುಮುಚ್ಚಿಯಾಗಿಯಾದರೂ ತಿನ್ನುವುದೇ ಕಾಯಕವಾಗಿರುತ್ತಿತ್ತು. ಅಂತಹ ಸೆಳೆತ ಇದೆ ಹಲಸಿನ ಹಣ್ಣಿನ ಗಿಡ್ಡೆಯೆಡೆಗೆ!
ಸಾಗರದ ಕಡೆ ಹಲಸಿನ ಹಣ್ಣಿನ ಕಡುಬು ಮಾಡುತ್ತಾರೆ. ಅದರ ವೈಖರಿಯೇ ಬೇರೆ. ಇಲ್ಲಿ ಕಡುಬಿಗೆ ತೆಂಗಿನಕಾಯಿ ಸೇರಿಸುವುದಿಲ್ಲ. ಬರೀ ಹಣ್ಣಿನ ಸೊಳೆ ರುಬ್ಬಿ ಅದಕ್ಕೆ ಅಕ್ಕಿರವೆ ಬೆರೆಸಿ ಕಡುಬು ಮಾಡುತ್ತಾರೆ. ದೊಡ್ಡ ಬಾಳೆಎಲೆಯನ್ನು ಬಾಡಿಸಿ, ಕೊಟ್ಟೆ ಕಟ್ಟಿ ಅದರೊಳಗೆ ತಯಾರಾದ ಹಿಟ್ಟನ್ನು ತುಂಬಿಸಿ ನಂತರ ಮೇಲಿನ ಭಾಗವನ್ನೂ ಕಟ್ಟಿ ದೊಡ್ಡ ಉದ್ದನೆಯ ಪಾತ್ರೆಯಲ್ಲಿರುವ ಕುದಿಯುವ ನೀರಿನೊಳಗೆ ಕೊಟ್ಟೆಯನ್ನಿಟ್ಟು ಗಂಟೆಗಟ್ಟಲೆ ಬೇಯಿಸುತ್ತಾರೆ. ಅದರ texture ತುಂಬಾ soft ಆಗಿ ಇರುತ್ತದೆ. ಬಾಯಿಗೆ ಹಾಕುತ್ತಿದ್ದಂತೆಯೆ ಕರಗುವ ಹದ ಅದಕ್ಕಿದೆ.ಎರಡ್ಮೂರು ದಿನ ಇಟ್ಟು ತಿನ್ನಬಹುದು. ರುಚಿ ಹಾಗೂ ಮೃದುತ್ವ ಸಖತ್ತಾಗಿರುತ್ತದೆ. ಹೆರೆಹೆರೆಯಾದ ತುಪ್ಪ ಹಾಕಿಕೊಂಡು ತಿಂದಾಗ ಅದರ ರುಚಿ ಅದ್ವಿತೀಯ!

ಹಲಸಿನ ಹಣ್ಣೇ ಹಾಗೆ. ಅದರ ಪರಿಮಳ ನಾಸಿಕವನ್ನು ಅರಳಿಸಿ ಬಿಡುತ್ತದೆ. ನಾಲಿಗೆಯಲ್ಲಿ ನಮಗರಿವಿಲ್ಲದೆ ನೀರೂರುತ್ತದೆ. ತಿಂದದ್ದು ಜೀರ್ಣವಾಗುವುದಿಲ್ಲ ಎಂದು ಗೊತ್ತಿದ್ದರೂ ಆರೋಗ್ಯವನ್ನು ಪಣಕ್ಕಿಟ್ಟಾದರೂ ಹಲಸಿನ ತಿಂಡಿಗಳನ್ನು ತಿನ್ನುವ ತೀವ್ರವಾದ ಆಸೆ. ಅಂತಹ ಸೆಳೆಯುವ ಶಕ್ತಿ ಆ ಹಣ್ಣಿಗಿದೆ ಎನ್ನುವ ವಿಷಯವನ್ನು ನೀವೆಲ್ಲ ಒಪ್ಪುತ್ತೀರಲ್ಲವೆ? ಇದರೊಟ್ಟಿಗೆ ಹಲಸಿನ ಕಾಯಿ ಚಿಪ್ಸ್, ಹಲಸಿನ ಬೇಳೆ ಸೇರಿಸಿ ಮಾಡುವ ಸಾಂಬಾರ್ ಬಗ್ಗೆ ವಿಶೇಷವಾಗಿ ಹೇಳುವುದು ಬೇಡವಲ್ಲವೆ?😊☺️



42. ಅನ್ವೇಷಣೆ - ಅನುಭವ 
ನಿಸರ್ಗ ಸೌಂದರ್ಯ ತುಂಬಿ ತುಳುಕುವ ಹಲವಾರು ಸ್ಥಳಗಳು ನಮ್ಮ ಸುತ್ತಮುತ್ತ ನಮ್ಮ ಅರಿವಿಗೆ ಬರದಂತಿವೆ. ಬಲ್ಲವರ ಸಹಾಯದಿಂದ ಅವುಗಳನ್ನು ಅನ್ವೇಷಿಸಿ ಅವುಗಳ ನಿಕಟಾನುಭವ ಪಡೆಯುವ ಅವಕಾಶವನ್ನು ಹೊಂಗಿರಣ ಮಕ್ಕಳಿಗೆ ಕೊಡುತ್ತದೆ. ಪ್ರವಾಸಿ ಸ್ಥಳಗಳಿಗೆ ಯಾರೊಡನೆಯೂ ಹೋಗಬಹುದು. ಆದರೆ ಅಪರಿಚಿತ ಪ್ರವಾಸ ಯೋಗ್ಯ ಸ್ಥಳಗಳಿಗೆ ಹೋಗುವುದು ಅಪರೂಪದ ಅನುಭವ.
ನಮ್ಮ ಪಾಲಕರಾಗಿದ್ದ ಶ್ರೀ ಹರೀಶ್ ನವಾಥೆಯವರು ಒಬ್ಬ ವಿಶಿಷ್ಟ ಅನ್ವೇಷಕ. ಉತ್ತರ ಕನ್ನಡದ ಅಪರಿಚಿತ ಹೊಳೆ, ಕೊಳ್ಳ, ಕಾಡು, ಜಲಪಾತಗಳನ್ನು explore ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಈಗ್ಗೆ ನಾಲ್ಕೈದು ವರ್ಷಗಳ ಹಿಂದಿನ ಕಥೆ. ಅವರ ನೇತೃತ್ವದಲ್ಲಿ ನಾನು, ರಾಜಶ್ರಿ ಹಾಗೂ ಇನ್ನಿಬ್ಬರು ಶಿಕ್ಷಕರು ಸ್ಥಳಾನ್ವೇಷಣೆಗೆ ಹೋಗಿತ್ತು. ಆಗ ಸಿಕ್ಕ ಜಾಗ ಉಂಚಳ್ಳಿಯ ಸಮೀಪದ ಹೆಗ್ಗಾರೆ. ಮೇನ್ ರೋಡ್ ನಿಂದ ತುಂಬಾ ಒಳಗಿರುವ ಆ ಜಾಗಕ್ಹೋಗುವುದೇ ಒಂದು ಸಾಹಸ. ಅಲ್ಲಿ ಗುರುತು ಪರಿಚಯವಿರದ ರಾಜು ಹೆಗಡೆಯವರ ಮನೆಗೆ ಲಗ್ಗೆಯಿಟ್ಟಾಗ ಘಂಟೆ ಹನ್ನೊಂದು ಆಗಿತ್ತು. ದಂಡುಗಟ್ಟಲೆ ಹೋದ ನಮ್ಮನ್ನು ಅವರು ಪ್ರೀತ್ಯಾದರಗಳಿಂದ ಉಪಚರಿಸಿದ್ದನ್ನು ಎಂದೂ ಮರೆಯಲಾಗದು. ಅವರು ಒಂದು ರೀತಿಯ ಎಲೆಮರೆಯ ಕಾಯಿ. ವಿವಿಧ ಗಾತ್ರದ ಪಾತ್ರೆ ತಟ್ಟೆಗಳನ್ನಿಟ್ಟುಕೊಂಡು ಅಧ್ಭುತವಾಗಿ, ಶಾಸ್ತ್ರೀಯವಾಗಿ ಜಲತರಂಗ ನುಡಿಸುವ ಕಲಾವಿದ. ಅವರ ನೇತೃತ್ವದಲ್ಲಿ ಒಂದೆರಡು ಕಿಮೀ ದೂರದಲ್ಲಿದ್ದ ಅಘನಾಶಿನಿಯ ಒಡಲಿಗೆ ಸರ್ಕಸ್ ಮಾಡುತ್ತಾ ನಡೆದು ಹೋದದ್ದೊಂದು ಸಾಹಸ. ನನ್ನ ಭಾರಿ ಗಾತ್ರದ ದೇಹ ನೋಡಿ ನಾನು ಅಷ್ಟು ದೂರ ಅಂತಹ ದಾರಿಯಲ್ಲಿ ನಡೆಯುವ ಬಗ್ಗೆ ಅನುಮಾನವಿತ್ತೆಂದು ನಂತರದಲ್ಲಿ ಅವರು ಹೇಳಿದರು. ಅದೇನೆ ಇರಲಿ, ಆ ಅಘನಾಶಿನಿಯ ಹರಿವು, ಹರವು ನಮ್ಮ ಮಕ್ಕಳ activities ಮಾಡಿಸಲಿಕ್ಕೆ ಬಹಳ ಸೂಕ್ತವಾಗಿತ್ತು. ನೀರಿಗೆ ಹೋದ ಮೇಲೆ ನೀರಾಟವಾಡದೆ ಇರಲಾಗುತ್ತದೆಯೇ? ಹೂಂ. ನೀರಾಟವಾಡಿದ್ದೂ ಆಯಿತು. ಹಿಂದಿರುಗುವ ಪ್ರಕ್ರಿಯೆಯೂ ಅಷ್ಟೇ ತ್ರಾಸದಾಯಕವಾಗಿತ್ತು. ಪುನಃ ಅವರ ಮನೆಯಲ್ಲಿ ಆಸರಿಗೆ ಕುಡಿದು ಅಲ್ಲಿ ನಮ್ಮ ಮಕ್ಕಳ ಕ್ಯಾಂಪ್ ಮಾಡುವ ಬಗ್ಗೆ ಮಾತನಾಡಿ ಹಿಂದಿರುಗುವಾಗ ಸಿರ್ಸಿ ಬಳಿಯ ಮಂಜುಗುಣಿ ದೇವಸ್ಥಾನದಲ್ಲಿ ಭೋಜನ ಸ್ವೀಕರಿಸಿ ಬೆಣ್ಣೆಹೊಳೆ ಜಲಪಾತದೆಡೆಗೆ ಪಯಣ. "ಭಾರೀ ದೂರವಿಲ್ಲ. ಇಲ್ಲೇ ಹತ್ತಿರದಲ್ಲಿದೆ" ಅಂತ ಹೇಳಿದ ಹರೀಶ್ ರವರ ಹಿಂದೆ ಸಾಗಿದ ನಮ್ಮ ಮುಂದಿದ್ದದ್ದು ಮುಗಿಯದ ದುರ್ಗಮವಾದ ದಾರಿ. ಸವೆಯದ ಆ ದಾರಿಯಲ್ಲಿ ಸಾಗಿ ಜಲಪಾತ ತಲುಪಿದಾಗ ಆವರೆಗಿನ ಒದ್ದಾಟ ಮಂಗಮಾಯವಾಯಿತು. ಜಲಪಾತದ ಎದುರಿನ ಗುಡ್ಡದಲ್ಲಿ ಕುಳಿತು ಮಾಡಿದ ಜಲಪಾತ ದರ್ಶನ ಮನೋಲ್ಲಾಸಕರವಾಗಿತ್ತು. ಆದರೆ ಆ ಜಲಪಾತದ ಗುಡ್ಡವನ್ನು ಹತ್ತಿ ಹಿಂದಿರುಗಿ ಬಂದ ಪರಿ ಮಾತ್ರ ನನ್ನ ಪಾಲಿಗೆ ದೊಡ್ಡ ಅಗ್ನಿ ಪರೀಕ್ಷೆಯೇ ಆಗಿತ್ತು. ಆ ದಿನದ ಅಸೀಮಿತ ಕ್ಲಿಷ್ಟಕರ ಓಡಾಟ ನನ್ನ ವಯಸ್ಸಿಗೆ, ದೇಹದ ಗಾತ್ರಕ್ಕೆ ಸ್ವಲ್ಪ ಜಾಸ್ತಿ dose ಆಯಿತೆಂದರೆ ತಪ್ಪಿಲ್ಲ. ನಂತರದಲ್ಲಿ ಸುಧಾರಿಸಿಕೊಳ್ಳಲು ಒಂದೆರಡು ದಿನಗಳು ಜಾಸ್ತಿಯೇ ಬೇಕಾಯಿತು‌. ಆದರೆ ಬದುಕಿನ ಇಂತಹ ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸಿ ಸರಿಯಾಗಿ manage ಮಾಡಿದಲ್ಲಿ ಅದು ನಮ್ಮ ಅಂತಸ್ಸತ್ವವನ್ನು ಹೆಚ್ಚಿಸಿ ನಮ್ಮನ್ನು ಗಟ್ಟಿ ಮಾಡುತ್ತದೆಂಬುವುದರಲ್ಲಿ ಸಂಶಯವೇ ಇಲ್ಲ.



41. ಅನುಭವ - ಸಾಹಸ 
ನಾನು ಪ್ರವಾಸಿ ಸ್ಥಳಗಳನ್ನು ನೋಡಿದ್ದಕ್ಕಿಂತ ವಿಶಿಷ್ಟ ಸ್ಮರಣೀಯ ಅನುಭವ ನೀಡುವಂತಹ ಸ್ಥಳಗಳಿಗೆ ಲಗ್ಗೆ ಇಟ್ಟಿದ್ದೇ ಜಾಸ್ತಿ. ಅಂತಹ ಒಂದು ವಿಶಿಷ್ಟವಾದ ಅನುಭವ ಕೊಟ್ಟ ಜಾಗ ಭೀಮನವಾರೆ. ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನೀಲಕುಂಡದಿಂದ 2 ಕಿಮೀ ದೂರದಲ್ಲಿರುವ ಭೀಮನವಾರೆ ಸಮುದ್ರಮಟ್ಟದಿಂದ ಸುಮಾರು 650 ಅಡಿ ಎತ್ತರದಲ್ಲಿರುವ ಗುಡ್ಡ. ನಮ್ಮ 8ನೇ ತರಗತಿಯ ಮಕ್ಕಳ ಸಾಹಸ ಶಿಬಿರಕ್ಕಾಗಿ ಸ್ಥಳ ಹುಡುಕುತ್ತಿದ್ದಾಗ ಶ್ರೀಯುತ ಹರೀಶ್ ನವಾಥೆಯವರಿಂದ ಪರಿಚಯಿಸಲ್ಪಟ್ಟ ಜಾಗವದು.
ನಮ್ಮ ಶಾಲೆಯಿಂದ ಸುಮಾರು 75ಕಿಮೀ ದೂರದಲ್ಲಿರುವ ಆ ಜಾಗವನ್ನು ತಡವಾಗಿಯಾದರೂ ನೋಡುವ ಭಾಗ್ಯ ಸಿಕ್ಕಿತಲ್ಲಾ ಅನ್ನುವ ಖುಷಿ ನನಗಿದೆ. ಸಾಯಂಕಾಲ ಐದರ ಸುಮಾರಿಗೆ ಆ ಗುಡ್ಡ ಹತ್ತಿ ಕುಳಿತರೆ ನಿಮಗೆ ಬೇರೊಂದು ಲೋಕದಲ್ಲಿರುವಂತೆ ಅನಿಸುವುದು ಖಚಿತ. ಅಲ್ಲಿಗೆ ಹೋಗುವ ದಾರಿಯೇ ಸುಂದರ. ಎರಡೂ ಕಡೆಯಲ್ಲಿರುವ ಕಾನನದ ನಡುವೆ ಗಾಡಿ ಸಾಗುವಾಗ ನಿಸರ್ಗ ದೇವಿಯ ಸುಂದರ ಗರ್ಭವನ್ನು ಸೀಳಿ ಅವಳ ಒಡಲಿನಾಳಕ್ಕೆ ಹೋದ ಅನುಭವವಾಗುತ್ತದೆ. ಗುಡ್ಡವನ್ನೇರುವ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಬೇಡ. ಗುಡ್ಡ ಏರಲು ಭದ್ರವಾದ ಕಾಲ್ದಾರಿಯಿದೆ. ಮೇಲೇರಿ ಕೆಳಗೆ ನೋಡಿದಾಗ ಕಣಿವೆಯಲ್ಲಿ ಬಳುಕಿ ಹರಿಯುತ್ತಿರುವ ಅಘನಾಶಿನಿಯ ಸರಳ ಮೋಹಕ ದೃಶ್ಯ! ಸುತ್ತಲೂ ಆವರಿಸಿರುವ ಗುಡ್ಡದ ನಡುವೆ ಎಲ್ಲೋ ಧುಮ್ಮಿಕ್ಕಿ ಹರಿಯುವ ನೀರಿನ ಭೋರ್ಗರೆತದ ಶಬ್ದ. ಆಗಾಗ ಆ ಇಡೀ ದೃಶ್ಯವನ್ನು ಮುಚ್ಚಿ ಬಿಡುವ ಮೋಡದ ಕಣ್ಣುಮುಚ್ಚಾಲೆಯಾಟ. ದೃಷ್ಟಿ ಹರಿಸಿದಷ್ಟು ಕಣ್ಣಿಗೆ ತಂಪೆರೆಯುವ ನಿಸರ್ಗದ ಸೊಬಗಿನಾಟ. ಕಾವ್ಯ ನಮ್ಮೊಳಗೆ ಸಹಜವಾಗಿಯೇ ಉದ್ಭವಿಸುವ ಸ್ಥಳವದು. ಅಲ್ಲೆಲ್ಲೂ ಹತ್ತಿರದಲ್ಲಿ ಒಂದು ನರಪಿಳ್ಳೆ ಇಲ್ಲದಿರುವುದು ಆ ಸ್ಥಳ ತನ್ನ ಸಹಜ ಸೌಂದರ್ಯವನ್ನು ಉಳಿಸಿಕೊಳ್ಳಲು ಕಾರಣೀಭೂತವಾಗಿದೆ ಎಂದರೆ ತಪ್ಪಿಲ್ಲ. ಸ್ವಲ್ಪ ಏಮಾರಿದರೂ ಪ್ರಪಾತದ ಆಲಿಂಗನದಲ್ಲಿ ನಾವಿರುವುದು ಅಷ್ಟೇ ನಿಜ. ಇಂತಹ ಸ್ಥಳಗಳೇ ಹಾಗೆ ನಮ್ಮಿಂದ ಜಾಗರೂಕತೆಯನ್ನು demand ಮಾಡುತ್ತವೆ. ನಮ್ಮ ಮಕ್ಕಳನ್ನು ಅಲ್ಲಿಗೆ ನಂತರದಲ್ಲಿ ಕರೆದೊಯ್ದಾಗ ಅವರು ಪಟ್ಟ ಖುಷಿಯನ್ನು ಪದಗಳಲ್ಲಿ ಸೆರೆ ಹಿಡಿಯಲು ಆಗುವುದಿಲ್ಲ. ಮಕ್ಕಳಿಗೆ ಅಂತಹ ಸುಂದರ ಸ್ಥಳವನ್ನು ತೋರಿಸಿ ಅವರೊಳಗೆ ನಿಸರ್ಗದೆಡೆಗಿನ ಸೂಕ್ಷ್ಮ ಭಾವನೆಗಳ ತಂತಿಯನ್ನು ಮೀಟುವ ಹಾಗೆ ಮಾಡಿದ ತೃಪ್ತ ಭಾವ ನನಗಿದೆ. ಭೀಮನವಾರೆಯಂತಹ ಸ್ಥಳವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡದಿದ್ದಲ್ಲಿ ನೀವು ಏನೋ ಮಹತ್ತರವಾದದ್ದನ್ನು ಕಳೆದುಕೊಳ್ಳುತ್ತೀರಿ ಎಂಬುದು ನನ್ನ ಕಿವಿ ಮಾತು. ಅಂತಹ ಸಹಜ ಸುಂದರ ಸ್ಥಳವದು!



40.ಪ್ರವಾಸ ಕಥನ 
ನನ್ನ ಸಮುದ್ರ - ನದಿ ತೀರ, ಗುಡ್ಡಬೆಟ್ಟಗಳ ಆಕರ್ಷಣೆಗೆ ಒಂದು ತೃಪ್ತಿಯ ಭಾವ ಸಿಕ್ಕಿದ್ದು ನಾವು ಧರ್ಮಶಾಲಾ ಮತ್ತು ಮ್ಯಾಕ್ಲಾಡ್ ಗಂಜ್ ಗೆ ಹೋದಾಗ. ನಾವು ಧರ್ಮಶಾಲಾದಲ್ಲಿ ಉಳಿದುಕೊಂಡಿದ್ದ ಯೂತ್ ಹಾಸ್ಟೆಲ್ ನ ಲಾಡ್ಜ್ ನ ಹೊರ ಬಂದರೆ ಕಾಣುವುದೇ ಹಿಮಾಲಯದ ಅಗಾಧ ಪರ್ವತಶ್ರೇಣಿ. ಬೆಳಗಿನ ಹೂ ಬಿಸಿಲಿನಲಿ ಕಣ್ಣಿಗೆ ತಂಪೆರೆಯುವ ಅದರ ಅಲೌಕಿಕ ಸೌಂದರ್ಯ ನೋಡಿ ಬದುಕಿನ ಸಾರ್ಥಕ್ಯದ ಅನುಭವವಾಯಿತು. ಅದಲ್ಲದೇ ಆ ಲಾಡ್ಜ್ ನ ತೋಟದಲ್ಲಿದ್ದ ನನ್ನ ಅತಿ ಪ್ರೀತಿಯ ಪೇರಳೆ ಹಣ್ಣನ್ನು ತಿಂದಾಗಂತೂ(ಅದೂ free ಮತ್ತು ತಾಜಾ) ನನ್ನ ಹಿಗ್ಗಿಗೆ ಎಣೆಯೇ ಇರಲಿಲ್ಲ. ಅಂತಹ ರುಚಿಕರ ಪೇರಳೆಯನ್ನು ನಾನು ತಿಂದಿದ್ದೇ ಇಲ್ಲ. ಕೊಬ್ಬರಿಯ ರೀತಿಯಲ್ಲಿದ್ದ ಒಳ್ಳೆಯ ಕುರುಂ ಕುರುಂ ಪೇರಳೆ. ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತದೆ. ಆ ಇಡೀ ಲಾಡ್ಜ್ ನಲ್ಲಿ ಇದ್ದವರು ನಾವು ಮೂವರೇ. ಬೆಳಗಿನ ತಿಂಡಿಗೆ ಒಳ್ಳೆಯ ಬಿಸಿಬಿಸಿ ಪರೋಟ ಮತ್ತು ರಾತ್ರಿಯ ಊಟಕ್ಕೆ ಚಪಾತಿ, ಸಬ್ಜಿ, ಅನ್ನ, ದಾಲ್ ಇರುತ್ತಿತ್ತು. ಅಟಲ್ ಅನ್ನುವ ಮ್ಯಾನೇಜರ್ ನಮಗೆ ಬಹಳ ಆಪ್ತನಾದ. ನಮ್ಮ ತಿರುಗಾಟಕ್ಕೆ ಉತ್ತಮ ವ್ಯವಸ್ಥೆ ಮಾಡಿಕೊಟ್ಟ. ಅವನ ಮಾರ್ಗದರ್ಶನದ ಪ್ರಕಾರ ನಾವು ಅಲ್ಲಿನ ಸ್ಥಳಗಳ ಭೇಟಿಯ plan ಮಾಡಿಕೊಂಡು ಮೊತ್ತ ಮೊದಲಿಗೆ 14 km ದೂರದ ಮ್ಯಾಕ್ಲಾಡ್ ಗಂಜ್ ಗೆ ಒಂದು ಟ್ಯಾಕ್ಸಿಯಲ್ಲಿ ಹೋದೆವು. ತುಂಬಾ ದುರ್ಗಮವಾದ ಘಾಟಿಯ ತಿರುವು ಮುರುವಿನ ರಸ್ತೆಯಲ್ಲಿನ ಪಯಣದ ಉದ್ದಕ್ಕೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕೂತು ಕೆಳಗಿನ ಪ್ರಪಾತ ದರ್ಶನ ಮಾಡ್ತಾ ಇದ್ರೆ ಮೈ ಝಂ ಅನ್ನುತ್ತಿತ್ತು. ಆ ಡ್ರೈವರ್ ಅಂತೂ ನಮ್ಮ ಜೀವದ contract ತಾನೇ ತೆಗೆದುಕೊಂಡ ಹಾಗೆ ರುಮ್ ಅಂತ ಅತಿವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ. ನಮ್ಮ ಹರಕು ಮುರುಕು ಹಿಂದಿಯಲ್ಲಿ ಅವನ ಹತ್ತಿರ ಮಾತುಕತೆಗೆ ತೊಡಗಿದರೂ ಅವನ ಡ್ರೈವಿಂಗಿನ ಓಘವನ್ನು ಕಡಿಮೆ ಮಾಡಲಾಗಲಿಲ್ಲ. ಅಂತೂ ಇಂತೂ ಮ್ಯಾಕ್ಲಾಡ್ ಗಂಜ್ ತಲುಪಿದಾಗ ಪುನಃ ಜೀವ ಮರಳಿ ಬಂತು.
ಅಲ್ಲಿ ಪರ್ವತ ಶ್ರೇಣಿಯ ಮಡಿಲಲ್ಲಿದ್ದ ಒಂದು ಪ್ರಶಾಂತವಾದ ಆಶ್ರಮದ ಭೇಟಿಯ ನಂತರ ನಾವು ಹೋದದ್ದು ಬದುಕಿನಲ್ಲಿ ಎಂದೂ ಮರೆಯಲಾಗದ ಬಾಗ್ಸುನಾಗ್ ಫಾಲ್ಸ್. ಅಲ್ಲಿಗೆ ಸುಮಾರು ಮೂರ್ನಾಲ್ಕು ಕಿಮೀ ಪರ್ವತವನ್ನೇರುತ್ತಾ ಹೋಗಬೇಕಿತ್ತು. ದಾರಿಯಲ್ಲಿರುವ ಅದಕ್ಕೆ ಸಂಬಂಧ ಪಟ್ಟ ದೇವತಾ ದರ್ಶನ ಮಾಡಿ ನಮ್ಮ ನಡಿಗೆ ಪ್ರಾರಂಭ. ನನಗೆ ಏದುಸಿರು ಬಂದಲ್ಲೆಲ್ಲ ಸುಧಾರಿಸಿಕೊಳ್ಳುತ್ತಾ ಜಲಪಾತದ ಮಡಿಲಿಗೆ ನಾನು ಮಕ್ಕಳೊಡನೆ ತಲುಪಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಅಂತಹ ಸ್ಫಟಿಕ ಶುಭ್ರ ನೀರನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಆಳ ಎಷ್ಟೇ ಇದ್ದರೂ ನೀರಿನ ತಳವನ್ನು ಸುಸ್ಪಷ್ಟವಾಗಿ ಕಾಣುವಂತಹ ಶುಭ್ರತೆ. ಐಸ್ ನಂತೆ ತಣ್ಣನೆಯ ನೀರು. ಆ ಜಾಗವನ್ನು ಬಿಟ್ಟೇ ಬರಲಾಗದಂತಹ ಸೆಳೆತ. ಸುತ್ತಲೂ ಆವರಿಸಿರುವ ಪರ್ವತಗಳ ನಡುವಿರುವ ಆ ಜಲಪಾತ ನನ್ನ ಕಲ್ಪನೆಯನ್ನು ಸಾಕಾರಗೊಳಿಸಿ ಮೂರ್ತರೂಪಕ್ಕೆ ತಂದಂತಿತ್ತು. ನಂತರ ನೋಡಿದ ಬೌದ್ಧ ವಿಹಾರಗಳು, ಕ್ರಿಕೆಟ್ ಸ್ಟೇಡಿಯಂ, ಮ್ಯೂಸಿಯಂ... ಎಲ್ಲಾ ನೋಡಲೇ ಬೇಕಾದ ಸ್ಥಳಗಳಾದರೂ ಬಾಗ್ಸುನಾಗ್ ಫಾಲ್ಸ್ ಭೇಟಿ ನನ್ನೊಳಗೆ ಅಚ್ಚಳಿಯದ ಪರಿಣಾಮ ಬೀರಿದೆ ಅಂದರೆ ಸುಳ್ಳಲ್ಲ. ಕೆಲವು ಜಾಗಗಳ ದರ್ಶನ ನಮ್ಮನ್ನು ಪುನೀತರನ್ನಾಗಿ ಮಾಡುವುದು ನಿಜವಲ್ಲವೇ?


39. ಪ್ರವಾಸ - ಅನುಭವ 
ಈಗೆರಡು ವರ್ಷಗಳ ಹಿಂದೆ ನಾನು, ನನ್ನ ಮಗ, ಮಗಳು ಉತ್ತರ ಭಾರತದ ಪ್ರವಾಸ ಮಾಡಿದೆವು. ದೇಶಭಕ್ತಿಯ ಪ್ರತೀಕವಾಗಿಯೋ ಏನೋ ನಾವು ಪ್ರಪ್ರಥಮವಾಗಿ ಭೇಟಿ ಮಾಡಿದ್ದೇ ವಾಘಾ ಬಾರ್ಡರ್ ಅನ್ನು. ಅಲ್ಲಿನ ಮಧ್ಯಾಹ್ನದ ಉರಿಯುವ ಬಿಸಿಲನ್ನೂ ಲೆಕ್ಕಿಸದೆ ಕ್ಯೂನಲ್ಲಿ ನಿಂತು ಒಳ ಸಾಗಿ ಕೂತು ಸಂಜೆಯ ಸೂರ್ಯಾಸ್ತಮಾನದ ಸಮಯದ ಭಾರತ - ಪಾಕಿಸ್ತಾನದ ಯೋಧರ ಪೆರೇಡ್ ನೋಡುವಾಗ ಎಂದೂ ಇಲ್ಲದ ದೇಶಭಕ್ತಿ ಉಕ್ಕಿ ರೋಮಾಂಚನದ ಅನುಭವವಾದದ್ದಂತೂ ನಿಜ. ದಕ್ಷಿಣ ಭಾರತದವರು ಸ್ವಲ್ಪ safe zoneನಲ್ಲಿ ಇರುವ ಕಾರಣ ಉತ್ಕಟವಾಗಿ ಪ್ರಕಟವಾಗುವ ದೇಶಭಕ್ತಿಯ ಅನುಭವ ಕಡಿಮೆ ಎನ್ನುವುದು ನನ್ನ ನಿಲುವು. ಅಂದಂತೂ ನನಗಾದ ಅನುಭವ ವಿಶೇಷವಾಗಿತ್ತು. ಅಲ್ಲಿ ಸೇರಿದ ಹತ್ತಿರ ಹತ್ತಿರ ಇಪ್ಪತ್ತುಸಾವಿರ ಜನರ ದೇಶಭಕ್ತಿಯ ಕೂಗು ನನ್ನ ದೇಹದ ಪ್ರತಿ ಕಣಕಣದಲ್ಲೂ ಹೊಕ್ಕು ಹೊರಬಂದಂತಾಯಿತು. ಪೆರೇಡ್ ಮುಗಿಸಿ ಹೊರ ಬರುವಾಗ ಏನೋ ಒಂದು ರೀತಿಯ ಧನ್ಯತೆಯ ಭಾವ!
ಮಾರನೇ ದಿನ ಬೆಳಗಾ ಮುಂಚೆ ಅಮೃತಸರದ ಗೋಲ್ಡನ್ ಟೆಂಪಲ್ ಗೆ ಭೇಟಿ. ಏನೋ ವಿಶೇಷ ದಿನವಾಗಿದ್ದ ಕಾರಣ ಸಿಕ್ಕಾಪಟ್ಟೆ ಜನರಿದ್ದದ್ದರಿಂದ ಟೆಂಪಲ್ ಒಳಗೆ ಹೋಗಲಾಗಲಿಲ್ಲ. ಉದ್ದನೆಯ ಕ್ಯೂನಲ್ಲಿ ಒಂದು ಘಂಟೆ ನಿಂತರೂ ನಿಂತದ್ದಷ್ಟೇ ಆಯಿತೇ ಹೊರತು ಒಂದು ಇಂಚೂ ಮುಂದೆ ಹೋಗಲಾಗಲಿಲ್ಲ. ಆದರೆ ಆ ಒಂದು ಘಂಟೆಯಲ್ಲಿ ಕಾಯುವಿಕೆಯ ಅಸಹನೀಯ ಅನುಭವವಾಯಿತು. ಹೀಗಾಗಿ ನಾವು ಟೆಂಪಲ್ ನೋಡದೆ ಲಂಗಾರ್ ನ ಜಾಗಕ್ಕೆ ಹೋಗಿ ಮೆತ್ತಗಿನ ದಪ್ಪನೆಯ ರುಚಿರುಚಿಯಾದ ಚಪಾತಿ ಸಬ್ಜಿ ತಿಂದು ಪ್ಲೇಟ್ ತೊಳೆಯಲು ಹೋದಾಗ ಒಬ್ಬ ಮೂಕನ ಪರಿಚಯವಾಗಿ ಅವನು ನಮ್ಮನ್ನು ಆ ಆವರಣವೆಲ್ಲ ಸುತ್ತಿಸಿದ. ಅಲ್ಲಿ ಒಳಗೊಳಗೆ ಹೋದ ಹಾಗೆ ಒಂದು ಹೊಸ ಪ್ರಪಂಚದ ದರ್ಶನವಾಯಿತು. 1984ರ ಆಪರೇಶನ್ ಬ್ಲೂ ಸ್ಟಾರ್ ನ ಪ್ರತಾಪದ ಪರಿಣಾಮವನ್ನು ನೋಡುವ ಅವಕಾಶ ದೊರಕಿತು. ತದನಂತರ ಅಡುಗೆ ತಯಾರಿ ಜಾಗಕ್ಕೆ ಹೋಗಿ ನೋಡಿದಾಗ ಅದೊಂದು ದೊಡ್ಡ ಅಡುಗೆಯ ಕಂಬಳ ನಡೆಯುವ ಬೆರಗಿನ ಲೋಕವೇ ಆಗಿತ್ತು. ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರು ಸೇವಾರೂಪದಲ್ಲಿ ಎಲ್ಲಾ ರೀತಿಯ ಕೆಲಸವನ್ನು organized ಆಗಿ ಮಾಡುವುದನ್ನು ನೋಡುವುದೇ ಒಂದು ಹಿತವಾದ ಅನುಭವ. ಉಮೇದು ಹತ್ತಿ ನಾನೂ ಒಂದಿಷ್ಟು ಚಪಾತಿ ಲಟ್ಟಿಸಿ ಕಾಯಿಸಿದೆ. ನಂತರದಲ್ಲಿ ಅಲ್ಲಿನ ರುಚಿಕರವಾದ ಮಸಾಲ ಟೀ ಕುಡಿಯುವ ಸುಯೋಗ ದೊರಕಿತು. ಗೋಲ್ಡನ್ ಟೆಂಪಲ್ ಒಳಗೆ ಹೋಗಲಾಗದಿದ್ದರೂ ಆ ಆವರಣದೊಳಗಿನ ನೈಜಕಥೆ, ಸಹಜೀವನ ಕಾಣಸಿಕ್ಕಿದ್ದು ಒಂದು ಗೋಲ್ಡನ್ ಅವಕಾಶವೇ ಆಯಿತು.
ನಂತರದಲ್ಲಿ ಅಲ್ಲಿಯೇ ಸಮೀಪದಲ್ಲಿದ್ದ ಜಲಿಯನ್ ವಾಲಾ ಬಾಗ್ ನೋಡಿ ಅಲ್ಲಿನ ಸಾವಿನ ಬಾವಿಯನ್ನು ನೋಡಿದಾಗ ಮನಸ್ಸು ನೋವಿನಿಂದ ಹಿಂಡಿ ಹೋಯಿತು. ಆದರೂ ಈ ಹಿಂದೆ ನಡೆದ ಅಂತಹ ದುರಂತವನ್ನು ಮರೆಸುವಷ್ಟು ಸೌಂದರ್ಯವನ್ನು ಆ ಬಾಗ್ ಹೊಂದಿದೆ ಅಂದರೆ ತಪ್ಪಲ್ಲ. ಅಷ್ಟು ಚೆನ್ನಾಗಿ ಆ ಸ್ಮಾರಕವನ್ನು ಕಾಪಿಡಲಾಗಿದೆ. ನಮ್ಮ ಸ್ವಾತಂತ್ರ್ಯ ಹೋರಾಟದ ಕರಿ ನೆರಳ ಛಾಯೆ ಹೆಚ್ಚಾಗಿ ಕಂಡು ಬರುವುದು ಉತ್ತರ ಭಾರತದಲ್ಲೇ ಏನೋ ಅನ್ನುವ ಅನಿಸಿಕೆ ಅಂದು ನನ್ನಲ್ಲಿ ಹುಟ್ಟಿತು. ಎಷ್ಟೋ ದೇಶಭಕ್ತರ ನಿಸ್ವಾರ್ಥ ತ್ಯಾಗದಿಂದ ದೊರೆತ ಸ್ವಾತಂತ್ರ್ಯದ ಬೆಲೆಯ ಅರಿವು ಇನ್ನೂ ಹೆಚ್ಚಿತು.ಇಂತಹ ಸುತ್ತಾಟಗಳು ನಮ್ಮ ಮುಂದೆ ಬದುಕಿನ ಹೊಸ ಹೊಸ ಸತ್ಯಗಳನ್ನು ಬಿಚ್ಚಿಡುತ್ತವಲ್ವೇ?

38. ಪರಿಸರ - ನೆನಪುಗಳು 
1970ರ ದಶಕದಲ್ಲಿ ಹೆಬ್ರಿಯಲ್ಲಿ ನಾವಿದ್ದ ದಿನಗಳಲ್ಲಿ ನನಗಿನ್ನೂ ನೆನಪಿನಲ್ಲಿರುವುದು ಮನೆಗೆ ನೆಂಟರು ಬಂದಾಗಲೆಲ್ಲ ನಾವು ಹೋಗುತ್ತಿದ್ದ ಆಗುಂಬೆಯ ಸನ್ ಸೆಟ್ ಪಾಯಿಂಟ್. ಅಮ್ಮ ತಯಾರಿಸಿದ ಬಾಯಾಡುವ ತಿನಿಸುಗಳನ್ನು ತಗೊಂಡು ಐದು ಜನ ಕೂರುವ ಕಪ್ಪನೆಯ ಅಂಬಾಸಿಡರ್ ಕಾರಿನಲ್ಲಿ ಎಂಟ್ಹತ್ತು ಜನ ತುರುಕಿಕೊಂಡು ಕೂತ ಶಾಸ್ತ್ರ ಮಾಡಿ ಅಪ್ಪನ ಸಾರಥ್ಯದಲ್ಲಿ ಹೆಬ್ರಿ ಬಿಟ್ಟರೆ ನಮ್ಮೆಲ್ಲರ ಕಚಕಚ ಮಾತು, ಕೂಗಾಟದಲ್ಲಿ ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ.
ಹೆಬ್ರಿ ದಾಟಿ ಸೀತಾನದಿ ಬಂದಾಗ ಸ್ವಲ್ಪ ಹೊತ್ತು ಅಲ್ಲಿನ ನದಿಯ ತಟದಲ್ಲಿ ನೀರಾಟ. ನೀರಾಟವಾಡಲಿಕ್ಕೆ ಅದು ಹೇಳಿ ಮಾಡಿಸಿದ ಜಾಗ. ಮೇನ್ ರೋಡ್ ಪಕ್ಕದಲ್ಲಿ ದೊಡ್ಡ ಮರದ ನೆರಳ ಅಡಿಯಲ್ಲಿ ಹರಿಯುವ ನೀರಿನಲ್ಲಿ ಅಲ್ಲಲ್ಲಿ ಕುಳಿತುಕೊಳ್ಳಲು ಆಗುವಂತಹ ಪುಟ್ಟ ಪುಟ್ಟ ಬಂಡೆಗಳು. ಒಂದೊಂದೇ ಬಂಡೆಗಳನ್ನು ಹತ್ತಿ ಹಾರಿ ಆಚೆ ದಡಕ್ಕೂ ಹೋಗಬಹುದಿತ್ತು. ಅಷ್ಟು safe ಜಾಗ. ಅಲ್ಲಿ ಮನಃತೃಪ್ತಿ ಆಡಿದ ಮೇಲೆ ನಮ್ಮ ಪಯಣದ ಮುಂದುವರಿಕೆ. ನನ್ನ ಅಪ್ಪ ಮಕ್ಕಳೊಟ್ಟಿಗೆ ಮಕ್ಕಳಾಗಿರುತ್ತಿದ್ದ ಕಾರಣ ಯಾರಿಗೂ ಚೊರೆ ಮಾಡುತ್ತಿರಲಿಲ್ಲ. ನಾವು ಎದ್ದು ಹೊರಟಾಗ ಅವರು ಕಾರಿನ ಗಾಲಿಯನ್ನು ಹಿಡಿಯುತ್ತಿದ್ದರು. ಅಲ್ಲಿಂದ ಮುಂದುವರೆದು ಸೋಮೇಶ್ವರದ ಹೋಟೆಲ್ನಲ್ಲಿ ನೀರುದೋಸೆ ತಿನ್ನಾಟ. ಹೊಟ್ಟೆ ಭರ್ತಿ ಆದ ಮೇಲೆ ಘಟ್ಟ ಹತ್ತಾಟ. ನಮ್ಮಲ್ಲಿ ವಾಂತಿ ಮಾಡುವವರಿಗೆ ಕಿಟಕಿ ಸೀಟ್ ಬಿಟ್ಟುಕೊಟ್ಟು ನಾವು ಬಚಾವಾಗುತ್ತಿದ್ದೆವು. ಆದರೂ ಅವರು ಉವ್ವೇ ಅಂದಾಗ ನಮಗೂ ತಿಂದ ನೀರು ದೋಸೆ ಬಾಯಿಗೆ ಬಂದ ಹಾಗಾಗುತ್ತಿತ್ತು. ಆದರೂ ಸುಧಾರಿಸಿಕೊಳ್ಳುತ್ತಿದ್ದೆವು. ಸನ್ ಸೆಟ್ ಪಾಯಿಂಟ್ ಬಂದಾಗ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಅದೊಂದು ನೋಡಿದಷ್ಟೂ ಮನತಣಿಯದ, ಕಣ್ತಣಿಯದ ಜಾಗ. ನಾನಂತೂ ಹೆಬ್ರಿಯಲ್ಲಿರುವಾಗ ಎಷ್ಟು ಸಲ ಅಲ್ಲಿಗೆ ಹೋಗಿದ್ದೆನೋ ಲೆಕ್ಕವೇ ಇಲ್ಲ! ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ... ಹೀಗೆ ನೋಡುತ್ತಲೇ ಇರಬೇಕು ಅನಿಸುವ ಜಾಗವದು. ಅಲ್ಲಿನ ದೃಶ್ಯ ವೈಭವ ವರ್ಣನಾತೀತ. ಅಲ್ಲಿಗೆ ಪಯಣಿಸುವ ದಾರಿಯೂ ಚೆಂದ. ಇಕ್ಕೆಲಗಳಲ್ಲಿದ್ದ ದಟ್ಟ ಕಾಡುಗಳು ನಾವ್ಯಾವುದೋ ಗುಹೆಯೊಳಗೆ ಹೋಗುವ ಅನುಭವ ನೀಡುತ್ತಿದ್ದವು. ಹಲವಾರು ಬಾರಿ ದಾರಿಗಡ್ಡವಾಗಿ ಸಿಕ್ಕುತ್ತಿದ್ದ ವಿವಿಧ ಕಾಡುಪ್ರಾಣಿಗಳು ಒಂದು ರೀತಿಯ ರೋಚಕ ಅನುಭವವನ್ನು ಕೊಡುತ್ತಿದ್ದವು. ಎಷ್ಟೋ ಸಲ ಹುಲಿ ಧೀಮಂತವಾಗಿ ನಮ್ಮ ಕಾರಿಗೆ ಅಡ್ಡ ಹೋದದ್ದಿದೆ. ಹೆದರಿಕೆಯಾಗಿ ಹೊಟ್ಟೆಯಲ್ಲಿ ಪುಕುಪುಕು ಅನ್ನುತ್ತಿದ್ದರೂ ಆ ಹುಲಿಯ ನಡಿಗೆ(ಕಾರಿನೆಡೆಗಲ್ಲದೆ ಬೇರೆ ದಿಕ್ಕಿನಲ್ಲಿದ್ದಾಗ) ನೋಡುವುದೇ ಚೆಂದ. ಒಂದು ರೀತಿಯ ಥ್ರಿಲ್ ! ವಾಪಾಸು ಬಂದ ಮೇಲೆ ಅದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವಾಗ ಎದುರಿನವರು ಬಾಯಿಬಿಟ್ಟುಕೊಂಡು ಕೇಳುವಾಗ ನಾವು ದೊಡ್ಡ ಜನವಾದ ಅನುಭವ!
ಆಗುಂಬೆಗೆ ಹೋದ ದೂರ ಬಹಳವಲ್ಲ. ಆದರೆ ಹೋದ ದಾರಿ, ಹೋದ ರೀತಿ ವಿಶ್ಲೇಷಣೆಗೆ ಮೀರಿದ್ದು. ನಾವು ಆ ಪಯಣದಲ್ಲಿ ಅನುಭವಿಸುತ್ತಿದ್ದ ಆನಂದಾನುಭೂತಿ ನಿರೀಕ್ಷೆಗೂ ಮೀರಿದ್ದಾಗಿರುತ್ತಿತ್ತು. ಪ್ರಾಯಶಃ ನಾವು ಬದುಕುವ ಪ್ರತಿ ಕ್ಷಣಗಳನ್ನು ಗಣಿಸಿ ಕಳೆದರೆ ನಮ್ಮ ಬದುಕಿನ ಸಾರ್ಥಕ್ಯದ ಕ್ಷಣಗಳು ಹೆಚ್ಚುವುದರಲ್ಲಿ ಅಚ್ಚರಿ ಇಲ್ಲ.

37. ಬಾಲ್ಯ - ನೆನಪುಗಳು 
ಮೊನ್ನೆ ಮಾಲ್ಗುಡಿ ಡೇಸ್ ನೋಡುತ್ತಿದ್ದಾಗ ಸ್ವಾಮಿ ತನ್ನ ಗೆಳೆಯರೊಂದಿಗೆ ಸೇರಿ ಆಡುತ್ತಿದ್ದ ಬುಗುರಿ ಆಟ, ಗೋಲಿಯಾಟ, ಅವನ ಸೈಕಲ್ ಚಕ್ರ ಹೊಡೆಯುವ ಬಯಕೆ ನೋಡಿದಾಗ ನಾನು ಮತ್ತೊಮ್ಮೆ ನನ್ನ ಬಾಲ್ಯಕ್ಕೆ ಹೋದೆ.
ನಾನು ಬುಗುರಿ ಬಿಡಲು ಕಲಿತ ಕಷ್ಟ(ರೈಲು ಆರಾಮ ಬಿಡುತ್ತಿದ್ದೆ☺️) ನನಗೇ ಗೊತ್ತು. ಕೊನೆಗೂ ಕೈ ಮೇಲೆ ಜಾಸ್ತಿ ಹೊತ್ತು ಬುಗುರಿ ಬಿಟ್ಟು ಇರಿಸಲು ಆಗಲೇ ಇಲ್ಲ. ಆಗೆಲ್ಲ ಅಪ್ಪ ಬುಗುರಿ ಮಾಡಿ ಕೊಡುತ್ತಿದ್ದರು. ಬಣ್ಣದ ಬುಗುರಿಯಲ್ಲ, ಬರೀ ಮರದ ತುಂಡಿನ ಬೋಳು ಬುಗುರಿ! ಅಪ್ಪ ಬುಗುರಿ ಮಾಡುವ process ಬಹಳ interesting. ನಾನು ಬಾಯಿ ಬಿಟ್ಟುಕೊಂಡು ಅವರು ಬುಗುರಿ ಮಾಡುವುದನ್ನು ನೋಡುತ್ತಿದ್ದೆ. ನನ್ನದೇ ಬುಗುರಿ ನನಗೆ ಸಿಕ್ಕಾಗ ನನಗೆ ಪರಮಾನಂದವಾಗುತ್ತಿತ್ತು. ಅದು ಬೋಳು ಬುಗುರಿಯಾಗಿದ್ದರೂ "ನನ್ನ" ಅಮೂಲ್ಯ ಸ್ವತ್ತಾಗಿರುತ್ತಿತ್ತು. ಆಗ ಸಣ್ಣ ಸಣ್ಣ ವಸ್ತುಗಳಲ್ಲಿ, ವಿಷಯಗಳಲ್ಲಿ ಸಿಗುತ್ತಿದ್ದ ಸಂತಸ, ತೃಪ್ತಿ ಈಗೆಲ್ಲಿ ಹೋಯಿತೆನ್ನುವುದೇ ಪ್ರಶ್ನಾರ್ಥಕವಾಗಿ ಉಳಿದಿದೆ!
ಇನ್ನೊಂದು ವಿಶೇಷ ಆಟ ಗೋಲಿಯಾಟ. ಆ ಬಣ್ಣಬಣ್ಣದ ಗೋಲಿಗಳನ್ನು ಒಂದು ತಗಡಿನ ಡಬ್ಬದಲ್ಲಿ ಹಾಕಿಟ್ಟುಕೊಂಡು ಅದರ ಕಣಕಣ ಶಬ್ದ ಕೇಳುವುದೇ ಖುಷಿ. ಅದರಲ್ಲೊಂದು ಡುಬ್ಬ ಅಂತ ದೊಡ್ಡ ಜಾತಿಯ ಗೋಲಿ ಇರುತ್ತಿತ್ತು. ಅದನ್ನು ಹೊಂದಿದ್ದವರು ದೊಡ್ಡ ಜನ ಅಂತ ನಾವು ಎಣಿಸುತ್ತಿತ್ತು. ಅದು ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹಾಗೂ ನಮ್ಮ ಎಳೆಯ ಬೆರಳುಗಳಿಗೆ ಅದನ್ನು push ಮಾಡುವ ಶಕ್ತಿ ಇರುತ್ತಿರಲಿಲ್ಲ. ನೆಲದಲ್ಲಿ ಸಣ್ಣ ಗುಂಡಿ ಮಾಡಿ ನಮ್ಮ ಗೋಲಿಯಿಂದ ಇನ್ನೊಬ್ಬರ ಗೋಲಿಗೆ ಗುರಿಯಿಟ್ಟು ಹೊಡೆದು ಅವರ ಗೋಲಿಯನ್ನು ಕಬಳಿಸುವುದು ಒಂದು ರೀತಿಯಲ್ಲಿ ಘೋರಿ ಮಹಮ್ಮದನು ದಾಳಿ ಮಾಡಿ ಜಯಿಸಿದ ಭಾವವನ್ನು ಕೊಡುತ್ತಿತ್ತು! ಆ ಗೋಲಿಯಾಟ ಆಡಲಿಕ್ಕೆ ಎಷ್ಟು focus ಬೇಕಿತ್ತು ಎಂದು ಈಗ ಅದರ ಬಗ್ಗೆ ಯೋಚಿಸಿದಾಗ ಅರಿವಿಗೆ ಬರುತ್ತದೆ.
ಲಗೋರಿ ಆಟವಂತೂ ನಮ್ಮ ಚುರುಕುತನ ಹಾಗೂ ಚಾಣಾಕ್ಷತೆಯನ್ನು ಪರೀಕ್ಷಿಸುವ ಆಟ. ಚಪ್ಪಟೆ ಕಲ್ಲುಗಳನ್ನು ಹುಡುಕಿ ಒಂದರ ಮೇಲೊಂದನ್ನಿಟ್ಟು ಚೆಂಡಿನಿಂದ ಗುರಿಯಿಟ್ಟು ಹೊಡೆದು ಬೀಳಿಸುವುದೇ ಒಂದು ಕಲೆ. ಎದುರಾಳಿಗಳ ಹೊಡೆತ ತಪ್ಪಿಸಿಕೊಳ್ಳುತ್ತ ಪುನಃ ಕಲ್ಲುಗಳನ್ನು ಒಂದರ ಮೇಲೊಂದನ್ನಿಡುವುದು ದೊಡ್ಡ ಸವಾಲೇ. ಯಾವಾಗಲೂ ಚಪ್ಪಟೆ ಕಲ್ಲು ಸಿಗದಿರುತ್ತಿದ್ದ ಕಾರಣ ಯಾವ್ಯಾವುದೋ ಆಕಾರದಲ್ಲಿರುತ್ತಿದ್ದ ಕಲ್ಲುಗಳನ್ನು ಚುರುಕಾಗಿ ಪುನಃ ಜೋಡಿಸುವುದು ತುಂಬಾ exciting ಆಗಿರುತ್ತಿತ್ತು. ಆಗೆಲ್ಲ ಬೆನ್ಚಂಡಿನಿಂದ ಪೆಟ್ಟು ತಿಂದು ಆದ ಉರಿ ಇನ್ನೂ ನನ್ನ ಜ್ಞಾಪಕದಲ್ಲಿದೆ.
ಸೈಕಲ್ ಚಕ್ರವನ್ನು ಕಡ್ಡಿಯಲ್ಲಿ ಹೊಡೆಯುತ್ತಾ ಬ್ಯಾಲೆನ್ಸ್ ಮಾಡಿಕೊಂಡು ಓಡಿಸುವುದು ತುಂಬಾ ಥ್ರಿಲ್ಲಿಂಗ್ ಆಗಿರುತ್ತಿತ್ತು. ನಾನು ಪುಟ್ಟವಳಿದ್ದಾಗ ನನಗಿಂತ ದೊಡ್ಡದಾಗಿರುತ್ತಿದ್ದ ಸೈಕಲ್ ಚಕ್ರವನ್ನು ಬಹಳ ದೊಡ್ಡ ಸಾಧನೆ ಮಾಡಿದವಳಂತೆ ಓಡಿಸುತ್ತಿದ್ದದ್ದು ಇನ್ನೂ ನನ್ನಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ.
ನಾವು ಸಣ್ಣವರಿದ್ದಾಗ ನಮ್ಮ ಬೇಡಿಕೆಗಳು ಸಣ್ಣವೇ ಆಗಿರುತ್ತಿದ್ದವು. ಸುತ್ತಮುತ್ತಲಿನ ಮರಗಳು, ಕಲ್ಲು ಮಣ್ಣು ನಮ್ಮ ಆಟದ ಮುಖ್ಯ ಪಾತ್ತಧಾರಿಗಳಾಗಿರುತ್ತಿದ್ದವು. ನೈಸರ್ಗಿಕ ವಸ್ತುಗಳೊಡನೆ ಕಳೆದ ಬಾಲ್ಯ ಕಾಲ ನಮ್ಮ ಪ್ರಪಂಚದ ಅಧ್ಭುತಗಳಲ್ಲಿ ಒಂದು ಎಂದರೆ ನೀವು ಒಪ್ಪುತ್ತೀರಲ್ಲವೇ?


36. ಹೊಂಗಿರಣ - ನೆನಪುಗಳು 

ಬಾಂಡು, ಬಿಲ್ಲ, ಭಿಕ್ಕು ನಮ್ಮಲ್ಲಿ ಪ್ರಾರಂಭದ ವರ್ಷಗಳಲ್ಲಿದ್ದ ನಾಯಿಗಳು. ಬಾಂಡು ಕಾಟು ನಾಯಿಯಾಗಿತ್ತು. ಆದರೆ ಎಲ್ಲರನ್ನು ಪ್ರೀತಿಸುವ ಗುಣ ಅದಕ್ಕಿತ್ತು. ಕಪ್ಪು ಬಣ್ಣದ ನಾಯಿ ಅದಾಗಿತ್ತು. ಕೆಳಗಿನ ದವಡೆ ಮುಂದಿದ್ದ ಬಾಯಿ. ಅಮಾಯಕ ಮುಖ. ಆಗಾಗ ಬರುವ ಪರಿಚಿತರನ್ನು ನಮಗಿಂತ ಮುಂಚೆ ಅದೇ ಹೋಗಿ ಮಾತನಾಡಿಸುತ್ತಿತ್ತು. ಒಂದು ವೇಳೆ ಬಂದವರು ಪ್ರತಿಕ್ರಿಯಿಸದಿದ್ದಲ್ಲಿ ಅವರನ್ನು ತನ್ನ ಮುಂಗಾಲುಗಳಿಂದ ಮುಟ್ಟಿ ಮುಟ್ಟಿ ತನಗೆ ಅವರು ಸ್ಪಂದಿಸುವ ಹಾಗೆ ಮಾಡುತ್ತಿತ್ತು. ಒಮ್ಮೆ ನಮ್ಮಹಾಸ್ಟೆಲ್ ನೋಡಲು ಬೆಳಗಾ ಮುಂಚೆ ಬೆಂಗಳೂರಿನ ಪಾಲಕರು ಬಂದು ಬಾಗಿಲು ಮುಚ್ಚಿದ್ದ ಆಫೀಸಿನ ಹೊರಗೆ ಕಾಯುತ್ತಿದ್ದರು. ಅವರನ್ನು ಪ್ರಪ್ರಥಮವಾಗಿ ಮುಟ್ಟಿ ಮಾತನಾಡಿಸಿದ್ದು ನಮ್ಮ ಬಾಂಡು. ನಂತರ ಬಂದ ನಮ್ಮ ಸಿಬ್ಬಂದಿ ಅವರನ್ನು ಚೆನ್ನಾಗಿ attend ಮಾಡಿದಾಗ ಅವರು "ಇಲ್ಲಿ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಪ್ರೀತಿಸುವ ಗುಣ ಇದೆ" ಅಂತ ಪ್ರಶಂಸಿದರು. ಸುಮಾರು ಹತ್ತು ವರ್ಷ ಬದುಕಿದ ಬಾಂಡು ವಯೋಸಹಜವಾಗಿ ತೀರಿಕೊಂಡಿತು.
ಬಿಲ್ಲ ಸ್ವಲ್ಪ cross ಜಾತಿ ನಾಯಿ. ಕೆ. ಎಸ್. ಹೆಗಡೆ ಯವರು ಕೊಟ್ಟಿದ್ದಾಗಿತ್ತು. ಅದನ್ನು campusನಲ್ಲಿ ಮೊದಲು ಸಾಕಿದ್ದು ನಮ್ಮ ಅಡುಗೆ ಭಟ್ಟನಾಗಿದ್ದ ಜಗ್ಗಣ್ಣ. ಅವನು ಅದನ್ನು ಕಟ್ಟಿಯೇ ಸಾಕಿದ್ದ ಕಾರಣ ಸ್ವಲ್ಪ ರೌದ್ರ ಭಯಂಕರ ನಾಯಿಯಾಗಿತ್ತದು. ಮೆಸ್ಸಿನ ಹತ್ತಿರವೇ ಇರುತ್ತಿದ್ದ ಕಾರಣ ಊಟದ ಬೆಲ್ ಹೊಡೆದಾಗ ಮಕ್ಕಳು ಪ್ರಾರ್ಥನೆ ಮಾಡಿದರೆ ಅದು ಅವರ ಜೊತೆ ಜೊತೆಗೆ ಪ್ರಾರ್ಥನಾ ರಾಗದಲ್ಲಿ ಕೂಗುತ್ತಿತ್ತು. ಜಗ್ಗಣ್ಣ ಕೆಲಸ ಬಿಟ್ಟ ಮೇಲೆ ಅದನ್ನು ಕಟ್ಟದೆ ಹಾಗೇ free ಬಿಡುತ್ತಿತ್ತು. ಅದಕ್ಕೆ dominating ಗುಣ ಇತ್ತು. ಉಳಿದ ನಾಯಿಗಳು ಅದರ ಮಾತು ಕೇಳಬೇಕಿತ್ತು. ಇಲ್ಲದಿದ್ದರೆ ಅದು ಅವುಗಳ ಮೇಲೆ attack ಮಾಡುತ್ತಿತ್ತು. ಆದರೆ ಅದು ಬಹಳ ಸ್ವಾಮಿನಿಷ್ಟ ನಾಯಿಯಾಗಿತ್ತು. ಅದು ಮುದಿಯಾಗುತ್ತಿದ್ದಂತೆಯೆ ಅದರ ಕಣ್ಣ ದೃಷ್ಟಿ ಮಂದವಾಯಿತು. ಬಿಲ್ಲ ಅದರದ್ದೇ ಆದ charisma ಇಟ್ಟುಕೊಂಡು ಸುಮಾರು ಹನ್ನೆರಡು ವರ್ಷ ಬಹಳ ಗತ್ತಿನಲ್ಲಿ ಬದುಕಿ ಬಾಳಿತು.
ಭಿಕ್ಕು ಸುಮಾರು 70% ಆಲ್ಸೇಷಿಯನ್ ಅಂಶವಿದ್ದ ಹೆಣ್ಣು ನಾಯಿಯಾಗಿತ್ತು. ಅದೊಂದು ಮಹಾತಾಯಿಯಾಗಿತ್ತು. ಪ್ರತಿ ಸಲ ಒಂದೊಂದು ಡಜನ್ ಮರಿ ಹಾಕುತ್ತಿತ್ತು. ನಾವು ಮರಿಗಳನ್ನು free ಆಗಿ ಕೊಡುತ್ತಿದ್ದ ಕಾರಣ ಮರಿ ತೆಗೆದುಕೊಂಡು ಹೋಗಲು ದೊಡ್ಡ queue ಇರುತ್ತಿತ್ತು. ಅದರ ಮೂರ್ನಾಲ್ಕು ಮರಿಗಳನ್ನು ನಾವೂ ಸಾಕಿತ್ತು. ಅವುಗಳಿಗೆ ನಾವು ಬುಸ್ಸಿ, ಬ್ಯಾಟಿ, ಬ್ರೂನೊ...ಅಂತೆಲ್ಲ ಹೆಸರು ಇಟ್ಟಿತ್ತು. ಭಿಕ್ಕು ಸುಮಾರು ಏಳೆಂಟು ವರ್ಷವಿದ್ದಾಗ ಲಿವರ್ ಪ್ರಾಬ್ಲಂ ಆಗಿ ಮೈಯೆಲ್ಲಾ ಊದಿ ಬಹಳ ಒದ್ದಾಡಿ ತೀರಿಕೊಂಡಿತು. ಕೊಟ್ಟ ಯಾವ ಚಿಕಿತ್ಸೆ ಕೂಡಾ ಫಲಕಾರಿಯಾಗಿರಲಿಲ್ಲ.
ಈಗಲೂ ನಮ್ಮಲ್ಲಿ ಐದು ಜಾತಿ ನಾಯಿಗಳಿವೆ. ಆದರೆ ಹೊಂಗಿರಣದ ಪ್ರಾರಂಭದ ದಿನಗಳಲ್ಲಿದ್ದ ಆ ನಾಯಿಗಳೆಲ್ಲ ಈಗಲೂ ನಮ್ಮೆಲ್ಲರ ನೆನಪಿನಲ್ಲಿ ಜೀವಂತವಾಗಿದ್ದಾವೆ. ಏಕೆಂದರೆ ಅವುಗಳು ಬರೀ ಪ್ರಾಣಿಗಳಾಗಿ ನಮ್ಮೊಡನಿರಲಿಲ್ಲ; ಅವು ನಮ್ಮ ಒಡನಾಡಿಗಳಾಗಿದ್ದವು. ಅವುಗಳ ಆಪ್ತತೆಯ ಬಿಸುಪು ಇನ್ನೂ ನಮ್ಮ ಮೈಮನಗಳಲ್ಲಿದೆ ಅಂದರೆ ತಪ್ಪಲ್ಲ!


35.  ಕಲಿಕೆ - ಕಲಿಸುವಿಕೆ 
ಶಿಕ್ಷಣ ಕ್ಷೇತ್ರದ ಮೂಲ ಅಗತ್ಯವೇ ಶಿಕ್ಷಕ - ಮಗುವಿನ ನಡುವಣ ಸಂಬಂಧ ಮತ್ತು ಸಕಾರಾತ್ಮಕ ಸಂವಹನ ಎನ್ನುವ ಸತ್ಯ ದರ್ಶನ ನಮಗಾದದ್ದು ಗಾಳಿಬೀಡಿನ ನವೋದಯದಲ್ಲಿ. ಹನ್ನೆರಡು ವರ್ಷಗಳ ಕಾಲ ನಮ್ಮ ಘನ ಸೇವೆಯನ್ನು ಗಾಜನೂರಿನ ನವೋದಯದಲ್ಲಿ ಸಲ್ಲಿಸಿದ ನಾವು ಗಾಳಿಬೀಡಿನ ನವೋದಯಕ್ಕೆ ವರ್ಗಾವಣೆಯಾಗಿ ಹೋದಾಗ ಅದೊಂದು ಅತಂತ್ರ ಸ್ಥಿತಿಯಲ್ಲಿದ್ದ ಸಂಸ್ಥೆಯಾಗಿತ್ತು. ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಯಾರೂ ಇಲ್ಲದ, ಹೊಸ ಹೊಸ ಸಿಬ್ಬಂದಿಗಳಿಂದ ಕೂಡಿದ್ದ ಅಲ್ಲಿ ಎಲ್ಲರೂ ಅವರವರ ಪಾಡಿಗೆ ಅವರವರು ಯಾಂತ್ರಿಕವಾಗಿ ಕೆಲಸ ಮಾಡುವ ವಾತಾವರಣ ಇತ್ತು. ವಿದ್ಯಾರ್ಥಿಗಳಂತೂ ಯಾರ ಅಂಕೆಗೂ ಸಿಗದ ಸ್ಥಿತಿಯಲ್ಲಿದ್ದರು.ಅಲ್ಲಿ duty report ಮಾಡಿಕೊಂಡ ಕೂಡಲೆ ರವಿ ತನ್ನ seniorityಯಿಂದಾಗಿ ಸಂಸ್ಥೆಯ ಜವಾಬ್ದಾರಿ ಹೊರಬೇಕಾಯಿತು. ಹೊಸ ಪರಿಸರ, ಹೊಸ ಸಹೋದ್ಯೋಗಿಗಳು, ಅಪರಿಚಿತ ಮಕ್ಕಳು! ವಹಿಸಿಕೊಂಡ ಜವಾಬ್ದಾರಿಯೂ ಹೊಸದೇ! ಆಲ್ಲಿನ ಹೊಣೆಗಾರಿಕೆ ನಿಭಾಯಿಸುವುದು ಒಂದು ಸವಾಲೇ ಆಗಿತ್ತು.
ದಿನ ಕಳೆದಂತೆ ನಮ್ಮ ಅನುಭವಕ್ಕೆ ಬಂದ ವಿಷಯವೇನೆಂದರೆ ಒಂದು ಶಾಲೆಯಲ್ಲಿ ಇರಲೇ ಬೇಕಾಗಿದ್ದ human touch ಎನ್ನುವುದು ಅಲ್ಲಿ ಕಾಣೆಯಾಗಿತ್ತು. ಶಿಕ್ಷಕ - ವಿದ್ಯಾರ್ಥಿಗಳ ನಡುವೆ ಒಂದು ಭಾವಬಂಧವೇ ಇರಲಿಲ್ಲ. ಪಾಠ ಪ್ರವಚನಗಳೆಲ್ಲವೂ ಸರಿಯಾಗಿ ನಡೆಯುತ್ತಿದ್ದರೂ ಅಲ್ಲಿ ಕಲಿಯುವವರ - ಕಲಿಸುವವರ ನಡುವೆ ಒಂದು visible gap ಇತ್ತು. ಈ ಅಂತರವನ್ನು ತುಂಬುವ ಬಗೆ ಹೇಗೆ ಎನ್ನುವುದೇ ಒಂದು ಸವಾಲಾಗಿ ಪರಿಣಮಿಸಿತ್ತು. ಇದಕ್ಕೆ ಪರಿಹಾರಾತ್ಮಕ ಪ್ರಯತ್ನವಾಗಿ ನಾವು ಸಹೋದ್ಯೋಗಿಗಳಲ್ಲಿ ಮಿತ್ರತ್ವ ಭಾವ ಮೂಡಿಸಿ ತದನಂತರ ಅವರಲ್ಲಿ ಮಕ್ಕಳ ಭಾವನಾತ್ಮಕ ಹಸಿವಿನ ಬಗ್ಗೆ ಅರಿವು ಮೂಡುವ ಹಾಗೆ ಮಾಡಿದ್ದು. ಶಿಕ್ಷಕರ ಕಾಳಜಿಯ ರುಚಿಯರಿತ ವಿದ್ಯಾರ್ಥಿಗಳು ಸಹಜವಾಗಿಯೇ ನಿಯಂತ್ರಣಕ್ಕೆ ಬಂದು ಶಾಲಾ ಗತಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿತು.
ಈ ಎಲ್ಲಾ ಬದಲಾವಣೆಗಳನ್ನು ತರಲು ನಮಗೆ ಸಾಧ್ಯವಾದದ್ದು ನಮ್ಮ ಆತ್ಮವಿಶ್ವಾಸವನ್ನು boost ಮಾಡಿತೆಂದರೆ ಸುಳ್ಳಲ್ಲ. ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಇನ್ನೂ ಹಲವು ಅವಕಾಶಗಳು ಅಲ್ಲಿ ಸಿಕ್ಕಿ ಅದರ ನಿರ್ವಹಣೆಯಿಂದ ನಮ್ಮ ಅನುಭವ ಇನ್ನಷ್ಟು ಹರಿತವಾಗಿ ನಮ್ಮ ಕನಸಿನ ಶಾಲೆಯ ಚಿತ್ರಣ ಮೂರ್ತ ರೂಪ ಪಡೆಯಲು ಸಹಾಯವಾಯಿತು. ನಾವು ನಮ್ಮ ಸಮಾನ ಮನಸ್ಕ ಮಿತ್ರರೊಡಗೂಡಿ ನಮ್ಮ ಕನಸಿನ ಶಾಲೆಯನ್ನು ಪ್ರಾರಂಭಿಸುವ ತಾಕತ್ತು ನಮಗೆ ಲಭಿಸಿತು.. ಹೀಗೆ ಸಂಸ್ಥೆಗಳನ್ನು ನಡೆಸುವಾಗ ಎದುರಾಗುವ ಸಮಸ್ಯೆಗಳ ground realityಯನ್ನು ಅಲ್ಲಿ ಅರಿತು ಮತ್ತು ಅನುಭವಿಸಿ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾದದ್ದು ಹೊಂಗಿರಣದ ಹುಟ್ಟಿಗೆ ಅಡಿಗಲ್ಲಾಯಿತು ಎನ್ನುವುದು ಅಕ್ಷರಶಃ ಸತ್ಯ.

34. ಅನುಭವ - ನೆನಪುಗಳು 
ಮಲೆನಾಡಿನ ಕೂಡು ಕುಟುಂಬದಲ್ಲಿ ಇದ್ದು ಅಡುಗೆ ಮನೆ ನಿರ್ವಹಿಸುವುದು ಒಂದು ದೊಡ್ಡ ಛಾಲೆಂಜ್.
ಅಡುಗೆ ಅಂದ ಕೂಡಲೆ ನನಗೆ ಜ್ಞಾಪಕವಾಗುವುದು ನನ್ನ ಅತ್ತೆ (ರವಿಯ ಅಮ್ಮ) ಭವಾನಮ್ಮ. 9 ಮಕ್ಕಳನ್ನು ಹೆತ್ತು ಏಳು ಸೊಸೆ ಯರನ್ನು, ಇಬ್ಬರು ಅಳಿಯಂದಿರನ್ನು ಸಂಭಾಳಿಸಿದ ಧೀರೆ ಆಕೆ. ತನ್ನ ಯಾವ್ಯಾವ ಮಕ್ಕಳಿಗೆ ಏನೇನು ಇಷ್ಟ ಅನ್ನುವುದು ಅವರಿಗೆ ವೇದ್ಯವಾಗಿತ್ತು. ಹೀಗಾಗಿ ಬೇಸಿಗೆ ರಜೆಯಲ್ಲಿ ನಾವೆಲ್ಲ ಒಟ್ಟು ಸೇರಿದಾಗ ಸೊಸೆಯಂದಿರಿಗೆ ಅಡುಗೆ ಮನೆಯಲ್ಲಿ ಒಂದು ರೀತಿಯ ದಿಗ್ಬಂಧನ! ಕಟ್ಟಿಗೆ ಒಲೆಯ ಮೇಲೆ ಬೆಳಿಗ್ಗೆ ದೋಸೆ ಕಾವಲಿ ಅಥವಾ ರೊಟ್ಟಿ ಹಂಚನ್ನು ಇಟ್ಟು ಕೂತರೆ ಬೆಳಗಿನ ಹತ್ತು ಹನ್ನೊಂದು ಘಂಟೆಯವರೆಗೆ ಪುರುಸೊತ್ತಿಲ್ಲದೆ ತಿಂಡಿ ಮಾಡಾಟ. ನಮ್ಮ ಮನೆಯ ಗಂಡಸರೆಲ್ಲ ಕಲಾವಿದರಾಗಿದ್ದ ಕಾರಣ ಸೂರ್ಯೋದಯ ಅವರಿಗೆ ತಡವಾಗುತ್ತಿತ್ತು. ಎದ್ದವರಿಗೆಲ್ಲ ಬಿಸಿ ಬಿಸಿ ತಿಂಡಿ ಕೊಡಬೇಕಾಗಿದ್ದ ಕಾರಣ ತಿಂಡಿಯ ಕಂಬಳ ಮುಗಿಯುತ್ತಲೇ ಇರಲಿಲ್ಲ. ಅಬ್ಬಾ! ಅಂತೂ ತಿಂಡಿ ಆಯಿತು ಅನ್ನುತ್ತಿರುವಾಗಲೇ ಎರಡನೇ ರೌಂಡ್ ಟೀ ಗೆ ಬೇಡಿಕೆ. ಅದು ಆಗುತ್ತಿದ್ದಂತೆ ಅತ್ತೆಯಿಂದ "ನಾರಾಯಣಂಗೆ ಮಂದಾನೆ ಗೊಜ್ಜು ಇಷ್ಟ, ಮಾಣಿಗೆ ಕಳಲೆ ಪಲ್ಯ ಇಷ್ಟ, ಮಂಜುಗೆ ತಂಬುಳಿ ಇಷ್ಟ ....".‌ಅಂತ ಮೇಲೋಗರಗಳ ಲಿಸ್ಟ್ ರೆಡಿ. ಒಂದು ರೌಂಡ್ ಕ್ಲೀನ್ ಆದ ಅಡುಗೆ ಮನೆಯಲ್ಲಿ ಪುನಃ ಅಡುಗೆ ಕಾರ್ಯ ಪ್ರಾರಂಭ. ಒಬ್ಬರು ತರಕಾರಿ ಹೆಚ್ಚಿದರೆ ಇನ್ನೊಬ್ಬರು ಕಾಯಿ ತುರಿದರೆ ಮಗದೊಬ್ಬರು ರುಬ್ಬುವ ಕಲ್ಲಿನಲ್ಲಿ ಮಸಾಲೆ ರುಬ್ಬಲು ಶುರು. ಸೊಸೆಯರಲ್ಲಿ ಒಳ್ಳೆಯ understanding ಇದ್ದ ಕಾರಣ ಸಿಡಿಮಿಡಿ ಮಾಡದೆ ಒಳ್ಳೊಳ್ಳೆ ಅಡುಗೆ ತಯಾರಿ. ಮಧ್ಯಾಹ್ನದ ಊಟದ ನಂತರ ಸಂಜೆ "ಬಾಯಾಡಲು" ಬೇಕಾದ ತಿಂಡಿಯ ತಯಾರಿ. ಸಂಜೆ ಕಾಫಿ ಟೀ ಆಗುತ್ತಿದ್ದಂತೆ ರಾತ್ರಿಯ ಊಟಕ್ಕೆ ಏನಾದ್ರು ಹೊಸ ಸೇರ್ಪಡೆ. ಮನೆ ತುಂಬ ಜನ ಇರುತ್ತಿದ್ದ ಕಾರಣ ಮಾಡಿದ ಅಡುಗೆಗೆ ಒಳ್ಳೆಯ ನ್ಯಾಯ ಸಿಗುತ್ತಿತ್ತು. ಅತ್ತೆಯ ಮೇಜವಾನಿಕೆಯಲ್ಲಿ ಸೊಸೆಯರಿಂದ ತರಹೇವಾರಿ ಅಡುಗೆಯೋ ಅಡುಗೆ. ಇದೊಂತರ ನಿರಂತರ ಪ್ರಕ್ರಿಯೆ ಆಗಿತ್ತು.
ಇನ್ನೊಂದು ದೊಡ್ಡ ಕೆಲಸವೆಂದರೆ ಹಲಸಿನ ಹಪ್ಪಳದ ತಯಾರಿ. ಸರಿ ಸುಮಾರು ಎಂಟ್ಹತ್ತು ಸಾವಿರ ಹಪ್ಪಳ ತಯಾರಿ. ಆಗ ಬೆಳಿಗ್ಗಾ ಮುಂಚೆ ಎದ್ದು ಹಪ್ಪಳ ತಯಾರಿ ಕೆಲಸ. ಅದು ಸ್ವಲ್ಪ ರೇಜಿಗೆಯ ಕೆಲಸವಾಗಿತ್ತು. ಜನ ಜಾಸ್ತಿ ಇದ್ದ ಕಾರಣ ಆ ಕೆಲಸ ಮಜವಾಗಿ ಸಾಗುತ್ತಿತ್ತು. ತಯಾರಿಸಿದ ಹಪ್ಪಳದ ಅರ್ಧವಾಸಿ ರಜೆ ಮುಗಿಯುವುದರೊಳಗೆ ಖಾಲಿ. ಮತ್ತುಳಿದುದರಲ್ಲಿ ನಮ್ಮೆಲ್ಲರ ಸಂಸಾರಗಳಿಗೆ ಸಮಪಾಲು ಹಂಚಿಕೆ. ಇದರೊಡನೆ ಉಪ್ಪಿನಕಾಯಿ ತಯಾರಿ ಕೂಡಾ ಆಗುತ್ತಿತ್ತು. ಅದರ credits ಎಲ್ಲಾ ಅತ್ತೆ ಮತ್ತು ದೊಡ್ಡಕ್ಕನಿಗೆ ಸಲ್ಲುತ್ತಿತ್ತು. ಒಟ್ಟಿನಲ್ಲಿ ನಮ್ಮ ರಜಾಕಾಲವೆಲ್ಲ ಅಡುಗೆ ಮನೆಯ ನಾಲ್ಕು ಗೋಡೆಯೊಳಗೆ ಕಳೆದು ಹೋಗುತ್ತಿತ್ತು. ಈಗ ಆ ದಿನಗಳ ಅವಲೋಕನ ಮಾಡಿದರೆ ಈಗಾಗಲೇ ಆಗಿರುವ, ಆಗುತ್ತಿರುವ ಜೀವನ ಕ್ರಮದ ಬದಲಾವಣೆಯ ಬಗ್ಗೆ ಆಶ್ಚರ್ಯವಾಗುತ್ತದೆ. ಮನೆ ತುಂಬಾ ಜನರಿಂದ ಗಿಜಿಗುಡುತ್ತಿದ್ದ ಆ ದಿನಗಳು ಹೀಗೂ ಇದ್ದವೇ ಎನ್ನುವುದು ಕನಸೇನೋ ಅಂತನಿಸುತ್ತದೆ.

33. ಸಾಹಸ - ಅನುಭವ 
ಮಡಿಕೇರಿಯ ಗಾಳಿಬೀಡಿನ ನವೋದಯದಲ್ಲಿದ್ದಾಗ ನಡೆದ ಒಂದು ಮರೆಯಲಾರದ ಅನುಭವ. ನಮ್ಮ ಕ್ಯಾಂಪಸ್ ನಿಂದ ಅಬ್ಬಿ ಫಾಲ್ಸ್ ಗೆ ಕಾಲ್ದಾರಿಯ ಮೂಲಕ ಹೋದರೆ ಮೂರ್ನಾಲ್ಕು ಕಿಮೀ ದೂರ, ಕಾರಿನಲ್ಲಿ ಮೇನ್ ರೋಡ್ ನಲ್ಲಿ ಹೋದರೆ ಸುಮರು 20 ಕಿಮೀ ದೂರವಿತ್ತು. ಒಂದು ದಿನ ನಾನು, ಶಂಕರಿ ಹಾಗೂ ನಮ್ಮ ಫ್ಯಾಮಿಲಿ ಫ್ರೆಂಡ್ ರಮೇಶ ಮಧ್ಯಾಹ್ನ ಮೂರು ಗಂಟೆಯ ಮೇಲೆ ನಮಗೆ ಗೊತ್ತಿರದ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಅಬ್ಬಿ ಫಾಲ್ಸ್ ನತ್ತ ಪಯಣ ಹೊರಟೆವು.ಆ ದಾರಿ ನಮ್ಮನ್ನು ಒಂದು ಕಾಫಿ ಪ್ಲಾಂಟೇಶನ್ ಮೂಲಕ ಜಲಪಾತದೆಡೆಗೆ ಕರೆದೊಯ್ದಿತು. ನೇರವಾಗಿದ್ದ ಜಾರುಗುಡ್ಡದ ಸಣ್ಣ ಕಾಲ್ದಾರಿ ಅದು. ಸ್ವಲ್ಪ ಆಚೀಚೆ ಹೊರಳಿದರೂ ಸುಮಾರು 500-600 ಅಡಿಯ ಜಲಪಾತ ದರ್ಶನ😊 ಅಂತೂ ಇಂತೂ ಜಾಗ್ರತೆಯಿಂದ ಅಬ್ಬಿ ಜಲಪಾತ ತಲುಪಿದಾಗ ಘಂಟೆ ಐದಾಗುತ್ತಾ ಬಂದಿತ್ತು. ಕತ್ತಲೆ ನಿಧಾನವಾಗಿ ಆವರಿಸತೊಡಗಿತ್ತು. ಹೀಗಾಗಿ ಕೂಡಲೇ ಹಿಂದಿರುಗುವ ನಿರ್ಧಾರ. ಆ ಗುಡ್ಡದ ಕಾಲ್ದಾರಿಯಲ್ಲೇ ಹೋದರೆ ತಡವಾಗುತ್ತದೆಂದು ಅರ್ಧ ದಾರಿ ಕ್ರಮಿಸಿದ ನಂತರ ನೇರವಾಗಿ ಗುಡ್ಡವನ್ನೇ ಹತ್ತ ತೊಡಗಿತು. ಅದು slope ಆಗಿದ್ದ ಗುಡ್ಡವಾಗಿರದೆ ನೇರವಾಗಿದ್ದ ಕಾರಣ ಹತ್ತುವುದು ತುಂಬಾ ಕಷ್ಟಕರವಾಗಿತ್ತು. ಅಲ್ಲಲ್ಲಿ ಕಾಫಿ ಗಿಡಗಳು, ಏಲಕ್ಕಿ ಗಿಡಗಳು, ಹುಲ್ಲು ಬಿಟ್ಟರೆ ಮೇಲೆ ಹತ್ತಲು grip ಗೆ ಏನೂ ಇರಲಿಲ್ಲ. ಸಣ್ಣ ದೇಹದ ಶಂಕರಿ ಹಾಗೂ ರಮೇಶ ಸುಲಭವಾಗಿ ಹತ್ತತೊಡಗಿದರು. ಸಮಸ್ಯೆ ಶುರುವಾದದ್ದೇ ಅಲ್ಲಿ. ನನ್ನ ದೇಹದ ಭಾರಕ್ಕೆ ನಾನು ಆಸರೆಗಾಗಿ ಹಿಡಿದ ಏಲಕ್ಕಿ ಗಿಡಗಳು ನನ್ನ ಪ್ರೀತಿಯ ಭಾರಕ್ಕೆ ನೆಲವನ್ನು ಬಿಟ್ಟು ನನ್ನನ್ನೇ ಆತುಕೊಳ್ಳ ತೊಡಗಿದವು. ಹುಲ್ಲಿನ ಬುಡವಂತೂ ಪುಸಪುಸನೆ ನನ್ನ ಕೈಗೆ ಬಂದು ಬಿಡುತ್ತಿದ್ದವು(ಹುಲ್ಲು ಕೀಳುವುದು ಅಷ್ಟು ಸುಲಭ ಅಂತ ಗೊತ್ತಿದ್ರೆ ಒಂದಿಷ್ಟು ದನ ಸಾಕಿ ಬಿಡ್ತಿದ್ದೆ😊) ನನಗೆ ಗುಡ್ಡ ಹತ್ತುವ ಯಾವ ಆಧಾರವೂ ಇಲ್ಲದಾದಾಗ ರಮೇಶ ತನ್ನ ಪ್ಯಾಂಟ್ ನ ಬೆಲ್ಟ್ ಬಿಚ್ಚಿ ಯಾವುದೋ ಒಂದು ಕಾಫಿ ಗಿಡದ ಬುಡ ಹಿಡಿದು ಬೆಲ್ಟ್ ನನ್ನೆಡೆಗೆ ಬಿಡುತ್ತಿದ್ದ. ನಾನು "ಬದುಕಿದೆಯೋ ಬಡ ಜೀವವೇ" ಎನ್ನುತ್ತಾ ಅದನ್ನು ಆಧರಿಸಿ ಮೇಲೆ ಹತ್ತುತ್ತಿದ್ದೆ. ಹಾಗೆಯೇ ಕೆಳಗೆ ನೋಡಿದರೆ ಪ್ರಪಾತದಲ್ಲಿ ಧುಮುಕಿ ಬಳಕುತ್ತಿರುವ ಜಲಪಾತ, "ಬಾ ಕೆಳಗೆ, ನಾನು ಬೇಗನೆ ನಿನ್ನನ್ನು ಮೇಲಕ್ಕೆ ಕಳಿಸುತ್ತೇನೆ" ಎಂದು ಕರೆಯುವ ಮನೋಲ್ಲಾಸದ😢 ದೃಶ್ಯ!? ಕೈ ಕಾಲು ಅದುರಿ ಕೆಳಗೆ ಉರುಳಿ ಬೀಳುತ್ತೇನೇನೊ ಎನ್ನುವ ಆತಂಕ. ಎಷ್ಟೇ ಆದರೂ ನನ್ನ ಪ್ರಾಣ ನನಗೆ ಪ್ರೀತಿ ಅಲ್ಲವೆ? ಅಂತೂ ಇಂತೂ ರಮೇಶನ ಬೆಲ್ಟ್ ನ ಮೇಲೆ ಭಾರ ಹಾಕಿ ಗುದ್ದಾಡಿ ಗುಡ್ಡ ಹತ್ತಿದಾಗ ಪೂರ್ಣ ಕತ್ತಲಾವರಿಸಿದ ಆ ಸಮಯದಲ್ಲೂ ಆತಂಕದಿಂದಾಗಿ ಮುಖದಿಂದ ಹೊರ ಬಂದಿದ್ದ ಕಣ್ಣುಗಳಿಗೆ ಬದುಕಿನ ಬೆಳಕಿನ ದರ್ಶನವಾಯಿತು. ಸಾವು ಬದುಕಿನಾಟವೆನ್ನುವುದು ವಿಚಿತ್ರವೇ ಸೈ. ಅಂದು ರಮೇಶನ ಸಮಯ ಪ್ರಜ್ಞೆ ಹಾಗೂ ಬೆಲ್ಟ್ ಇಲ್ಲವೆಂದಿದ್ದರೆ.......!?


32. ನವೋದಯ - ಅನುಭವ 
2002ರಲ್ಲಿ ನಾವು ಗಾಳಿಬೀಡಿನ ಕೂಟು ಹೊಳೆಯ ಎದುರಿನ ಸುಂದರವಾದ ಗುಡ್ಡದ ಮೇಲಿದ್ದ ನವೋದಯಕ್ಕೆ ವರ್ಗವಾಗಿ ಬಂದಿತ್ತು. ಅಲ್ಲಿನ ವಿಶಿಷ್ಟತೆ ಏನೆಂದರೆ ಮಳೆಗಾಲದಲ್ಲಿ ಆರು ತಿಂಗಳು ಸೂರ್ಯನ ದರ್ಶನವೇ ಇರುವುದಿಲ್ಲ. ಆರು ತಿಂಗಳೂ ಜುಮರು ಮಳೆ. ಒಗೆದ ಬಟ್ಟೆ ಒಣಗಿಸಲು ಹೀಟರ್ ಬೇಕೇ ಬೇಕಿತ್ತು. ನಾವು ಮಲಗಿ ಅರ್ಧ ಗಂಟೆಯ ಮೇಲೆ ಹಾಸಿಗೆ ಬಿಸಿಯಾಗುತ್ತಿತ್ತು. ಅಷ್ಟು ಥಂಡಿ ಹವಾ. ಬೆಳಿಗ್ಗೆ - ಮಧ್ಯಾಹ್ನ - ರಾತ್ರಿ ಎನ್ನದೇ ದಿನವಿಡೀ ಒಂದೇ ಉಷ್ಣತೆ. ಕಾಲಿಟ್ಟಲ್ಲೆಲ್ಲ ಇಂಬಳ. ಮನೆಯೊಳಗೂ ಇಂಬಳ ಬರುತ್ತಿತ್ತು.
ಅದೊಂದು ನೈಸರ್ಗಿಕವಾಗಿ ಸುಂದರವಾಗಿದ್ದ ಕ್ಯಾಂಪಸ್. ದೊಡ್ಡದಾದ ಗುಡ್ಡದ ಬುಡದಲ್ಲಿ ಶಾಲಾ ಕಟ್ಟಡಗಳು. ಹಂತ ಹಂತವಾಗಿ ಮೇಲೇರುತ್ತಿದ್ದಂತೆ ಟೀಚರ್ಸ್ ಕ್ವಾರ್ಟರ್ಸ್ ಹಾಗೂ ಗರ್ಲ್ಸ್ ಡಾರ್ಮ್, ಡೈನಿಂಗ್ ಹಾಲ್, ಕಿಚನ್ ಹಾಗೂ ಹುಡುಗರ ಡಾರ್ಮ್, ನಂತರ ಪುನಃ ಟೀಚರ್ಸ್ ಕ್ವಾರ್ಟರ್ಸ್. ಗುಡ್ಡದ ತುತ್ತ ತುದಿಯನ್ನು ಯಾವಾಗಲೂ ಮೋಡಗಳು ಆವರಿಸಿರುತ್ತಿದ್ದವು. ಮೋಡಗಳು ನಮ್ಮ ಮೇಲೆ ಹಾದು ಹೋಗುವಾಗ ವಿಚಿತ್ರ ಖುಷಿ ಸಿಗುತ್ತಿತ್ತು. ದಿನಕ್ಕೆ ಒಮ್ಮೆಯಾದರೂ ಇಡೀ ಗುಡ್ಡ ಹತ್ತಿ ಇಳಿಯುವ ಅನಿವಾರ್ಯತೆ ಬರುತ್ತಿತ್ತು. ಆ ಕ್ಯಾಂಪಸ್ ನ ಗುಡ್ಡದ ಎದುರೇ ಸುಂದರವಾದ ಕೂಟುಹೊಳೆ. ಸಿನಿಮಾ ಮಂದಿಗೆ ಅದೊಂದು ಉತ್ತಮ ಶೂಟಿಂಗ್ ತಾಣ. ನಮಗೂ ಬಹಳಷ್ಟು ನಟನಟಿಯರನ್ನು ನೋಡುವ ಭಾಗ್ಯ ಒದಗಿ ಬಂದಿತ್ತು☺️
ಅಲ್ಲಿನ ಮಕ್ಕಳನ್ನು ನಾವು ಪ್ರಶಂಸಿಸಲೇಬೇಕು. ಅಂತಹ ಚಳಿಯಲ್ಲೂ ಮಕ್ಕಳು ಯಾವುದೇ ತಕರಾರಿಲ್ಲದೆ ತಣ್ಣೀರು ಸ್ನಾನ ಮಾಡುತ್ತಿದ್ದರು. ಬೆಳಿಗ್ಗೆ 4.30ಕ್ಕೆ ಎದ್ದು 5 ಗಂಟೆಗೆ ಮಾರ್ನಿಂಗ್ ಪಿ ಟಿ ಗೆ ರೆಡಿ ಆಗುವುದರೊಂದಿಗೆ ಪ್ರಾರಂಭವಾಗುತ್ತಿದ್ದ ಅವರ ದಿನ ರಾತ್ರಿ 10ಕ್ಕೆ ವಿರಾಮ ಹಾಕುತ್ತಿತ್ತು. ದೊಡ್ಡ ಕ್ಲಾಸ್ ನವರ ದಿನ ರಾತ್ರಿ 11ಕ್ಕೆ ಮುಗಿಯುತ್ತಿತ್ತು. That's Navodaya.
ಮಡಿಕೇರಿಯ ಇನ್ನೊಂದು ವಿಶಿಷ್ಟತೆ ಏನೆಂದರೆ ಆ ಪೇಟೆಯಲ್ಲಿ ಸಂಜೆ ಐದರ ಮೇಲೆ ಒಂದು ನರಪಿಳ್ಳೆಯೂ ನೋಡೋಕೆ ಸಿಗುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಕತ್ತಲು ಆವರಿಸಲು ಪ್ರಾರಂಭಿಸುತ್ತಿದ್ದ ಕಾರಣ ಜನ ಮನೆ ಸೇರಿ ಬಿಡುತ್ತಿದ್ದರು. ಇದು ನಾವು ಕರ್ನಾಟಕದಲ್ಲೇ ಇದ್ದರೂ ಬೇರೆ ಯಾವುದೋ ಜಗತ್ತಿನಲ್ಲಿದ್ದಂತಹ ಅನುಭವ‌ ಕೊಡುತ್ತಿತ್ತು. ಬಸ್ ಸ್ಟ್ಯಾಂಡ್ ಹತ್ತಿರವಿದ್ದ ನಮ್ಮೂರಿನ ಪದ್ಮನಾಭನ ಅಂಬಿಕಾ ಟಿಫಿನ್ಸ್ ನಮಗೆ ಎಲ್ಲಾ ರೀತಿಯಿಂಲೂ ರಿಲೀಫ್ ಕೊಡುತ್ತಿದ್ದ ಜಾಗ. ಆ ಕುಟುಂಬದ ನಂಟು ಇನ್ನೂ ಉಂಟು. ಆ ಹೋಟೆಲ್ ನ ದೋಸೆಯ ರುಚಿ ಇನ್ನೂ ನಾಲಿಗೆ ಮೇಲುಂಟು.
ಅಲ್ಲಿನ ಜನರ ಮೇಲೆ ಸ್ವಲ್ಪ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಇದ್ದ ಕಾರಣ ಅಲ್ಲಿನವರಿಗೆ ಜನ ಬಳಕೆ ಕಡಿಮೆ. ಇದರಿಂದಾಗಿ ಜನರ ಒಡನಾಟ ಕಡಿಮೆಯಾಗಿ ನಮಗೆ ಎಲ್ಲಾ ಡ್ಯೂಟಿಗಳ ನಡುವೆ ಕೂಡಾ ಖಾಲಿತನ ಕಾಡುತ್ತಿತ್ತು. ಶಾಲೆ ಮಾಡಬೇಕೆಂಬ ನಮ್ಮ ಕನಸು ಘನೀಕರಿಸಿದ್ದು ಅಲ್ಲಿಯೇ ಅಂದರೆ ತಪ್ಪಲ್ಲ. ನಮ್ಮೊಳಗಿನ ಆಲೋಚನೆಗಳ ಚರ್ಚೆಗೆ ಹಾಗೂ ಮುಂದಿನ ಯೋಜನೆಯ ರೂಪುರೇಷೆಗೆ ಸಮಯ ಸಿಕ್ಕು ನಾವು ಕ್ರಿಯಾಶೀಲರಾಗಲು ಮಡಿಕೇರಿಯ ಆ ದಿನಗಳು ಸಹಾಯ ಮಾಡಿದುವೆಂದರೆ ಸುಳ್ಳಲ್ಲ. ನಮಗಾಗಿ ನಾವು ವ್ಯಯಿಸಲು ಸಿಗುವ ಸಮಯ ಎಂತೆಂತಹ ಸೃಷ್ಟಿಗೆ ಕಾರಣೀಭೂತವಾಗುತ್ತದೆ ಎನ್ನುವುದು ಮಡಿಕೇರಿಯ ಆ ದಿನಗಳೇ ಸಾಕ್ಷಿ!

31.ಹೊಂಗಿರಣ - ಅನುಭವ 


ಹೊಂಗಿರಣದಲ್ಲಿ ನಾವು ಮಕ್ಕಳ ಅನುಭವಕ್ಕಾಗಿ ಆಯೋಜಿಸುವ ಚಟುವಟಿಕೆಗಳು ಹಲವಾರು. ಅಂತಹುದರಲ್ಲಿ ಒಂದು "ಸಾಹಸೀ ಚಟುವಟಿಕೆ". ಮಕ್ಕಳನ್ನು ಹಿನ್ನೀರಿನ ಪ್ರದೇಶ, ಜಲಪಾತ, ಗುಡ್ಡಗಾಡು ಪ್ರದೇಶ ..ಹೀಗೆ ರೋಚಕ ಅನುಭವ ಸಿಗುವ ಯಾವುದಾದರೂ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಒಂದಿಷ್ಟು guided activities ಮಾಡಿಸುವುದು, under alert supervision! ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವ ಮೊದಲು ನಾವು ನಾಲ್ಕೈದು ಜನ ಹೋಗಿ ಆ ಜಾಗವನ್ನು ವೀಕ್ಷಣೆ ಮಾಡಿಕೊಂಡು ಬರುವುದು ನಮ್ಮ ರೂಢಿ. ಈಗ್ಗೆ ಮೂರು ವರ್ಷಗಳ ಹಿಂದೆ ನಾವು ಹುಡುಕಿದ ಅಂತಹುದೊಂದು ಅಧ್ಭುತ ಜಾಗ ಅಂಬಾರಗುಡ್ಡ.
ಅದೊಂದು ದಿನ ನಮ್ಮ CIAZ carನಲ್ಲಿ ಅರವಿಂದನ ಸಾರಥ್ಯದಲ್ಲಿ ನಾನು, ಸಂದೀಪ್, ಚೆನ್ನ, ವಾಸುದೇವ್ ಹೊಸನಗರ - ನಗರ ಮಾರ್ಗವಾಗಿ ಅಂಬಾರಗುಡ್ಡದ ತಲಾಶ್ ಗೆ ಹೊರಟೆವು. ಶಾಲೆಯಿಂದ ಸುಮಾರು 80ಕಿಮಿ ದೂರ. ನಾಗೋಡಿ ಚೆಕ್ ಪೋಸ್ಟ್ ನಿಂದ ಬಲಕ್ಕೆ ತಿರುಗಿ 8ಕಿಮಿ ಹೋದರೆ ಸಿಗುವ ಊರು ಮರಾಠೆ. ಇತ್ತೀಚಿಗೆ ಅಲ್ಲಿಯವರೆಗೆ ಒಳ್ಳೆಯ ರಸ್ತೆ ಮಾಡಿದ್ದಾರೆ. ಬಹಳ ಹಿಂದುಳಿದ ಪ್ರದೇಶ. ಸರಕಾರಿ ಶಾಲೆಯೊಂದನ್ನು ಬಿಟ್ಟರೆ ಅಲ್ಲಿ ಏನೂ ಇಲ್ಲ. ಕುಡುಬಿಯರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವದು.
ಮರಾಠೆಯಿಂದ ಬಲಕ್ಕೆ ತಿರುಗಿ ರಸ್ತೆಯಲ್ಲದ ಮಣ್ಣಿನ ರಸ್ತೆಯಲ್ಲಿ ಮೂರ್ನಾಲ್ಕು ಕಿಮಿ ದಾರಿ ಸವೆಸಿದರೆ ಮುರಳ್ಳಿ ಶಾಲೆ ಸಿಗುತ್ತದೆ. ಅಲ್ಲಿಂದ ಮುಂದೆ ವಾಹನ ಹೋಗುವುದಿಲ್ಲ.ಹೀಗಾಗಿ ನಮ್ಮಕಾಲೇ ಗತಿ. ಅಲ್ಲಿಂದ ಒಂದೆರಡು ಕಿಮಿ. ನಡೆದರೆ ಅಂಬಾರಗುಡ್ಡದ ಬುಡಕ್ಕೆ ಬರುತ್ತೇವೆ. ಅದರ ವಿಸ್ತಾರ ರೂಪ ದರ್ಶನವಾಗುತ್ತದೆ. 700 -800 ಅಡಿ ಎತ್ತರದ ವಿಶಾಲ ಬೋಳು ಗುಡ್ಡ. ನಾವು ಅಲ್ಲಿಗೆ ತಲುಪುವಾಗ ಮಟಮಟ ಮಧ್ಯಾಹ್ನ 12 ಗಂಟೆ. ಆ ಉರಿ ಬಿಸಿಲಿನಲ್ಲಿ ಗುಡ್ಡದ ಆರೋಹಣ ಪ್ರಾರಂಭ. ನನ್ನೊಡನಿದ್ದವರೆಲ್ಲ ಮೂವತ್ತು ನಲವತ್ತರ ಹರೆಯದ ಹಗುರ ದೇಹದವರು. ನನ್ನದಾದರೋ ಐವತ್ತರ ಹರೆಯದ ದಢೂತಿ ದೇಹ!! ಅವರು ಒಳ್ಳೆ ಇಣಚಿ ಮರಿಯ ಹಾಗೆ ಪಟಪಟನೆ ಮೇಲೆ ಹತ್ತಿದರೆ ನಾನೋ ಆನೆಮರಿಯ ಹಾಗೆ ಏದುಸಿರು ಬಿಡುತ್ತಾ ಗುಡ್ಡ ಹತ್ತುವ ಪ್ರಕ್ರಿಯೆಯಲ್ಲಿದ್ದೆ. ನನ್ನನ್ನು motivate ಮಾಡುತ್ತಾ ಅಲ್ಲಲ್ಲಿ ಆಸರೆ ಕೊಡುತ್ತಾ ನನ್ನೊಡನಿದ್ದವರು ಹರ ಸಾಹಸ ಮಾಡಿ ನನ್ನನ್ನು ಗುಡ್ಡ ಹತ್ತಿಸಿಯೇ ಬಿಟ್ಟರು. ಮೇಲೇರಿದ ನಂತರ ದೊರೆತದ್ದು ಒಂದು ದಿವ್ಯಾನುಭೂತಿ! ಮಾತಿಗೆ ಮೀರಿದ ಅನುಭವ. ಗುಡ್ಡದ ತುದಿಯ ರುಮುರುಮನೆ ಬೀಸುವ ಕುಳಿರ್ಗಾಳಿಯಲ್ಲಿ ಕೆಳಗೆ ನೋಡಿದರೆ ನೂರಾರು ಕಿಮಿ ವ್ಯಾಪ್ತಿಯ ಪಕ್ಷಿನೋಟ. ನೋಡಿದಷ್ಟೂ ಮುಗಿಯಲಾರದ ಅನಂತ ಪ್ರಕೃತಿ ದರ್ಶನ. ಕಣಿವೆ ಕಂದರಗಳ ನಡುವೆ ಹರಿಯುವ ನದಿಗಳ ಮಾಟದ ನೋಟ. ಒಂದೇ ಎರಡೇ! ನಾನೆಲ್ಲಾದರೂ ಆ ಗುಡ್ಡ ಹತ್ತದಿದ್ದಲ್ಲಿ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೆ. ನನ್ನ ದೇಹಕ್ಕೆ ಅಪಾರ ಸುಸ್ತಾಗಿತ್ತು. ಆದರೆ ಮನ ಹಗುರಾಗಿತ್ತು. ಅಂತಹ ಕ್ಷಣಗಳನ್ನು ಪದಗಳಲ್ಲಿ ಬಣ್ಣಿಸುವುದು ಕಷ್ಟ. ನಾವು ಅಲ್ಲಿ ಕಳೆದ ಎರಡು ಮೂರು ಗಂಟೆಗಳು ಸ್ಮರಣೀಯ. ಹೊಟ್ಟೆಯ ಹಸಿವಿನ ಕೂಗು ಕೇಳದಷ್ಟು ಮನ ತುಂಬಿತ್ತು ಆ ದಿನ. ಅಂದು ಆ ಗುಡ್ಡದ ಅಗಾಧತೆಯ ಮುಂದೆ ನಾವೆಲ್ಲ ಹುಲುಮಾನವರು ಎಂಬ ಸತ್ಯದ ದಿವ್ಯದರ್ಶನವಾಯಿತು. ಇಂತಹ ಅಪರೂಪದ ಅನುಭವಗಳು ನಮಗೆ ಜೀವನದ ಅನೇಕ ಸತ್ಯಗಳ ಸಾಕ್ಷಾತ್ಕಾರ ಮಾಡಿಸುತ್ತವೆಂದರೆ ಸುಳ್ಳಲ್ಲ
.


30. ಬಾಲ್ಯ - ನೆನಪುಗಳು 
ಪತ್ರೊಡೆ ಎಲ್ಲರಿಗೂ ಪರಿಚಿತ ತಿಂಡಿ. ಪಚ್ಚೆ ಕೆಸ ಅಥವಾ ಮರಕೆಸದಲ್ಲಿ ಪತ್ರೊಡೆ ಮಾಡಿದರೆ ಬಾಯಿಯಲ್ಲಿ ಇಟ್ಟಾಗ ಬೆಣ್ಣೆಯಂತೆ ಕರಗುತ್ತದೆ. ಬೊಂಬಾಯಿ ಕೆಸ ಅಥವಾ ಕಾಟು ಕೆಸದಲ್ಲಿ ಮಾಡುವಾಗ ನೀರಿನ ಹತ್ರ ಬೆಳೆದ ಎಲೆಯದ್ದೇ ಮಾಡಬೇಕು. ಇಲ್ಲದಿದ್ದರೆ ಬಾಯಿ ತುರಿಸುತ್ತದೆ.
ನನ್ನ ಅಮ್ಮ ಪತ್ರೊಡೆ expert. ಆದರೆ ಅವಳು ಅದನ್ನು ತಯಾರಿಸುವಾಗ ಮಾಡುವ ರಗಳೆಗೆ ಪತ್ರೊಡೆಯೂ ಬೇಡ, ಏನೂ ಬೇಡ ಅಂತ ಅನಿಸುತ್ತದೆ. ಅವಳ ಸುಪರ್ದಿಯಲ್ಲಿ ಕೆಲಸದ ಕಾವೇರಿ ಬಚ್ಚಲ ನೀರು ಹೋಗುವ ಜಾಗದಲ್ಲಿ ಬೆಳೆದ ಸುಳಿ ಸುಳಿ ಕೆಸುವನ್ನು ಕೊಯ್ಯಬೇಕು. ಆಗ ಅಮ್ಮ ತೋರಿಸಿದ ಎಲೆ ಬಿಟ್ಟು ಬೇರೆ ಎಲೆ ಕೊಯಿದರೆ ಅವಳ ಕಥೆ ಕೋಚು! ನಂತರ ಅಮ್ಮ ಪ್ರತಿ ಎಲೆಯ ಇಂಚಿಂಚೂ ಪರೀಕ್ಷೆ ಮಾಡಿದ ಮೇಲೆ ಆ ಎಲೆಗಳನ್ನು ಒಂದೊಂದಾಗಿ ತೊಳೆದು ಸ್ವಚ್ಛವಾದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಇಡಬೇಕು. ಇಷ್ಟೆಲ್ಲ ಆಗುವಾಗ ನನ್ನ ಅತ್ತಿಗೆ ನಾಲ್ಕು ಲೋಟ ಅಕ್ಕಿ ನೆನೆಸಿ ಅದನ್ನು ಹಲವು ಬಾರಿ ತೊಳೆದು ಅದಕ್ಕೆ ಒಂದು ದೊಡ್ಡ ತೆಂಗಿನಕಾಯಿ ತುರಿದು ಕುತ್ತುಂಬರಿ, ಜೀರಿಗೆ, ಮೆಂತೆ, ಅರಿಶಿನ, ಹುಣಿಸೆಹಣ್ಣು, ಬೆಲ್ಲ, ಉಪ್ಪು, ಒಣ ಮೆಣಸು ಎಲ್ಲಾ ಹಾಕಿ ಹದವಾಗಿ ಅಮ್ಮನ ಅಳತೆಯ ಪ್ರಕಾರ ರುಬ್ಬಿಟ್ಟಿರಬೇಕು. ನಂತರ ಅಮ್ಮ ತೊಳೆದು ನೀರಿಳಿದ ಕೆಸುವಿನ ಎಲೆಗಳನ್ನು ತರಿಸಿಕೊಂಡು ಊಟದ ಟೇಬಲ್ ಮೇಲೆ ಮಣೆಯಿಟ್ಟು ಅಳತೆ ಪ್ರಕಾರ ಒಂದೊಂದೇ ಕೆಸುವಿನ ಎಲೆಗೆ ಹಿಟ್ಟು ಹಚ್ಚುತ್ತಾ ಒಂದರ ಮೇಲೆ ಒಂದು ಇಡುತ್ತಾ ಸುರುಳಿ ಸುತ್ತಿ ಬೇಯಿಸಲಿಕ್ಕೆ ಕೊಟ್ಟರೆ ಅವುಗಳನ್ನು ಅಟ್ಟದಲ್ಲಿಟ್ಟು ಬೇಯಿಸುವ ಕೆಲಸ ಅತ್ತಿಗೆಯದ್ದು. ಇಷ್ಟೆಲ್ಲಾ ಆಗುವಾಗ ಅಮ್ಮ ನಿರಂತರವಾಗಿ ಕೊಡುವ ಆದೇಶಗಳು, ಅವಳ anxietyಯ ಉದ್ಗಾರಗಳು, ಅವಳ ಕರೆಗೆ ನಾವು ತಕ್ಷಣ ಸ್ಪಂದಿಸದಿದ್ದಾಗ ಅವಳ ಸಿಟ್ಟು .....ಇವೆಲ್ಲಾ ಅವಳು ಪತ್ರೊಡೆ ಮಾಡುವ processನ ಮರೆಯಲಾಗದ, ಕೆಲವೊಮ್ಮೆ ಕಿರಿಕಿರಿ ಎನಿಸುವ ಕ್ಷಣಗಳು. ರುಚಿಯಾದ ಪತ್ರೊಡೆಯನ್ನು ಬೆಣ್ಣೆಯೊಟ್ಟಿಗೆ ತಿನ್ನುವಾಗ ಆ ಎಲ್ಲಾ ರಗಳೆಗಳು ಮರೆತು ಹೋಗಿಬಿಡುವುದಂತೂ ಸತ್ಯ!
ಇನ್ನೊಂದು ಮರೆಯಲಾರದ ವಿಷಯ ಅಂದ್ರೆ ಅಜ್ಜಯ್ಯನ ಇಷ್ಟದ ಜಾ ಬದನೆ ಪಲ್ಯ. ಇದೊಂದು ಕಾಟು ಬದನೆ. ಬದನೆ ಗಿಡವನ್ನು ಹೋಲುವ ಒಂದು ರೀತಿಯ ಮುಳ್ಳಿನ ಗಿಡದಲ್ಲಿ ಸಣ್ಣ ಸಣ್ಣ ಬದನೆಕಾಯಿಗಳಾಗುತ್ತವೆ. ತಮಿಳಿಯನ್ನರಿಗೆ ಅತ್ಯಂತ ಪ್ರೀತಿಯ ತರಕಾರಿ ಇದಂತೆ. ಇದರಿಂದ ಮಾಡುವ ವತ್ತ ಕೊಳಂಬೊ ಬಹಳ ಫೇಮಸ್ ಅಂತ ನಮ್ಮ ಗಣೇಶಜ್ಜ ಹೇಳ್ತಿದ್ರು. ಅದೇನೆ ಇರಲಿ. ನನ್ನ ಅಜ್ಜಯ್ಯನಿಗೆ ಜಾ ಬದನೆ ಪಲ್ಯ ಬಹಳ ಇಷ್ಟ. ಆದರೆ ಅದನ್ನು ಮಾಡುವ process ಬಹಳ ರಗಳೆಯದ್ದು. ಅವುಗಳನ್ನು ಮುಳ್ಳು ಚುಚ್ಚಿಸಿಕೊಳ್ಳುತ್ತಾ ಕೊಯ್ದು, ನಂತರ ಕಲ್ಲಿನ ಮೇಲೆ ಇಟ್ಟುಕೊಂಡು ಕುಟ್ಟಿ, ಅವುಗಳ ಬೀಜ ತೆಗೆದು ನೀರಿನಲ್ಲಿ ಹಲವು ಬಾರಿ ತೊಳೆದು ನಂತರ ಕಾಯಿ ಸಾಸಿವೆ ಹಾಕಿ ಪಲ್ಯ ಮಾಡುವುದು. ಆ ಕುಟ್ಟಿ ತೊಳೆಯುವ processಗೆ ಬೋರ್ ಆಗಿ ಆ ಗಿಡಗಳನ್ನು ಕತ್ತರಿಸಿ ಹಾಕಿ ಬಿಡುವ ಅಂದ್ರೆ ಅಜ್ಜಯ್ಯ ಅದನ್ನು ಲೆಕ್ಕ ಮಾಡಿ ಇಟ್ಟಿರುತ್ತಿದ್ದರು. ಒಟ್ಟಿನಲ್ಲಿ ಆ ಜಾ ಬದನೆ ಗಿಡಗಳು ಕನಸಿನಲ್ಲೂ ಬಂದು ಕಾಡುತ್ತಿದ್ದವು. ಈಗ ಆ ಗಿಡಗಳಿದ್ರೂ ಅದರ ಪಲ್ಯ ಮಾಡುವ ಕಷ್ಟ ನಮಗಿಲ್ಲ. ಅಜ್ಜಯ್ಯನ ಜೊತೆಗೆ ಆ ಪಲ್ಯವೂ ಹೋಗಿ ಬಿಟ್ಟಿತು!
ಮನೆ ಅಂದ ಮೇಲೆ ಇಂತಹ ನೆನಪಿನ ಕ್ಷಣಗಳು ಇರುವುದು ಸಹಜವಷ್ಟೇ!?

29. ಅನುಭವ - ನೆನಪುಗಳು 
ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಟೊಮೆಟೊ ಕತ್ತರಿಸಿ ಸಕ್ಕರೆ ಬೆರೆಸಿ ತಿನ್ನಬೇಕೆಂಬ ತೊಡು ಹುಟ್ಟಿತು. ತಿಂದೂ ಬಿಟ್ಟೆ ಕೂಡಾ😊 ತೊಡುವನ್ನು control ಮಾಡೋದು ಕಷ್ಟ. ಈ ರೀತಿ ಸಕ್ಕರೆ ಬೆರೆಸಿದ ಟೊಮೆಟೊವನ್ನು ನಾನು ತಿನ್ನುತ್ತಿದ್ದುದು ಬಾಲ್ಯದಲ್ಲಿ. ಹಾಗೆ ತಿನ್ನುತ್ತಿರುವಾಗ ನನ್ನ ಬಾಲ್ಯಕಾಲದ ತಿಂಡಿಗಳು ಕಣ್ಣು ಮುಂದೆ ಬಂದವು.
ನಾವೆಲ್ಲ friends ಸೇರಿ ಹುಣಿಸೆಹಣ್ಣಿಗೆ ಉಪ್ಪು, ಬೆಲ್ಲ, ಒಣಮೆಣಸು, ಜೀರಿಗೆ.. ಹೀಗೆ ಒಬ್ಬೊಬ್ಬರು ಒಂದೊಂದು item ತಂದು ಯಾವುದೋ ಗುಂಡುಕಲ್ಲಿನ ಮೇಲೆ ಕುಟ್ಟಿ ಸಣ್ಣ ಸಣ್ಣ ಉಂಡೆ ಮಾಡಿ ಚೂಪಿ ಚೂಪಿ ತಿನ್ನುತ್ತಿದ್ದೆವು. ಅದೆಂತಹ ರುಚಿ ಮಾರಾಯರೇ! ಆದನ್ನು ತಿಂದದ್ದು ಜಾಸ್ತಿಯಾಗಿ ಕೆಲವೊಮ್ಮೆ ನಾಲಿಗೆ ಒಡೆದದ್ದಿದೆ.
ಆಗ ಆಟಂಬಾಂಬ್ ಅಂತ ಒಂದು ಮಿಠಾಯಿ ಐದು ಪೈಸೆಗೆ ಸಿಗುತ್ತಿತ್ತು. ಅದು ನಮ್ಮ ಬಾಯಿಗಿಂತ ದೊಡ್ಡ ಇರುತ್ತಿತ್ತು. ಅದನ್ನು ತಿನ್ನಬೇಕಾದರೆ ಸರ್ಕಸ್ ಮಾಡಬೇಕಿತ್ತು. ಆದರೂ ಅದರ ರಸವನ್ನು ಕಟುವಾಯಿಯಲ್ಲಿ ಜೋರಿಸಿಕೊಳ್ಳುತ್ತಾ ತಿನ್ನುವುದೇ ಮಜಾ. ಮತ್ತೊಂದು ವಸ್ತು ಕಿತ್ತಳೆ ಪೆಪ್ಪರ್ಮಿಂಟು‌. ಅದರ ರುಚಿ ತಿಂದವನೇ ಬಲ್ಲ. ಏನು ಸ್ವಾದ ಅದರದ್ದು ಅಂತೀರಿ.
ನಮ್ಮ ಸುನಂದ ದೊಡ್ಡಮ್ಮ ಶಿವಮೊಗ್ಗದಿಂದ ಊರಿಗೆ ಬರುವಾಗ ಉಂಡೆ ಬೆಲ್ಲ ತರುತ್ತಿದ್ದರು. ನಾವು ಅವರು ಬರುವುದನ್ನೇ ಕಾಯುತ್ತಿದ್ದು ಬೆಲ್ಲದುಂಡೆಗಳನ್ನು ಕ್ಷಣ ಮಾತ್ರದಲ್ಲಿ ಧ್ವಂಸ ಮಾಡುತ್ತಿದ್ದೆವು. That's our capacity🥴
ನನಗೆ ಪಿಯು ದಿನಗಳಲ್ಲಿ ಹುರಿದ ಹುಣಸೆ ಬೀಜ ತಿನ್ನುವ ಚಟ. ನನ್ನ ಹತ್ತಿರ ಡಬ್ಬಗಟ್ಟಲೇ stock ಇರುತ್ತಿತ್ತು. ಕೆಲವೊಮ್ಮೆ class ನಡೆಯುವಾಗಲೂ ತಿನ್ನುತ್ತಿದ್ದೆ. ಒಮ್ಮೆ ತಂತ್ರಿಗಳ ಹಿಂದಿ ತರಗತಿ. ಭರದಿಂದ ಪಾಠ ಸಾಗುತ್ತಿತ್ತು. ಅಷ್ಟೇ ಭರದಿಂದ ನನ್ನ ಹುಣಸೆ ಬೀಜದ ತಿನ್ನುವಿಕೆ ಕೂಡಾ ಸಾಗುತ್ತಿತ್ತು. ನಾನು ಕುಟುಂ ಅಂತ ಅದನ್ನು ಶಬ್ದ ಸಮೇತ ತುಂಡು ಮಾಡಲಿಕ್ಕೂ ಅವರು ಪಾಠ ನಿಲ್ಲಿಸಿ sudden class silent ಆಗಲಿಕ್ಕೂ ಸರಿ ಹೋಯಿತು. ನನ್ನ ಕುಟುಂ ಶಬ್ದ ಭಯಂಕರವಾಗಿ ಕೇಳಿಸಿತು. ಎಲ್ಲರೂ ಯಾರಿದು ಅಂತ ಹುಡುಕುವವರೇ. ನಾನು ಕೂಡ ಅಮಾಯಕಳಾಗಿ ಹುಡುಕುವ ನೋಟ ಹರಿಸಿದೆ. ನನ್ನ ಅಕ್ಕಪಕ್ಕ ಕುಳಿತಿದ್ದ ನನ್ನ ಗೆಳತಿಯರು ಕುಸುಕುಸು ಅಂತ ಒಳಗೊಳಗೆ ನಗುತ್ತಿದ್ದರು. ತಂತ್ರಿಗಳು ವಿಷಯ ಎಳೆಯದ ಕಾರಣ ನಾನು ಬದುಕಿಕೊಂಡೆ. ಆದರೂ ಹುಣಸೆ ಬೀಜ ತಿನ್ನುವುದನ್ನು ಬಿಡಲಿಲ್ಲ. ಅಂತಹ ರುಚಿ ಅದಕ್ಕೆ.
ಇನ್ನೊಂದು ತಿನ್ನುವಿಕೆ ಅಂದರೆ ಗೋಂಯ್ ಬೀಜ ಸುಟ್ಟು ತಿನ್ನುವುದು ಹಾಗೂ ಹಲಸಿನ ಬೇಳೆ ಬೇಯಿಸಿ ಒಣಗಿಸಿ ತಿನ್ನುವುದು. ಮಾವಿನಹಣ್ಣಿನ ಹಂಚಟ್ಟು ಅದ್ವಿತೀಯ. ಇವೆಲ್ಲ ಈಗ haunting memories. ಇದನ್ನು ಓದುವಾಗ ನನ್ನ ಸಮಕಾಲೀನರಿಗೆ ಬಾಯಿಯಲ್ಲಿ ನೀರು ಬರುವುದಂತೂ ಶತಸತ್ಯ😄



28. ನೆನಪುಗಳು - ಹೊಂಗಿರಣ 
2004 ಏಪ್ರಿಲ್ ತಿಂಗಳಲ್ಲಿ ತುಂಬಿನಕೆರೆ ಪಾಪು ಒಂದು shoe boxನಲ್ಲಿ ನನಗೆ ಒಂದು ಡಾಬರ್ಮನ್ ನಾಯಿ ಮರಿ ತಂದು ಕೊಟ್ಟರು. ನನಗಾಗ ಒಂದು ಆಪರೇಶನ್ ಆಗಿ ರೆಸ್ಟ್ ನಲ್ಲಿದ್ದೆ. ಆ ನಾಯಿಮರಿ ನನಗೆ ಒಂದು ರೀತಿಯ ರಿಲೀಫ್ ಕೊಟ್ಟಿತು. ಅದೇ ನಾನು ಮೊಟ್ಟ ಮೊದಲು ಸಾಕಿದ ನಾಯಿ ಜಾತಿಯ ಜಾತಿ ನಾಯಿ ತೈಬು😊 ಅದೊಂದು ಪದಗಳ ವಿವರಣೆಗೆ ಮೀರಿದ ನಾಯಿಯಾಗಿತ್ತು. ನನ್ನನ್ನು ತುಂಬಾ ಹಚ್ಚಿಕೊಂಡ ನಾಯಿಯಾಗಿತ್ತು. ನಮ್ಮಿಬ್ಬರ ಒಡನಾಟ ಹೇಗಿತ್ತೆಂದರೆ ಆಗ ಒಂಬತ್ತು ವರ್ಷದವಳಾಗಿದ್ದ ನನ್ನ ಮಗಳು ಅದನ್ನು ಸಹಿಸಲಾಗದಷ್ಟು!
ನಾನು ಆಫೀಸಿನಲ್ಲಿ ಇರುವಾಗ ಅದು ಹೊರಗಡೆಯೇ ಕಾಯುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಒಳಗಡೆ ಬಂದು ನನ್ನ ತೊಡೆಯ ಮೇಲೆ ತಲೆ ಇಟ್ಟು ಮಲಗುತ್ತಿತ್ತು. ಆಗಿದ್ದ ಬಿಇಒ ಒಬ್ಬರು ಸ್ಕೂಲ್ ಅವರ್ಸ್ ಮುಗಿದ ಮೇಲೆ ಬಂದು ನನ್ನ ಕುರ್ಚಿಯ ಮೇಲೆ ಕೂತಾಗ ತೈಬು ಕೂಗಿ ಅವರನ್ನು ಆ ಕುರ್ಚಿಯಿಂದ ಎಬ್ಬಿಸಿ ಬಿಟ್ಟಿತ್ತು. ಅಂತಹ ಸ್ವಾಮಿ ಪ್ರೀತಿ ಅದರದ್ದು☺️
ಅದು ಯಾರನ್ನೂ ಕಚ್ಚಿದ ದಾಖಲೆ ಇಲ್ಲ. ಒಮ್ಮೆ ನನ್ನ ಮಾನಸಪುತ್ರ ಅವಿನಾಶ(ಆಗಿನ್ನು ಅವನು ಮೂರು ವರ್ಷದವನು) ಆದಕ್ಕೆ ಉಪದ್ರವ ಕೊಟ್ಟಾಗ ಅವನನ್ನು ಅಡ್ಡ ಮಲಗಿಸಿ ಹೆದರಿಸಿತ್ತೇ ವಿನಃ ಅವನಿಗೆ ಕಚ್ಚಿರಲಿಲ್ಲ. ಇನ್ನೊಮ್ಮೆ ರಾತ್ರಿ ಹೊತ್ತಿನಲ್ಲಿ ಕ್ಯಾಂಪಸ್ ಗೆ ಬಂದ ಯಾರೋ ಒಬ್ಬರನ್ನು ಹೆದರಿಸಿ ಮರ ಹತ್ತಿ ಕೂರುವ ಹಾಗೆ ಮಾಡಿತ್ತು. ಹಾಸ್ಟೆಲ್ ನಲ್ಲಿ ಇದ್ದ ಗಣೇಶ ಮಾತ್ರ ಅದರ ಅವಗಣನೆಗೆ ಪಾತ್ರನಾಗಿದ್ದ!
ನನ್ನ ಮತ್ತು ತೈಬುವಿನ bond ಬಹಳ ಗಟ್ಟಿಯಾಗಿತ್ತು. ನಾನು ಮನಸ್ಸಿಗೆ ತುಂಬಾ ಹತ್ತಿರವಾಗಿಸಿಕೊಂಡಿದ್ದ ಏಕೈಕ ನಾಯಿ ತೈಬುವಾಗಿತ್ತು. ಅಂತಹ ತೈಬು ಯಾರೋ ತಂದಿಟ್ಟ ಇಡೀ ಬಾಳೆಗೊನೆಯನ್ನು ತಿಂದು ಕಫ ಕಟ್ಟಿ ಡಾಕ್ಟರ್ ಚಿಕಿತ್ಸೆಗೆ ಸ್ಪಂದಿಸದೆ ಒಂದೆರಡು ದಿನಗಳಲ್ಲಿ ಮರಣ ಹೊಂದಿತು. ಆಗ ಅದಕ್ಕೆ just 8 ತಿಂಗಳು.ಅದನ್ನು ಕಳೆದುಕೊಂಡಾಗ ನನಗಾದ ಸಂಕಟ ಅಪರಿಮಿತ. ನಂತರ ಹಲವಾರು ನಾಯಿಗಳನ್ನು ಸಾಕಿದರೂ ಅವು ಯಾವುವೂ ತೈಬುವಷ್ಟು ಹತ್ತಿರವಾಗಲೇ ಇಲ್ಲ. ಅಕಾಲದಲ್ಲಿ ನಮ್ಮ ಆಪ್ತರನ್ನು ಕಳೆದುಕೊಂಡಾಗ ಉಂಟಾಗುವ ನಿರ್ವಾತದ ಪ್ರಥಮಾನುಭವ ಕೊಟ್ಟದ್ದು ತೈಬುವಿನ ಮರಣ!



27. ಹೊಂಗಿರಣ - ನೆನಪುಗಳು 
ಹೊಂಗಿರಣದ ಪ್ರಾರಂಭದ ವರ್ಷಗಳು. ನಮಗೆ ಸತತವಾಗಿ ಅಡುಗೆ ಭಟ್ಟರ ಸಮಸ್ಯೆ. ಮನೆಗೆ ಹೋದರೆ ತಿಂಗಳುಗಟ್ಟಲೆ ಭಟ್ಟರು ವಾಪಸ್ ಬರುತ್ತಿರಲಿಲ್ಲ. ಶಾಲೆ ಶುರುವಾಗಿ ಸುಮಾರು ಐದಾರು ವರ್ಷ ನಾನು ನಮ್ಮ ಶಂಕ್ರಿ ಹಾಗೂ ಕೆಲವು ವಸತಿ ಶಿಕ್ಷಕರ ಸಹಾಯ ತಗೊಂಡು ಬೆಳಿಗ್ಗೆ 250 ಜನರಿಗೆ ತಿಂಡಿ, ಮಧ್ಯಾಹ್ನ ಸುಮಾರು 750 ಜನರಿಗೆ ಊಟ , ಸಂಜೆ ಸ್ನ್ಯಾಕ್ಸ್, ರಾತ್ರಿ ಚಪಾತಿ, ಪಲ್ಯ, ಊಟ ready ಮಾಡ್ತಿದ್ದೆ. ನಮ್ಮ ಕನಸಿದ್ದದ್ದು ಒಳ್ಳೆಯ ಶಾಲೆ ಮಾಡುವುದು. ಆದರೆ ಇಲ್ಲಿ ಶಾಲೆಯ ಪಾಠ ಪ್ರವಚನದ ಜೊತೆ ಊಟವನ್ನೂ ready ಮಾಡುವ ಕೆಲಸವೂ ಸೇರಿಕೊಂಡಿದ್ದು ವಿಶೇಷವೇ ಸರಿ. ಆಗ ಅಡುಗೆಗೆ ವ್ಯವಸ್ಥೆಯೂ ಈಗಿನಂತಿರಲಿಲ್ಲ. ಅಂತಹ ವ್ಯವಸ್ಥಿತವಲ್ಲದ ವ್ಯವಸ್ಥೆಯಲ್ಲಿ ಅಡುಗೆ expert ಅಲ್ಲದ ನಮ್ಮಂತವರಿಂದ ನಳಪಾಕ! ಅದನ್ನು ಉಂಡು ಜೀರ್ಣಿಸಿಕೊಂಡವರ ಬಗ್ಗೆ ನನ್ನ ಮನಸ್ಸಿನ್ನೂ ಮಿಡಿಯುತ್ತಿದೆ☺️
ಪ್ರತಿಕೂಲ ಪರಿಸ್ಥಿತಿ ನಮ್ಮನ್ನು ಎಲ್ಲ ರೀತಿಯ ಹೋರಾಟಕ್ಕೂ ಸಜ್ಜುಗೊಳಿಸುತ್ತದೆ ಅನ್ನುವುದು ಹೊಂಗಿರಣದ ಪ್ರಾರಂಭಿಕ ವರ್ಷಗಳಲ್ಲಿ ನಾನು ನಿರ್ವಹಿಸಿದ ಪಾತ್ರಗಳಿಂದ ಗೊತ್ತಾಗುತ್ತದೆ. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಹೊಂಗಿರಣದಲ್ಲಿ ನಾನು ಮಾಡದ ಕೆಲಸವಿರಲಿಲ್ಲ.. ಅಡುಗೆ ಮಾಡು, ಮೆಸ್ಸಿನ ಪಾತ್ರೆ ತೊಳಿ, cleaning ಕೆಲಸ ಮಾಡು, ಮಕ್ಕಳಿಗೆ ಸ್ನಾನ ಮಾಡಿಸು, ಅಡುಗೆಗೆ ಕಟ್ಟಿಗೆ ಒಟ್ಟು ಮಾಡು, ಮಕ್ಕಳ ಆರೈಕೆ ಮಾಡು..... ಒಂದೇ ಎರಡೇ ಹಲವಾರು ಬಗೆಯ ಕೆಲಸಗಳು! ಯಾವುದಕ್ಕೂ ಬಗ್ಗದೆ ಜಗ್ಗದೆ ಅಗತ್ಯವಿದ್ದಲ್ಲಿ ಇನ್ನೊಬ್ಬರ ಸಹಾಯ ಪಡೆದುಕೊಳ್ಳುತ್ತಾ ಸಾಗಿದ್ದು ಸಾಗುತ್ತಿರುವುದು ಒಂದು ಗಾಥೆಯೆ! ಒಂದು ವಿಶೇಷವೆಂದರೆ ಹೊಂಗಿರಣದ ಕುಟುಂಬದ ಸದಸ್ಯರು ಯಾವಾಗಲೂ ಎಲ್ಲ ಕೆಲಸಕ್ಕೂ ಸೈ.
ಒಂದು ಬಾರಿ ಹೊಂಗಿರಣೋತ್ಸವದ ಸಮಯದಲ್ಲಿ ಅಡುಗೆ ಭಟ್ಟರು ಕೈ ಕೊಟ್ಟರು. ನಮ್ಮ ಸಿಬ್ಬಂದಿಗಳು ಎಷ್ಟು ಗಟ್ಟಿ ಎಂದರೆ ಮಧ್ಯಾಹ್ನ ಊಟಕ್ಕಿರುತ್ತಿದ್ದ ಸುಮಾರು ಎರಡು ಸಾವಿರ ಜನರಿಗೆ ರೊಟ್ಟಿಯೂಟದ ವ್ಯವಸ್ಥೆ ಮಾಡಿದರು. ಮೂರು ದಿನ ಬೆಳಿಗ್ಗೆ 9ರಿಂದ ರಾತ್ರಿ ಹತ್ತರವರೆಗೆ ನಡೆಯುವ, ಸಾವಿರಾರು ಜನ ಸೇರುವ, ಗಣ್ಯಾತಿಗಣ್ಯ ವ್ಯಕ್ತಿಗಳು ಬರುವ ಹೊಂಗಿರಣೋತ್ಸವವನ್ನು ಅಡುಗೆ ಭಟ್ಟರ ಅನುಪಸ್ಥಿತಿಯಲ್ಲಿ ನಮ್ಮ ಶಾಲಾ ಸಿಬ್ಬಂದಿಗಳೇ ಸುಧಾರಿಸಿ ಕೊಟ್ಟರು. ಇಂತಹ team work, spirited work ಹಾಗೂ ಉಮೇದಿಗೆ ನಮ್ಮ ಹೊಂಗಿರಣ ಕುಟುಂಬದವರು ಯಾವಾಗಲೂ ಸೈ ಮತ್ತು ಜೈ.


26 ಹೊನ್ನೆ ಮರಡು - ಅನುಭವ 
ಹೊನ್ನೆಮರಡು ಸಾಗರದಿಂದ ಜೋಗದೆಡೆಗೆ ಹೋಗುವಾಗ ಸಿಗುವ ಸುಮಾರು 25km ದೂರದಲ್ಲಿರುವ ಹಿನ್ನೀರಿನ ಅಧ್ಭುತವಾಗಿರುವ ಜಾಗ. ಹೊನ್ನೆಮರಡುವಿನ ಸ್ವಾಮಿ ಹಾಗೂ ನೊಮಿಟೊ ದಂಪತಿಗಳು ಸಾಹಸಪ್ರಿಯರು ಹಾಗೂ ಪರಿಸರ ಪ್ರೇಮಿಗಳಿಗೆ ಚಿರಪರಿಚಿತ ಹೆಸರು. ಅವರೊಟ್ಟಿಗಿನ ನಮ್ಮ ಒಡನಾಟ ಸುಮಾರು ಹತ್ತು ಹದಿನೈದು ವರ್ಷಗಳದ್ದು. ಮಾತಿನಲ್ಲಿ ಖಡಕ್ ಇದ್ದರೂ ಮನಸ್ಸಿನಲ್ಲಿ ಪ್ರೀತಿ ಇರುವ ಜನ. ನಮ್ಮ ಮಕ್ಕಳ ಹಲವಾರು ಸಾಹಸೀ ಕ್ಯಾಂಪ್ ಗಳು ಹಾಗೂ ವಾಟರ್ ಎಕ್ಸ್ ಪೆಡಿಶನ್ಗಳನ್ನು, ಟೀಚರ್ಸ್ ವರ್ಕ್ ಶಾಪ್ ಗಳನ್ನು ಅಲ್ಲಿ ಆಯೋಜಿಸಿದ್ದೇವೆ.
ಈಗ್ಗೆ ಆರೇಳು ವರ್ಷಗಳ ಹಿಂದೆ ನಾವು ಇಪ್ಪತ್ತು ಜನ ಟೀಚರ್ಸ್ ಸ್ವಾಮಿ ದಂಪತಿಗಳ ನೇತೃತ್ವದಲ್ಲಿ ಮೂರು ದಿನಗಳ ಬ್ಯಾಕ್ ವಾಟರ್ expedition ಮಾಡಿತ್ತು. ಎರಡು ಕೊರಾಕಲ್ ಹಾಗೂ ಒಂದು ಫೈಬರ್ ಬೋಟ್ನಲ್ಲಿ ಮಿನಿಮಮ್ ಲಗೇಜ್, ಊಟೋಪಚಾರದ ವಸ್ತುಗಳೊಟ್ಟಿಗೆ ಹೊನ್ನೆಮರಡುವಿನಿಂದ ನಮ್ಮ ಪಯಣ ಪ್ರಾರಂಭ. ನಮಗೆ ನಾವೇ ರಕ್ಷಕರು. ಮೈಮೇಲಿನ ಲೈಫ್ ಜಾಕೆಟ್ ಬಿಚ್ಚುವ ಹಾಗಿರಲಿಲ್ಲ. ಹರಿಗೋಲನ್ನು, ದೋಣಿಯನ್ನು ನಡೆಸಲು ಬಾರದ ನಾವುಗಳು ಸ್ವಾಮಿ ದಂಪತಿಗಳ ಮಾರ್ಗದರ್ಶನದಲ್ಲಿ ದೇವರ ಮೇಲೆ ಭಾರ ಹಾಕಿ ಹುಟ್ಟು ಹಾಕಿದ್ದೇ ಹಾಕಿದ್ದು. ಮೇಲೆ ಸೂರ್ಯ, ಕೆಳಗೆ ನೀರು. ಹಿನ್ನೀರು ಆದ ಕಾರಣ ಎತ್ತ ನೋಡಿದರತ್ತ ಬರೀ ನೀರೇ ನೀರು. ನೀರಿನ ನಡುವೆ ಅಲ್ಲಲ್ಲಿ ಸಣ್ಣ ಗುಡ್ಡಗಳು ತಲೆ ಎತ್ತಿ ಇಣುಕುತ್ತಿದ್ದವು. ಮಧ್ಯಾಹ್ನದ ಊಟಕ್ಕೆ ಅಲ್ಲೇ ಎಲ್ಲಾದರೂ ದ್ವೀಪದಲ್ಲಿ ನಿಲ್ಲಿಸಿ ಬುತ್ತಿಯ ಊಟವನ್ನು ಬರಿದು ಮಾಡಿ, ಸ್ವಲ್ಪ ಹೊತ್ತು ಜಲಕ್ರೀಡೆಯಾಡಿ ಪುನಃ ಜಲ ಸಂಚಾರ ಪ್ರಾರಂಭ. ಕತ್ತಲು ಆವರಿಸುತ್ತಿದ್ದಂತೆ ಮತ್ಯಾವುದಾದರೂ ದ್ವೀಪವಾಸ. ಅಲ್ಲಲ್ಲಿ ಬಿದ್ದಿರುವ ಕಟ್ಟಿಗೆ ಆರಿಸಿ, ಹರಟೆ ಹೊಡೆಯುತ್ತ ಅಡುಗೆ ಮಾಡಿ ಉಂಡು ಟೆಂಟಿನಲ್ಲಿ ಮಲಗಿದೆವೆಂದರೆ ಆದ ಸುಸ್ತಿಗೆ ಎಲ್ಲಾ ಕಡೆಯೂ ಶ್ವಾಸೋಚ್ವಾಸ. ಬೆಳಗಾಗುತ್ತಿದ್ದಂತೆ ಮುಖ ಮಾರ್ಜನ ಮಾಡಿ, ಒಲೆ ಹೊತ್ತಿಸಿ, ಚಹಾ ಮಾಡಿ, ತಿಂಡಿ- ಅಡುಗೆ ಮಾಡಿ ತಿಂದು ಮಧ್ಯಾಹ್ನದ ಊಟ ಕಟ್ಟಿಕೊಂಡು ಮತ್ತೆ ನಮ್ಮ ಜಲಪಯಣ ಪ್ರಾರಂಭ. ಆ ಜಾಗ ಖಾಲಿ ಮಾಡುವಾಗ ನಾವಿದ್ದು ಅಡುಗೆ ಮಾಡಿದ ಯಾವ ಕುರುಹನ್ನು ಬಿಡದೆ ಬರುವುದು ಆ ಪಯಣದ ವೈಶಿಷ್ಟ್ಯತೆ!
ಹೀಗೆ ಮೂರು ದಿನ ಹಿನ್ನೀರಿನಲ್ಲಿ 45km ಪಯಣಿಸಿ ಹೊಸನಗರದ ಹೊರ ವಲಯದ "ಮರಳಿ ನಾಡಿಗೆ" ತಲುಪಿದೆವು. ಮೂರು ದಿನ ಬರೀ ನಿಸರ್ಗದ ದನಿ, ನೀರಿನ ತೆರೆಗಳ ನಾದ, ಗಾಳಿಯ ಸಂಗೀತ ಮಾತ್ರ ಕೇಳಿದ ನಮಗೆ ಪುನಃ ಮುಖ್ಯ 'ಭೂಮಿ'ಕೆಯ ಧ್ವನಿಯನ್ನು ಒಪ್ಪಿಕೊಳ್ಳುವುದು ಕಷ್ಟದ ಕೆಲಸವಾಯಿತು. ಆ ಮೂರು ದಿನಗಳು ಬದುಕಿನ ಬೇರಾವ ಜಂಜಾಟವಿಲ್ಲದೆ ಬರೀ ಜಲಪಯಣದ ನಮ್ಮದೇ ಆದ ದಿನಗಳಾಗಿದ್ದವು. ಸ್ವಾಮಿ ದಂಪತಿಗಳ ಆತ್ಮೀಯ ಒಡನಾಟ ಖುಷಿ ಕೊಟ್ಟಿತ್ತು. ಬಿಸಿಲಿಗೆ ಮುಖ ಸುಟ್ಟಿತ್ತಾದರೂ ನಿಸರ್ಗದೊಡನಾಟ ಮನದ ಉರಿಯನ್ನು ತಣಿಸಿ ತಂಪೆರೆದಿತ್ತು. ಆರೇಳು ವರ್ಷಗಳು ಕಳೆದರೂ ಆ ಅನುಭವ ಇನ್ನೂ ಬಹಳ ತಾಜಾ ಅನುಭವವಾಗಿ ನಮ್ಮೊಳಗೆ ಉಳಿದಿದೆ ಎಂದರೆ ತಪ್ಪಲ್ಲ. ಜೀವನವನ್ನು ಸವಿಯಲಿಚ್ಛಿಸುವ ಪ್ರತಿಯೊಬ್ಬರೂ ಈ back water expedition ನನ್ನು ತಪ್ಪದೆ ಪ್ರಯತ್ನಿಸಿ ಎಂದು ನಮ್ಮ ಸಲಹೆ.

25. ಬಾಲ್ಯ - ನೆನಪುಗಳು 
ನನಗಿದ್ದ ಸುಮಾರು 30 ಕಸಿನ್ಸ್ ಗಳಲ್ಲಿ ಹೆಚ್ಚು ಬಳಕೆ ಇದ್ದದ್ದು ಅಪ್ಪನ ಕಡೆಯ ಕಸಿನ್ಸ್ ಹತ್ತಿರ. ಏಕೆಂದರೆ ಅಜ್ಜಯ್ಯನ ಮನೆಯಲ್ಲಿ ಕಾರ್ಯಕ್ರಮಗಳು ಹೆಚ್ಚು ಇದ್ದವು, ಅದರಲ್ಲೂ ಶ್ರಾದ್ಧಗಳು. ಅದಕ್ಕೆ ಹೆಚ್ಚಾಗಿ ನಾವೆಲ್ಲಾ ಒಟ್ಟು ಸೇರುತ್ತಿದ್ದೆವು. ಅಡುಗೆ ಕೆಲಸ ಮನೆಯ ಹೆಂಗಸರದ್ದೆ. ಸುಮಾರು 70 - 80 ಜನ ಆಗುತ್ತಿದ್ದರು. ಕೆಲವು ಶ್ರಾದ್ಧಕ್ಕೆ ನೂರು ಜನರ ಮೇಲೆ ಆಗುತ್ತಿದ್ದದ್ದೂ ಇದೆ. ನಾವೆಲ್ಲ ಸಣ್ಣ ಮಕ್ಕಳಾಗಿದ್ದ ಕಾರಣ ಶ್ರಾಧ್ಧವೋ ಮತ್ತೊಂದೋ ಎಲ್ಲಾ cousins ಒಟ್ಟು ಸೇರಿದರೆ ಆಯ್ತಷ್ಟೇ. ಗಮ್ಮತ್ತೋ ಗಮ್ಮತ್ತು. ಊಟಕ್ಕೆ ಕೂತಾಗ ಯಾರು ಏನನ್ನೂ ಬಿಡದೆ ಬಾಳೆ ಕೀಸಿ ಊಟ ಮಾಡುತ್ತಾರೆ ಅನ್ನುವ ಸ್ಪರ್ಧೆ ನಮ್ಮದು. ಕರಿಬೇವಿನ ಸೊಪ್ಪು, ಸೌತೆಕಾಯಿ ಸಿಪ್ಪೆಯನ್ನು ಬಾಳೆ ಎಲೆ ಅಡಿ ಹಾಕಿ ಬಿಡುತ್ತಿದ್ದೆವು ಇನ್ನೊಬ್ಬರ ಗಮನಕ್ಕೆ ಬರದ ಹಾಗೆ! ಮಾವಿನಹಣ್ಣು ಗೊರಟು ಪಕ್ಕದಲ್ಲಿದ್ದವರ ಎಲೆಗೆ pass ಆಗುತ್ತಿದ್ದ ಸಂದರ್ಭಗಳು ಬಹಳಷ್ಟು🤣 ಊಟ ಮಾಡುತ್ತಿದ್ದದ್ದಕ್ಕಿಂತ ಗಲಾಟೆ ಮಾಡುತ್ತಿದ್ದದ್ದೇ ಹೆಚ್ಚು. ಹೀಗಾಗಿ ಊಟ ಆಗಿ ಕೈ ತೊಳೆದ ಸ್ವಲ್ಪ ಹೊತ್ತಿಗೆ ಇನ್ನೇನಾದರೂ ತಿನ್ನಲಿಕ್ಕೆ ಸಿಗುತ್ತದಾ ಎಂದು ಅಡುಗೆ ಮನೆಯಲ್ಲಿ ತಡಕಾಡುತ್ತಿದ್ದದ್ದೇ ಹೆಚ್ಚು. ಅಂತಹ ಜನ ನಾವೆಲ್ಲ. ಅಲ್ಲದೇ ಶ್ರಾದ್ಧದ ಊಟದಲ್ಲಿ ಅಜ್ಜಯ್ಯ ಕೊಡುತ್ತಿದ್ದ ನಾಲ್ಕಾಣೆ ದಕ್ಷಿಣೆ ಕೂಡಾ ಆಕರ್ಷಣೆಯ ಒಂದು ಭಾಗವಾಗಿತ್ತು. ಮನೆಯ ಗಂಡು ಮಕ್ಕಳಿಗೆ ದಕ್ಷಿಣೆ ಕೊಡುತ್ತಿರಲಿಲ್ಲ. ಹೆಣ್ಣು ಮಕ್ಕಳು ಮದುವೆ ಆಗಿ ಹೊರ ಹೋಗುವವರಾದ್ದರಿಂದ ದಕ್ಷಿಣೆ ಸಿಗುತ್ತಿತ್ತು. ವಿಷಯ ಏನೇ ಇರಲಿ. ನಮಗೆ ದಕ್ಷಿಣೆ ಮುಖ್ಯವಾಗಿತ್ತು ಅಷ್ಟೆ.
ಮತ್ತೊಂದು ವಿಷಯ ನೆನಪಾಗುವುದು ಎಂದರೆ ಪಡಿಯಾರ್ ಹೋಟೆಲ್ ನ ಗಟ್ಟಿಬಜೆ. ಆಗಿನ ನಾಲ್ಕಾಣೆಗೆ ಸುಮಾರು ಬಜೆ ಬರುತ್ತಿತ್ತು. ಒಂದು ಬಜೆ ಬಾಯಿಗೆ ಹಾಕಿಕೊಂಡರೆ ತಿಂದು ಮುಗಿಸಲಿಕ್ಕೆ ಅರ್ಧ ದಿನ ಬೇಕಿತ್ತು. ಅದರಲ್ಲಿ ಏನೂ ಇರುತ್ತಿರಲಿಲ್ಲ. ಆದರೂ ಒಂಥರಾ ರುಚಿ. ಅದನ್ನು ಎಲ್ಲರೂ ಒಟ್ಟು ಸೇರಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ ತಿನ್ನುವುದೊಂದು ರೋಚಕ ಅನುಭವ.
ಆಗ ಕಸಿನ್ಸ್ ಎಲ್ಲಾ ಒಟ್ಟು ಸೇರಿ ಮಂಗಾಟ ಮಾಡುವುದೇ ದೊಡ್ಡ ಸಂಭ್ರಮ. ದೊಡ್ಡವರು ಬೈದರೆ ಮನೆಯ ಉಪ್ಪರಿಗೆಯ ಕೋಣೆ ನಮ್ಮೆಲ್ಲರ ಅಡ್ಡಾ ಆಗುತ್ತಿತ್ತು. ಮಳೆಗಾಲವಲ್ಲದಿದ್ದರೆ ಸುತ್ತಮುತ್ತಲಿನ ಗದ್ದೆ ಬಯಲುಗಳು ನಮ್ಮ ಹಾವಳಿಗೆ ತುತ್ತಾಗುತ್ತಿದ್ದವು. ಊಟ ತಿಂಡಿಗೆ ಮಾತ್ರ ನಾವು ಸಮಯಕ್ಕೆ ಸರಿಯಾಗಿ ಹಾಜರ್. ಇದನ್ನೆಲ್ಲ ನೆನಪಿಸಿಕೊಳ್ಳುವಾಗ ಮತ್ತೆ ಮರಳಬಹುದೆ ಆ ಬಾಲ್ಯಕಾಲಕ್ಕೆ ಎನ್ನುವ ಪುಟ್ಟ ಆಸೆ ಮನದ ಮೂಲೆಯಲ್ಲೆಲ್ಲೋ ಇಣುಕು ಹಾಕುತ್ತದೆ, ಅಲ್ಲವೇ?



24 ಅನುಭವ - ನೆನಪುಗಳು 
ಸುಮಾರು 8-10 ತಿಂಗಳ ನಂತರ ನಿನ್ನೆ ಸಂಜೆ ಕೆಳಮನೆಯ ಕಟ್ಟು ಹಾಕಿದ ಝರಿ ನೀರಿನಲ್ಲಿ ಈಜಿದೆ. ಸುಸ್ತಾದರೂ ಏನೋ ಖುಷಿ! ನೀರಿಗೆ ಸೆಳೆಯುವ ಗುಣ ಇದೆ. ಎಲ್ಲಕ್ಕೂ ಮೀರಿ ಕಾಲದ ಪರಿವೆ ಅರಿಯದಂತಾಗಿಸುವ ಗುಣವೂ ಇದೆ. ನೀರೊಳಗೆ ಒಮ್ಮೆ ಇಳಿಯುವ ತನಕ ಸ್ವಲ್ಪ ಚಡಪಡಿಕೆ. ಇಳಿದ ಮೇಲೆ ಹೊರ ಬರಬೇಕಲ್ಲ ಎನ್ನುವ ಬೇಸರ.
ಅದು ಅಡಿಕೆ ತೋಟದೊಳಗೆ ಸೀಗೆ ಮಟ್ಟಿ, ಬೂರಲು ಮರ, ಬೈನೆ ಮರ ಎಲ್ಲಾ ಇರುವ ಜಾಗದಲ್ಲಿ ಹರಿಯುವ ಸಣ್ಣ ಝರಿ. ಸೂರ್ಯ ಕಷ್ಟ ಪಟ್ಟು ಅದರೊಳಗೆ ಬೆಳಕು ಹರಿಸುತ್ತಾನೆ. ನೀರೊಳಗೆ ಈಜುವಾಗ ಸೀಗೆ ಮಟ್ಟಿಯ ಮುಳ್ಳು ಆಗಾಗ ಕಾಟ ಕೊಡುತ್ತದೆ. ಹೆಚ್ಚು ಆಳ ಇಲ್ಲ. ಬಹಳ ಅಂದರೆ ಆರಡಿ ಆಳ ಅಷ್ಟೇ. ಆದರೆ ಈ ಮಟ ಮಟ ಬೇಸಿಗೆಯಲ್ಲಿ ನಮ್ಮದೇ ಜಾಗದಲ್ಲಿ ನೀರಿದೆ ಅಂದರೆ ಸಂಭ್ರಮ ತಾನೇ! ಅಂತೂ ಮನೆ ಮಕ್ಕಳೊಟ್ಟಿಗೆ ಈಜಿದ್ದೇ ಈಜಿದ್ದು.
ನಂತರ ಕೆಳಮನೆಯ ಬಚ್ಚಲಲ್ಲಿ ಸ್ನಾನ. ಆಗ ನನಗೆ ನಾನು ಮದುವೆಯಾಗಿ ಬಂದಾಗಿನ ದಿನಗಳ ನೆನಪಾಯಿತು. ಇಪ್ಪತ್ನಾಲ್ಕು ಗಂಟೆ ಬಿಸಿನೀರು ಇರುವ ದೊಡ್ಡ ಹಂಡೆಯ ಬಚ್ಚಲು. ಯಾವಾಗಲೂ ನಿಗಿನಿಗಿ ಉರಿಯುತ್ತಿರುವ ಬೆಂಕಿ. ಆಗಂತೂ ಬೇಸಿಗೆಯಲ್ಲೂ ಚಳಿ ಇರುತ್ತಿದ್ದ ಕಾಲ. ನಮ್ಮ ಮನೆಯ ಗಂಡಸರಿಗೆಲ್ಲ ಒಲೆ ಬೆಂಕಿಯಲ್ಲಿ ಕುಂಡೆ ಕಾಯಿಸುತ್ತಾ ನಿಲ್ಲುವುದೆಂದರೆ ಖುಷಿ. ಅಂತೂ ಇಂತೂ ಬಚ್ಚಲು ಒಲೆ ಹತ್ತಿರ ಜನ ತಪ್ಪುತ್ತಿರಲಿಲ್ಲ. ನನ್ನ ಮಗ ವಿಜೇತ ಸುಮಾರು ಎರಡು ವರ್ಷದವನಿದ್ದಾಗ ನಾನು ಯಾವುದೋ ತಲೆಯಲ್ಲಿ ಸ್ನಾನಕ್ಕೆ ಬರೀ ಮೈಯ್ಯಲ್ಲಿದ್ದ ಮಗುವನ್ನು ಬಿಸಿಬಿಸಿ ಹಂಡೆಯ ಕಟ್ಟೆಯ ಮೇಲೆ ನೇರವಾಗಿ ಕೂರಿಸಿ ಬಿಟ್ಟಿದ್ದೆ. ನಂತರ ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಲು ಸಾಕು ಬೇಕಾಯಿತು. ಅವನ ಕುಂಡೆ ಕೆಂಪಗಾಗಿ ಹೋಗಿತ್ತು. ಮನೆಯಲ್ಲಿದ್ದ ಪ್ರತಿಯೊಬ್ಬರ ಕೈಲೂ ಬೈಸಿಕೊಂಡಿದ್ದೆ.
ನನ್ನ ಎರಡನೇ ಬಾಣಂತನ ಕೆಳಮನೆಯಲ್ಲಿಯೇ ಆದದ್ದು. ಅದೂ ಮಳೆಗಾಲದಲ್ಲಿ! ಆ ಹಂಡೆ ಬಚ್ಚಲಲ್ಲಿ ಬಿಸಿಬಿಸಿ ನೀರು ಹೊಯಿಸಿಕೊಳ್ಳುವ ಸುಖ ಅನುಭವಿಸಿದವರಿಗೇ ಗೊತ್ತು. ಸ್ನಾನವಾದ ಮೇಲೆ ಶಾಖ ತಗೊಂಡು ಕಷಾಯ ಕುಡಿದು ಕಂಬಳಿ ಹೊದ್ದುಕೊಂಡು ಮಲಗಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ!
ಹಿಂದಿನ ಮಲೆನಾಡೇ ಹಾಗೆ - ಚಳಿ, ಸೋನೆ ಮಳೆ, ಬಿಸಿನೀರು, ಬಚ್ಚಲು ಒಲೆ, ಹಲಸಿನ ಹಪ್ಪಳ, ಸುಟ್ಟ ಹಲಸಿನ ಬೀಜ, ರೊಟ್ಟಿ ರಸಾಯನ, ಗಿಣ್ಣ, ಕೊಟ್ಟಿಗೆ, ಪಣತದ ಮನೆ, ಕಡಿಮಾಡಿನಲ್ಲಿ ದಿನಂಪ್ರತಿ ಉದ್ದದ ಊಟದ ಸಾಲು, ಕಟ್ಟಿಗೆ ಒಲೆ, ತರಹೇವಾರಿ ಅಡಿಗೆ..... ಹೀಗೇ ಸಾಲು ಸಾಲು ನೆನಪು.


23. ನೆನಪುಗಳು - ಅನುಭವ 
ನಿನ್ನೆ ಸಂಜೆ ಆಚೆಮನೆ ಗೌರಿ ಫೋನ್ ಮಾಡಿದ್ದಳು. ನನ್ನ ನೆನಪಿನ ಬುತ್ತಿಯ ರುಚಿಯ ಬಗ್ಗೆ ತನ್ನ ಪ್ರಾಮಾಣಿಕ ಅಭಿಪ್ರಾಯಗಳನ್ನು ಹಂಚಿಕೊಂಡಳು. ಅವಳ ಖುಷಿ, ಅವಳು ಸುಮಾರು ಅರ್ಧ ಗಂಟೆಯ ಕಾಲ ಹಂಚಿಕೊಂಡ ಹಳೆಯ ನೆನಪುಗಳನ್ನು ಕೇಳಿ ನಾನು ಬರೆಯಲು ಶುರು ಮಾಡಿದ್ದು ಸಾರ್ಥಕ ಅನಿಸಿತು. ಅವಳದೊಂದು ಖಾಲಿಯಾಗದ ಅಪೂರ್ವ ನೆನಪುಗಳ ಭಂಡಾರವೇನೋ ಅಂತ ಅನಿಸಿ ಬಿಟ್ಟಿತು. ಎಲ್ಲರ ಮನದೊಳಗಿರುವ ಭಾವಕ್ಕೆ, ನೆನಪುಗಳಿಗೆ ನಾನು ಅಕ್ಷರ ರೂಪ ಕೊಡುತ್ತಿದ್ದೇನೇನೊ ಅಂತ ನನಗೆ ಅನಿಸಿತು. ಗೌರಿಯಷ್ಟೇ ಅಲ್ಲ, ನಾನು ಬರೆಯಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನನ್ನ ಕೆಲವು cousins ನನಗೆ ಫೋನ್ ಮಾಡಿ ಅವರನ್ನೆಲ್ಲ ಪುನಃ ಬಾಲ್ಯದ ಲೋಕಕ್ಕೆ ನನ್ನ ಲೇಖನಗಳು ಕರೆದೊಯ್ಯುತ್ತಿರುವುದಾಗಿ ಖುಷಿ ವ್ಯಕ್ತ ಪಡಿಸಿದ್ದರು. ಬಾಲ್ಯವೇ ಹಾಗೆ. ಯಾರಿಂದಲೂ ಯಾವುದೇ ನಿರೀಕ್ಷೆ ಇಲ್ಲದೇ ನಮ್ಮ ನಮ್ಮದೇ ಲೋಕದಲ್ಲಿ ವಿಹರಿಸುವ ಕಾಲ! ಅದನ್ನು ನೆನಪಿಸಿಕೊಳ್ಳುವುದೇ ಒಂದು ಸೊಗಸಾದ ಅನುಭವ. ಜೀವನದ ಒಂದು ಹಂತ ಪೂರೈಸಿದ ನಮಗೆಲ್ಲಾ ಈ ಸಿಂಹಾವಲೋಕನ ನಿಜಕ್ಕೂ ಮುದ ನೀಡುತ್ತದೆ ಎನ್ನುವುದು ಇವರೆಲ್ಲರ ಮಾತಿನಿಂದ ವ್ಯಕ್ತವಾಯಿತು.
ಆಚೆಮನೆ ಗೌರಿಯ ಮಾತು ನನ್ನನ್ನು ಬಹಳ ತಟ್ಟಿದ್ದಂತೂ ಹೌದು. ಅವರ ಮನೆಯ ದನಕರುಗಳ ಬಗ್ಗೆ, ಕಾಶತ್ತೆಯ punctuality ಬಗ್ಗೆ, ನನ್ನ ಅಪ್ಪನ ಸೃಜನಶೀಲತೆ ಬಗ್ಗೆ, ಅಜ್ಜಯ್ಯನ ತಾಳ್ಮೆಯ ಬಗ್ಗೆ, ಆಗಿನ ಬಡತನದ ಬಗ್ಗೆ.... ಹೀಗೇ ಅವಳು ಹೇಳಿದ್ದೇ ಹೇಳಿದ್ದು. ನಾನು ನನ್ನ ಖುಷಿಗೆ "ಹಾಗೆ ಸುಮ್ಮನೆ" ಬರೆಯುತ್ತಿರುವ ಬರಹ ಇಷ್ಟೆಲ್ಲ ನೆನಪುಗಳನ್ನು ಹೊಡೆದೆಬ್ಬಿಸುತ್ತದೆ ಎಂದು ನಾನು ಕನಸು ಮನಸಿನಲ್ಲೂ ತಿಳಿದಿರಲಿಲ್ಲ. ಬರಹಗಾರಳಲ್ಲದ, ಬರೆಯಲು ಬಾರದೆ ಬರೆಯುತ್ತಿರುವ ನನ್ನನ್ನು ನಿಮ್ಮ comments, ಮಾತುಗಳು ಹುರಿದುಂಬಿಸುವುದರ ಜೊತೆಗೆ ಆ ಪ್ರಶಂಸೆಗೆ ನಾನು ಅರ್ಹಳೇ ಎಂಬ ಗೊಂದಲವನ್ನು ಉಂಟು ಮಾಡುತ್ತಿವೆ. ನನ್ನ ಬರಹವನ್ನು ಮೆಚ್ಚುತ್ತಿರುವ ಎಲ್ಲರಿಗೂ ನನ್ನ ಹಾರ್ದಿಕ ನಮನಗಳು🙏


22..ಬಿರ್ತಿ ಮನೆ ಮಾವಿನಹಣ್ಣು - ಪರಿಸರ 

ಮೊನ್ನೆ ಇರ್ಫಾನ್ ಖಾನ್ ನ ಕರೀಬ್ ಕರೀಬ್ ಸಿಂಗಲ್ ಸಿನಿಮಾ ನೋಡಿದೆ. ಆದರಲ್ಲಿ ಅವನು ಹಿರೋಯಿನ್ ಗೆ ಮಾವಿನ ಹಣ್ಣನ್ನು "ಚೂಸ್ ಕೆ ಖಾನಾ ಹೈ" ಎನ್ನುವ ಬಗ್ಗೆ ವಿವರಣೆ ಕೊಡುವಾಗ ನೆನಪಾದದ್ದು ಅಜ್ಜಯ್ಯನ ಮನೆಯ ಕೆಂಪು ಕಸೆ ಮಾವಿನಹಣ್ಣು. ನೀವು ಎಷ್ಟೇ ಶ್ರೇಷ್ಠವಾದ ಮಾವಿನಹಣ್ಣು ತಿನ್ನಿ ಆದರೆ ಕೆಂಪುಕಸೆಯ ಮುಂದೆ ಅವೆಲ್ಲ ತೃಣ ಸಮಾನ.
ಕೆಂಪುಕಸೆ ದೊಡ್ಡ ಜಾತಿಯ, ದಪ್ಪ ಸಿಪ್ಪೆಯ, ನಾರು ನಾರಾಗಿರುವ ಮಾವಿನಹಣ್ಣು. ಹಣ್ಣು ಬಿಡಿ, ಅದರ ಸಣ್ಣ ಮಿಡಿ ಕೂಡಾ ತಿನ್ನಲು ರುಚಿ. ತುಂಬಾ ಹುಳಿ ಇಲ್ಲದ ಕಾರಣ ಸ್ವಲ್ಪ ಉಪ್ಪು ಹಾಕಿ ತಿನ್ನುವಾಗ ಅದೊಂತರ ತೃಪ್ತಿ. ಆ ಕಾಯಿ/ಹಣ್ಣಿಗೆ ಅದರದ್ದೇ ಆದ ಒಂದು special ಪರಿಮಳ ಇದೆ. ಅದನ್ನು ವಿವರಿಸುವುದು ಕಷ್ಟ. ಅದು ಕಾಯಿ ಇದ್ದಾಗ ಕುರು ಕುರು ಅಂತ ತಿನ್ನಲಿಕ್ಕೆ ಚಂದ; ಹಣ್ಣಿದ್ದಾಗ ಅದರ ಬುಡ ತೂತು ಮಾಡಿಕೊಂಡು ಹೀರಿ ಹೀರಿ ತಿನ್ನಲಿಕ್ಕೆ ಚಂದ. ಅದರ ಸಿಪ್ಪೆ ದಪ್ಪ ಇರುವ ಕಾರಣ ಪೂರ್ತಿ ಹೀರಿ ತಿಂದರೂ, ಆ ತೂತಿನೊಳಗೆ ಗಾಳಿ ಊದಿದರೆ ಪುನಃ ಇಡೀ ಹಣ್ಣು ಇದ್ದ ಹಾಗೆ ಕಾಣಿಸುತ್ತದೆ. ನಾವು ಎಷ್ಟೋ ಸಲ ಹಣ್ಣು ತಿಂದಾದ ಮೇಲೆ ಗಾಳಿ ತುಂಬಿಸಿ ಉಳಿದವರನ್ನು ಏಮಾರಿಸಿದ್ದಿದೆ. ಮಾವಿನ ಹಣ್ಣು ಪೂರ್ತಿ ತಿಂದ ಮೇಲೆ ನಾವು ಯಾರದಾದರು ಹೆಸರು ಕರೆದು ಅವರು 'ಓ' ಅಂದಾಗ "ಗೊರಟು ಬೆನ್ನಾರೆ ಓಡು" ಅಂತ ಹೇಳಿ ಅವರನ್ನು ಓಡಿಸಿದ್ದಿದೆ. ಅದೊಂದು ಇನ್ನೊಬ್ಬರನ್ನು ಸುಮ್ಮನೆ ಗೋಳಾಡಿಸುವ ಆಟ.
ಕೆಂಪುಕಸೆ ಹಣ್ಣನ್ನು ಸಿಪ್ಪೆ ತೆಗೆದು ಹಾಗೆಯೆ ಕಚ್ಚಿ ತಿಂದರೆ ಹಲ್ಲೊಳಗೆ ಸಿಕ್ಕಿ ಹಾಕಿಕೊಂಡ ನಾರು ತೆಗೀಲಿಕ್ಕೆ ಅರ್ಧ ದಿನ ಬೇಕು. ಎಲ್ಲಾದರೂ ಹಲ್ಲಿನ ಸಂಧಿಯಲ್ಲಿ ಒಃದೊಂದು ನಾರು ಉಳಿದು ನಂತರ ನಾಲಿಗೆಗೆ ಸಿಕ್ಕಿದ್ರೆ ಇನ್ನೂ ಹಣ್ಣಿನ ರುಚಿ ಅದರಲ್ಲಿ ಇರುತ್ತದೆ. ಅದರ ಸ್ವಾದವೂ ಚಂದ.
ಅಜ್ಜಯ್ಯನ ಮನೆಯ ಎದುರಿನ ದರೆ ಹಾಗೂ ತೆಂಗಿನ ತೋಟದ ಅಂಚಿನಲ್ಲಿ ಒಂದೊಂದು ಕೆಂಪುಕಸೆ ಮಾವಿನಮರ ಇದೆ. ತುಂಬಾ ಹಣ್ಣು ಬಿಡುತ್ತದೆ. ಆದರೆ ಈ ಬಾರಿ ಕೊರೊನಕ್ಕೆ(😊) ಹೆದರಿ ಹೆಚ್ಚು ಕಾಯಿಗಳಾಗಿಲ್ಲ ಅಂತ ಸುದ್ದಿ. ಪ್ರತಿ ಬಾರಿ ಅಮ್ಮ ಸಾಯಿಬರಿಗೆ ಹೇಳಿ ಕೊಯಿಸಿ ತನ್ನ ಕೋಣೆಯಲ್ಲಿ ಹಣ್ಣಿಗೆ ಹಾಕಿ ಯಾರ್ಯಾರಿಗೆ ಕೊಡಬೇಕೆಂದು list ಮಾಡಿ ಎಲ್ಲರಿಗೂ ಅವರವರ ಪಾಲಿಗೆ ಬರುವ ಹಣ್ಣನ್ನು ಹಂಚಿ ಬಿಡುತ್ತಾಳೆ. ಆ ಹಣ್ಣಿಗಾಗಿ ಕಾದು ಅದನ್ನು ತಿನ್ನುವ ಸುಖವೇ ಸುಖ! ಕೆಲವೊಮ್ಮೆ ನಾವು ಅಮ್ಮನ ಮಂಚದ ಅಡಿಯಲ್ಲಿ ಇರುವ ಹಣ್ಣುಗಳನ್ನು ಕದ್ದು ಅಮ್ಮನಿಗೆ ಗೊತ್ತಿಲ್ಲದ ಹಾಗೆ ತಿಂದದ್ದು ಇದೆ. ನಂತರ ಅಮ್ಮ ಲೆಕ್ಕ ಮಾಡುವಾಗ ಸಿಕ್ಕಿ ಬಿದ್ದು ಬೈಸಿಕೊಂಡದ್ದೂ ಇದೆ. ಅದರ ರಸಾಯನ ಹಾಗೂ ನೀರ್ ದೋಸೆ ಒಳ್ಳೆಯ combination. ಹೀಗಾಗಿ ಅಜ್ಜಯ್ಯನ ಮನೆಯ ಕೆಂಪುಕಸೆ ಮಾವಿನಹಣ್ಣಿಗೆ ಡಿಮಾಂಡಪ್ಪೋ ಡಿಮಾಂಡ್.


21. ಹೊಂಗಿರಣ - ಅನುಭವ 
ವಸತಿಶಾಲೆಯಲ್ಲಿ ಸುದೀರ್ಘ ವರ್ಷಗಳ ಸೇವಾ ಅನುಭವ ಹೊಂದಿದ ಮತ್ತು ದೇಶವಿದೇಶಗಳನ್ನು ಸುತ್ತಿ ಶಿಕ್ಷಣದ ಬಗ್ಗೆ ಹೊಸ ಒಳನೋಟವನ್ನು ಹೊಂದಿದ ನಾವು ಮಕ್ಕಳ ರಚನಾತ್ಮಕ ಬೆಳವಣಿಗೆಗೆ ಬೇಕಾಗುವ ಕಲಿಕಾ ಪರಿಸರ ಒಂದು ಶಾಲೆ ಕೊಡಬೇಕೆಃಬ ಉದ್ದೇಶದೊಂದಿಗೆ ಹೊಂಗಿರಣ ಶಾಲೆಯನ್ನು 2003ರಲ್ಲಿ ಪ್ರಾರಂಭಿಸಿತು. ಬರೀ ನಾಲ್ಕು ಗೋಡೆಗಳ ನಡುವಿನ ಪುಸ್ತಕದ ಜ್ಞಾನವಷ್ಟೇ ಅಲ್ಲದೆ ಮಗು ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಒಳನೋಟ ಪಡೆಯುವ ಅನುಭವಯುಕ್ತ ಮತ್ತು ಸ್ಪಂದನೆಯುಕ್ತ ಕಲಿಕಾ ವಾತಾವರಣ ನೀಡುವ ಪ್ರಯತ್ನ ಹೊಂಗಿರಣ ಮಾಡುತ್ತಿದೆ.
ಸಾಗರ್ ಅಕಾಡೆಮಿ ಆಫ್ ಎಜುಕೇಶನ್ ಎಂಬ ರಿಜಿಸ್ಟರ್ಡ್ ಚಾರಿಟೆಬಲ್ ಟ್ರಸ್ಟ್ ನ ಮೂಲಕ ಸಾಗರ ಸಮೀಪದ ಅಮಟೆಕೊಪ್ಪ ಎಂಬ ಪುಟ್ಟ ಹಳ್ಳಿಯಲ್ಲಿ ನಾವು ಗ್ರಾಮೀಣ ಮಕ್ಕಳ ಮೇಲೆ ಲಕ್ಷ್ಯವಿಟ್ಟು . ಪ್ರಾರಂಭಿಸಿದ ನಮ್ಮ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಓದುತ್ತಿರುವ ಸುಮಾರು 900 ಮಕ್ಕಳು 260 ಹಳ್ಳಿಗಳ ಕೃಷಿಕ ಕುಟುಂಬ ಹಾಗೂ ಇನ್ನಿತರ ಹಿನ್ನೆಲೆಯಿಂದ ಬಂದವರಾಗಿದ್ದಾರೆ.
ಹೊಂಗಿರಣದ ವಿಶೇಷವೇನೆಂದರೆ ಒತ್ತಡರಹಿತ ವಾತಾವರಣದಲ್ಲಿ ಅನುಭವಾತ್ಮಕ ಬೋಧನಾ ವಿಧಾನದಲ್ಲಿ ಖುಷಿಯಿಂದ ಕಲಿಯುವ ಪರಿಸರ ಕಟ್ಟಿರುವುದು. ಮಕ್ಕಳಿಲ್ಲಿ ತಮ್ಮ ಕಲಿಕೆಯ ಜವಾಬ್ದಾರಿಯನ್ನು ಅರಿತು ತಮ್ಮದೇ ಆದ ಓಘದಲ್ಲಿ ಕಲಿಯುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ ತನ್ನದೇ ಆದ ಸಮಗ್ರ ಪಠ್ಯವನ್ನು ಚಟುವಟಿಕೆ, ಯೋಜನಾತ್ಮಕ ಹಾಗೂ ಸಾಂಪ್ರದಾಯಿಕ ಬೋಧನಾ ಪದ್ದತಿಯ ಸಮ್ಮಿಶ್ರದ ಸಮತೋಲಿತ ಬೋಧನಾ ಕ್ರಮದಲ್ಲಿ, ಮಾಧ್ಯಮಿಕ ವಿಭಾಗದಲ್ಲಿ ಇದರೊಂದಿಗೆ ಬೇಧಾತ್ಮಕ ಹಾಗೂ ಸಹ ಕಲಿಕೆಯ ಕ್ರಮಗಳನ್ನು ಸೇರಿಸಿ, ಪ್ರೌಢ ಹಾಗೂ ಪದವಿ ಪೂರ್ವ ವಿಭಾಗಗಳಲ್ಲಿ ಕ್ರಾಸ್ ಓವರ್, ಸಹಭಾಗಿತ್ವ, ಸಂದರ್ಭಾಧಾರಿತ ಹಾಗೂ ಹೊಂದಾಣಿಕೆಯ ಕಲಿಕಾ ಕ್ರಮದ ಮೂಲಕ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ.
ಹೊಂಗಿರಣ ಮಕ್ಕಳನ್ನು ಬರೀ ನಾಲ್ಕು ಗೋಡೆಯ ನಡುವೆ ಕಟ್ಟಿ ಹಾಕುವುದಿಲ್ಲ. ಹನ್ನೊಂದು ಎಕರೆ ಹಸಿರುಮಯ ಕ್ಯಾಂಪಸ್ ಇರುವುದೇ ಮಕ್ಕಳಿಗೆ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿ ಅರಿಯಲಿಕ್ಕೆ, ಅನ್ವೇಷಣೆ ಮಾಡಲಿಕ್ಕೆ ಮತ್ತು ನಿಸರ್ಗದೊಡನೆ ಬೆಸುಗೆ ಬೆಸೆಯಲಿಕ್ಕೆ. ಇಂತಹ ವಾತಾವರಣದಲ್ಲಿ ಸಿಗುವ ಮುಕ್ತ ಕಲಿಕೆ ಮಗುವಿನಲ್ಲಿ ಸಂವೇದನಾತ್ಮಕ ವ್ಯಕ್ತಿತ್ವವನ್ನು ಬೆಳೆಸುತ್ತದಲ್ಲದೆ ಅದರೊಳಗೆ ವಿಶಾಲ ದೃಷ್ಟಿಕೋನವನ್ನು ಬೆಳೆಸುತ್ತದೆ ಎಂಬ ಅರಿವಿನೊಂದಿಗೆ ಮಗುವಿನ ತಾಕತ್ತಿಗೆ ತಕ್ಕಂತಹ exposureನ್ನು ಹೊಂಗಿರಣ ಕೊಡುತ್ತದೆ. ಮಗು ಮತ್ತು ಶಿಕ್ಷಕರ ಸಂಬಂಧಕ್ಕೂ ಮತ್ತು ಮಗುವಿನ ಭಾವನಾತ್ಮಕ ಅಂಶಗಳ ಬೆಳವಣಿಗೆಗೂ ಅಷ್ಟೇ ಮಹತ್ವ ಕೊಡಲಾಗುತ್ತದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಶಿಕ್ಷಕರ ಸಬಲೀಕರಣ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳಲ್ಲಿ ನಾಯಕತ್ವದ ಗುಣ, ಸಹಕಾರಿ ಮನೋಭಾವ ಹಾಗೂ ಸಮಾಜಮುಖಿ ದೃಷ್ಟಿಕೋನದ ಬೆಳವಣಿಗೆಗೆ ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತದೆ. ತನ್ನ ನೆಲದ ಮೂಲ ಸಂಸ್ಕೃತಿಯ ಅರಿವನ್ನು ಹಲವಾರು ಕಾರ್ಯಗಾರಗಳ ಮೂಲಕ ಮಗುವಿಗೆ ಕೊಡುತ್ತದೆ. ಇಂತಹ ಹಲವಾರು ಕಲಿಕಾ ಅವಕಾಶ ಕಲ್ಪಿಸುವುದರ ಮೂಲಕ ಸಂವೇದನಾಶೀಲ ನಾಗರಿಕರನ್ನು ರೂಪಿಸಿ ಸಮಾಜಕ್ಕೆ ಕೊಡುವ ಪ್ರಯತ್ನ ಹೊಂಗಿರಣದ್ದು. ಕಳೆದ ಹದಿನೇಳು ವರ್ಷಗಳಿಂದ ತನ್ನ ಈ ಪ್ರಯತ್ನದೊಂದಿಗೆ ಹೊಂಗಿರಣ ಮುನ್ನಡೆಯುತ್ತಿದೆ.
20. ಅಜ್ಜಯ್ಯನ ಕುರ್ಚಿ - ಪರಿಸರ 
ಅಜ್ಜಯ್ಯನ ಮನೆಯಲ್ಲಿ ಒಂದು ಈಸೀಛೇರ್ ಇತ್ತು. ಆದರ ಮೇಲಿನ ಹೆಚ್ಚಿನ ಅಧಿಕಾರ ಇದ್ದದ್ದು ಅಜ್ಜಯ್ಯನಿಗಾಗಿತ್ತು. ಅವರು ಅದರಲ್ಲಿಯೇ ಕುಳಿತು ನಮ್ಮ ಹತ್ತಿರ ಜನಿವಾರ ಹಿಡಿಸುತ್ತಿದ್ದರು. ಅವರ ಓದಾಟ ಅದರಲ್ಲಿ ಕುಳಿತೇ ಆಗಿತ್ತು. ಅವರು ಉಪಯೋಗಿಸದೇ ಬಿಟ್ಟಾಗ ನಾವೆಲ್ಲ ಸರಣಿ ಸಾಲಿನಲ್ಲಿ ಕುಳಿತು ಅದರ ಬಿಸುಪನ್ನು ಅನುಭವಿಸುತ್ತಿದ್ದೆವು. ಅದರೊಳಗೆ ಕುಳಿತು ಅದರ ಹಿಡುಪಿನ ಮೇಲೆ ಕಾಲಿಟ್ಟು ಸಣ್ಣ ನಿದ್ರೆ ಕೂಡಾ ಮಾಡಿದ್ದಿದೆ.
ಮರದ ಈಸೀಛೇರ್ ಅದಾಗಿತ್ತು. ಅದಕ್ಕೆ ತೆಳ್ಳಗಿನ ಜಮಖಾನದ ಬಟ್ಟೆ ಹಾಕಲಾಗಿತ್ತು. ಮೇಲೆ ಕೆಳಗೆ ಒಂದೊಂದು ಉರುಟುಗೋಲು ಹಾಕಿ ಅದನ್ನು ಆ ಛೇರ್ ಗೆ fix ಮಾಡಲಾಗಿತ್ತು. ಎಷ್ಟೋ ಸಲ ನಾವು ಆ ಉರುಟುಗೋಲನ್ನು ತೆಗೆದು ಈಸೀಛೇರ್ ನ ಬಟ್ಟೆ ಅದರೊಳಗೆ fix ಆಗಿದೆ ಎಂದು ತೋರುವಂತೆ ಬಿಡುತ್ತಿದ್ದೆವು. ಯಾರಾದರೂ ಬಂದು ಅದರೊಳಗೆ ಭಜಕ್ಕನೆ ಕೂತಾಗ ಅವರು ಈಸೀಛೇರ್ ನ ನಡುವಣ gapನಲ್ಲಿ ಬೀಳುವ ಪರಿ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ವಯಸ್ಸಾದ ಅಜ್ಜಯ್ಯನ ಮೇಲೂ ಈ ಪ್ರಯೋಗ ಮಾಡಿದ್ದುಂಟು. ಮುಂದಾಗುವ ಪರಿಣಾಮವನ್ನು ಯೋಚಿಸದೆ ಮಾಡಿದ ಬಾಲ್ಯದ ತುಂಟಾಟದ ಕ್ಷಣಗಳಿವು

19. ಪ್ರಾಣಿ ಪ್ರಿಯೆ - ಅನುಭವ 
ನಾನು ಪ್ರಾಣಿಪ್ರಿಯೆ. ನಾನು ಸಾಕದ ಪ್ರಾಣಿಗಳೇ ಇಲ್ಲವೇನೋ! ಮೊಲ, ಮಂಗ, ನಾಯಿ, ಬೆಕ್ಕು, ಗಿಳಿ..... ಹೀಗೇ ಉದ್ದನೆಯ ಪಟ್ಟಿ ಇದೆ.
ನಾನು B Ed ಮಾಡುವಾಗ ಮೊಲ ಸಾಕಿದ್ದೆ. ನನ್ನ ಸ್ನೇಹಿತರೊಬ್ಬರು ಎರಡು ಪುಟಾಣಿ ಮೊಲಗಳನ್ನು ಕೊಟ್ಟಿದ್ದರು. ಅಮ್ಮನ ಅಸಾಧ್ಯ ಅಸಹಕಾರದ ನಡುವೆಯೂ ಅವುಗಳನ್ನು ಸಾಕಿದೆ. ಚಾಬು, ಚಾಂದು ಎಂದು ಹೆಸರಿಟ್ಟಿದ್ದೆ. ಮುದ್ದಾದ ಮೊಲಗಳು. ಸುಮಾರು ಆರು ತಿಂಗಳು ಇದ್ದವು. ಒಂದು ಮೊಲ ಬಸುರಿ ಕೂಡಾ ಆಗಿತ್ತು. ನಾಯಿ ಹಿಡಿದು ಅವೆರಡು ಸತ್ತಾಗ ನಾನು ಒಂದೆರಡು ದಿನ ನಿದ್ರಿಸಲು ಆಗಿರಲಿಲ್ಲ. ಅವುಗಳ ಸಾವಿಗೆ ನಾನೇ ಕಾರಣ ಎನ್ನುವ ಅಪರಾಧಿ ಭಾವ ಬಹಳ ದಿನ ಕಾಡಿತ್ತು.
ಪೂಸಿ ನನ್ನ ಮುದ್ದಿನ ಬೆಕ್ಕಾಗಿತ್ತು. ಪರ್ಷಿಯನ್ ಕ್ಯಾಟ್ ಕ್ರಾಸ್ ಆದ ಬೆಕ್ಕಾಗಿತ್ತು. ನನ್ನನ್ನು ಸದಾ ಅಂಟಿಕೊಂಡಿರುತ್ತಿತ್ತು. ನನ್ನೊಟ್ಟಿಗೇ ಮಲಗುತ್ತಿತ್ತು ಕೂಡಾ. ನಾನು ಬಾಳೆಹೊನ್ನೂರಿಗೆ ಕೆಲಸಕ್ಕೆ ಹೋದ ಒಂದೆರಡು ತಿಂಗಳುಗಳಲ್ಲಿ ಕಾಯಿಲೆಯಾಗಿ ತೀರಿಕೊಂಡಿತು. ವಿಷಯ ಗೊತ್ತಾದಾಗ ಬಹಳ ಸಂಕಟವಾಯಿತು.
ಬಾಳೆಹೊನ್ನೂರಿನಲ್ಲಿ ಒಂದು ಕಾಟು ನಾಯಿಮರಿ ಸಾಕಿದ್ದೆ. ಅದಕ್ಕೆ ಟುಂಗ್ರುಸ್ ಅಂತ ಹೆಸರಿಟ್ಟಿದ್ದೆ. ನನ್ನನ್ನು ಬಹಳ ಹಚ್ಚಿಕೊಂಡಿತ್ತು. ಬಹಳ ಮುದ್ದಾಗಿತ್ತು ಕೂಡಾ. ನಾನು ಅಲ್ಲಿಂದ ವರ್ಗಾವಣೆಗೊಂಡಾಗ ಅದನ್ನು ಅಲ್ಲಿಯೇ ಬಿಟ್ಟು ಬರಬೇಕಾಯಿತು.
ಹೊಂಗಿರಣ ಪ್ರಾರಂಭಿಸಿದ ಮೇಲೆ ನನ್ನ ಬದುಕಲ್ಲಿ ಮಕ್ಕಳಷ್ಟೇ ಪಾತ್ರವನ್ನು ಪ್ರಾಣಿಗಳೂ ವಹಿಸಿದವು. ಈಗಿರುವ ನನ್ನಲ್ಲಿರುವ ನಾಯಿಗಳು ಅರ್ಧ ಡಜನ್ ಗೆ ಒಂದು ಕಮ್ಮಿ. ಬೆಕ್ಕುಗಳು ಎರಡು. ಈತನ್ಮಧ್ಯೆ ಗತಪ್ರಾಣವಾದ ನಾಯಿ, ಬೆಕ್ಕುಗಳು ಹಲವಾರು. ಬಹಳ ವರ್ಷಗಳ ಹಿಂದೆ ಸಾಗರದ ನರಸಿಂಹ ಮೂರ್ತಿಯವರು ತಂದು ಕೊಟ್ಟಿದ್ದ ಮಂಗವೊಂದನ್ನು ಸಾಕಿದ್ದೆ. ಅದು ಒಂದು ದಿನ ನನ್ನನ್ನು ಏಮಾರಿಸಿ ಓಡಿಹೋಯಿತು. ಗಿಳಿ ಕೂಡಾ ಸಾಕಿದ್ದೆ. ಅದನ್ನು ಕಾಗೆಗಳು ಹಿಡಿದು ಕುಕ್ಕಿ ಕೊಂದವು. ಅವುಗಳನ್ನೆಲ್ಲ ಕಳಕೊಂಡಾಗ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ನಂತರ ಒಂದು ರೀತಿಯಲ್ಲಿ ಆ ಬಗ್ಗೆ ಸ್ಥಿತಪ್ರಜ್ಞತೆಯೂ ಬರುತ್ತದೆ. ಆದರೆ ಕಳೆದುಕೊಳ್ಳುವುದು ಬಹಳ ಕಷ್ಟ ಎನ್ನುವ ಪಾಠ ಕೂಡಾ ಬದುಕು ನನಗೆ ಕಲಿಸಿದೆ.
ಪ್ರಾಣಿಗಳಿಗೆ ಮಾತನಾಡಲು ಬಾರದೇ ಇರಬಹುದು. ಆದರೆ ಅವುಗಳ ಒಡನಾಟ ಕೊಡುವ ಖುಷಿ, ಅವುಗಳ ನಿರ್ವಾಜ್ಯ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ಅದೊಂದು ರೀತಿಯ ವಿವರಿಸಲಾರದ ಭಾವನೆಗಳು. ಆ ಭಾವನೆಗಳಿಗೆ ಭಾಷ್ಯ ಕೊಡಲಾಗುವುದಿಲ್ಲ. ನೀವೇನಾದರೂ ಪ್ರಾಣಿಪ್ರಿಯರಾಗಿದ್ದರೆ ಖಂಡಿತಾ ನನ್ನ ಮಾತಿಗೆ ಸೈ ಅನ್ನುತ್ತೀರಿ, ಅಲ್ಲವೇ?



18. ಹೊಂಗಿರಣ - ಅನುಭವ 
ಒಂದು ಸಂಸ್ಥೆಯನ್ನು ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಅದೂ ಅಲ್ಲದೇ ಶೂನ್ಯದಿಂದ ಎಲ್ಲವನ್ನೂ ಸೃಷ್ಟಿಸುವುದು ದೊಡ್ಡ ಸವಾಲೇ ಸೈ! ಸಂಸ್ಥೆಯನ್ನುಕಟ್ಟುವಾಗ ಬಹಳಷ್ಟು ಜನ passive ಆಗಿ ಕೈ ಜೋಡಿಸಿರುತ್ತಾರೆ. ಅವರ ಆ ಸಂದರ್ಭೋಚಿತ ಸಹಾಯ ಎನ್ನುವುದು ಸಂಸ್ಥೆಯ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಿರುತ್ತದೆ.
ನಾವು ಮಾರ್ಚ್, 2003ರಲ್ಲೇ ಅಮಟೆಕೊಪ್ಪದಲ್ಲಿ ಶಾಲೆ ಪ್ರಾರಂಭಿಸಲು ಅರ್ಜಿ ಕೊಟ್ಟಿದ್ದೆವಷ್ಟೇ. ಆದರೆ ಕಟ್ಟಡವಿಲ್ಲದೆ ಶಾಲೆ ನಡೆಸುವುದೆಲ್ಲಿ? ಆಗ ಕಾಕಾಲ್ ಗಣೇಶ್ ರವರು ತಮ್ಮ ಉಪ್ಪಿನಕಾಯಿ ಫ್ಯಾಕ್ಟರಿಯ ಗೋಡೌನ್ ನನ್ನು ನಮಗೆ ಶಾಲೆ ನಡೆಸಲು ಬಾಡಿಗೆಗೆ ಕೊಟ್ಟರು. ನಂತರ ಉಳಿಯುವಿಕೆ? ಚರಕ ಪ್ರಸನ್ನರವರು ಅವರ ಮನೆಯ ಔಟ್ ಹೌಸಿನಲ್ಲಿ ಉಳಿಯಲು ಅವಕಾಶ ಕೊಟ್ಟರು. ನಾನು, ನನ್ನ 9 ವರ್ಷದ ಮಗಳು ಅವರ ಮನೆಯ ಒಂದು ಕಡೆಯ ರೂಂ ನಲ್ಲಿ, ನನ್ನ ಲೇಡಿ ಟೀಚರ್ಸ್ ಇನ್ನೊಂದು ಕಡೆಯ ರೂಂ ನಲ್ಲಿ ಉಳಿದೆವು. ಇನ್ನುಳಿದ ಇಬ್ಬರು ಜೆಂಟ್ಸ್ ಟೀಚರ್ಸ್ ದ್ದು ಗೋಡೌನ್ನಲ್ಲಿಯೇ ಉಳಿಕೆ. ನಾನು ಉಳಿದವರ ಸಹಾಯ ಪಡೆದು ಅಡಿಗೆ ಮಾಡುತ್ತಿದ್ದೆ. ಎಲ್ಲರೂ ಒಟ್ಟಿಗೆ ಉಣ್ಣುತ್ತಿದ್ದೆವು. ಅಂತಹ ಮಿನಿಮಮ್ ಫೆಸಿಲಿಟಿಯಲ್ಲಿ ನನ್ನೊಟ್ಟಿಗಿದ್ದ ಆಗಿನ ನನ್ನ ಫ್ಯಾಕಲ್ಟಿ ಗೆ ನಾನು hats off ಹೇಳಲೇ ಬೇಕು. ನಾವು ಸುಮಾರು ಒಂದೂವರೆ ವರ್ಷ ಅಲ್ಲಿ ಬದುಕಿದ ರೀತಿಯೇ ಒಂದು ಕಾದಂಬರಿಗಾಗುವಷ್ಟು ಸರಕನ್ನು ಕೊಡುತ್ತದೆ!
ನಂತರ ನೆನಪಾಗುವುದು ಭೂಪರಿವರ್ತನೆಗಾಗಿ ನಾನು ತಾಲೂಕು ಆಫೀಸ್ ನಲ್ಲಿ ಟೇಬಲ್ ಟೇಬಲ್ ಸುತ್ತಿದ್ದು. ಆಗ ಪ್ರಪಂಚ ಜ್ಞಾನವೇ ಇಲ್ಲದೆ RTC & Mutation, ಖುಷ್ಕಿ.... ಹೀಗೆ ಭೂಮಿಕಾಣಿಯ ಬಗ್ಗೆ ಏನೂ ಗೊತ್ತಿರದ ನಾನು ತಾಲೂಕು ಕಛೇರಿ ಸುತ್ತಿದ್ದು ನನ್ನ ಮುಂದೆ ಹೊಸದೊಂದು ಜಗತ್ತನ್ನೇ ತೆರೆದಿಟ್ಟಿತು.
ಅಲ್ಲಿ ಕೂಡಾ AC ಆಫೀಸಿನ ಮ್ಯಾನೇಜರ್ ಆಗಿದ್ದ ಶ್ರೀ ಮಂಜುನಾಥ್ ಬಾಪಟ್ ರವರು ಯಾವುದೇ ಫಲಾಪೇಕ್ಷೆ ಇಲ್ಲದೆ ಭೂ ಪರಿವರ್ತನೆ ಸಂಬಂಧಿ ಕೆಲಸಗಳಲ್ಲಿ ನನಗೆ ಅಪಾರ ಸಹಾಯ ಮಾಡಿದರು. ಅವರ ಸಹಾಯವಿಲ್ಲದೆ ಭೂ ಪರಿವರ್ತನೆ ಸಾಧ್ಯವಾಗುತ್ತಿರಲಿಲ್ಲ.. ಭೂ ಪರಿವರ್ತನೆ ಇಲ್ಲದೆ ಸಿಬಿಎಸ್ಇ ಸಂಯೋಜನೆ ಸಿಗುತ್ತಿರಲಿಲ್ಲ. ಬಾಪಟ್ ರಂತಹ ನಿಸ್ಪೃಹ ವ್ಯಕ್ತಿಗಳನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು.
ತದನಂತರದಲ್ಲಿ ನಾನು ಯಾವಾಗಲೂ ನೆನಪಿಸಿಕೊಳ್ಳುವ ವ್ಯಕ್ತಿ ಸಾಗರದ ಕಾರ್ಪೊರೇಶನ್ ಬ್ಯಾಂಕ್ ಮ್ಯಾನೇಜರ್ ಶ್ರೀ ತಿಪ್ಪೇಸ್ವಾಮಿಯವರು. ಅವರು ವೈಯಕ್ತಿಕ ಆಸಕ್ತಿ ತೆಗೆದುಕೊಂಡು ಸಾಲ ಕೊಡಿಸದಿದ್ದಲ್ಲಿ ನಮ್ಮ ಶಾಲಾ ಕಟ್ಟಡಗಳ ಕಟ್ಟೋಣ ಕನಸಿನ ಮಾತೇ ಆಗುತ್ತಿತ್ತು.
ಇದೇ ರೀತಿ ಪಟ್ಟಿ ಮಾಡುತ್ತಾ ಹೋದರೆ ನೂರಾರು ವ್ಯಕ್ತಿಗಳು ಅನಿವಾರ್ಯ ಹಾಗೂ ನಿರ್ಣಾಯಕ ಪರಿಸ್ಥಿತಿಯಲ್ಲಿ ನಾವಿದ್ದಾಗ ಸ್ಪಂದಿಸಿದ್ದಾರೆ. ಅವರು ನಮ್ಮ ಮನದಲ್ಲಿ ಸದಾ ಸ್ಮರಣೀಯರು🙏

17. ಅಜ್ಜಯನ ಮನೆ - ಅನುಭವ 
ಅಜ್ಜಯ್ಯನ ಮನೆಯ ಜಗಲಿಯ ಬಲ ಭಾಗಕ್ಕಿರುವ ಕಿಟಕಿ ಅಜ್ಜಯ್ಯನ ಕಿಟಕಿ ಎಂದೇ famous. ನಮಗೆಲ್ಲರಿಗೂ ಅದೊಂದು ಒಲುಮೆಯ ಜಾಗ. ಸುಮಾರು ಆರು ಅಡಿ/ಮೂರು ಅಡಿ ಉದ್ದಗಲ ಇರುವ ಆ ಜಾಗದಲ್ಲಿ ಕುಳಿತುಕೊಳ್ಳಲು ನಮ್ಮೆಲ್ಲರ ಪೈಪೋಟಿ ಇತ್ತು. ಇದಕ್ಕೆ ಮುಖ್ಯ ಕಾರಣ ಅಲ್ಲಿ ಗದ್ದೆಯಿಂದ ರುಮುರುಮುನೆ ಬರುವ ಗಾಳಿಯಾಗಿತ್ತು. ಕರಾವಳಿಯ ಆ ಉರಿ ಸೆಖೆಯಲ್ಲಿ ಆಹ್ಲಾದ ಕೊಡುವ ಗಾಳಿಯದಾಗಿತ್ತು. ತಾಜಾ ಗಾಳಿ!
ಆ ಕಿಟಕಿಯ ಕಟ್ಟೆ ಮೇಲೆ ನನ್ನಮ್ಮ ದಿನಸಿ ಸಾಮಾನನ್ನು ಶುಚಿಗೊಳಿಸುವ (ಶುಚಿಯಾಗಿದ್ದರು ಕೂಡಾ) ಕೆಲಸ ಮಾಡುತ್ತಿದ್ದಳು. ಹಾಗೆಯೆ ಅಕ್ಕಿ ಹೆಕ್ಕಲು ನಮ್ಮ ಜೀವವನ್ನೂ ತಿನ್ನುತ್ತಿದ್ದಳು. ಅದೊಂದು ದೊಡ್ಡ ಶಿಕ್ಷೆಯಾಗಿತ್ತು. ನಾನು ಶಾಲೆಗೆ ಹೋಗುವಾಗ ನಮ್ಮೆಲ್ಲರ ಬಟ್ಟೆಯನ್ನು ಅದೇ ಕಟ್ಟೆಯಲ್ಲಿ ಕುಳಿತು ಇಸ್ತ್ರಿ ಮಾಡುತ್ತಿದ್ದೆ. ಆ ಕಿಟಕಿಯ ಹತ್ತಿರ ಬರೀ ನೆಲದ ಮೇಲೆ ಮಧ್ಯಾಹ್ನದ ನಿದ್ರೆ ಮಾಡುವುದು ಒಂದು ಒಳ್ಳೆಯ ಸುಖಾನುಭೂತಿಯನ್ನು ಕೊಡುತ್ತಿತ್ತು. ಅಷ್ಟು ಚಂದ ಆ ಜಾಗ!

ಆ ಕಿಟಕಿಯ ಕಟ್ಟೆಯ ಮೇಲೆ ಕುಳಿತರೆ ಜಗಲಿಯ ಯಾವ ಜಾಗದಲ್ಲಿ ಕೂತವರನ್ನೂ ಉದ್ದೇಶಿಸಿ ಮಾತನಾಡುವುದು ಸುಲಭವಾಗಿತ್ತು.
ಮನೆಯ ಕೆಲವು ಜಾಗಗಳೇ ಹಾಗೆ ಯಾವುದೋ ಒಂದು ಕಾರಣಕ್ಕೆ ಮನದ ಮೂಲೆಯಲ್ಲೆಲ್ಲೋ ಸದಾ ಜೀವಂತವಾಗಿರುತ್ತವೆ. ಕೆಲವೊಮ್ಮೆ ನಮ್ಮೊಡನಿರುವ ವ್ಯಕ್ತಿಗಳಿಗಿಂತ ಆ ಜಾಗಗಳೇ ಆಪ್ತ ಎಂದೆನಿಸುತ್ತವೆ. ನಮ್ಮೆಷ್ಟೋ ಅನುಭವಗಳು, ನೆನಪುಗಳು ಆ ಜಾಗದ ಸುತ್ತ ಜಾಗೃತವಾಗಿರುತ್ತವೆ. ಅಂತಹ ಎಷ್ಟೋ ನೆನಪುಗಳನ್ನು ಅರಳಿಸುವ ಶಕ್ತಿ ಇರುವ ಜಾಗ ನಮ್ಮ ಅಜ್ಜಯ್ಯನ ಕಿಟಕಿ.

16. ಹೊಂಗಿರಣ  - ಅನುಭವ 

2003. ನಾವು ಹೊಂಗಿರಣ ಪ್ರಾರಂಭಿಸಿದ ವರ್ಷ. ಶಾಲೆ ಪ್ರಾರಂಭಿಸಲು ಅನುಮತಿ ಕೋರಿ ಅರ್ಜಿಯನ್ನು ಮಾರ್ಚ್ ತಿಂಗಳಲ್ಲೇ ಕೊಟ್ಟಾಗಿತ್ತು. ಅನುಮತಿ ಸಿಗುವುದೆಂಬ ನಿರೀಕ್ಷೆಯಲ್ಲಿ ನರ್ಸರಿಯಿಂದ 5ರ ವರೆಗೆ 47 ಮಕ್ಕಳ ದಾಖಲಾತಿ ಮಾಡಿಕೊಂಡು ಜೂನ್ 4ರಿಂದ ತರಗತಿಗಳನ್ನು ಅಮಟೆಕೊಪ್ಪದ ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿಯ ಗೋಡೌನ್ನಲ್ಲಿ ಪ್ರಾರಂಭಿಸಿಯೂ ಆಗಿತ್ತು. ಆಗ ಬಂತು ನೋಡಿ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪ್ರೀತಿಯ ಸೂಚನಾ ಪತ್ರ! ಶಾಲೆ ಶುರುವಾಗಿದೆ, ದಾಖಲಾತಿ ಆಗಿದೆ, ಏನು ಮಾಡಲೂ ಗೊತ್ತಾಗದ ಅತಂತ್ರ ಸ್ಥಿತಿ.
ಸರಿ. ಹೈಯ್ಯರ್ ಲೆವೆಲ್ನಲ್ಲಿ ಏನಾದರೂ ಪ್ರಯತ್ನ ಮಾಡಿದರಾಯಿತು ಅಂತ ಕಿಟ್ಟಣ್ಣನ ಸಾರಥ್ಯದಲ್ಲಿ ಬೆಂಗಳೂರಿಗೆ ಹೋದದ್ದಾಯಿತು. ಒಂದು ರೀತಿಯಲ್ಲಿ ಕಾಡಿನಲ್ಲಿ ಕಣ್ಣು ಕಟ್ಟಿ ಬಿಟ್ಟ ಸ್ಥಿತಿ. ಯಾರೆಂದರೆ ಯಾರೂ ಪರಿಚಯವಿಲ್ಲ. ಆದರೂ ಅಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಹಳಷ್ಟು ಬಾಗಿಲುಗಳನ್ನು ತಟ್ಟಿದ್ದಾಯಿತು. ಹೀಗೆ ನಿರಂತರ ಪ್ರಯತ್ನದಲ್ಲಿದ್ದಾಗ ಕಂಡ ಒಂದು ಬೋರ್ಡ್ ಶ್ರೀ ತಿರುಮಲರಾವ್, ಜಂಟಿ ನಿರ್ದೇಶಕರು ಅಂತ. ಅವರು ಶಿವಮೊಗ್ಗ ಜಿಲ್ಲೆಯವರಾಗಿರಬಹುದೆಂಬ ಆಶಾ ಭಾವನೆಯಲ್ಲಿ ನಾನು ಮತ್ತು ಕಿಟ್ಟಣ್ಣ ಅವರ ಛೇಂಬರ್ ಗೆ ಪ್ರವೇಶಿಸಿದೆವು. ನಾವ್ಯಾರೆಂದು ಗೊತ್ತಿಲ್ಲದಿದ್ದರೂ ಆ ಕ್ಷಣದಲ್ಲಿ ಅವರು ನಮ್ಮನ್ನು ಬರಮಾಡಿಕೊಂಡ ರೀತಿ, ತಾಳ್ಮೆಯಿಂದ ನಮ್ಮ ಕಥೆಯನ್ನು ಕೇಳಿದ ರೀತಿ, ನಾವು ಶಿಕ್ಷಣ ಕ್ಷೇತ್ರದಲ್ಲಿ ಮಾಡ ಹೊರಟಿದ್ದ ಪ್ರಯೋಗಾತ್ಮಕ ಕಲಿಕೆಯ ಬಗ್ಗೆ ಅವರು ತೋರಿದ ಆಸಕ್ತಿ, ಶಿಕ್ಷಣ ರಂಗದ ಸಮಸ್ಯೆಗಳ ಬಗ್ಗೆ ಅವರಿಗಿದ್ದ ಅತೀವ ಕಾಳಜಿ.... ಇವೆಲ್ಲ ಅವಿಸ್ಮರಣೀಯ. ತನ್ನಿಂದಾದ ಸಹಾಯ ಒದಗಿಸುತ್ತೇನೆ ಎನ್ನುವ ಮನದಾಳದ ಅವರ ಭರವಸೆ ನಮಗೆ ನೂರಾನೆಯ ಬಲ ನೀಡಿತೆಂದರೆ ಸುಳ್ಳಲ್ಲ. ಅವರು ತಾವು ಕೊಟ್ಟ ಮಾತಿಗೆ ಬಧ್ಧರಾಗಿ ತಮ್ಮ ಮಾತನ್ನು ನಡೆಸಿಕೊಟ್ಟರು. ನಂತರ ನಮಗೆ ಅನುಮತಿ ಸಿಕ್ಕಿದ್ದು, ಸಿಬಿಎಸ್ಇ ಸಂಯೋಜನೆ ಸಿಕ್ಕಿ ಶಾಲೆ ಈಗ ಹದಿನೇಳನೆಯ ವರ್ಷ ಯಶಸ್ವಿಯಾಗಿ ಮುಗಿಸಿರುವುದು ಒಂದು ಗಾಥೆ.
ಶ್ರೀ ತಿರುಮಲ ರಾವ್ ಅವರು ಮೂಲತಃ ಚನ್ನಗಿರಿಯವರು. ಶಿಕ್ಷಣ ಕ್ಷೇತ್ರದಲ್ಲಿ ಹಲವು ಮಜಲುಗಳಲ್ಲಿ ಕೆಲಸ ಮಾಡಿ ಇಲಾಖೆಯ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ತಾನು ನಡೆದು ಬಂದ ದಾರಿಯನ್ನು ಮರೆಯದೇ, ಅಧಿಕಾರದ ಅಮಲನ್ನು ಹಚ್ಚಿಕೊಳ್ಳದೆ ತನ್ನತನವನ್ನು ಕಾಯ್ದುಕೊಂಡು ಎಲ್ಲರಿಂದಲೂ ಅತ್ಯಂತ ಗೌರವವನ್ನು ಪಡೆದುಕೊಂಡ ವ್ಯಕ್ತಿ. ಸರಕಾರಿ ವ್ಯವಸ್ಥೆಯಲ್ಲಿ integrity ಕಾದುಕೊಳ್ಳುವುದು ಕಷ್ಟ. ಆದರೆ ತನ್ನ ಇಡೀ ಸೇವಾವಧಿಯಲ್ಲಿ ತನ್ನ ಸಮಗ್ರತೆಯನ್ನು ಕಾದುಕೊಂಡ ಬಹು ಅಪರೂಪದ ವ್ಯಕ್ತಿ ಶ್ರೀ ತಿರುಮಲ ರಾವ್ ರವರು. ಅವರಂದು ನಮಗೆ ಸಹಕಾರ, ಬೆಂಬಲ ಕೊಡದೇ ಇದ್ದಿದ್ದರೆ ಇಂದು ಹೊಂಗಿರಣ ಇರುತ್ತಿರಲಿಲ್ಲ. ಅವರೀಗ ಅಕ್ಷಯ ಪಾತ್ರೆ ಯೋಜನೆಯಲ್ಲಿ ಮುಖ್ಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಂತಹ ಧೀಮಂತ, ಆದರ್ಶಪ್ರಾಯರಾದ ವ್ಯಕ್ತಿಗಳು ಸಮಾಜದಲ್ಲಿ ಇನ್ನಷ್ಟು ಬರಲಿ, ಬೆಳೆಯಲಿ, ಸಮಾಜ ಸಕಾರಾತ್ಮಕ ಮನಸ್ಥಿತಿಯಲ್ಲಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಹಾರೈಕೆ.

15. ಈಜು ಕಲಿಕೆ - ಅನುಭವ 

ನನ್ನ ಬಗ್ಗೆ ನನಗೇ ಹೆಮ್ಮೆ ಅನಿಸುವಂತಹ ವಿಷಯವೆಂದರೆ ನಾನು ನನ್ನ 50ರ ಹರೆಯದಲ್ಲಿ ಭೀಮನಕೋಣೆಯ ಕೆರೆಯಲ್ಲಿ 20 ದಿನಗಳಲ್ಲಿ ಈಜು ಕಲಿತದ್ದು. ನನ್ನ ಪಾಲಿಗೆ ಅದೊಂದು ದೊಡ್ಡ ಸಾಧನೆ! ಬರೀ ಈಜು ಕಲಿತದ್ದಲ್ಲದೆ ಜಲಯೋಗ ಕಲಿತದ್ದು ನನ್ನ ಸಾಧನೆಗೆ ಇನ್ನೊಂದು ಗರಿ😊
ನನ್ನ ಮಗಳು ವಿಭಾಳಿಗಾಗಿ ನಾನು ಅವಳೊಡನೆ float ಕಟ್ಟಿಕೊಂಡು ಕೆರೆಗೆ ಇಳಿದಿದ್ದೇನೋ ನಿಜ. ಆ ಜಲರಾಶಿಯನ್ನು ನೋಡಿ ಒಳಗೊಳಗೆ ನಡುಕ. ಜೀವಭಯ ಅಂತದ್ದಲ್ವೇ!?
ನನ್ನ ಮಗಳೇನೋ ಮೂರು ದಿನಗಳಲ್ಲಿ ಈಜು ಕಲಿತು ಬಿಟ್ಟಳು. ನಾನಿನ್ನೂ ಈಜಿನ ಪ್ರಥಮಾಕ್ಷರಗಳನ್ನು ಗೀಚುವುದರಲ್ಲಿ ಇದ್ದೆ.
ಭೀಮನಕೋಣೆಯಲ್ಲಿ ಹರೀಶ್ ನವಾಥೆಯವರ ನೇತೃತ್ವದಲ್ಲಿ ಒಂದು
 ಉತ್ಸಾಹಿ ತಂಡ ಕೆಲಸ ಮಾಡುತ್ತದೆ. 60ರ ಆಸುಪಾಸಿನ ಹಿರಿಯಣ್ಣ ಹಾಗೂ 50ರ ಆಸುಪಾಸಿನ ನಾಗರಾಜರ ಉತ್ಸಾಹ ಕಂಡರೆ ಹದಿ ಹರೆಯದವರೂ ಕೂಡ ನಾಚಿ ನೀರಾಗಬೇಕು. ಒಂದು ದಿನವೂ ಗೈರುಹಾಜರಾಗದೆ ಅಲ್ಲಿ ಬಂದವರಿಗೆ ಈಜು ಹೇಳಿ ಕೊಡುವುದಲ್ಲದೇ ಕರೆಯನ್ನು ಕಸರಹಿತವಾಗಿ ಇಡುವುದರಲ್ಲಿ ಅವರ ಪಾತ್ರ ಮಹತ್ವದ್ದು.
ಆದರೆ ನನ್ನ ಈಜು ಗುರು ಪುರಪ್ಪೆಮನೆಯ ಕಿರಣ. Float ಕಟ್ಟಿಕೊಂಡು ಅನುಮಾನಿಸುತ್ತಾ ನೀರಿನಲ್ಲಿ ಕೈ ಕಾಲಾಡಿಸುತ್ತಿದ್ದವಳನ್ನು ಧೈರ್ಯ ತುಂಬಿ ಸುಲಲಿತವಾಗಿ ಈಜುವಂತೆ ಮಾಡಿದ credit ಅವರಿಗೆ ಸಲ್ಲುತ್ತದೆ. ನನಗೆ ಈಜು ಕಲಿಸುವಾಗ ಆತ ನನ್ನಲ್ಲಿ ತುಂಬಿದ ಆತ್ಮಸ್ಥೈರ್ಯ ಹಾಗೂ ಆತ ಸ್ಪೂರ್ತಿ ತುಂಬಿದ ರೀತಿ ಕಲಿಸುವ ಶಿಕ್ಷಕರಲ್ಲಿ ಇರಬೇಕಾದ ಗುಣ ಅಂದರೆ ತಪ್ಪಾಗಲಾರದು.
ಕಲಿಯಲಾರೆನು ಎನ್ನುವ ವಯಸ್ಸಿನಲ್ಲಿ ಈಜಿನಂತಹ ವಿದ್ಯೆ ಕಲಿತದ್ದು ನನ್ನ ಮನೋಧಾರ್ಡ್ಯತೆಯ ಜೊತೆಗೆ ದೇಹದ ಆರೋಗ್ಯವನ್ನು ಪುಷ್ಟೀಕರಿಸಿದ್ದಂತೂ ನಿಜ. ದಿನಂಪ್ರತಿ ಬೆಳಿಗ್ಗೆ 6.30ರಿಂದ 7.15ರ ವರೆಗೆ ನನ್ನ ಈಜು. ಈಜುವಾಗ ಸಿಗುವ ಕ್ರಿಯಾ ತಾದಾತ್ಮ್ಯತೆ ಮತ್ತೆಲ್ಲೂ ಸಿಗದೇನೋ? ಹುಚ್ಚು ಮಳೆಯಲ್ಲೂ ಈಜುವ ಸುಖ ಈಜಿದವರಿಗಷ್ಟೇ ಗೊತ್ತು. ನೀರಿನೊಳಗಿದ್ದು ಮೇಲಿನಿಂದಲೂ ನೀರಿನ ಬಲವಾದ ಸಿಂಪಡಣೆ ಆಗುತ್ತಿದ್ದರೆ ಸ್ವರ್ಗವೇ ಧರೆಗಿಳಿದಂತ ಅನುಭವ. ಅಂತಹ ಸುಖಾನುಭೂತಿಯನ್ನು ಅದು ನೀಡುತ್ತದೆ. ಈಜುವ ಅಷ್ಟು ಹೊತ್ತು ಬೇರಾವುದೋ ಲೋಕದಲ್ಲಿ ಇರುವ ಅನುಭವ. ಚಳಿಗಾಲದಲ್ಲಿ ಘೋರ ಚಳಿ ಇದ್ದರೂ ಈಜಲು ಪ್ರಾರಂಭಿಸಿದ ಸ್ವಲ್ಪ ಹೊತ್ತಿಗೆ ಈಜಿನ ಮತ್ತೇರತೊಡಗುತ್ತದೆ. ಇದೊಂದು addiction ಇದ್ದ ಹಾಗೆ.

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು 50ರ ಹರೆಯದಲ್ಲಿನ ನನ್ನ ಈಜು ಕಲಿಕೆ ನನ್ನ ಮಟ್ಟಿಗೆ prove ಮಾಡಿದ್ದಂತೂ ನಿಜ. ಈಗ ಹೊಸ ವಿಷಯದ ಕಲಿಕೆಯ ಹುಡುಕಾಟದಲ್ಲಿದ್ದೇನೆ!?

14. ಅನುಭವ (ಕಳೆದು ಹೋಗಿದ್ದು)
ನಾನಾಗ ಸುಮಾರು ಎರಡು ವರ್ಷದವಳಾಗಿದ್ದಿರಬಹುದು. ಅಪ್ಪ ಅಮ್ಮ ನನ್ನನ್ನು ಕುಂಜಿಬೆಟ್ಟಿನ ಶಾರದಾ ಕಲ್ಯಾಣ ಮಂಟಪದಲ್ಲಿ ಒಂದು ಮದುವೆಗೆ ಕರ್ಕೊಂಡು ಹೋಗಿದ್ರು. As usual ಅಮ್ಮ ನನಗೆ ಮೈ ತುಂಬಾ ಬಂಗಾರ ಹಾಕಿದ್ದಳು - ಬಂಗಾರದ ಸರ, ಉಡಿದಾರ, ಬಳೆ.... ಹೀಗೇ. ಸಣ್ಣ ಮಗುವಾಗಿದ್ದ ಕಾರಣ ಮುದ್ದಾಗಿದ್ದೆ ಅಂತನಿಸುತ್ತದೆ. ಯಾರು ಮುದ್ದಿಸಲು ಬಂದರೂ ನಾನು ಹೋಗುತ್ತಿರಲಿಲ್ಲವಂತೆ. ಅಪ್ಪ ಇಲ್ಲವೇ ಅಮ್ಮನನ್ನು ಬಿಟ್ಟು ಅಲುಗಾಡುತ್ತಿರಲಿಲ್ಲವಂತೆ. ನಮ್ಮ ಉಡುಪಿ ಕಡೆ usual ಆಗಿ ಊಟದ ಮೊದಲು ಹೆಂಗಸರು ಉಟ್ಟುಕೊಂಡಿದ್ದ ರೇಷಿಮೆ ಸೀರೆಯನ್ನು ಬದಲಿಸುತ್ತಿದ್ದರು. ಆಗ ಅಮ್ಮ ನನ್ನನ್ನು ಅಪ್ಪನ ಬಳಿ ಕೊಟ್ಟು ಹೋಗಿದ್ದಾರೆ. ಅಪ್ಪನಿಗೆ ಮಾತನಾಡಲಿಕ್ಕೆ ಜನ ಸಿಕ್ಕಿದರೆ ಕೆಲವೊಮ್ಮೆ ಈ ಲೋಕವನ್ನೇ ಮರೆತು ಬಿಡುತ್ತಿದ್ದರು. ಅವರು ಹಾಗೆ ಮೈಮರೆತ ಗಳಿಗೆ. ನಾನು ಅಮ್ಮನನ್ನು ಹುಡುಕಿಕೊಂಡು ಛತ್ರದ ಹೊರಗೆ ಬಂದಿದ್ದೇನೆ. ಯಾರೋ ಒಬ್ಬ ಬೆಕ್ಕಿನ ಕಣ್ಣಿನ(ಆ ಹೆಂಗಸು ನೆನಪಿಲ್ಲ. ಆದರೆ ಅವಳ ಬೆಕ್ಕಿನ ಕಣ್ಣುಗಳು ಇನ್ನೂ ನನ್ನಲ್ಲಿ ಅಚ್ಚೊತ್ತಿವೆ) ಹೆಂಗಸು ನನ್ನನ್ನು ಅಮ್ಮನತ್ರ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಕಾಡೊಂದಕ್ಕೆ ಎತ್ತೊಯ್ದು ಬಿಟ್ಟಿದ್ದಾಳೆ. ಆಗ ಉಡುಪಿ ಇನ್ನೂ ಬೆಳೆದಿರಲಿಲ್ಲ. ಆ ಕುಂಜಿಬೆಟ್ಟು area ಎಲ್ಲಾ ಕಾಡೇ ಆಗಿತ್ತು. ಅಮ್ಮ ಸೀರೆ ಬದಲಿಸಿ ಬಂದರೆ ಮಗು ಇಲ್ಲ. ಮದುವೆಯ ಮನೆಯಲ್ಲಿ ಎಲ್ಲರೂ ಮಗುವನ್ನು ಹುಡುಕುವವರೇ. ಮಗು ಅಲ್ಲಿದ್ದರಲ್ಲವೇ ಸಿಗಲಿಕ್ಕೆ! ಸ್ವಲ್ಪ ರಗಳೆಯ ವಾತಾವರಣ ಸೃಷ್ಟಿಯಾದದ್ದಂತೂ ನಿಜ. ಅಷ್ಟು ಹೊತ್ತಿಗೆ ಮದುವೆ ಮನೆಗೆ ಬಂದ ಅಪ್ಪನ ಸ್ನೇಹಿತರೊಬ್ಬರು ದಾರಿಯಲ್ಲಿ ಕಾಡಿನ ಪಕ್ಕ ಒಂದು ಅಳುತ್ತಿದ್ದ ಮಗು ಹಾಗೂ ಒಂದು ಹೆಂಗಸನ್ನು ನೋಡಿದ್ದಾಗಿ ಹೇಳಿದರು. ಸರಿಯಾದ location ತಿಳ್ಕೊಂಡು ಅಪ್ಪ ಬುಲೆಟ್ ಏರಿ ಮಗಳ ತಲಾಶ್ ಗೆ ಹೊರಟೇ ಬಿಟ್ಟರು. ಅಲ್ಲೇ ಹತ್ತಿರದ ಕಾಡೊಂದರ ಮರದ ಕೆಳಗೆ ನಾನು ಒಂಟಿಯಾಗಿ ಅಳುತ್ತಾ ನಿಂತಿದ್ದೆನಂತೆ. ಮೈಮೇಲಿನ ಎಲ್ಲಾ ಬಂಗಾರವನ್ನು ತೆಗೆದುಕೊಂಡು ಆ ಬೆಕ್ಕಿನ ಕಣ್ಣಿನಾಕೆ ನನ್ನನ್ನು ಒಬ್ಬೊಂಟಿಯಾಗಿ ಆ ಕಾಡಲ್ಲಿ ಬಿಟ್ಟು ಹೋಗಿದ್ದಳು. ಅಂತೂ ಸುಸೂತ್ರವಾಗಿ ನಾನು ಮರಳಿ ಗೂಡಿಗೆ ಸೇರಿದೆ. ಮೊದಲೇ ಸರಳ ಜೀವನವನ್ನು ಇಷ್ಟ ಪಡುತ್ತಿದ್ದ ನನ್ನಪ್ಪ ನಂತರ ನನಗೆ ಬುದ್ಧಿ ಬರುವ ತನಕ ಒಂದು ಆಭರಣವನ್ನೂ ಧರಿಸಲು ಬಿಡಲಿಲ್ಲ. ನನಗೆ ಬುದ್ಧಿ ಬಂದ ಮೇಲೆ ನಾನು ಬಂಗಾರದ ಹಿಂದೆ ಹೋಗಲಿಲ್ಲ. ಅಪ್ಪನ simple living ಅನ್ನುವುದನ್ನು ನಾನು ಪಾಲಿಸತೊಡಗಿದೆ ಅಂದರೆ ಸುಳ್ಳಲ್ಲ. Now I have to thank that cat eyed lady for making me opt simple life😊

13. ಅನುಭವ ( ಬಾಳೆಹೊನ್ನೂರು)
ಬಾಳೆಹೊನ್ನೂರಿನಲ್ಲಿ ನಾನಿದ್ದದ್ದು ಎರಡು ವರ್ಷ. ಮೊದಲ ವರ್ಷ ತುಂಬಾ ಸ್ಮರಣೀಯ - ಮೊದಲ ಸಲ ಮನೆ ಬಿಟ್ಟು independent ಆಗಿ ಇದ್ದದ್ದು ಮತ್ತು ಇನ್ನೊಂದು ಅಲ್ಲಿನ ಮಳೆಗಾಲ. ನಾನು ಸೇರಿದ್ದು ಜೂನ್ ತಿಂಗಳಲ್ಲಿ. ಮಳೆ ಪ್ರಾರಂಭವಾಗಿತ್ತಷ್ಟೇ. ಇಡೀ ದಿನ ಜುಮುರು ಮಳೆ ಇರುತ್ತಿತ್ತು. ಸೂರ್ಯನ ದರ್ಶನ ಅಪರೂಪ. ಕರಾವಳಿಯಲ್ಲಿ ಮಳೆ ಜೋರು ಹೊಡೆದರೂ ಇನ್ನೊಂದು ಗಳಿಗೆಯಲ್ಲಿ ಸೂರ್ಯ ದೇವ ತನ್ನ ಪ್ರತಾಪ ತೋರಿಸುತ್ತಿದ್ದ. ಇಲ್ಲಿ ಮಳೆ ಜೊತೆ ಚಳಿ ಬೇರೆ. ಬಟ್ಟೆ ಒಣಗಿಸುವುದಂತೂ ಹರಸಾಹಸ. ಕರಾವಳಿಯವಳಾದ್ರೂ, ಚಳಿ ಜೋರು ಇದ್ದರೂ ನಾನು ಸ್ವೆಟರ್ ಹಾಕದಿರುತ್ತಿದ್ದದ್ದು ನನ್ನ ವಿಶೇಷತೆ ಆಗಿತ್ತು. ಆ ವಿಶೇಷತೆಯ ಪರಿಣಾಮವಾಗಿ ವಯಸ್ಸು 40 ಕಳೆಯುತ್ತಿದ್ದಂತೆ ನನ್ನ ಮೈಯ್ಯ ಮೂಳೆಗಳೆಲ್ಲ ನೋವಿನಿಂದ ತಾವು ಎಲ್ಲೆಲ್ಲಿ ಇದ್ದೇವೆ ಅಂತ ನನಗೆ ಈಗ ತಿಳಿಸುತ್ತಿದ್ದಾವೆ😢
ದಿನಗಳೆದಂತೆ ಅಲ್ಲಿನ ಮಳೆಯ ಆರ್ಭಟ ಜೋರಾಯಿತು. ವಿಚಿತ್ರ ಗಾಳಿ, ಅದರ ರಭಸಕ್ಕೆ ಉದ್ದುದ್ದಕ್ಕೆ ಬಿದ್ದ ಮರಗಳು. No post, no phone, no communication! ನನ್ನಪ್ಪ ನನ್ನ ಸುದ್ದಿ ಏನು ಅಂತ ಗೊತ್ತಾಗದೆ ಆ ಹುಚ್ಚು ಮಳೆಯಲ್ಲೂ ಬಸ್ಸು ಹತ್ತಿಕೊಂಡು ಬಂದು ಬಿಟ್ಟು ಮೊದಲು ನನ್ನ ಬೇಜವಾಬ್ದಾರಿಯ ಬಗ್ಗೆ ನನಗೆ ಪ್ರವಚನ ಮಾಡಿದ್ರು. ನಂತರ ವಸ್ತುಸ್ಥಿತಿ ಗೊತ್ತಾದಾಗ ತಣ್ಣಗಾದರು. ಅಂದರೆ ಆ communicationless ವ್ಯವಸ್ಥೆ ದೂರದಲ್ಲಿದ್ದ ನನ್ನ ಮನೆಯವರನ್ನು ಅಷ್ಟು ಆತಂಕಕ್ಕೆ ತಳ್ಳಿತ್ತು. ಅಂತಹ ಘೋರ ಮಳೆಗಾಲ ಅದಾಗಿತ್ತು. ನೆಕ್ಸ್ಟ್ ವರ್ಷ ನಾನು ಅಲ್ಲಿಯೇ ಇದ್ದರೂ ಅಂತಹ ಮಳೆಗಾಲವಿರಲಿಲ್ಲ. I think the year 1989 was a testing period for me posing all the adversities?
ಬರುವ ವರ್ಷ ಪ್ರಾಂಶುಪಾಲರು ಬದಲಾದರು, ನಮ್ಮ ವಾಸಸ್ಥಾನ ಬದಲಾಯಿತು - ಮಕ್ಕಳು dormsಗೆ shift ಆದರು, ನಮಗೆ toilet, bathroom use ಮಾಡಲಾಗದ quarters sharing base ಮೇಲೆ ಕೊಟ್ಟರು. ಸ್ವಲ್ಪ ದೂರದಲ್ಲಿದ್ದ general toilet & bathroom ಅತೀ ದೂರಕ್ಕೆ ಹೋದವು. ಉಳಿದಂತೆ ನೀರಿನ ಸಮಸ್ಯೆ ಹಾಗೇ ಮುಂದುವರಿಯಿತು. ಪ್ರಾಂಶುಪಾಲರ ಬದಲಾವಣೆಯೊಂದಿಗೆ working environment ಕೂಡಾ ಬದಲಾಯಿತು. ಪ್ರೀತಿಯಿಂದ ಮನಪೂರ್ವಕವಾಗಿ ಸಮಯದ ಅರಿವೇ ಇರದೆ ಮಾಡುತ್ತಿದ್ದ ಕೆಲಸಗಳು time bound dutyಗಳಾಗತೊಡಗಿದವು. ಆದರೂ ರವೀಂದ್ರನ್ ಸರ್ ಗರಡಿಯಲ್ಲಿ ಪಳಗಿದ್ದ ನಾವು ಕೆಲವರಿಗೆ ಲೆಕ್ಕಾಚಾರದ ಕೆಲಸ ಮಾಡುವುದೇ ಗೊತ್ತಿರಲಿಲ್ಲ. ನಾವೊಂದಿಷ್ಟು ಜನ ಸಂಸ್ಥೆಯ ಮುಖ ನೋಡಿ ಕೆಲಸ ಮಾಡುವವರಾಗಿದ್ದೆವು. ಯಾರೇ ಬರಲಿ ಬಿಡಲಿ ultimately ನಾವು ಮಾಡುವ ಕೆಲಸ ಮಕ್ಕಳ ಒಳಿತಿಗಾಗಿ ಹಾಗೂ ನಮ್ಮ ವೃತ್ತಿಧರ್ಮವನ್ನು ನಿರ್ವಹಿಸಲಿಕ್ಕಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆತ್ಮತೃಪ್ತಿಗಾಗಿ ಅನ್ನುವ ಸತ್ಯವನ್ನು ನನ್ನ ವೃತ್ತಿಜೀವನದ ದ್ವಿತೀಯ ವರ್ಷ ನನಗೆ ಕಲಿಸಿಬಿಟ್ಟಿತ್ತು.
ಈಗ ಆ ನವೋದಯ campus ಅದ್ಭುತವಾಗಿ ಬೆಳೆದಿದೆ. ಸಕಲ ಸೌಲಭ್ಯಗಳಿರುವ ಸುಂದರ campus ಆಗಿ ಪರಿವರ್ತಿತವಾಗಿದೆ. ಈಗ ನೋಡಿದರೆ ಹಿಂದಿನ ನಮ್ಮ ಒದ್ದಾಟಗಳ ಕುರುಹೂ ಕೂಡ ಕಾಣುವುದಿಲ್ಲ. ಬೆಳವಣಿಯೇ ಹಾಗೆ. ಒಂದು ರೀತಿಯ ಸ್ಥಿತ್ಯಂತರ. ಅದನ್ನು ಗ್ರಹಿಸುವ, ಒಪ್ಪಿಕೊಳ್ಳುವ ಮನಸ್ಥಿತಿ ನಮಗಿರಬೇಕಷ್ಟೇ!

12. ಕಾಲೇಜು ದಿನಗಳು - ಶಿವಮೊಗ್ಗ 

ನಾನು ಡಿಗ್ರಿಯ ಎರಡು ವರ್ಷಗಳನ್ನು ಓದಿದ್ದು ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ - 1984ರಿಂದ1986ರವರೆಗೆ. ಇತಿಹಾಸ, ಅರ್ಥಶಾಸ್ತ್ರ ಹಾಗೂ ಇಂಗ್ಲಿಷ್ ಮೇಜರ್ ನನ್ನ ಕಲಿಕೆಯ ವಿಷಯಗಳು. ಇಂಗ್ಲಿಷ್ ಮೇಜರ್ ಕ್ಲಾಸಿನಲ್ಲಿ ನಾವಿದ್ದದ್ದು ಸುಮಾರು 15ರಿಂದ 20 ಜನ. ಉಳಿದಂತೆ ದೊಡ್ಡಿಯಂತೆ ಜನ ತುಂಬಿದ common classes. ಆದರೆ ಆಗಿನ ವಿಶೇಷವೇನೆಂದರೆ ಆರ್ಟ್ಸ್ ಕಲಿಯುವವರಿಗೂ ಬೆಲೆ ಇತ್ತು. ನಮಗೆ ಟಿ.ವಿ. ಹೆಗ್ಡೆ, ಅಣತಿ, ಕಾಂತೇಶಮೂರ್ತಿ, ಪಾಂಡುರಂಗ ಉಡುಪ, ಕುಮಾರಸ್ವಾಮಿ, ಪ್ರಭಾಕರ ಸಿಂಹ, ಸಿಕೆಆರ್, ಅಡಿಗ, ಶಾಸ್ತ್ರಿಗಳಂತಹ ಅಧ್ಭುತ ಪ್ರಾಧ್ಯಾಪಕರುಗಳಿದ್ದರು. ಅವರ ಪಾಠ ಕೇಳುವುದೇ ಒಂದು ಸೌಭಾಗ್ಯ.
ಡಿವಿಎಸ್ ಅಂದಾಗ ನನಗೆ ನೆನಪಾಗುವುದುನಮ್ಮಪ್ಪ ನನ್ನನ್ನು seat allotment ನೋಡೋಕೆ ಒಬ್ಬಳನ್ನೇ ಕಳಿಸಿದ್ದದ್ದು. ಪೇಟೆಯ ರೀತಿರಿವಾಜು ಗೊತ್ತಿಲ್ಲದ ನಾನು ಆವತ್ತು ಅನುಭವಿಸಿದ tension ದೇವರೇ ಬಲ್ಲ. ಅಪ್ಪನ ಜೊತೆಯಿಲ್ಲದೆ ಸ್ವತಂತ್ರವಾಗಿ ನಾನು ಮಾಡಿದ ಘನಂದಾರಿ ಕೆಲಸ ಅಂದರೆ seat allotment ನೋಡಿದ್ದು. It was really a big task for me in those days. ಈಗ ನೆನೆಸಿಕೊಂಡರೆ ನಗು ಬರುತ್ತದೆ. ನಂತರ ಕಾಲೇಜು ದಾಖಲಾತಿ ಆದದ್ದು, ಎರಡು ವರ್ಷ ಅಲ್ಲಿ ಓದಿದ್ದೆಲ್ಲ ಹಿಸ್ಟರಿ! Those were the memorable days of my life.
ನಮ್ಮದೊಂದು ಅತೀ notable class. ಒಬ್ಬರಿಗಿಂತ ಒಬ್ಬರು ತರಲೆಯವರು. ಹಾಗಂತ ಯಾವತ್ತೂ ಕ್ಲಾಸ್ ಗೆ ತೊಂದರೆ ಕೊಡುತ್ತಿರಲಿಲ್ಲ. ನಾನು, ಚೆನ್ನಿ, ಪ್ರಭಾ, ಮಲ್ಲಿ, ಹರಿ, ಪ್ರವೀಣ, ಆರತಿ, ಕಿಟ್ಟಿ, ಜಯು, ಶಾರಿ ಜೀತು....ಹೀಗೆ ನಮ್ಮ ಪಾಳಯ ದೊಡ್ಡದಾಗಿತ್ತು. ನಮ್ಮ ಯೂನಿಟಿ ನೋಡಿ ಎಲ್ಲರೂ ಅಸೂಯೆ ಪಡುವಂತಿತ್ತು. ನಾವು ಕಲೀಲಿಕ್ಕೂ ಸೈ; ಆಟಕ್ಕೂ, ನಾಟಕಕ್ಕೂ, ತರಲೆಗೂ ಸೈ. ಭಾರೀ ಟ್ಯಾಲೆಂಟೆಡ್ ಕ್ಲಾಸ್ ಆಗಿತ್ತು ನಮ್ಮದು😊 ಬೀದಿ ನಾಟಕ ಕೂಡಾ ಮಾಡಿದ್ದೆವು.
ಕಾಲೇಜು ಮುಗಿಸಿ ಸುಮಾರು 33 ವರ್ಷಗಳಾದರೂ ನಮಗೆ ಕಲಿಸಿದ ಲೆಕ್ಚರರ್ಸ್ ನಮ್ಮನ್ನು ಇನ್ನೂ ಗುರುತಿಸಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅಂತಹ ಅವಿಸ್ಮರಣೀಯರು ನಾವು!
ಇನ್ನೊಂದು ಘಟನೆ ನೆನಪಾಗುವುದು ತೀರ್ಥಹಳ್ಳಿಯಲ್ಲಿ ನಡೆದ ಯೂನಿವರ್ಸಿಟಿ ಲೆವೆಲ್ ಥ್ರೋಬಾಲ್ ಪಂದ್ಯಾವಳಿ. ಆಟ ಇಲ್ಲದ ಸಮಯದಲ್ಲಿ ನಾವು sportsನ ಗಿಡ್ಡ ಸ್ಕರ್ಟ್ ಹಾಕಿಕೊಂಡು ತೀರ್ಥಹಳ್ಳಿ ಪೇಟೆ ತಿರುಗಿದ್ದೇ ತಿರುಗಿದ್ದು. ಕಡೆಗೆ ಹಾಗೆಲ್ಲತಿರುಗಿ ಉಪದ್ವಾಪ ಮಾಡಿದ ಬಗ್ಗೆ PT Sir ಹತ್ರ ಸರೀ ಬೈಸಿಕೊಂಡಿತ್ತು ಕೂಡಾ. ತರಗತಿಯ ಕಲಿಕೆಯ ಜೊತೆ ಜೊತೆ ಒಳ್ಳೆಯ friend circleನಿಂದ ಕಲಿತದ್ದು, ಆವರೊಡನೆ ಮಾಡಿದ ಮಂಗಾಟಗಳು ಎಲ್ಲವೂ ನೆನಪಿನಾಳದಿಂದ ಮೇಲೆದ್ದು ಬರುತ್ತಿರುತ್ತದೆ. ನಮ್ಮಲ್ಲಿ ಹೆಚ್ಚಿನವರು ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡು ಸಹೃದಯ ಶಿಕ್ಷಕರಾಗಿರುವುದು ಹೆಮ್ಮೆಯ ವಿಷಯ. ಈಗೆರಡು ವರ್ಷಗಳ ಹಿಂದೆ ನಾವೆಲ್ಲ ಒಂದು get together ಮಾಡಿದಾಗ inspite of the ups and downs of life, ಎಲ್ಲರಲ್ಲೂ ಅದೇ ಪ್ರೀತಿ, ಲವಲವಿಕೆ, ಜೀವನೋತ್ಸಾಹ ಉಳಿದಿರುವುದನ್ನು ನೋಡಿ ಖುಷಿ ಆಯಿತು. ಜೀವನ ಅಂದರೆ ಅಷ್ಟೇ ಅಲ್ಲವೇ - ಬದುಕು ನಡೆಯುತ್ತಿರುತ್ತದೆ; ಆದರೆ ಆ ಹೋರಾಟದಲ್ಲಿ ನಾವು ಬದುಕುವುದನ್ನು ಮರೆಯಬಾರದಲ್ಲವೇ?

11. ಕ್ರತಜ್ನತೆ (ರವಿಂದ್ರನ್ ಸರ್)
ಬಾಳೆಹೊನ್ನೂರು ನವೋದಯದ ಸ್ಥಾಪಕ ಪ್ರಾಂಶುಪಾಲರಾದ ರವೀಂದ್ರನ್ ಸರ್ ಬಗ್ಗೆ ಬರೆಯದಿದ್ದರೆ ನನಗೇ ನಾನು ಮೋಸ ಮಾಡಿಕೊಂಡ ಹಾಗೆ. ಏಕೆಂದರೆ ನನ್ನನ್ನು ನನ್ನ ವೃತ್ತಿ ಜೀವನಕ್ಕೆ ತಯಾರು ಮಾಡಿದ major credit ಅವರಿಗೆ ಸಲ್ಲುತ್ತದೆ. ಅವರೊಂದು unique person. ನಾನು ನವೋದಯಕ್ಕೆ ಸೇರಿದಾಗ ಅವರು ಸುಮಾರು 55ರ ಹರೆಯದವರು. ಅವರು ನಾಲ್ಕು ಗಂಡು ಮಕ್ಕಳ ತಂದೆ. ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ಇದ್ದರು. ಅವರ ಪತ್ನಿ ಎಂತಹ ವ್ಯಕ್ತಿ ಅಂದರೆ ನವೋದಯಕ್ಕೆ ಬಂದಾಗ ಮಕ್ಕಳೆಲ್ಲರ ಬಟ್ಟೆ ಒಗೆದು ಕೊಡುತ್ತಿದ್ದರು. ಅಂತಹ ವಿಶಿಷ್ಟ ವ್ಯಕ್ತಿ ಆಕೆ. ಸರ್ ಕೂಡಾ ಬೆಳಿಗ್ಗೆ 4 ಘಂಟೆಯೊಳಗೆ ಎದ್ದು ಬೋರ್ವೆಲ್ ಹೊಡೆದು ಮಕ್ಕಳಿಗೆ ಬಕೆಟ್ನಲ್ಲಿ ನೀರು ತುಂಬಿಸಿ ಇಡುತ್ತಿದ್ದರು.
ಅವರೊಬ್ಬ role model teacher and principal. Very vigilant and workaholic. ಅವರು MP Hallನ ಪಕ್ಕದಲ್ಲಿದ್ದ office cum bedroomನಲ್ಲಿ ಮಲಗುತ್ತಿದ್ದರು. ದಿನಕ್ಕೆ ಮೂರರಿಂದ ನಾಲ್ಕು ತಾಸು ಮಲಗಿದರೆ ಜಾಸ್ತಿ.
ನನ್ನಪ್ಪ ನನ್ನನ್ನು ಅಲ್ಲಿ ಬಿಟ್ಟು ಹೋಗುವಾಗ "ಇವಳು ನಿಮ್ಮ ಮಗಳು ಅಂತ ತಿಳಿದು ಇವಳನ್ನು ನೋಡಿಕೊಳ್ಳಿ" ಅಂತ ಹೇಳಿ ಹೋಗಿದ್ದರು. ಸರ್ ಮಾತು ಕೊಟ್ಟಂತೆ ನನ್ನನ್ನು ಸ್ವಂತ ಮಗಳ ರೀತಿ ನಡೆಸಿಕೊಂಡರು ಕೂಡಾ. I was just 22 then! ತಂದೆಯ ಭಾವನೆಯಲ್ಲಿ ನನ್ನ ಹತ್ತಿರ ಎಲ್ಲರಿಗಿಂತ double ಕೆಲಸ ತೆಗೀತಿದ್ರು. ಪ್ರೀತಿಗೆ ಬಾಗದವರುಂಟೇ?
ಅವರು ಯಾವತ್ತೂ ಯಾರಿಗೂ ಬೈದು ಕೆಲಸ ಹೇಳಿದ್ದನ್ನು ನಾನು ನೋಡಿಲ್ಲ. ಅವರು ಹೇಳಿದ ಕೆಲಸಕ್ಕೆ ಯಾರಿಗೂ ಇಲ್ಲ ಅನ್ನಲಾಗುತ್ತಿರಲಿಲ್ಲ. ಅವರು ನಮಗೆ ಕೆಲಸ ಹೇಳುವ ಮೊದಲು ಅವರೇ ಮಾಡಿ ತೋರಿಸಿರುತ್ತಿದ್ದರು. ಅವರ ಬಗ್ಗೆ ಎಲ್ಲರಿಗೂ ಒಂದು ರೀತಿಯ ಗೌರವಪೂರ್ವಕ ಹೆದರಿಕೆ ಇತ್ತು.
ಮಕ್ಕಳೊಟ್ಟಿಗೆ ಸಹ ಅವರ ಸಂಬಂಧ ವಿಶೇಷವಾಗಿತ್ತು. ಪ್ರತಿ ಮಗುವಿನ ಜಾತಕ ಅವರ ಕೈಯಲ್ಲಿ ಇರುತ್ತಿತ್ತು. ಪ್ರತಿ ಮಗುವನ್ನು ಖುದ್ದಾಗಿ attend ಮಾಡುತ್ತಿದ್ದರು. ಸಂಜೆ ಆದರೆ ಸಾಕು ಒಂದು ಲುಂಗಿ ಸುತ್ತಿಕೊಂಡು ಮಕ್ಕಳನ್ನೆಲ್ಲ ಸುತ್ತ ಕೂರಿಸಿಕೊಂಡು ಕಥೆ ಹೇಳುತ್ತಿದ್ದರು. ಮಕ್ಕಳ ಕಲಿಕೆಯ ಬಗ್ಗೆ ಅವರು ತೋರಿಸುತ್ತಿದ್ದ ಕಾಳಜಿ ಕೂಡಾ ವಿಶೇಷವಾಗಿತ್ತು. ಟೀಚರ್ಸ್ ಗಳೊಡನೆ ಕೂಡಾ ಅವರ ಒಡನಾಟ ಆಪ್ತವಾಗಿತ್ತು. ನಮ್ಮ ತಪ್ಪುಗಳನ್ನು ಪ್ರೀತಿಯಿಂದ ತಿದ್ದುತ್ತಿದ್ದರು. ಅವರು ತೋರಿದ ಪ್ರೀತಿ ಕಾಳಜಿಯಿಂದಾಗಿ ನಾನು ಪ್ರಥಮ ಬಾರಿಗೆ ಮನೆ ಬಿಟ್ಟು ಕೆಲಸಕ್ಕೆ ಸೇರಿದ್ದಾದರೂ, ಆ ಜಾಗ ಅವ್ಯವಸ್ಥೆಯ ಆಗರವಾಗಿದ್ದರೂ ಕೂಡಾ ನಾನು ಕೆಲಸ ಬಿಡದೆ ಅಲ್ಲೇ ಮುಂದುವರಿಯುವ ಹಾಗಾಯ್ತು. ನನ್ನ ವೃತ್ತಿಯ ಪ್ರಾರಂಭದ ದಿನಗಳಲ್ಲೇ ಅವರಂತಹ ವ್ಯಕ್ತಿ ಸಿಕ್ಕಿ ನನ್ನ ವೃತ್ತಿ ಜೀವನದ ಓಂ ನಾಮ ಹಾಡಿದ್ದು ನನ್ನ ಭಾಗ್ಯವೇ ಸರಿ. I always remain grateful to him.

10. ಪಿ ಯು ಕಾಲೇಜು ದಿನಗಳು -  ಬ್ರಹ್ಮಾವರ 
ಪಿಯುಸಿ ಯ ದಿನಗಳವು. ನಾನು ಅಜ್ಜಯ್ಯನ ಮನೆಯಲ್ಲಿ ಇದ್ದುಕೊಂಡು ಬ್ರಹ್ಮಾವರದ ಎಸ್ ಎಂ ಎಸ್ ಪಿಯು ಕಾಲೇಜಿನಲ್ಲಿ ಆರ್ಟ್ಸ್ ಓದುತ್ತಿದ್ದೆ. ಅಜ್ಜಯ್ಯನ ಮನೆಯಲ್ಲಿ ಆಗ ನನ್ನ ಅಜ್ಜಯ್ಯ, ಅಣ್ಣ, ನಾಗವೇಣಿಯತ್ತೆ, ನನ್ನ ವಾರಿಗೆಯ ಅವರ ಇಬ್ಬರು ಮಕ್ಕಳು, ಕಾಶತ್ತೆ ಇದ್ದೆವು. ನಾನು ಬೆಳಿಗ್ಗೆ ಮನೆ ಬಿಟ್ಟರೆ ಕಾಲೇಜಿನಲ್ಲಿ ಆಟ ಎಲ್ಲಾ ಮುಗಿಸಿ ಮನೆ ಸೇರುತ್ತಿದ್ದದ್ದು ಸಂಜೆ ಆರು ಘಂಟೆ ಅಷ್ಟು ಹೊತ್ತಿಗೆ. ಮಧ್ಯಾಹ್ನ ನೆಟ್ಟಗೆ ಹೊಟ್ಟೆಗೆ ಏನೂ ತಿನ್ನದಿದ್ದರೂ ಆಡುವ ಹುಮ್ಮಸ್ಸು ಇರುತ್ತಿದ್ದುದು ತಾರುಣ್ಯದ ಮಹಿಮೆಯೇನೋ? ಮನೆಗೆ ಬಂದ ಮೇಲೆ ಅತ್ತೆ ಕೊಟ್ಟ ಏನನ್ನಾದರೂ ಹೊಟ್ಟೆಗೆ ಹಾಕಿಕೊಂಡು ಮಾರನೆ ದಿನದ ತಿಂಡಿಗೆ ರುಬ್ಬುವ ಕೆಲಸಕ್ಕೆ ಕೂರುತ್ತಿದ್ದೆ. ಎಂತಹ ತಾಕತ್ತು ನೋಡಿ😊
ನಮ್ಮ ಆರ್ಟ್ಸ್ ನಲ್ಲಿ ಹುಡುಗಿಯರು ಹುಡುಗರಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಇದ್ದೆವು. ನಮ್ಮದೇ ರಾಜ್ಶ! "ಶಾಂತತೆಯನ್ನು ಕಾಪಾಡಿ" ಅನ್ನುವ board ಹಾಕುವುದು ಬಾಕಿ ಇರುವಷ್ಟು ಮಾತೇ ಮಾತು?ನಮಗೆ ದೇವರು ನಡೆಸಿ ಒಳ್ಳೊಳ್ಳೆಯ ಲೆಕ್ಚರರ್ಸ್ ಇದ್ದರು. ನಮ್ಮ ಪ್ರಿನ್ಸಿಪಾಲ್ ವಿಠ್ಠಲರಾಯರು ಪೊಲಿಟಿಕಲ್ ಸೈನ್ಸ್ ಪಾಠ ಮಾಡುತ್ತಿದ್ದರು. ಅವರ ತಲೆ ಅಲ್ಲಿ ಕಂಡರೆ ಇಲ್ಲಿ ನಾವು ಛುಪ್. ಅವರನ್ನು ಕಂಡರೆ ಮಕ್ಕಳು ಬಿಡಿ facultyಯವರೇ ಹೆದರುತ್ತಿದ್ದರು. ಸುಮಾರು ಆರು ಅಡಿ ಉದ್ದನೆಯ ಹದ ಮೈಕಟ್ಟಿನ ಮಿಲಿಟರಿ ಶಿಸ್ತಿನ ಮನುಷ್ಯ. ಬಹಳ ಗಂಭೀರ ಭಾವ ಮುಖದಲ್ಲಿ ಯಾವಾಗಲೂ. ನಗು ಕಂಡದ್ದೇ ಆಪರೂಪ. ಅವರ ಬೂಟಿನ ಕಟಕಟ ಸದ್ದಿಗೆ ಸಾವಿರಾರು ಮಕ್ಕಳಿದ್ದ ನಮ್ಮ ಶಾಲೆ/ಕಾಲೇಜು ತಣ್ಣಗಾಗುತ್ತಿತ್ತು. ಅವರನ್ನು ಅರಿತವರಿಗೆ ಅವರ ಸಹೃದಯತೆಯ ಪರಿಚಯ ಇತ್ತು ಕೂಡಾ.
ಅರ್ಥ ಶಾಸ್ತ್ರ ಕಲಿಸಲು ಬರುತ್ತಿದ್ದ ಹೆರಳೆಯವರು ಬಹಳ ಅಪರೂಪದ ವ್ಯಕ್ತಿ. Student friendly but a very firm person. ವಿಷಯವನ್ನು ಸರಳೀಕರಿಸಿ ಹೇಳುವುದರಲ್ಲಿ ನಿಸ್ಸೀಮ. ಸ್ನೇಹಜೀವಿ. ಒಳ್ಳೆಯ motivator. ಇತರ subjectsಗಳಿಗೂ ಉತ್ತಮ ಉಪನ್ಯಾಸಕರುಗಳಿದ್ದರೂ ಇವರಿಬ್ಬರು ತುಂಬಾ ಸ್ಪೆಷಲ್.
ನಾನೊಂತರ ತೊತ್ತೋಚಾನ್ ಇದ್ದ ಹಾಗೆ. ತಣ್ಣಗೆ ಕುಳಿತು ಪಾಠ ಕೇಳಿದ್ದೇ ಇಲ್ಲ. ಕೈಗೆ ಅಥವಾ ಕಣ್ಣಿಗೆ ಏನಾದರೂ ಕೆಲಸ ಬೇಕೇ ಬೇಕಿತ್ತು. ಯಾವಾಗಲೂ ಕಿಟಕಿ ಪಕ್ಕ ಕೂರುತ್ತಿದ್ದೆ. ಪಾಠ ಬೋರ್ ಆದಾಗ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದೆ. ಇಲ್ಲವೇ ನನ್ನ ಮುಂದೆ ಕೂತಿರುತ್ತಿದ್ದ ಲೀನಾಳ ತಲೆಗೂದಲನ್ನು ಕಾಗದದ ತುಂಡು or ಏನಾದರೂ ಕಸಕಡ್ಡಿಯಿಂದ ಅಲಂಕರಿಸುತ್ತಿದ್ದೆ. ಇಲ್ಲವೇ ಪಕ್ಕದಲ್ಲಿ ಕುಳಿತಿರುತ್ತಿದ್ದ ಜಯಂತಿಯನ್ನು ನಗಿಸಿ ಅವಳು ಬೈಸಿಕೊಳ್ಳುವಾಗ ಅಮಾಯಕಳಂತೆ ನೋಡುತ್ತಾ ಕುಳಿತಿರುತ್ತಿದ್ದೆ. ಆದರೆ ಗಲಾಟೆ ಮಾಡಿ ಯಾರ ತಪೋಭಂಗ ಮಾಡುತ್ತಿರಲಿಲ್ಲ. ನನ್ನ ಅಂಕಗಳು ಚೆನ್ನಾಗಿರುತ್ತಿದ್ದ ಕಾರಣ ನನ್ನ ಸ್ವಭಾವ ತಿಳಿದಿದ್ದ ನನ್ನ ಉಪನ್ಯಾಸಕರು ನನ್ನನ್ನು ಮನ್ನಿಸುತ್ತಿದ್ದರು. ಲೀನಾ ಅಥವಾ ಜಯಂತಿ ಯಾವತ್ತೂ ನನ್ನ ಕ್ರಿಯೆಯನ್ನು ಆಕ್ಷೇಪಿಸಲೇ ಇಲ್ಲ. They were such nice and cute girls, you know.
ಹೀಗಾಗಿ ನಾನು ಶಿಕ್ಷಕಿಯಾದ ಮೇಲೆ ನನ್ನ ವಿದ್ಯಾರ್ಥಿಮಿತ್ರರು ಸಣ್ಣಪುಟ್ಟ ತರಲೆ ಮಾಡಿದಾಗ ಕ್ಷಮಯಾಧರಿತ್ರಿಯಾಗಿ ವರ್ತಿಸಿ ಎಲ್ಲರನ್ನು ಆಶ್ಚರ್ಯ ಪಡಿಸಿದ್ದಿದೆ. ನನ್ನ ಕ್ಷಮೆಯ ಹಿಂದಿನ ಕಥೆ ನನಗೆ ಮಾತ್ರ ಗೊತ್ತಷ್ಟೇ 

9. ಗಾಜನೂರು ಶಾಲೆ - ಅನುಭವ 
1991ರಲ್ಲಿ ನಾನು ಗಾಜನೂರಿನ ನವೋದಯಕ್ಕೆ ವರ್ಗಾವಣೆ ತಗೊಂಡು ಬಂದೆ. ಬಾಳೆಹೊನ್ನೂರಿನಲ್ಲಿ ಕಳೆದ ಎರಡು ವರ್ಷಗಳು ನನ್ನ ಅನುಭವದ ಭಂಡಾರವನ್ನು ತುಂಬಿಸಿದ್ದವು. ಗಾಜನೂರಿನಲ್ಲಿ ನಮಗೆಲ್ಲ ತುಂಗಾ ವಿದ್ಯಾಪೀಠದ campusನಲ್ಲಿ ಉಳಿಯುವಿಕೆಯ ವ್ಯವಸ್ಥೆ. ನವೋದಯ campus ಅಲ್ಲಿಂದ ಒಂದು ಕಿಮೀ ದೂರದಲ್ಲಿತ್ತು‌.
ನನಗೊಂದು 40/15ರ ಅಳತೆಯ ಹಾಲ್ ಕೊಟ್ಟಿದ್ದರು. ಅಲ್ಲಿ ಇನ್ನೂ ಎರಡು ಮೂರು ಕುಟುಂಬಗಳು ಅಂತಹುದೇ hall type structureನಲ್ಲಿ ಇದ್ದರು. ನನಗೆ ಕೊಟ್ಟಿದ್ದ hallನಲ್ಲಿ ಒಂದು ಸಣ್ಣ stage ಇತ್ತು. ರಘುಪತಿ ಸರ್ ತಾತ್ಕಾಲಿಕವಾಗಿ ಕೊಟ್ಟಿದ್ದ ಬಿದಿರಿನ ಮಂಚದ ಮೇಲೆ ನನ್ನ ವಾಸ. ನನ್ನೊಡನೆ ಇದ್ದದ್ದು ಒಂದು coil stove, ಎರಡು ಮೂರು ಪಾತ್ರೆ, ತಟ್ಟೆ ಲೋಟ ಹಾಗೂ ಒಂದು ಕಾವಲಿ, ಒಂದೆರಡು ಡಬ್ಬಗಳು. ಅಲ್ಲಿ ಕೂಡಾ common bathroom and toilet ಇತ್ತು. ನೀರನ್ನು ಅರ್ಧ ಕಿಮೀ ದೂರದ ಚಾನಲ್ನಿಂದ ಹೊತ್ತು ತರಬೇಕಿತ್ತು. ಅಲ್ಲಿ ಮರಗಳು ಜಾಸ್ತಿ ಇದ್ದ ಕಾರಣ ಅದರ ಬೇರುಗಳಿಂದಾಗಿ toiletಗಳು ಯಾವಾಗಲೂ overflow ಆಗುತ್ತಿದ್ದವು. ಕೆಲವೊಮ್ಮೆ ಅಲ್ಲಿ ಕೂತಾಗಲೇ ಒಳಗಿದ್ದೆಲ್ಲ ಮೇಲೆ ಬಂದದ್ದಿದೆ. Those were the horrible days. ತಲೆ ಸ್ನಾನ ಚಾನಲ್ ನಲ್ಲಿ ಮಾಡುತ್ತಿತ್ತು. ಅದು main ಚಾನಲ್ ಆಗಿದ್ದ ಕಾರಣ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ದೇಹ ಅಲ್ಲಿಯೇ ತೇಲಿಕೊಂಡು ಹೋಗುತ್ತಿತ್ತು. ಎಷ್ಟೋ ಸಲ ತಲೆ ತೊಳಕೊಂಡು ತಲೆ ಎತ್ತುವಾಗ ಹೆಣ ನಮ್ಮ ಮುಂದೆ ಹಾದುಕೊಂಡು ಹೋದದ್ದಿದೆ. ಹರಿಯುವ ನೀರಿಗೆ ದೋಷವಿಲ್ಲ ಎಂದೆಣಿಸಿ ಅದೇ ನೀರನ್ನು ಕುಡಿಯುತ್ತಿತ್ತು ಕೂಡಾ.
ಮಳೆಗಾಲದಲ್ಲಿ ಇನ್ನೂ ಘೋರ ಅನುಭವ. ರೂಮಿನ ನೆಲದಲ್ಲಿ ಜಲ ಒಡೆಯುತ್ತಿತ್ತು. ಅಲ್ಲಿಂದ ನವೋದಯಕ್ಕೆ ನಡೆದುಕೊಂಡು ಹೋಗುವಾಗ ಜಾರಿಕೆ ಮಣ್ಣು ಆದ ಕಾರಣ ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದಕ್ಕೆ ಹೋಗುತ್ತಿತ್ತು. ದಾರಿಯಲ್ಲಿ ಆನೆ, ಕಾಡುಕೋಣ, ನರಿ ಇತ್ಯಾದಿ ಪ್ರಾಣಿಗಳ ಭೇಟಿ ಬೇರೆ!
ನನಗೆ ಕೊಟ್ಟ ಹಾಲ್ ಅಂತೂ ಅಭದ್ರತೆಯ ಕೋಟೆ. ಇದ್ದ ಬಾಗಿಲು ನೆಪ ಮಾತ್ರಕ್ಕಷ್ಟೇ! ಯಾರಾದರೂ ದೂಡಿದರೆ ಆರಾಮವಾಗಿ ತೆರೆದುಕೊಳ್ಳುತ್ತಿತ್ತು. ಕಿಟಕಿಗಳು ಅದಕ್ಕಿಂತಲೂ ಮಿಗಿಲು. ವಾಸಯೋಗ್ಯ ಜಾಗವೇ ಅಲ್ಲ.
ಈಗ ಹಿಂದಿರುಗಿ ನೋಡಿದಾಗ ನಾನು ಅಂತಹ ಅವ್ಯವಸ್ಥೆಯಲ್ಲಿ ಹೇಗಿದ್ದೆ ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೆ ಅವೆಲ್ಲ ನನ್ನನ್ನು ಗಟ್ಟಿಗೊಳಿಸಿ ಜಗಜಟ್ಟಿಯಾಗಿಸಿದ್ದಂತೂ ನಿಜ.

8. ಹೊಂಗಿರಣ ಶಾಲೆ - ಅನುಭವ 
ಯಾವುದೇ ಸಂಸ್ಥೆಯಲ್ಲಿ ಅದರ ಪ್ರಾರಂಭದ ದಿನಗಳಲ್ಲಿ ಕೆಲಸ ಮಾಡುವುದು ದೊಡ್ಡ ಸವಾಲೇ ಸೈ! ಯಾಕೆಂದರೆ ಅಲ್ಲಿ ಮೂಲಭೂತ ಸೌಕರ್ಯಗಳು ಇರೋದೇ ಇಲ್ಲ. ಎಲ್ಲಾ ಕೆಲಸ ನಡೆಯುವುದು ತಾತ್ಕಾಲಿಕ ವ್ಯವಸ್ಥೆಯಲ್ಲಿ. ಏನೂ ಇಲ್ಲದೆ ಇರಬಹುದು; ಆದರೆ ನೀರು ಮತ್ತು toilet ಸರಿಯಿರದಿದ್ದರೆ ಬದುಕು ದುರ್ಭರವಾಗುತ್ತದೆ.
ನವೋದಯದ ಪ್ರಾರಂಭದ ದಿನಗಳವು. ಸರಿಯಾದ ಕಟ್ಟಡಗಳಿಲ್ಲ. ಹುಡುಗರನ್ನು, gents teachersಗಳನ್ನು MP Hallನಲ್ಲಿ ಹಾಗೂ ಹುಡುಗಿಯರನ್ನು, lady teachersಗಳನ್ನು dininghallನಲ್ಲಿ ತುಂಬಿದ್ದರು. ಮಲಗುವ ವ್ಯವಸ್ಥೆ ಸರಿ ಇದ್ದರೂ ಒಂದು ರೀತಿಯ dumped feeling.; refugee campನಲ್ಲಿ ಇದ್ದಂತ ಅನುಭವ. ಆದರೆ ಇಂತಹ ಇರುವಿಕೆ ಎಲ್ಲರ ನಡುವೆ ಒಳ್ಳೆಯ ಬಾಂಧವ್ಯವನ್ನು ಹುಟ್ಟು ಹಾಕುತ್ತದೆ.

ಇದ್ದದ್ದು ಒಂದೆರಡು toilets and bathrooms. ಅದೂ ಕೂಡ buildingನಿಂದ ಅನತಿ ದೂರದಲ್ಲಿ. ನೀರಿನ ಸಮಸ್ಯೆ ಬಹಳಷ್ಟಿತ್ತು. ವೋಲ್ಟೇಜ್ ಇಲ್ಲದ ಕಾರಣ ಬೆಳಗಿನ ಜಾವ ಮೂರ್ನಾಲ್ಕು ಗಂಟೆಗೆ ನೀರು ಬರುತ್ತಿತ್ತು. ಗಡಗಡ ನಡುಗುವ ಚಳಿಯಲ್ಲಿ ಆ ಹೊತ್ತಿನಲ್ಲಿ ನಮ್ಮೆಲ್ಲರ ಸ್ನಾನ. ಮರಗಟ್ಟಿದ ಮೈಮೇಲೆ ನೀರು ಬೀಳುವ ಅನುಭವವೇ ಆಗುತ್ತಿರಲಿಲ್ಲ. ಸ್ನಾನ ಆದ ಮೇಲೆ ಮತ್ತೆ ನಿದ್ರೆ ಬಾರದ ಕಾರಣ ನಮ್ಮ duty ಚಾಲೂ. ಮಕ್ಕಳೊಟ್ಟಿಗೆ CRS ತನಕ jogging, ನಂತರ ಓದಿನ ಅವಧಿ, ತಿಂಡಿ , ಪಾಠ ಪ್ರವಚನ...ಹೀಗೆ. ನವೋದಯದಲ್ಲಿ duty ನಿರಂತರ. ಹೇರಳವಾದ ಕೆಲಸ ಸಾಲುಗಟ್ಟಿ ಕಾಯುತ್ತಿದ್ದವು. ಪಾಠ ಪ್ರವಚನ ಒಂದು ಕಡೆಗಾದರೆ ಮೆಸ್ಸಿಗೆ ಕಟ್ಟಿಗೆ ಒಟ್ಟು ಮಾಡುವುದು, ಆಫೀಸಿನಲ್ಲಿ typing work ಮಾಡೋದು, ಹುಷಾರಿಲ್ಲದ ಮಕ್ಕಳ ಆರೈಕೆ ಮಾಡುವುದು, ಅಡುಗೆಗೆನಲ್ಲಿ grocery issue ಮಾಡೋದು... ಒಂದೇ ಎರಡೇ..ಹೀಗೆ ಹಲವಾರು ಕೆಲಸಗಳು. ನಾನಲ್ಲಿ ಮಾಸ್ತರಿಕೆಯ ಜೊತೆಗೆ multi tasking work ಕಲಿತೆ.
ನಾನು ಕೆಲಸಕ್ಕೆ ಸೇರಿದ ವರ್ಷ ಅಲ್ಲಿ ಅತಿವೃಷ್ಟಿ. ಬಂದ ಮಳೆಗೆ ಎರಡು ಮೂರು ತಿಂಗಳು ಕರೆಂಟ್ ಇಲ್ಲ. ಗೋಡೆಗೆ ಮದುವೆ card ಅಂಟಿಸಿ ಅದರ ಮೂಲಕ ಬಕೆಟ್ನಲ್ಲಿ ಮಳೆನೀರು ಹಿಡಿದು ನಮ್ಮೆಲ್ಲ ತೊಳೆದುಕೊಳ್ಳುವಿಕೆ ಅದರಲ್ಲೇ ನಡೆಯುತ್ತಿತ್ತು. ಕರೆಂಟ್ ಇಲ್ಲ, ನೀರಿಲ್ಲ ಅಂತ ಶಾಲೆ ಕೆಲಸದ ವೇಳೆ ಯಾವತ್ತೂ ಛೇಂಜ್ ಆಗ್ತಿರಲಿಲ್ಲ. Work is worship ಎನ್ನುವ ಧ್ಯೇಯ ವಾಕ್ಯದೊಡನೆ ದಿನದ routine ಯಥಾವತ್ತಾಗಿ ನಡೆಯುತ್ತಿತ್ತು. ಎಂತಹ adverse conditiinನಲ್ಲೂ ಎದೆಗುಂದದೇ ಕೆಲಸ ಮಾಡಲು ಕಲಿಸಿದ್ದು ನವೋದಯದ ಪ್ರಾರಂಭದ ಆ ದಿನಗಳು.
ಅಷ್ಟೆಲ್ಲಾ ಒದ್ದಾಡಿ ದುಡಿಯುವ ಅನಿವಾರ್ಯತೆ ನನಗಿರಲಿಲ್ಲ. ಆದರೆ ಇಟ್ಟ ಹೆಜ್ಜೆಯನ್ನು ಹಿಂದಿಟ್ಟು ಗೊತ್ತಿಲ್ಲದ ನಾನು ಅದನ್ನು ಸವಾಲಾಗಿ ಸ್ವೀಕರಿಸಿ ಬದುಕನ್ನು ಅರಿತುಕೊಳ್ಳುವ ಹಾಗೂ ಕಟ್ಟಿಕೊಳ್ಳುವ ಪ್ರಯತ್ನ ಮಾಡಿದೆ. ಮನೆಯಲ್ಲಿ ಅತ್ಯಂತ ಸುಖವಾಗಿ ಒಂದಿಷ್ಟೂ ಕಷ್ಟದ ಅರಿವಿರದೇ ಬೆಳೆದ ನಾನು ಹೊರ ಪ್ರಪಂಚಕ್ಕೆ ಬಂದು ಹೋರಾಟದ ಕಣಕ್ಕೇ ನೇರವಾಗಿ ಇಳಿದೆ ಎಂದರೆ ತಪ್ಪಾಗಲಾರದು. ಅಂದು ಪ್ರಾರಂಭವಾದ ಹೋರಾಟದ ಬದುಕು ಇನ್ನೂ ಮುಂದುವರಿಯುತ್ತಿದೆ. ಎಲ್ಲೂ ಎದೆಗುಂದದೆ ಸಾಗುತ್ತಿರುವ ಈ ನಿರಂತರ ಪಯಣದಲ್ಲಿ ಸಿಕ್ಕ ಸಹ ಪಯಣಿಗರು ಹಲವಾರು. ಹೀಗೆ ಹತ್ತು ಹಲವರೊಡನೆ ನಡೆಯುತ್ತಲೇ ಇದೆ ಈ ಪಯಣ....

7. ಅಜ್ಜಯನ ಮನೆ - ಬಿರ್ತಿ, ಸಾಲಿಕೇರಿ 
ಅಜ್ಜಯ್ಯನ ಮನೆಗೆ ಸಾಲಿಕೇರಿಯ ರಘುರಾಮ ಪೈಗಳ ಅಂಗಡಿ ಎದುರಿನ ತಿರುವಿನಿಂದ ಸುಮಾರು ಒಂದು ಕಿಮೀ ದೂರ ಓಣಿಗಿಂತ ಸ್ವಲ್ಪ ದೊಡ್ಡದಿರುವ ಜಾಡಿನಲ್ಲಿ ಹೋಗಬೇಕು. ಆಚೀಚೆ ಜಡ್ಡಿನ ಮನೆ, ಹಾಡಿ, ಸಣ್ಣಗದ್ದೆಗಳು ಸಿಗುತ್ತವೆ. ಕೊಟ್ಟ ಕೊನೆಯಲ್ಲಿ ಅಜ್ಜಯ್ಯನ ಮನೆ.
ಸುತ್ತಲೂ ಎತ್ತರದ ಪಾಗಾರ ಇರುವ ಮನೆ. ಎದುರಿಗೆ ದಳಿ ಇರುವ 50/15 ಅಡಿಯ ಜಗಲಿ. ಅದರ ಎಡಕ್ಕೆ ಊಟದ ಮನೆ, ಬಲಕ್ಕೆ ಅಜ್ಯಯ್ಯನ ಕಿಟಕಿ. ಮಧ್ಯದಲ್ಲಿ ಉದ್ದಾನುದ್ದ ಎರಡಡಿ ಎತ್ತರದ ಎರಡೂವರೆ ಅಡಿ ಅಗಲದ ಕಟ್ಟೆ. ನಡುಮಧ್ಯದಲ್ಲಿ 20/15 ಅಡಿ ಅಗಲದ ಚಾವಡಿ. ಚಾವಡಿಯಲ್ಲಿ ಎರಡು ಸುಂದರವಾದ ಮರದ ಕಂಬಗಳಿವೆ. ಮನೆಯಲ್ಲಿ ಮದುವೆ ಆದಾಗ ಮದುಮಕ್ಕಳ ತಲೆಗೆ ಕಟ್ಟುವ ಪಟ್ಟಿಯನ್ನು ಆ ಕಂಬಕ್ಕೆ ಕಟ್ಟಿಡುತ್ತಿದ್ದರು. ಅಲ್ಲೇ ಇರುವ ಅಜ್ಜಯ್ಯ ಹಾಗೂ ಅಜ್ಜಿಯ ಫೋಟೋದ ಹಿಂದೆ ಗುಬ್ಬಚ್ಚಿಗಳು ಮೊದಲು ಯಾವಾಗಲೂ ಇರುತ್ತಿದ್ದವು. ಚಾವಡಿಯ ಮುಚ್ಚಿಗೆಗೆ ಬಿದಿರು ಕೋಲು ಕಟ್ಟಿ ಅಜ್ಜಯ್ಯ ಬಣ್ಣದ ಸೌತೆಕಾಯಿ ಕಟ್ಟಿಡುತ್ತಿದ್ದರು. ಚಾವಡಿಯಿಂದ ಒಳ ಹೊಕ್ಕರೆ ಪಡಸಾಲೆ. ಪಡಸಾಲೆಯ ಬಲಕ್ಕೆ ಚರಿಗೆ ಮರಿಗೆ ಎಲ್ಲಾ ಇಡುವಂತಹ ಸ್ಟೋರ್ ರೂಂ ಹಾಗೂ ಎಡಕ್ಕೆ ಅಡುಗೆ ಮನೆ. ಪಡಸಾಲೆಯಲ್ಲಿರುವ ಹಾಳಾದ ಹಳೆ ಫ್ರಿಜ್ನಲ್ಲಿ ಬಟ್ಟೆ ಇಡಲಾಗುವುದು☺️. ಅಡುಗೆ ಮನೆಯ ಎಡ ಭಾಗದಿಂದ ಊಟದ ಮನೆಗೆ ಪ್ರವೇಶವಿದೆ. ಬಾವಿಕಟ್ಟೆಗೆ ಹೋಗಲು ಊಟದ ಮನೆಯ exitನಿಂದ ಪುನಃ ಒಂದು ಸಣ್ಣ ಕಟ್ಟೆ ಇದೆ. ಅದರಲ್ಲಿ ನಲವತ್ತು ಅಡಿಗಳಷ್ಟು ದೂರ ಹೊರ ಹೋದರೆ ಬಾವಿ ಕಟ್ಟೆ, ಬಚ್ಚಲು ಮನೆ... ಇತ್ಯಾದಿ. ಅಲ್ಲೇ ಎಡಕ್ಕೆ ತಿರುಗಿ ಕಟ್ಟೆಯಲ್ಲೇ ಹೋದರೆ ಹಟ್ಟಿ ಹಾಗೂ ಹಟ್ಟಿಮನೆ.
ಮನೆ ಜಗಲಿಯ ಅಜ್ಜಯ್ಯನ ಕಿಟಕಿಯ ಪಕ್ಕದಲ್ಲಿ ಅಮ್ಮನ ಮಲಗುಮನೆ. ಅಲ್ಲೇ ಹೊರ ಪಕ್ಕದಲ್ಲಿ ಉಪ್ಪರಿಗೆಯ ಮೆಟ್ಟಿಲು ಪ್ರಾರಂಭ. ಸರಿ ಸುಮಾರು 20 ಮೆಟ್ಟಿಲುಗಳಿರಬಹುದು. 7-8 ಮೆಟ್ಟಿಲು ಹತ್ತಿದ ಮೇಲೆ ಎಡದಲ್ಲಿ ಬೇಡದ ಸಾಮಾನು ಹಾಕುವ ಕುತ್ತಟ್ಟವಿದೆ. ಸಣ್ಣ ಮಕ್ಕಳಿಗೆ ಅದೊಂದು ನಿಗೂಢ ಜಗತ್ತು ಇದ್ದ ಹಾಗೆ. ನಂತರ ಮೆಟ್ಟಿಲು ಹತ್ತುತ್ತಾ ಹೋದರೆ ಮೆಟ್ಟಿಲಿನ ಎರಡೂ ಪಕ್ಕಗಳಲ್ಲೂ ಒಂದೊಂದು ಕೋಣೆ ಇದೆ ಹಾಗೂ ಒಂದು westernised bath cum latrine ರೂಂ ಇದೆ.
ಹೆಃಚಿನ ಮನೆ. ಪೂರ್ತಿ ಮರದ ಮುಚ್ಚಿಗೆ ಇದೆ. ಹಟ್ಟಿಮನೆ ಮತ್ತು ಮುಖ್ಯಮನೆಯ ಮಧ್ಯದಲ್ಲಿ ದೊಡ್ಡ ಅಂಗಳವಿದೆ. ಈ ಇಷ್ಟೂ structureನ ಸುತ್ತ ಪಾಗಾರವಿದೆ, ಇಲ್ಲವೆ ಮನೆಯ ಗೋಡೆಯಿದೆ. ಒಟ್ಟಿನಲ್ಲಿ ಆಪ್ತತೆಯ ಭಾವ ನೀಡುವ, ಮುಕ್ತ ಪ್ರವೇಶವಿರುವ ಅಜ್ಜಯ್ಯನ ಮನೆ - ನಮ್ಮ ಮನೆ

6. ಹೆಬ್ರಿಯಲ್ಲಿ - ಪರಿಸರ 
ನನ್ನ ಅಪ್ಪ ಜೀವವಿಮಾ ಅಭಿವೃದ್ಧಿ ಅಧಿಕಾರಿ ಆಗಿದ್ದ ಕಾರಣ ತುಂಬಾ ತಿರುಗುತ್ತಿದ್ದರು. ಅವರ ಬಳಿ ಒಂದು ಬುಲೆಟ್ ಇತ್ತು. ಅದರಲ್ಲಿ ನಾವು ಐದಾರು ಮಕ್ಕಳು ಆರಾಮವಾಗಿ ತಿರುಗುತ್ತಿದ್ದೆವು. ಅದರ ಗುಡುಗುಡು ಶಬ್ದಕ್ಕೆ ನನ್ನ cousins ಎಲ್ಲರೂ ನನ್ನ ಅಪ್ಪನನ್ನು "ಗುಡುಗುಡು ಮಾವಯ್ಯ" ಅಂತ ಕರೆಯುತ್ತಿದ್ದರು.
ಅಪ್ಪನೊಟ್ಟಿಗೆ ರಜಾದಿನಗಳಂದು ನಾನೂ ತಿರುಗುತ್ತಿದ್ದೆ. ನಾನು ಸ್ವಲ್ಪ ಅಪ್ಪನ ಅಂಟು. ಅವರ ಜೊತೆ ಶಿವಪುರದ ಸುಬ್ಬಣ್ಣ ನಾಯಕರ ಮಿಲ್, ಕಾರ್ಕಳದ ಶಿವರಾಮ ಶೆಟ್ಟರ ಮನೆ, ಹೆಬ್ರಿಯ ಬಲ್ಲಾಳರ ಮನೆ, ಕಾಮತರ ಮನೆ, ಅಜಕಾರಿನ ಅಜಿಲರ ಮನೆ, ಮುದ್ರಾಡಿ, ಸೀತಾನದಿ, ಕರ್ಜೆ..... ಹೀಗೇ ಸುತ್ತಿದ್ದೇ ಸುತ್ತಿದ್ದು. ಆಗ ಅಲ್ಲೆಲ್ಲ ದಟ್ಟಕಾಡುಗಳಿದ್ದವು. ದಾರಿಯಲ್ಲಿ ಕೆಲವೊಮ್ಮಹುಲಿ ಕಂಡದ್ದು ಉಂಟು. ಅಪ್ಪ ಜೊತೆಗಿದ್ರೆ ಹೆದರಿಕೆ ಮಾರು ದೂರ.
ಸೀತಾನದಿಯಲ್ಲಿ ಪ್ರತಿವರ್ಷ ದನಗಳ ಜಾತ್ರೆ ನಡೆಯುತ್ತಿತ್ತು, ವಾರಗಟ್ಟಲೆ. ಅದನ್ನು ನೋಡೋದೆ ಚೆಂದ. ಅದಕ್ಕಿಂತ ಅವರ ಹತ್ರ ಡಬ್ಬಗಟ್ಟಲೆ ಹಾಲು ತಗೊಂಡು ಅಮ್ಮ ಮಾಡುತ್ತಿದ್ದ ಫೇಡ ಭಾರಿ ರುಚಿ. ಅಂತಹ ಫೇಡ ನಂತರದ ದಿನಗಳಲ್ಲಿ ತಿಂದ ನೆನಪಿಲ್ಲ ನನಗೆ.
ಅಪ್ಪನ friend ಒಬ್ರು ನನ್ನನ್ನು ಕಂಡಾಗಲೆಲ್ಲ "ಹನುಮಂತ ಗರುಡ ಎನ್ನ ಸುದ್ದೀಗ್ ಬರಡ" ಅಂತ ತುಳುವಿನಲ್ಲಿ ಹೇಳುತ್ತಿದ್ದುದು ಇನ್ನೂ ನನ್ನ ನೆನಪಿನಲ್ಲಿದೆ.
ನನ್ನ ಸರ್ಕಾರಿ ಶಾಲೆ ನಮ್ಮ ಮನೆಯಿಂದ ಮಾರುದೂರದಲ್ಲಿತ್ತಷ್ಟೇ. ಊರಿಗಿದ್ದದ್ದು ಅದೊಂದೇ ಶಾಲೆ. ಸುತ್ತಮುತ್ತಲಿನ ಊರವರೆಲ್ಲ ಅದೇ ಶಾಲೆಗೆ ಬರುತ್ತಿದ್ದರು. ದೂರದ ಊರಿಂದ ಬರುವ ಎಷ್ಟೋ ಮಕ್ಕಳಿಗೆ ಕೆಳಪೇಟೆ ಆಚಾರ್ಯರ ಮನೆಯಲ್ಲಿ ಊಟ ಹಾಕುತ್ತಿದ್ದರು. ಈ ರೀತಿ ಊಟ ಹಾಕುತ್ತಿದ್ದ ಮನೆಗಳು ಇನ್ನೂ ಕೆಲವು ಇದ್ದ ಕಾರಣ ಖಾಲಿ ಹೊಟ್ಟೆಯಲ್ಲಿ ಪಾಠ ಕೇಳುವ ಸಮಸ್ಯೆ ಅಷ್ಟು ಇರಲಿಲ್ಲ. ಆಗ ಎಲ್ಲರಿಗೂ ಹಣಕಾಸಿನ ತಾಪತ್ರಯ ಇದ್ದರೂ ಇದ್ದುದನ್ನು ಹಂಚಿ ತಿನ್ನಲು ಯಾರೂ ಹಿಂದುಮುಂದು ನೋಡುತ್ತಿರಲಿಲ್ಲ. ಈ hoarding ಅನ್ನುವ ಕಲ್ಪನೆ ಆಗಿನ ಜನಕ್ಕಿರಲಿಲ್ಲ. ಹಂಚಿ ತಿನ್ನುವುದರಲ್ಲಿ ತೃಪ್ತಿ ಪಡುತ್ತಿದ್ದರು. "Be happy not in being a human being but being human" ಅನ್ನುವುದು ಆಗಿನವರ ನಂಬಿಕೆ ಯಾಗಿತ್ತು.
ಹೆಬ್ರಿ ಸಣ್ಣ ಊರಾಗಿದ್ದರೂ ಹೆಬ್ರಿಯ ಜನ ದೊಡ್ಡ ಮನಸ್ಸಿನವರಾಗಿದ್ರು. ಎಲ್ಲಾ ಜಾತಿ, ಜನಾಂಗದ ಜನ ಕೂಡಿ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದರು. ಆತ್ಮೀಯತೆ ಅಲ್ಲೆಲ್ಲರಲ್ಲೂ ಕಂಡು ಬರುತ್ತಿತ್ತು. ಈಗಲೂ ಹೆಬ್ರಿ ತನ್ನತನವನ್ನು ಇಟ್ಟುಕೊಂಡು ಬೆಳೆದಿದೆ ಹಾಗೂ ಬೆಳೆಯುತ್ತಿದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನಿಸುತ್ತದೆ.

5. ಕಲಿಯುವಿಕೆ - ಕಲಿಸುವಿಕೆ - ಉಡುಪಿ 
ನನ್ನ ಕಲಿಯುವಿಕೆ-ಕಲಿಸುವಿಕೆ ಕಾಯಕ ಪ್ರಾರಂಭವಾದದ್ದು ನನ್ನ 5ನೇ ತರಗತಿಯಿಂದ. ಅಧ್ಯಾಪಕರು group studyಯಲ್ಲಿ ಒಂದು groupನ ಜವಾಬ್ದಾರಿ ನನಗೆ ಕೊಟ್ಟಿದ್ದಲ್ಲಿಂದ. ಅದು ನನ್ನ BEd ಏನು Master Degree ಮಾಡುವವರೆಗೂ ಮುಂದುವರೆಯಿತು. ಹೀಗಾಗಿ ಅಧ್ಯಪನ ವೃತ್ತಿ ನನಗೆ ಆಪ್ತ ಅಂದೆನಿಸಿತು.
1988ರಲ್ಲಿ ಉಡುಪಿಯ ಕುಂಜಿಬೆಟ್ಟಿನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನನ್ನ official career ಪ್ರಾರಂಭ. ಅಲ್ಲಿನ ಅಸಾಧ್ಯ ತರಲೆ ಮಕ್ಕಳು ನನ್ನನ್ನು ಹದ ಮಾಡಿ ಬಿಟ್ಟರು. ಇಡೀ ನನ್ನ graduationವರೆಗೆ ಮಾಡದ ಅಧ್ಯಯನ ಹಾಗೂ ವಿಷಯ ತಯಾರಿಯನ್ನು ನಾನಲ್ಲಿ ಮಾಡಿದೆ ಅಂದ್ರೆ ತಪ್ಪಾಗಲಾರದು.
ಆದರೆ ನನ್ನ challenging ವೃತ್ತಿ ಜೀವನ ಪ್ರಾರಂಭವಾದದ್ದು 1989ರಲ್ಲಿ - ನವೋದಯ ಶಾಲೆಯಲ್ಲಿ. ನವೋದಯ ಪ್ರಾರಂಭವಾಗಿ ಇನ್ನೂ ಮೂರನೇ ವರ್ಷ. ನನ್ನದು first direct recruitment batch. ಆವರೆಗೆ ಮನೆ ಬಿಟ್ಟೇ ಗೊತ್ತಿಲ್ಲದ, ಪ್ರಪಂಚ ಜ್ಞಾನವೇ ಇಲ್ಲದ, ಕಾಲೇಜಿನ degree ಇದ್ದರೂ ಬದುಕಿನ ಕಾಲೇಜಿನ LKGಯಲ್ಲಿದ್ದ ನನ್ನನ್ನು ಜೂನ್ 1989ರ ಶುಭ ದಿನವೊಂದರಂದು ನನ್ನ ಅಪ್ಪ ಅಪ್ಪಟ ಮಲೆನಾಡಿನ ಬಾಳೆಹೊನ್ನೂರಿನ ಸೀಗೋಡಿನಲ್ಲಿ ತಂದು ಅಲ್ಲಿನ ಪ್ರಾಂಶುಪಾಲರಾದ ಶ್ರೀ ರವೀಂದ್ರನ್ ಅವರ ಕೈಗೊಪ್ಪಿಸಿದರು. ಅಂದು ಪ್ರಾರಂಭವಾದ ನನ್ನ ಬದುಕಿನ ನಾಗಾಲೋಟ ಇನ್ನೂ ನಿಂತಿಲ್ಲ.
ಮನೆಯಲ್ಲಿ ನನ್ನದೇ ರೂಮಿನಲ್ಲಿ ಬೆಚ್ಚಗೆ ಮಲಗುತ್ತಿದ್ದ ನಾನು ಅಲ್ಲಿ ಎಲ್ಲಾ ಹೆಣ್ಣುಮಕ್ಕಳೊಟ್ಟಿಗೆ dining hallನಲ್ಲಿ ಮಲಗಲು ಕಲಿತದ್ದು ನನ್ನ ಪ್ರಥಮ ಪಾಠ. ಕರಾವಳಿಯ ಅತೀ ಸೆಖೆಯಿಂದ ಮಲೆನಾಡಿನ ಹಲ್ಲು ಕರಗುಟ್ಟುವಂತಹ ಚಳಿಯಲ್ಲಿ ಬೆಳಗಾ ಮುಂಚೆ ಐಸ್ ನಂತಿದ್ದ ನೀರಿನಲ್ಲಿ ಸ್ನಾನ ಮಾಡಲು ಕಲಿತದ್ದು ಎರಡನೇ ಪಾಠ. ಬೆಳ್ಳಗಿದ್ದದ್ದೆಲ್ಲ ಹಾಲೆಂದು ತಿಳಿದುಕೊಂಡಿದ್ದ ನನಗೆ ಅದು ಹಾಲಾಹಲವೂ ಆಗಿರುತ್ತದೆ ಎಂದು ಅರಿವಾದದ್ದು ಮೂರನೇ ಪಾಠ. ಮಲೆನಾಡಿನಲ್ಲೂ ನೀರಿಗೆ ತತ್ವಾರವಾಗಿ ನೀರನ್ನು ರೇಶನ್ ಆಗಿ ಬಳಸಲು ಕಲಿತದ್ದು ನಾಲ್ಕನೇ ಪಾಠ. ಬೇರೆಯವರ(ಇಲ್ಲಿ ಮಕ್ಕಳು) ಎದುರು ಬಟ್ಟೆ ಬದಲಿಸಲು ಕಲಿತದ್ದು ಐದನೇ ಪಾಠ. ಮಕ್ಕಳನ್ನು ಮಕ್ಕಳಾಗಿಯೇ ಪರಿಗಣಿಸಿ ಒಂದು ಅಂತರವನ್ನು ಕಾಪಾಡಿಕೊಂಡು ವ್ಯವಹರಿಸಬೇಕೆಂದು ಕಲಿತದ್ದು ಆರನೇ ಪಾಠ. ಎಂತಹ ಕಗ್ಗಾಡಲ್ಲು ಬಿಟ್ಟರೂ ಬದುಕಿ ಬರುವ ಎದೆಗಾರಿಕೆ ಪಡೆದದ್ದು ಏಳನೇ ಪಾಠ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ವೃತ್ತಿಧರ್ಮವನ್ನು, ವೃತ್ತಿ ಪ್ರೀತಿಯನ್ನು, ಯಾವ ಕೆಲಸಕ್ಕೂ ready ಎನ್ನುವ ಮನಸ್ಥಿತಿಯನ್ನು ರವೀಂದ್ರನ್ ಸರ್ ರಿಂದ ಕಲಿತದ್ದು ಅತ್ಯಮೂಲ್ಯವಾದ ವೃತ್ತಿ ಬದುಕಿನ ಪಾಠ. ಇವತ್ತು ನಾನೊಂದು ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದೇನೆಂದರೆ ಆ credit ಬದುಕಿನಲ್ಲಿ ಸಕಾರಾತ್ಮಕ ಮನೋಭಾವದ ಅಗತ್ಯವನ್ನು ತಿಳಿಸಿದ ನನ್ನ ಅಪ್ಪ ಪದ್ಮನಾಭ, ಶಿಕ್ಷಕ ವೃತ್ತಿಗೆ ನನ್ನನ್ನುmould ಮಾಡಿದ ರವೀಂದ್ರನ್ ಸರ್ ಹಾಗೂ ಯೋಚಿಸಿ ಕೆಲಸ ಮಾಡಲು ಕಲಿಸಿದ ಸುರೇಶನಿಗೆ ಸಲ್ಲುತ್ತದೆ. ಕಳೆದ 31 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದು ಸಾವಿರಾರು ಮಕ್ಕಳಿಗೆ ನನ್ನಿಂದಾದ ಅಲ್ಪಸ್ವಲ್ಪ ಮಾರ್ಗದರ್ಶನ ನೀಡಿದ ಖುಷಿ ನನಗಿದೆ. ಹಾಗೆಯೇ ಎಲ್ಲರಿಂದಲೂ ಪ್ರತಿನಿತ್ಯ ಒಂದಿಲ್ಲೊಂದು ಪಾಠವನ್ನು ಕಲಿಯುತ್ತಿರುವ ಸಂತೋಷವೂ ಇದೆ. ಈ ವೃತ್ತಿಯೇ ಹಾಗೆ - ಕಲಿ ಇಲ್ಲವೇ ಕಲಿಸು ಎನ್ನುತ್ತಿರುತ್ತದೆ

4. ಅನುಭವ - ಕುಂದಾಪುರ 
ನಾನು 6ರಿಂದ 10ನೇ classನ ತನಕ ಓದಿದ್ದು ಕುಂದಾಪುರದ St. Mary's ಶಾಲೆಯಲ್ಲಿ. ನನ್ನ ಅಪ್ಪ ಆಗ ಕುಂದಾಪುರದಲ್ಲಿ ಕೆಲಸ ಮಾಡುತ್ತಿದ್ದರು. ನಾವು ತೋಟದೊಳಗೆ ಇದ್ದ ಒಂದು ಬಾಡಿಗೆ ಮನೆಯಲ್ಲಿದ್ದೆವು. ಆ ತೋಟದ ತುಂಬಾ ವಿವಿಧ ಜಾತಿಯ ಮರಗಳಿದ್ದವು. ನನ್ನ ಓದೆಲ್ಲ ಆಗುತ್ತಿದ್ದುದು ಆ ಮರಗಳ ಮೇಲೆಯೇ☺️ ಇದೊಂದು ರೀತಿಯ ಪರಿಸರದೊಡನೆ ಓದಿನ ಮಾದರಿಗೆ ಉದಾಹರಣೆ!? ನಮ್ಮ ತೋಟದ ಮನೆಯ ಆಚೆ ರಸ್ತೆಯಲ್ಲಿ ಹೋಟೆಲ್ ಪಾರಿಜಾತದವರ ಮನೆ ಇತ್ತು. ತುಂಬು ಕುಟುಂಬದ ಮನೆಯದು. ನನಗೆ ಅವರ ಬಳಕೆ ಇತ್ತು. ಯಾಕೆಂದರೆ ಅವರ ಮನೆ ತುಂಬಾ ಮಕ್ಕಳಿದ್ದರು. ಮಕ್ಕಳಿದ್ದಲ್ಲಿ ನಾನು!
ಶಾಲೆಗೆ ರಸ್ತೆಯಲ್ಲಿಯೇ ಸುಮಾರು ಒಂದೂವರೆ ಕಿಮೀ ನಡೆದುಕೊಂಡು ಹೋಗಬೇಕಿತ್ತು. ಅದೂ ಒಬ್ಬಳೇ! ಸುತ್ತಲಿನ ಪರಿಸರವನ್ನು ಸವಿಯುತ್ತಾ ಹೋಗುವಾಗ ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ. ಅಲ್ಲಿನ ವಿಶೇಷ ನೆನಪೆಂದರೆ ಸೈಕಲ್ ಬಿಡಲು ಕಲಿತದ್ದು. Cycle ಬಿಡಲು ಕಲಿತ ಎರಡನೇ ದಿನವೇ ನನ್ನ ತಂಗಿ ಶೈಲಳನ್ನು double ಮಾಡಿಕೊಂಡು ಹೋಗುವಾಗ ಬಿದ್ದು ಎಲ್ಲರ ಹತ್ತಿರ ಸರಿಯಾಗಿ ಬೈಸಿಕೊಂಡ ಪರಿಣಾಮ ಹೇಗಿದೆ ಅಂದ್ರೆ ಇವತ್ತಿಗೂ ನನಗೆ driving ಮಾಡಲು ಆಗುತ್ತಲೇ ಇಲ್ಲ. ಅಂತಹ blockನ್ನು ಅದು create ಮಾಡಿದೆ. ಹೀಗಾಗಿ ಆ ಬೈಗುಳದ ತೀವ್ರತೆ ಹೇಗಿರಬಹುದು ಎಂದು ಕಲ್ಪಿಸಿ!
ನನ್ನ ಹಲವಾರು ಮೊದಲುಗಳ ಊರು ಕುಂದಾಪುರ. Cycle ಕಲಿತದ್ದು, theatreನಲ್ಲಿ ಸಿನೆಮಾ regular ಆಗಿ ನೋಡಲು ಶುರು ಮಾಡಿದ್ದು(ಅಪ್ಪನೊಟ್ಟಿಗೆ), ಥ್ರೋಬಾಲ್ ಆಡಲು ಪ್ರಾರಂಭಿಸಿದ್ದು..... ಹೀಗೇ ದೊಡ್ಡ ಪಟ್ಟಿಯೇ ಇದೆ. ಆಗ ನನಗೆ cinema ನೋಡುವ ಚಟ ಎಷ್ಟಿತ್ತು ಅಂದ್ರೆ tenth ಪರೀಕ್ಷೆಯ ಹಿಂದಿನ ದಿನ ಕೂಡಾ ಅಪ್ಪನಿಗೆ ಚೊರೆ ಮಾಡಿ ಸಿನೆಮಾ ನೋಡಿದ್ದೆ.
ನಮ್ಮ ಮನೆಗೆ ಯಾರು ಬಂದರೂ ಮರವಂತೆ beachಗೆ ಹೋಗುತ್ತಿತ್ತು. ಸಮುದ್ರತೀರದ ರುಚಿ ಹಿಡಿದದ್ದು ಅಲ್ಲಿಯೇ.. ಕುಂದಾಪುರದಲ್ಲಿ ಏನು ಮರೆತರೂ ಅಲ್ಲಿನ ಮೀನು ವಾಸನೆ ಮರೀಲಿಕ್ಕೆ ಆಗೊಲ್ಲ. ನಮ್ಮ ಮನೆ ಹೊಳೆಯ ಹತ್ತಿರ ಇತ್ತು. ಮಧ್ಯಾಹ್ನ ಆಗುವಾಗ ಗಾಳಿಯಲ್ಲಿ ನದಿತೀರದಿಂದ ಮೀನಿನ ವಾಸನೆ ಬಂದು ಮೂಗಿಗೆ ಬಡಿಯುತ್ತಿತ್ತು. ಅತೀ ತೀಕ್ಷ್ಣವಾದ ವಾಸನೆ. ಮೂಗಿನಿಂದ ಸೀದಾ ಒಡಲಿನಾಳಕ್ಕೆ ಇಳಿಯುತ್ತಿತ್ತು. ಈಗಲೂ ಒಣಮೀನಿನ ಲಾರಿಯ ಪಕ್ಕ ಸಾಗುವಾಗ ಬರುವ ಆ ವಾಸನೆ ಕುಂದಾಪುರದ ನೆನಪನ್ನು ತರುತ್ತದೆ.
ನನ್ನ ಸ್ನೇಹಿತರಾದ ಜಯಶ್ರೀ, ಲೊಲಿಟ, ಶುಭ, ಸೋನಿ, ಮಿನಿ, ಪ್ರಕಾಶ, ರೂಪರ್ಟ್, ಅಶ್ರಫ್ ...ಇನ್ನೂ ಹಲವರು ಹಾಗೂ ಟೀಚರ್ಸ್ ಗಳಾದ ವಾಲ್ಟರ್ ಮಾಸ್ಟರ್, ಐತಾಳ್ ಮಾಸ್ಟರ್, ಲೂಯಿ ಮಾಸ್ಟರ್, ಕೊಗ್ಗ ಮಾಸ್ಟರ್.... ಇವರೆಲ್ಲ ಇನ್ನೂ ನನ್ನ ನೆನಪಿನ ಬುತ್ತಿಯೊಳಗೆ ಓಡಾಡುತ್ತಿದ್ದಾರೆ. ನನ್ನ ಇಡೀ ವಿದ್ಯಾರ್ಥಿ ಜೀವನದಲ್ಲಿ ಪೆಟ್ಟು ತಿಂದದ್ದು ಒಮ್ಮೆಯೇ, ಅದೂ ನಾ ಮಾಡದ ತಪ್ಪಿಗೆ, ಕೊಗ್ಗ ಮಾಸ್ಟ್ರಿಂದ. ಅದೂ ನಾಗರಬೆತ್ತದಲ್ಲಿ. ಆಗ ಹಸ್ತದಲ್ಲಿ ಮೂಡಿದ ಬರೆ ಚಿತ್ತದಲ್ಲಿ ಈಗಲೂ ಇದೆ. ಆದರೆ ಹೊಡೆದ ಮಾಸ್ಟ್ರ್ ಬಗ್ಗೆ ಬೇಸರವಿಲ್ಲ.
ನಾನು ನನ್ನ ಶಾಲಾ ದಿನಗಳಲ್ಲಿ ಕಲಿತ ಪಾಠದ ಕ್ರಮ ನೆನಪಿಲ್ಲ. ಆದರೆ ಕಲಿತ ಅನುಭವಗಳು, ಒಡನಾಟಗಳು ನೆನಪಿವೆ. ಹಾಗಾದರೆ ನಾವು ಶಾಲೆಯಲ್ಲಿ ಕಲಿಯಬೇಕಾದ್ದೇನು, ಕಲಿಸಬೇಕಾದ್ದೇನು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದಲ್ಲವೇ?

3. ಪರಿಸರ - ಹೆಬ್ರಿ 
ನಾನು ಹುಟ್ಟಿದ್ದು ಹೆಬ್ರಿಯಲ್ಲಿ. ನನ್ನ ಅಪ್ಪ ಅಲ್ಲಿ ಆಗ LIC development officer ಆಗಿ ಕೆಲಸ ಮಾಡುತ್ತಿದ್ದರು. ನಮ್ಮ owner ಮನೆಯ ಪಕ್ಕವೇ ನಮ್ಮ ಬಾಡಿಗೆ ಮನೆ ಇತ್ತು. ಅವರಿಗೆ 3 ಗಂಡು ಮಕ್ಕಳು. ಹೀಗಾಗಿ ನನ್ನನ್ನು ಮೀಯಿಸಿದ್ದು owner ಮನೆಯ ಆನಮ್ಮ ಹಾಗೂ ಹೊತ್ತು ತಿರುಗಿದ್ದು ಮೂರು ಗಂಡು ಹೆತ್ತ ಅವರ ಸೊಸೆ. ಅಮ್ಮ ಎದೆ ಹಾಲೂಡಿಸಿದ್ದು ಬಿಟ್ಟರೆ ಉಳಿದಂತೆ ನಾನು ಬೆಳೆದದ್ದೆಲ್ಲ owner ಮನೆಯಲ್ಲೇ.
ಆಂಟಿ, ಆನಮ್ಮ ಅಂದ್ರೆ ನನಗೆ ಪ್ರಾಣ. ಸುಧೀರ, ಪ್ರೇಮು, ಗುರು ಅವರೊಟ್ಟಿಗಿನ ಬಾಂಧವ್ಯ ತುಂಬಾ ಪ್ರೀತಿಪೂರ್ವಕವಾಗಿತ್ತು‌. ಅವರದ್ದು ದೊಡ್ಡ ಕುಟುಂಬ. ಜವಳಿ ಅಂಗಡಿ ನಡೆಸುತ್ತಿದ್ದರು. ಅಜ್ಜ, ಆನಮ್ಮ, ಬಾಬು ಮಾಮ, ಆಂಟಿ ಮತ್ತು ಅವರ ಮೂರು ಮಕ್ಕಳು regular ಆಗಿ ಮನೆಯಲ್ಲಿ ಇದ್ದವರು. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಮನೆಗೆ ಬಂದರೆ ಸುಮಾರು 30-40 ಜನ ಆಗುತ್ತಿದ್ದರು. ಅವರೊಡನೆ ನಾನೂ ಒಬ್ಬಳು. ಅವರಂತೆ ಒಳ್ಳೆ ಕೊಂಕಣಿ ಮಾತಾಡ್ತಾ ಇದ್ದೆ. ಆಂಟಿಯ ತರ ಬೆಳ್ಳಗಿದ್ದ ಕಾರಣ ನಾನು ಅವರ ಮಗಳೇ ಅಂತ ಎಲ್ಲ ತಿಳಕೊಳ್ಳುತ್ತಿದ್ದರು.
ಅಲ್ಲಿದ್ದವರೆಲ್ಲ ಹುಡುಗರೇ ಆಗಿದ್ದ ಕಾರಣ ನಾನು ಆಡಿದ ಆಟಗಳು - ಲಗೋರಿ, ಚಿನ್ನಿದಾಂಡು, ಬುಗುರಿ, ಗೋಲಿ ಹಾಗೂ ಮರಕೋತಿ. ಕೋತಿ ಸ್ವಭಾವದವಳಾದ ನಾನು ಅದರಂತೆ ಸರಸರ ಮರ ಹತ್ತಿ ಕ್ಷಣಾರ್ಧದಲ್ಲಿ ಮರದ ತುದಿಯಲ್ಲಿ ಇರುತ್ತಿದ್ದೆ. ಮರ ಯಾವುದೇ size ಆಗಿದ್ರೂ ಕೂಡ ಸರಾಗವಾಗಿ ಹತ್ತುತ್ತಿದ್ದೆ. ಆಗ ಈಗಿನಂತೆ ದೊಡ್ಡ drum ಆಗಿರದೆ ತೆಳ್ಳಗೆ ಬಳುಕುವ ಬಳ್ಳಿಯಂತಿದ್ದೆ😊
ಆಂಟಿ ಮನೆಯಲ್ಲಿ ಸಂಜೆ ಎಲ್ಲರೂ ಭಜನೆ ಮಾಡಬೇಕಿತ್ತು. ನಾನೂ ಕೂಡ ಅವರೊಡನೆ ಭಜನೆ ಮಾಡುತ್ತಿದ್ದೆ. ಇನ್ನೊಂದು ಮಾಸದ ನೆನಪೆಂದರೆ ಆನಮ್ಮ ಮಾಡುತ್ತಿದ್ದ ಬೆಲ್ಲದ ಕಾಫಿ. ಅದರ ರುಚಿ ಇನ್ನೂ ನನ್ನ ನಾಲಿಗೆಯ ಮೇಲಿದೆ. ಆನಮ್ಮ ತುಂಬ ಚೆಂದದ,ಲಕ್ಷಣದ ಹೆಂಗಸು. ಪ್ರೀತಿ ತುಂಬಿದ ವ್ಯಕ್ತಿತ್ವ. ಅವರು ಹಾಗೂ ಆಂಟಿ ಸೇರಿ ಮಾಡುತ್ತಿದ್ದ ಅಡುಗೆಗೆ ವಿಚಿತ್ರ ರುಚಿ. ನನ್ನ ನಾಲಿಗೆಗೆ ಅಡುಗೆಯ ರುಚಿ ಹಿಡಿಸಿದವರೇ ಅವರುಗಳು. ಅತ್ತೆ ಸೊಸೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದರು. ಆ ದೊಡ್ಡದಾದ ಮನೆಯನ್ನು ನಿರ್ವಹಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವರಿಬ್ಬರ ಮುಖದಲ್ಲಿ ಒಮ್ಮೆ ಕೂಡಾ ದಣಿವನ್ನು ನೋಡಿದ ನೆನಪಿಲ್ಲ. ಇಬ್ಬರದೂ ಪ್ರಶಾಂತವಾದ ಕಳೆಯಿಂದ ಕೂಡಿದ ಮುಖ.
ನಾನು 3ನೇ ತರಗತಿಯ ತನಕ ಮಾತ್ರ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದರೂ ಹೆಬ್ರಿಯ ಬದುಕಿನ ದಿನಗಳು ಇನ್ನೂ ನನ್ನ ನೆನಪಿನಾಳದಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಬೆಲ್ಲ ಕೊಟ್ಟು ನನ್ನನ್ನು ಬಾಲವಾಡಿಗೆ ಕರ್ಕೊಂಡು ಹೋಗುತ್ತಿದ್ದ ಟೀಚರ್, ಮನೆ ಪಕ್ಕದಲ್ಲೇ ಇದ್ದರೂ ಮಧ್ಯಾಹ್ನ ಶಾಲೆಯಲ್ಲಿ ಕೊಡುತ್ತಿದ್ದ ಎಂತದೋ ಉಪ್ಪಿಟ್ಟಿನ ತರದ್ದನ್ನು ತಿನ್ನುವ ಚಪಲ, ಆಟಂಬಾಂಬ್ ಎನ್ನುವ ಐದು ಪೈಸೆಗೆ ಸಿಗುತ್ತಿದ್ದ ಮಿಠಾಯಿ, ಹುಲಿವೇಷದವರ ಹಿಂದಿಂದೆ ಸುತ್ತಿ ಮನೆಗೆ ಹೋಗದೆ ಬೈಸಿಕೊಂಡದ್ದು, ಮರಕೋತಿ ಆಡುತ್ತಾ ಮರದ ತುದಿಯಿಂದ ಬಿದ್ದದ್ದಲ್ಲದೆ ಅದಕ್ಕಾಗಿ ನಂತರ ಅಮ್ಮನತ್ರ ಸರೀ ಹೊಡೆತ ತಿಂದದ್ದು.... ಇವೆಲ್ಲ ಮರೆಯುವ ವಿಷಯಗಳೇ?

2. ಅಜ್ಜಯ್ಯನ ಮನೆ - ಪರಿಸರ 
ಅಜ್ಜಯ್ಯನ ಮನೆ ಎಲ್ಲರಿಗೂ ಒಂದು ಭಾವನಾತ್ಮಕವಾಗಿ ನಂಟಿರುವ ಜಾಗ. ನಮ್ಮ ಬಿರ್ತಿ ಕುಟುಂಬದ ಸರ್ವರೂ ತಮ್ಮನ್ನು ತಾವು ಈ ಮನೆಗೆ relate ಮಾಡಿಕೊಳ್ಳುವುದು ಒಂದು great ವಿಷಯ. ಅಂತಹ ಅಂಟಿನ ಜಾಗ ಇದು.
ಈ ಮನೆಯ ವಿಶೇಷವೆಂದರೆ ನಮ್ಮ ಅಜ್ಜಯ್ಯನ 9 ಮಕ್ಕಳು, ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಎಲ್ಲರೂ ಅದೇ ಭಾವನಾತ್ಮಕ ಭಾವದೊಂದಿಗೆ ಈ ಮನೆಗೆ ಇನ್ನೂ ಬಂದು ಕೆಲವು ಕ್ಷಣಗಳನ್ನು, ದಿನಗಳನ್ನು ಕಳೆಯುತ್ತಾರೆ. ಮನೆ ಹಳೆಯದಾದರೂ ಮನದ ಭಾವ ಹಳೆಯದಲ್ಲವಲ್ಲ!
ಈಗಿರುವ ಮನೆ 1973ರಲ್ಲಿ ನನ್ನ ಅಪ್ಪನ ನೇತೃತ್ವದಲ್ಲಿ ಕಟ್ಟಲ್ಪಟ್ಟದ್ದು. ಆ ತನಕ ಇದ್ದ ಹಳೆಯ ಮನೆಯ ನೆನಪು ನನಗೆ ಅಷ್ಟಿಲ್ಲ. ಈಗಿರುವ ಮನೆ typical ದಕ್ಷಿಣ ಕನ್ನಡ ಮಾದರಿಯ ಭವಂತಿ ಮನೆ. ಮಧ್ಯ ಅಂಗಳ ಹಾಗೂ ಸುತ್ತಲೂ ಗೋಡೆ. ಮನೆಯ ಎದುರು ತಳಿ/ದಳಿ. ಎದುರಿಗೆ asbestos sheetನ ಜಗುಲಿ. ನಂತರ ಒಂದು ಕಟ್ಟೆಯ structure. ತದನಂತರ ಚಾವಡಿ. ನಾವೆಲ್ಲರೂ ಸೇರಿದರೆ ನಮ್ಮ ರಾಜಸಭೆ ನಡೆಯುವುದು ಜಗುಲಿಯಲ್ಲೇ! ಅಲ್ಲಿರುವ ಅಜ್ಜಯ್ಯನ ಕಿಟಕಿ ಎಲ್ಲರ centre of attraction. ಒಳ್ಳೆಯ ಗಾಳಿ ಬರುವ ಜಾಗ. ನನ್ನಮ್ಮನ ಎಲೆಅಡಿಕೆ ಕುಟ್ಟಿ ತಿನ್ನುವ ಜಾಗ. ಅಮ್ಮನ ಕುಟ್ಟಾಣಿ ಹಾಗೂ ಎಲೆ ಅಡಿಕೆಯ ಪರಿಕರಗಳು ಅಜ್ಜಯ್ಯನ ಕಿಟಕಿಯ ಕಟ್ಟೆಯನ್ನು ಗುಳುಂ ಮಾಡಿರುವುದು ನಿಜವಷ್ಟೇ!
ಅಜ್ಜಯ್ಯನ ಮನೆಯಲ್ಲಿ ಈಗ regular ಆಗಿ ಇರುವುದು ನನ್ನ ಅಮ್ಮ ಮತ್ತು ಅತ್ತಿಗೆ ಮಾತ್ರ. ನನ್ನ cousins ಎಲ್ಲಾ ಈಗಲೂ ಈ ಮನೆಗೆ ಬಂದು ನನ್ನ ಅಮ್ಮನೊಡನೆ ಕಥೆ ಹೊಡೆದು ಹೋಗುತ್ತಾರೆ. ನನ್ನ ಅತ್ತಿಗೆ ಬಂದವರಿಗೆ ಪ್ರೀತಿಯಿಂದ ಸತ್ಕರಿಸುತ್ತಾಳೆ. ನನ್ನ ಚಿಕ್ಕಪ್ಪ ಅವರ ಬೆಂಗಳೂರಿನ ಮನೆಗೆ ಬಿರ್ತಿ ಮನೆ ಎಂದು ನಾಮಕರಣ ಮಾಡಿದ್ದಾರೆ.
ಆ ಮನೆಯಲ್ಲಿ ಎಷ್ಟೊಂದು ಕಾರ್ಯಕ್ರಮ ನಡೆದಿವೆ; ಎಷ್ಟೊಂದು ಸಾವು ನೋವು ಉಂಟಾಗಿವೆ; ಎಷ್ಟೊಂದು ಹಬ್ಬಹರಿದಿನಗಳು, ಆಚರಣೆಗಳು ನಡೆದಿವೆ. ನಾವೆಲ್ಲ ಆ ಸಮಯದಲ್ಲಿ ಒಟ್ಟಾಗಿ ಮಾಡಿದ ದಾಂಧಲೆಗಳು, ಕೀಟಲೆಗಳು ಒಂದೇ ಎರಡೇ. ನಮ್ಮ ಆಚೆಮನೆಯವರು ಕೂಡಾ ಇದಕ್ಕೆ ಸಾಥ್.
ಕೃಷ್ಣ ಅಷ್ಟಮಿಯ timeನಲ್ಲಿ ನಾವೆಲ್ಲ cousins ಅಜ್ಜಯ್ಯನ ಮನೆಯಲ್ಲಿ ಒಂದಾಗುತ್ತಿದ್ದೆವು. ಶುಂಠಿ ಉಂಡೆಯನ್ನು ಅಲ್ಲಿರುವ ಕಂಬಕ್ಕೆ ಹಚ್ಚಿ ಉಳಿದ ಉಂಡೆಗಳಿಗೆ ಎರಡೆರಡು ಸಲ ಕೈಯೊಡ್ಡುತ್ತಿದ್ದೆವು. ಅವೆಲ್ಲ ಒಂದು ರೀತಿಯ ಮರೆಯಲಾರದ ಕ್ಷಣಗಳು. ಆ ಒಟ್ಟಿರುವ ಭಾವವೇ ಚೆಂದ! ಬರೆಯುತ್ತಾ ಹೋದರೆ ಘಟನೆಗಳು ಸರತಿ ಸಾಲಿನಲ್ಲಿ ಬರುತ್ತವೆ. ಇಂದಿಗೆ ಸಾಕಿಷ್ಟು

1. ಅನುಭವ - ಪರಿಸರ 
ನಾನು ಪಿಯು ಓದುವ ದಿನಗಳು. ಆರ್ಟ್ಸ್ ವಿದ್ಯಾರ್ಥಿನಿಯಾಗಿದ್ದೆ. ನಾನು ಹಾಗೂ ನನ್ನ friend ಜೂಲಿಯೆಟ್ 3km ದೂರ ಗದ್ದೆ ಬದುವಿನ ಮೇಲೆ ನಡೆದುಕೊಂಡು ಪಿಯು ಕಾಲೇಜಿಗೆ ಬರುತ್ತಿದ್ದೆವು. ದಾರಿಯಲ್ಲಿ ನರಪಿಳ್ಳೆ ಕೂಡಾ ಇರುತ್ತಿರಲಿಲ್ಲ. ನಮ್ಮಿಬ್ಬರದೇ ರಾಜ್ಯ. ಹೆದರಿಕೆ ಅನ್ನುವುದು ನಮ್ಮ dictionaryಯಲ್ಲಿ ಇರಲೇ ಇಲ್ಲ. ಅಲ್ಲಲ್ಲಿ ಸಿಗುವ ಕರಂಡೆ ಕಾಯಿ, ಕ್ಯಾಪಳ ಹಣ್ಣು, ಬಾಗಳ ಹಣ್ಣು..... ಹೀಗೇ ಕಾಟು ಹಣ್ಣುಗಳನ್ನು ಕೊಯ್ಯುತ್ತಾ, ತಿನ್ನುತ್ತಾ, ಪರಸ್ಪರ ಒಬ್ಬರೊಬ್ಬರ ಕಾಲೆಳೆಯುತ್ತಾ ಸುಸ್ತಿನ ಪರಿವೇ ಇಲ್ಲದೆ ನಮ್ಮ ನಡಿಗೆ ಸಾಗುತ್ತಿತ್ತು. ಮಳೆಗಾಲದಲ್ಲಿ ಮಜವೇ ಮಜ.
ಒಮ್ಮೆಯಂತೂ ಜೂಲಿ ಕೆಸರು ಗದ್ದೆಗೆ ಜಾರಿ ಬಿದ್ದಿದ್ದಳು. ನಾನು ನಕ್ಕು ಮುಗಿದ ಮೇಲೆ ಅವಳನ್ನು ಮೇಲೆ ಎತ್ತಿದ್ದೆ. ಅವಳು ಸಿಟ್ಟಿನಿಂದ ಸಮಾ ಬೈದಳು. ನನ್ನ ನಗು ಇನ್ನೂ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ.
ನಾವು ಎಷ್ಟೇ ಚಂಡಿಯಾಗಿ ಹೋದರೂ ನಮಗೆ ರಜೆ ಕೊಡುತ್ತಿರಲಿಲ್ಲ. ಆ ಒದ್ದೆ ಬಟ್ಟೆಯಲ್ಲೇ ಇಡೀ ದಿನ ಇರಬೇಕಿತ್ತು. ನಮ್ಮಲ್ಲಿ ಚಳಿ ಇಲ್ಲದ ಕಾರಣ ನಾವು ಬಚಾವ್.
ಮಧ್ಯಾಹ್ನ ಊಟ ಮಾಡಿದ ದಾಖಲೆಯೇ ಇಲ್ಲ. ಮಾವಿನಕಾಯಿ, ಕಾಟು ಹುಳಿ ಹಣ್ಣುಗಳು. ಹುರಿದ ಹುಣಿಸೆ ಬೀಜ, ಐಸ್ ಕ್ಯಾಂಡಿ... ಹಾಗೂ ವೀಣಾ ಶೆಣೈ ಅಂತಹ ಸ್ನೇಹಿತರು ತಂದ ಬುತ್ತಿ. ಇವೇ ನಮ್ಮ ಮಧ್ಯಾಹ್ನದ ಆಹಾರ. ಆಗ ಹೊಟ್ಟೆ ಖಾಲಿ ಬಿಟ್ಟ ಫಲ ಈಗಿನ severe gastritis!?
ತುಂಬಾ ಚೆಂದದ ದಿನಗಳವು. ಪರೀಕ್ಷೆ ಸಮಯದಲ್ಲಿ ಗದ್ದೆಯ ಬದುವಿನ ಮೇಲೆ ಕುಳಿತು ಮಾವಿನಮರದ ಕೆಳಗೆ ಓದು. ಓದಿದ್ದಕ್ಕಿಂತ ಮಾವಿನಹಣ್ಣು ಹೆಕ್ಕಿ ತಿಂದದ್ದೇ ಜಾಸ್ತಿ. ಅಪ್ಪ ಅಮ್ಮ ಮಾರ್ಕ್ಸ್ ಬಗ್ಗೆ ತಲೆ ತಿಂದವರಲ್ಲ. "ನಿನ್ನ strengthಗೆ ನ್ಯಾಯ ಕೊಡು" ಅಂತ ಅನ್ನುತ್ತಿದ್ದರು. First class ಮಾರ್ಕ್ಸ್ ಗೆ ಯಾವತ್ತೂ ತೊಂದರೆ ಇರಲಿಲ್ಲ. ಹೀಗಾಗಿ ಆರಾಮವಾಗಿಯೇ 'ಓದು' ನಡೆಯುತ್ತಿತ್ತು.
ಬಾಲ್ಯದ ಆ ಸ್ವತಂತ್ರ ದಿನಗಳು ಮರಳಿ ಸಿಗುತ್ತವೆಯೋ ಎನ್ನುವ ನಿರೀಕ್ಷೆಯಲ್ಲಿ
ಇವತ್ತು ಸಾಲಿಕೇರಿ ಬಗ್ಗೆ ಅಭಿ ಬರೆದ ಬರಹವನ್ನು facebookನಲ್ಲಿ ಓದಿದೆ. I felt very nostalgic. ಧುತ್ತನೆ ಕಣ್ಣ ಮುಂದೆ ನಮ್ಮ ಮನೆಯ ಅಶ್ವತ್ಥ ಕಟ್ಟೆಯ ಮಾವಿನಹಣ್ಣಿನ ಮರ ಕಣ್ಣ ಮುಂದೆ ಬಂತು. ಅದೀಗ ಇಲ್ಲ. ನೂರಾರು ವರ್ಷಗಳ ಕಾಲ ಇದ್ದ ಆ ಮರ ಈಗ್ಗೆ ಕೆಲವು ವರ್ಷಗಳ ಹಿಂದೆ ಗಾಳಿಮಳೆಗೆ ಬಿದ್ದು ಹೋಯಿತು. What a loss?!
ನಮಗೆ ದೊಡ್ಡ ನಷ್ಟ ಏಕೆಂದರೆ ಅದರಲ್ಲಿ ಬಿಡುತ್ತಿದ್ದ ಸಣ್ಣ ಸಣ್ಣ ಮಾವಿನಹಣ್ಣುಗಳು ಅದ್ಭುತ ರುಚಿ ಹೊಂದಿದ್ದವು ಹಾಗೂ ರಾಶಿ ರಾಶಿಯಾಗಿ ಮರದ ಕೆಳಗೆ ಗದ್ದೆಯಲ್ಲಿ ಬೀಳುತ್ತಿದ್ದವು. ನಾವಾಗ ಪುಟ್ಟ ಮಕ್ಕಳು. Cousins ಎಲ್ಲಾ ಅಜ್ಜಯ್ಯನ ಮನೆಯಲ್ಲಿ ಸೇರಿದರೆ ಸಂಖ್ಯೆ ಸುಮಾರು ಇಪ್ಪತ್ತು ದಾಟುತ್ತಿತ್ತು. Competition ಮೇಲೆ ಗದ್ದೆಯಲ್ಲಿ ಬಿದ್ದಿದ್ದ ಮಾವಿನಹಣ್ಣುಗಳನ್ನು ತಿನ್ನುತ್ತಿದ್ದೆವು. ಇದರಿಂದ ಆರೋಗ್ಯ ಹಾಳಾದ ದಾಖಲೆಯೇ ಇಲ್ಲ. ಮಳೆ ಬರುವಾಗ ಹಣ್ಣು ಜಾಸ್ತಿ ಬೀಳುತ್ತಿದ್ದವು. ಮಳೆಗೆ care ಮಾಡದೆ ನೆನೆಯುತ್ತಾ, ಮೈಯೆಲ್ಲಾ ಜೋರಿಸಿಕೊಳ್ಳುತ್ತಾ ಆ ಹಣ್ಣು ತಿನ್ನುವ ದೃಶ್ಯ ಕಣ್ಣ ಮುಂದೆ ಬಂದರೆ ರೋಮಾಂಚನವಾಗುತ್ತದೆ. Those were the golden days! ಯಾವುದೇ ಬಂಧನಗಳಿಲ್ಲದ, ಜವಾಬ್ದಾರಿಗಳಿಲ್ಲದ ಸ್ವತಂತ್ರವಾಗಿ ಇದ್ದ ದಿನಗಳವು. ಎಷ್ಟು ಚೆಂದ!