Monday, February 9, 2026

PADMABHOSHANA SHATAVADHANI R GANESH

 Tuesday, February 10, 2026

Feeling proud writing about PadmaBhooshana Shatavadhani R Ganesh.



ನಾಡಿನ ಏಕೈಕ ಶತಾವಧಾನಿ ಎನಿಸಿರುವ ಡಾ. ಆರ್. ಗಣೇಶ್ ಅವರಿಗೆ ಈ ಬಾರಿಯ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಬಹುಭಾಷಾ ಪಂಡಿತರಾದ ಅವರು ಕಾವ್ಯ, ಕಥೆ, ಕಾದಂಬರಿ, ವಿಮರ್ಶೆ, ಇತಿಹಾಸ ಮುಂತಾದ ಹತ್ತುಹಲವು ಮುಖಗಳಲ್ಲಿ ಕ್ರಿಯಾಶೀಲರು. ಸಂಗೀತ, ನೃತ್ಯ, ಯಕ್ಷಗಾನ, ನಾಟಕ ಸೇರಿದಂತೆ ಕಲಾಪ್ರದರ್ಶನ ಕ್ಷೇತ್ರದವರಿಗೆ ಒದಗಿಬರುವ ಮಾರ್ಗದರ್ಶಕರು. ನಡೆದಾಡುವ ವಿಶ್ವವಿದ್ಯಾಲಯದ ರೀತಿಯಲ್ಲಿ ಬಹು ಮೌಲಿಕ ಪಾತ್ರವನ್ನು ನಿರ್ವಹಿಸುತ್ತಿರುವ ಅವರ ವ್ಯಕ್ತಿತ್ವದ ಕಿರುಚಿತ್ರಣವಿದು.


January 3, 2016

January 24, 2016


ವಿದ್ವಲ್ಲೋಕದ ವಿಸ್ಮಯ ಶತಾವಧಾನಿ  ಡಾ. ಆರ್. ಗಣೇಶ್

~ ಗಣೇಶ ಭಟ್ಟ ಕೊಪ್ಪಲತೋಟ

ಶತಾವಧಾನಿ ಡಾ. ಆರ್. ಗಣೇಶ್ ಅವರ ವಿದ್ವತ್ತೆಯನ್ನು ನೋಡಿ ಬೆರಗಾಗದವರು ತಾನೇ ಯಾರು! ನಿಜಕ್ಕೂ ಅವರ ಪ್ರತಿಭೆ-ಪಾಂಡಿತ್ಯಗಳು ವಿಸ್ಮಯವೇ ಎಂದು ಹಿರಿಯ ಪತ್ರಕರ್ತ, ಲೇಖಕ, ಚಿಂತಕ, ನಾಡೋಜ ಎಸ್. ಆರ್. ರಾಮಸ್ವಾಮಿಗಳು ಅವರನ್ನು ‘ವಿದ್ವಲ್ಲೋಕದ ವಿಸ್ಮಯ’ ಎಂದು ಕರೆದಿದ್ದಾರೆ. ಒಂದೊಂದು ಶಾಸ್ತ್ರವನ್ನೋ ವಿದ್ಯೆಯನ್ನೋ ಅಧ್ಯಯನ ಮಾಡುವುದಕ್ಕೆ ಹತ್ತಾರು ವರ್ಷಗಳೇ ಬೇಕಾಗುತ್ತವೆ ಎಂದು ಹೇಳುತ್ತಾರೆ. ಆದರೆ ಅದು ಸಾಮಾನ್ಯರನ್ನು ಕುರಿತು ಹೇಳುವ ಮಾತು. ವಿಶೇಷ ಪ್ರತಿಭೆಯುಳ್ಳವರು ಯಾವ ಮಟ್ಟದಲ್ಲಿ ವೈದುಷ್ಯವನ್ನು ಸಾಧಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ಶತಾವಧಾನಿಗಳು ನಮ್ಮ ನಡುವೆ ಇದ್ದಾರೆ.

ಗಣೇಶ್ ಅವರು ಹುಟ್ಟಿದ್ದು ಕೋಲಾರದಲ್ಲಿ, ೧೯೬೨ರ ಡಿಸೆಂಬರ್ ನಾಲ್ಕರಂದು. ಅವರ ತಾಯಿ ಅಲಮೇಲಮ್ಮ. ತಂದೆ ಆರ್. ಶಂಕರನಾರಾಯಣ ಅಯ್ಯರ್. ಚಿಕ್ಕಂದಿನಲ್ಲಿಯೇ ಅವರ ತಾಯಿಯವರ ಮಾರ್ಗದರ್ಶನದಲ್ಲಿ ಸಂಗೀತ-ಚಿತ್ರಕಲೆ-ನಟನೆ ಮೊದಲಾದ ಹಲವು ಬಗೆಯ ಲಲಿತಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಓದುವ ಹವ್ಯಾಸವನ್ನು ರೂಢಿಸಿಕೊಂಡ ಅವರು ತಮ್ಮ ಸಹಜವಾದ ಜ್ಞಾನಕುತೂಹಲದಿಂದ ನಿರಂತರವಾಗಿ ಅಧ್ಯಯನವನ್ನು ನಡೆಸುತ್ತ ಮನಸ್ಸಿನಲ್ಲಿ ನೆಟ್ಟ ಜ್ಞಾನವೃಕ್ಷವನ್ನು ಕಲ್ಪವೃಕ್ಷವನ್ನಾಗಿಸಿಕೊಂಡರು.

ಬಹುಭಾಷಾಜ್ಞಾನ

ಚಿಕ್ಕಂದಿನಿಂದ ಅವರು ಬೆಳೆದ ವಾತಾವರಣದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಪ್ರಭಾವ ಇದ್ದ ಕಾರಣ ಶಾಲೆಗೆ ಹೋಗುವ ವಯಸ್ಸಿನಲ್ಲಿಯೇ ಈ ಮೂರೂ ಭಾಷೆಗಳನ್ನು ಕಲಿತರು. ಆ ಬಳಿಕ ಶಾಲೆಯ ಪಾಠ್ಯಕ್ರಮದಲ್ಲಿ ಹಿಂದಿ, ಸಂಸ್ಕೃತ, ಇಂಗ್ಲಿಷ್ ಮೊದಲಾದ ಭಾಷೆಗಳ ಪರಿಚಯವಾಯಿತು. ಸಂಸ್ಕೃತ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಬೆಳೆದು ಅದರ ಮೂಲಕ ಶೌರಸೇನಿ, ಮಾಗಧೀ, ಮಹಾರಾಷ್ಟ್ರೀ ಮೊದಲಾದ ಹಲವು ಬಗೆಯ ಪ್ರಾಕೃತಗಳು, ಪಾಳಿ ಮೊದಲಾದ ಭಾಷೆಗಳನ್ನು ಕಲಿತರು. ಆ ಸಮಯದಲ್ಲಿ ಪಾಶ್ಚಾತ್ಯದೇಶಗಳ ಮಹಾಕಾವ್ಯಗಳನ್ನು ಅಧ್ಯಯನ ಮಾಡುವ ಆಸಕ್ತಿ ಹುಟ್ಟಿ ಗ್ರೀಕ್ ಲ್ಯಾಟಿನ್ ಮುಂತಾದ ಭಾಷೆಗಳನ್ನು ಕಲಿತರು. ಹೀಗೆ ಸುಮಾರು ೨೧ ಭಾಷೆಗಳಲ್ಲಿ ಅವರು ಪಾಂಡಿತ್ಯವನ್ನು ಪಡೆದಿದ್ದಾರೆ.

‘ನೀವು ಇಷ್ಟೊಂದು ಭಾಷೆಗಳನ್ನೆಲ್ಲ ಯಾವಾಗ ಕಲಿತದ್ದು?’ ಎಂದು ಒಮ್ಮೆ ಕುತೂಹಲದಿಂದ ಅವರ ಬಳಿ ಕೇಳಿದ್ದೆ. ಹೆಚ್ಚುಕಡಿಮೆ ಈ ಎಲ್ಲ ಭಾಷೆಗಳನ್ನೂ ತಮ್ಮ ೨೦-೨೧ರ ವಯಸ್ಸಿನ ಒಳಗೇ ಕಲಿತುಕೊಂಡದ್ದಾಗಿ ತಿಳಿಸಿದ್ದರು. ‘ಪ್ರಸ್ತುತ ಒಂದು ಭಾಷೆ ಬರುತ್ತದೆ ಎಂದು ಹೇಳಬೇಕು ಎಂದರೆ ಆ ಭಾಷೆಯಲ್ಲಿ ಸುಮಾರು ಸಾವಿರ ಪುಸ್ತಕಗಳನ್ನಾದರೂ ಓದಿರಬೇಕು’ ಎಂಬುದು ಅವರಿಗೆ ಅವರೇ ಹಾಕಿಕೊಂಡ ನಿಯಮವಂತೆ! ಹೀಗೆ ನೋಡಿದರೆ ನಮಗೆ ಕನ್ನಡ ಬರುತ್ತದೆ ಎಂದು ಹೇಳುವುದಕ್ಕೇ ಆಲೋಚನೆ ಮಾಡಬೇಕಾಗುತ್ತದೆ!

ಅಧ್ಯಯನ ಅಧ್ಯಾಪನ

ಭಾಷೆ-ಕಲೆ-ಸಾಹಿತ್ಯ-ಸಂಗೀತ ಎಂದು ಈ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಮಾಡಿರುವ ಅವರು ಕಾಲೇಜಿನ ವ್ಯಾಸಂಗದಲ್ಲಿ ಕಲಿತದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಆ ಬಳಿಕ ಲೋಹಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಸಂಸ್ಕೃತದಲ್ಲಿ ಎಂ.ಎ. ಮಾಡಿದ ಅವರು ಅವಧಾನಕಲೆಯನ್ನು ಕುರಿತು ಸಂಶೋಧನೆಯನ್ನು ಮಾಡಿ ಮಂಡಿಸಿದ ‘ಕನ್ನಡದಲ್ಲಿ ಅವಧಾನಕಲೆ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೊದಲ ಡಿ.ಲಿಟ್ ಪದವಿ ದೊರೆತದ್ದು ಇತಿಹಾಸ. ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಬಳಿಕ ಹಲವು ವರ್ಷಗಳ ಕಾಲ ಅದೇ ವಿಷಯದಲ್ಲಿ ಅಧ್ಯಾಪನವನ್ನೂ ಮಾಡಿದ್ದಾರೆ.


ಅವಧಾನಕಲೆಗೆ ಹೊಸ ರೂಪ

ಕನ್ನಡನಾಡಿನಲ್ಲಿ ಅವಧಾನಕಲೆ ಎಂದರೆ ಏನು ಎಂದೇ ಪರಿಚಯವಿಲ್ಲದಂತಹ ಸಂದರ್ಭ ಸೃಷ್ಟಿಯಾಗಿದ್ದಾಗ ಆ ಅದ್ಭುತವಾದ ಕಲೆಯನ್ನು ಪರಿಚಯಿಸಿ ಅದಕ್ಕೆ ಹೊಸರೂಪವನ್ನು ತೋರಿಸಿ ಇಂದು ಕರ್ಣಾಟಕದಲ್ಲಿ ಶತಾವಧಾನಿಗಳು ಎಂದರೆ ಇವರೊಬ್ಬರೇ ಎಂಬಂತೆ ಮನೆಮಾತಾಗಿರುವವರು ಗಣೇಶ್! ಏಕಾಗ್ರತೆ, ನೆನಪಿನ ಶಕ್ತಿ, ಸದ್ಯಃಸ್ಫೂರ್ತಿ, ಆಶುಕವಿತಾರಚನೆ, ಬಹುಶಾಸ್ತ್ರಪಾಂಡಿತ್ಯ, ಭಾಷಾಪ್ರಭುತ್ವ ಹೀಗೆ ಹಲವಾರು ಬಗೆಯ ಅಪೂರ್ವವಾದ ಸಾಧನೆಯನ್ನು ಮಾಡಿಕೊಂಡವರು ಮಾತ್ರ ಕರಗತ ಮಾಡಿಕೊಳ್ಳಬಹುದಾದ ದುಷ್ಕರವಾದ ಕಲಾಪ್ರಕಾರವೇ ಅವಧಾನ. ವೇದಿಕೆಯಲ್ಲಿ ಹಲವಾರು ಪಂಡಿತರು ಬಗೆಬಗೆಯ ಪ್ರಶ್ನೆಗಳನ್ನು ಒಡ್ಡಿದರೆ ಅವಧಾನಿಗಳು ಅವುಗಳೆಲ್ಲವುಗಳಿಗೂ ತಮ್ಮ ಪಾಂಡಿತ್ಯಪ್ರತಿಭೆಗಳಿಂದ ಸೂಕ್ತವಾದ ಸಮಾಧಾನವನ್ನು ನೀಡಬೇಕು.


ತೆಲುಗಿನಲ್ಲಿ ಬಹಳ ಜನಪ್ರಿಯವಾಗಿರುವ ಈ ಕಲೆಯ ಬೇರು ಅಲ್ಲಿಗಿಂತ ಮೊದಲು ಕನ್ನಡದಲ್ಲಿಯೇ ಸ್ಪಷ್ಟವಾಗಿ ಕಾಣಿಸುತ್ತದೆ. ಇಂತಹ ಅದ್ಭುತವಾದ ಕಲೆ ಕನ್ನಡದಲ್ಲಿ ಇಲ್ಲದಂತಾಗಿ ಹಲವು ದಶಕಗಳೇ ಕಳೆದಿದ್ದವು. ಅಂಥ ಸಂದರ್ಭದಲ್ಲಿ, ಒಮ್ಮೆ ಬೆಂಗಳೂರಿನಲ್ಲಿ ನಡೆದ ತೆಲುಗಿನ ಒಬ್ಬ ಅವಧಾನಿಗಳ ಅಷ್ಟಾವಧಾನವನ್ನು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ನೋಡಿ, ಮಾರನೆಯ ದಿನವೇ ಯಶಸ್ವಿಯಾಗಿ ಅಷ್ಟಾವಧಾನವನ್ನು ನಿರ್ವಹಿಸಿದಂತಹ ಬಾಲಪ್ರತಿಭೆ ಶತಾವಧಾನಿಗಳದ್ದು.


೧೩೦೦ಕ್ಕೂ ಹೆಚ್ಚು ಅಷ್ಟಾವಧಾನಗಳು

ಅವಧಾನಕ್ಷೇತ್ರದಲ್ಲಿ ಅವರು ಸಾಧಿಸಿದ ವಿಕ್ರಮ ಅನೂಹ್ಯ! ಈ ತನಕ ದೇಶ-ವಿದೇಶಗಳಲ್ಲಿ ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ ಐದು ಶತಾವಧಾನಗಳನ್ನೂ ನಿರ್ವಹಿಸಿದ್ದಾರೆ. ತೆಲುಗಿನವರು ಅಸಾಧ್ಯವೆಂದೇ ಹೇಳಿದ್ದ ಚಿತ್ರಕವಿತೆಯೆಂಬ ವಿಭಾಗವನ್ನು ಅವಧಾನದಲ್ಲಿ ನಿರ್ವಹಿಸಿ ಅಳವಡಿಸಿಕೊಂಡದ್ದು ಅವರ ಗರಿಮೆ. ಅದಲ್ಲದೆ ನಾಟಕವಾಚನ, ಮಾತು-ಧಾತು, ಅನಂತಕಥಾಕವಿತೆ ಹೀಗೆ ಹಲವು ಬಗೆಯ ಕಷ್ಟಕರವಾದ ವಿಭಾಗಗಳನ್ನೂ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.

ಒಂದೇ ಪದ್ಯಕ್ಕೆ ಐದಾರು ಭಾಷೆಗಳಲ್ಲಿ ಅರ್ಥವನ್ನು ಹೇಳಬಲ್ಲಂತಹ ಭಾಷಾಚಿತ್ರ, ಒಂದೇ ಪದ್ಯದಲ್ಲಿ ಹಲವು ಬಗೆಯ ಛಂದಸ್ಸುಗಳು ಒಳಗೊಂಡಿರುವಂತೆ ಗರ್ಭಚಿತ್ರ, ಅವಧಾನವೇದಿಕೆಯಲ್ಲಿ ಆಶುವಾಗಿ ಹೇಳಲು ಅಸಾಧ್ಯವೆಂದೇ ಹೇಳಬಹುದಾದ ದುಷ್ಕರ ಬಂಧಚಿತ್ರಗಳ ರಚನೆಗಳನ್ನೆಲ್ಲವನ್ನೂ ಅವರು ಸಾಧಿಸಿದ್ದಾರೆ. ಆಯಾ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ನಮಗೆ ಇದರ ಕಷ್ಟ ಎಷ್ಟೆಂದು ಅರಿವಾದೀತು! ಅಲ್ಲದೆ ಎಂಟು ಭಾಷೆಗಳಲ್ಲಿ ಅವಧಾನವನ್ನು ನಿರ್ವಹಿಸಬಲ್ಲ ಏಕೈಕ ಅಷ್ಟಭಾಷಾವಧಾನಿಗಳೂ ಆಗಿದ್ದಾರೆ. ಅತ್ಯಂತ ವೇಗವಾಗಿ ತಾಸಿಗೆ ನೂರು ಅಭಿಜಾತಶೈಲಿಯ ರಸಮಯವಾದ ಪದ್ಯಗಳನ್ನು ರಚಿಸಿ ಹೇಳುವಂತಹ ಶಕ್ತಿಯಿರುವ ಅವರು ಘಳಿಗೆಯೊಂದರಲ್ಲಿ ನೂರು ಸಂಸ್ಕೃತ ಶ್ಲೋಕಗಳನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿದ್ದಾರೆ.



ಉಳಿದ ಕಲಾಕ್ಷೇತ್ರಗಳಲ್ಲಿಯೂ ಕೃಷಿ

ಒಬ್ಬ ಒಳ್ಳೆಯ ಕಲಾವಿದನಾದವನು ತಾನು ರೂಢಿಸಿಕೊಂಡ ಕಲೆಗೆ ಹೊಸ ಹೊಳಹನ್ನು ಕೊಡಬಲ್ಲವನಾಗುತ್ತಾನೆ. ಆ ದೃಷ್ಟಿಯಿಂದ ಶತಾವಧಾನಿಗಳು ಅವಧಾನಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಜೊತೆಯಲ್ಲಿ ಉಳಿದ ಕಲೆಗಳಲ್ಲಿ ತೊಡಗಿಸಿಕೊಂಡ ಬಗೆಯನ್ನೂ ಗಮನಿಸಿದರೆ ಅವರ ಎತ್ತರ ಬಿತ್ತರಗಳ ಅರಿವಾದೀತು.

ಸಂಗೀತ ನೃತ್ಯ ಮೊದಲಾಗಿ ಹಲವು ಕಲಾಪ್ರಕಾರಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ಅವರು ಸಾಕಷ್ಟು ಸಂಗೀತಕೃತಿಗಳನ್ನು ರಚಿಸಿದ್ದಾರೆ. ಶಾಸ್ತ್ರೀಯನೃತ್ಯಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಯಕ್ಷಗಾನದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯರ ಮೂಲಕ ಏಕವ್ಯಕ್ತಿ ಯಕ್ಷಗಾನ, ದಿವಾಕರ ಹೆಗಡೆ ಅವರ ಮೂಲಕ ಏಕವ್ಯಕ್ತಿ ತಾಳಮದ್ದಲೆ ಎಂಬ ಹೊಸ ಆಯಾಮವನ್ನು ಕೂಡ ಕಲ್ಪಿಸಿಕೊಟ್ಟಿದ್ದಾರೆ. ಪರಿಪೂರ್ಣವಾಗಿ ರಸಮಾತ್ರದೃಷ್ಟಿಯಿಂದ ಕಲೆಯನ್ನು ಆಸ್ವಾದಿಸುವ ಸಹೃದಯರೆಲ್ಲರೂ ಇದನ್ನು ಮೆಚ್ಚಿ ಆಸ್ವಾದಿಸಿ ಜನಪ್ರಿಯವೂ ಆಗಿರುವುದೇ ಈ ಕಲಾಪ್ರಕಾರದ ಸಾಧ್ಯತೆಯನ್ನು ತೋರಿಸಿಕೊಟ್ಟ ಗಣೇಶರ ಶ್ರೇಯಸ್ಸಿಗೆ ಸಾಕ್ಷಿ. ಇವುಗಳಲ್ಲದೆ ‘ಕಾವ್ಯ-ಚಿತ್ರ-ಗೀತ-ನೃತ್ಯ’ದಂತಹ ವಿಶಿಷ್ಟ ಕಲಾಪ್ರಕಾರವನ್ನು ರಂಗಕ್ಕೆ ಪರಿಚಯಿಸಿ ಯಶಸ್ವಿಯಾಗಿ ಅನೇಕ ಪ್ರದರ್ಶನಗಳನ್ನು ನಡೆಸಿದ್ದಾರೆ. ಬಿ.ಕೆ.ಎಸ್ ವರ್ಮಾ ಅವರ ಜೊತೆಯಲ್ಲಿ ಸತತ ೨೪ ಗಂಟೆಗಳ ಕಾಲ ಕಾವ್ಯ-ಚಿತ್ರ ಕಾರ್ಯಕ್ರಮವನ್ನು ನಡೆಸಿ ವಿಶ್ವದಾಖಲೆಯನ್ನು ಮಾಡಿದ್ದಾರೆ.

ಶಾಸ್ತ್ರಕಾರ-ಉಪನ್ಯಾಸಕಾರ

ಅವಧಾನಿ-ಕವಿ ಆದವರಿಗೆ ಆವಶ್ಯಕವಾಗಿರುವ ಛಂದಶ್ಶಾಸ್ತ್ರ, ವ್ಯಾಕರಣ, ಅಲಂಕಾರಶಾಸ್ತ್ರ ಮೊದಲಾದವುಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಈ ತನಕ ಇದ್ದ ಶೃಂಗಾರ-ಹಾಸ್ಯ ಮೊದಲಾದ ನವರಸಗಳಷ್ಟೇ ಅಲ್ಲದೆ ‘ಧೀರರಸ’ ಎಂಬ ಇನ್ನೊಂದು ರಸ ಇರುವುದನ್ನೂ ಶೋಧಿಸಿ ವಿಸ್ತಾರವಾಗಿ ಲೇಖನವನ್ನು ಬರೆದು ಅದರ ಹರಹನ್ನು ತೋರಿಸಿಕೊಟ್ಟಿದ್ದಾರೆ. ಕಾವ್ಯಮೀಮಾಂಸೆಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇದೊಂದು ಅಪೂರ್ವ ಶೋಧನೆಯೇ ಆಗಿದೆ. ಆಗಮ, ಧರ್ಮಶಾಸ್ತ್ರ, ವೇದವೇದಾಂತಾದಿ ಅನೇಕ ವಿಷಯಗಳಲ್ಲಿ ಸಾಕಷ್ಟು ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದಲ್ಲದೆ, ಜ್ಯೋತಿಷ್ಯದಂತಹ ಶಾಸ್ತ್ರದಲ್ಲೂ ಪ್ರವೇಶವನ್ನು ಹೊಂದಿದ್ದಾರೆ. ಕಾವ್ಯ, ನಾಟಕ, ತತ್ತ್ವಶಾಸ್ತ್ರ, ವೇದ, ವೇದಾಂತ, ಧರ್ಮಶಾಸ್ತ್ರ, ಅಲಂಕಾರಶಾಸ್ತ್ರ ಮೊದಲಾಗಿ ಭಾರತೀಯ ಜ್ಞಾನಪರಂಪರೆಯಲ್ಲಿ ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಇವುಗಳೆಲ್ಲವುಗಳ ಹಿನ್ನೆಲೆಯಲ್ಲಿ ಹತ್ತಾರು ಸಾವಿರ ಗಂಟೆಗಳಷ್ಟು ಕಾಲದ ಉಪನ್ಯಾಸಗಳನ್ನು ನೀಡಿದ್ದಾರೆ.

ಅಧ್ಯಯನಪೂರ್ಣ ಗ್ರಂಥಕರ್ತ

ಉಪನ್ಯಾಸ, ಕಲಾಪ್ರಯಾಣ, ಅವಧಾನಪ್ರದರ್ಶನ ಮೊದಲಾದ ಲೋಕಾಂತಕಾರ್ಯಗಳ ನಡುವೆ ಏಕಾಂತಕಾರ್ಯವಾಗಿ ಶತಾವಧಾನಿಗಳು ರಚಿಸಿದ ಕೃತಿಗಳೂ ಅಸಂಖ್ಯ! ಅಭಿಜಾತ ಶೈಲಿಯ ಕಾವ್ಯಗಳು, ಕಾದಂಬರಿಗಳು, ಕಥೆಗಳು, ಅನುವಾದ, ನೃತ್ಯರೂಪಕಗಳು, ಗೀತೆಗಳು ಹೀಗೆ ಅವರು ಸಾಧಿಸದ ಪ್ರಕಾರವಿಲ್ಲ. ‘ಮಣ್ಣಿನ ಕನಸು’ ಅವರ ಇತ್ತೀಚಿನ ಮಹಾ-ಕಾದಂಬರಿ. ‘ಪುಟಗಳ ನಡುವಣ ನವಿಲುಗರಿ’ ಕಥಾಸಂಕಲನ. ಪರೋಕ್ಷ, ಹದನು-ಹವಣು, ಕಾವ್ಯಕಲ್ಪ, ಮಾರ್ಗಣ, ಮಂತಣ ಇತ್ಯಾದಿ ಅನೇಕ ಕೃತಿಗಳು ಶತಾವಧಾನಿಗಳ ಹಲವು ವರ್ಷಗಳ ವಿವಿಧ ಅಧ್ಯಯನಪೂರ್ಣ ಲೇಖನಗಳ ಸಂಗ್ರಹಗಳು.


ಸರ್ವತಂತ್ರಸ್ವತಂತ್ರ, ವಾಣೀವಾಹನ, ವಿಭೂತಿಪುರುಷ ವಿದ್ಯಾರಣ್ಯ ಮೊದಲಾದವು ಜೀವನಚಿತ್ರಣಗಳು. ‘ಅಭಿರುಚಿ’ ಎಂಬುದು ಲಲಿತಪ್ರಬಂಧಗಳ ಸಂಕಲನ. ಮಧುಸದ್ಮ, ಪ್ರತಿಭಾದೂತಂ, ವನಿತಾಕವಿತೋತ್ಸವ, ರಾಮಾನುರಾಗಾನಲಂ, ವಾತ್ಸಲ್ಯಗೋಪಾಲಕಂ ಮೊದಲಾದ ಅನೇಕ ಸಂಸ್ಕೃತ ಕಾವ್ಯಗಳೂ, ವಂಶೀಸಂದೇಶಂ, ಸ್ವಪ್ನಸಂಗಮಂ ಮೊದಲಾದ ಕನ್ನಡ ಕಾವ್ಯಗಳೂ, ‘ಧೂಮದೂತ’ದಂತಹ ವಿಡಂಬನ ಕಾವ್ಯಗಳೂ ಅವರ ಲೇಖನಿಯಿಂದ ಹೊರಹೊಮ್ಮಿವೆ. ಕವಿಸಾರ್ವಭೌಮ, ಮೂರು ಪ್ರಹಸನಗಳು, ಮಹಾಬ್ರಾಹ್ಮಣ ಮೊದಲಾದವು ಅವರು ಅನುವಾದಿಸಿರುವ ಕೆಲವು ಕೃತಿಗಳು. ಈವರೆಗೆ ಅವರು ರಚಿಸಿರುವ ಬಿಡಿ ಪದ್ಯಗಳ ಸಂಖ್ಯೆಯೇ ಸುಮಾರು ಒಂದೂವರೆ ಎರಡು ಲಕ್ಷಗಳಷ್ಟು ಇದ್ದಿರಬಹುದು!

ಮನ್ನಣೆ, ಪುರಸ್ಕಾರಗಳು

ಗಣೇಶ್ ಅವರನ್ನು ಅತೀ ಕಿರಿಯ ವಯಸ್ಸಿನಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದದ್ದು ವಿಶೇಷವೇನಲ್ಲ. ಅವರಿಗೆ ದೇವುಡು ಅವರ ‘ಮಹಾಬ್ರಾಹ್ಮಣ’ ಕೃತಿಯ ಅನುವಾದಕ್ಕಾಗಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿಗಳು ಕೊಡುವ ಬಾದರಾಯಣ ವ್ಯಾಸ ಪುರಸ್ಕಾರವೇ ಮೊದಲಾಗಿ ಅನೇಕ ಪ್ರಶಸ್ತಿ ಸಂಮಾನಗಳು ಸಂದಿವೆ. ಅವುಗಳಿಗೆ ಕಿರೀಟಪ್ರಾಯವಾಗಿ ಈ ವರ್ಷ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.


ತಮ್ಮ ಜೀವಿತಾವಧಿಯಲ್ಲಿಯೇ ದಂತಕಥೆಯಾಗಿರುವ ಸುಪ್ರಸಿದ್ಧ ಭರತನಾಟ್ಯ ಕಲಾವಿದೆ, ಸಂಶೋಧಕಿ, ಲೇಖಕಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ‘ತಮ್ಮ ಭರತನಾಟ್ಯ ಸಂಪೂರ್ಣವಾಗಿ ಯಾರಿಗಾದರೂ ಅರ್ಥವಾಗಿದ್ದರೆ ಅದು ಗಣೇಶ್ ಅವರಿಗೊಬ್ಬರಿಗೇ’ ಎಂದು ಹೇಳಿದ್ದಾರೆ. ಬಹಳ ಹಿಂದೆ ಪ್ರಸಿದ್ಧ ವಿದ್ವಾಂಸ, ಸಂಶೋಧಕ, ಕವಿ ಸೇಡಿಯಾಪು ಕೃಷ್ಣಭಟ್ಟರು ತಮ್ಮ ಶಿಷ್ಯರೊಬ್ಬರಿಗೆ ಬರೆದ ಪತ್ರವೊಂದರಲ್ಲಿ, ‘ನನ್ನ ಛಂದೋಗತಿ ಪುಸ್ತಕವನ್ನು ಓದಿ ಅರ್ಥಮಾಡಿಕೊಂಡ ಕೆಲವೇ ಕೆಲವರಲ್ಲಿ ಬೆಂಗಳೂರಿನ ಗಣೇಶ್ ಒಬ್ಬರು’ ಎಂಬ ಅರ್ಥದ ವಾಕ್ಯವನ್ನು ಬರೆದಿದ್ದರು. ಆಗಿನ್ನೂ ಗಣೇಶರ ವಯಸ್ಸು ಇಪ್ಪತ್ತು-ಮೂವತ್ತರ ಒಳಗೆ ಇದ್ದಿರಬಹುದು. ‘ಉಳಿದೆಲ್ಲ ಪ್ರಶಸ್ತಿಗಳಿಗಿಂತ ಈ ಮನ್ನಣೆಯೇ ಹೆಚ್ಚಿನದು’ ಎಂದು ಭಾವಿಸುವಂತಹ ವಿನಯಶಾಲಿಗಳು, ಸರಳರು ಶತಾವಧಾನಿಗಳು. ಆ ಕಾರಣದಿಂದಲೇ ಅವರು ಇಂದಿಗೂ ಎಲ್ಲರಿಗೂ ಆದರಣೀಯರಾಗಿದ್ದಾರೆ.

(ಲೇಖಕರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ, ಕವಿ, ಕಾದಂಬರಿಕಾರ, ಅನುವಾದಕ. ಕರ್ನಾಟಕದ ಪ್ರಮುಖ ಅಷ್ಟಾವಧಾನಿಗಳಲ್ಲಿ ಒಬ್ಬರು.)




Posted 10/2/2026



No comments:

Post a Comment