Monday, July 6, 2026

ಹಿನ್ನೀರ ಓದುಗರ ಒಂದು ಬೈಠಕ್ - ಶೋಭಾ ಸೋಮಯಾಜಿ

 ಶನಿವಾರ. ಜುಲೈ 4, 2026 


ಇಂದು ಹಿನ್ನೀರ ಓದುಗರ ಒಂದು ಬೈಠಕ್ ಕಿಟ್ಟಣ್ಣನ ಮನೆಯ ಲೈಬ್ರೆರಿಯಲ್ಲಿ ನಡೆಯಿತು. ಬಹಳ ತಿಂಗಳುಗಳ ನಂತರ ನಡೆದ ಬೈಠಕ್ ಇದು. ನಾವೊಂದು ಏಳೆಂಟು ಜನ ಸೇರಿದ್ದೆವು. ವಿಭಾ ಒಂದು ಐಸ್ ಬ್ರೇಕ್ ಆಕ್ಟಿವಿಟಿ ಮಾಡಿಸಿದ ನಂತರ ನಾವು ನಮಗೆ ಬೇಕಾದ ಪುಸ್ತಕದ ಓದಿನಲ್ಲಿ ತೊಡಗಿಕೊಂಡೆವು. ನಾನು ಕಳೆದ ಹೊಂಗಿರಣೋತ್ಸವದಲ್ಲಿ ಖರೀದಿಸಿದ್ದ ಆದರೆ ಇತ್ತೀಚೆಗೆ ಓದಲು ಪ್ರಾರಂಭಿಸಿದ್ದ ಕರ್ಜಗಿಯವರ “ಈಶಾವಾಸ್ಯ ಉಪನಿಷತ್" ಪುಸ್ತಕವನ್ನು ಓದುವುದರಲ್ಲಿ ತೊಡಗಿಕೊಂಡೆ. ನಾನಿನ್ನೂ ಅದರ ಪೀಠಿಕಾ ಭಾಗವನ್ನು ಓದುತ್ತಿದ್ದೇನೆ ಅಷ್ಟೇ! ಪುಸ್ತಕದ ಪೂರ್ಣ ಒಳಗಿನ್ನೂ ಹೋಗಿಲ್ಲ. ಈ ವೇದ, ಅರಣ್ಯಕ, ಉಪನಿಷತ್ ಬಗ್ಗೆ ಓದಿ ಜೀರ್ಣಿಸಿಕೊಳ್ಳುವುದು ನನಗೆ ಸ್ವಲ್ಪ ಕಷ್ಟ. ಒಂದೊಂದು ಸಲ ಕೆಲವು ಭಾಗಗಳನ್ನು ಎರಡೆರಡು ಸಲ ಓದಬೇಕಾದ ಅಗತ್ಯ ನನಗೆ ಬರುತ್ತದೆ. ಆದರೆ ಅಂತಹ ಓದಿನಲ್ಲೂ ಏನೋ ಸುಖವಿದೆ! ಅದರಲ್ಲಿ ಬರೆದಿರುವ ಎಷ್ಟೋ ವಿಷಯಗಳು ಈ ವಯಸ್ಸಿನಲ್ಲಿ ತುಂಬಾ ಕನೆಕ್ಟ್ ಆಗುತ್ತವೆ. ನಮ್ಮೊಳಗಿರುವ ಗೊಂದಲಗಳಿಗೆ ಅಲ್ಲೆಲ್ಲೋ ಉತ್ತರ ಸಿಗುತ್ತದೆ.

ನಮ್ಮ ಸನಾತನ ಪರಂಪರೆಯ ತತ್ವಮಸಿ - ಅಂದರೆ know thyself - ಇದು ಹೇಳುವುದು ಎಷ್ಟು ಸುಲಭವೋ ಸಾಧಿಸುವುದು ಅಷ್ಟೇ ಕಷ್ಟ ಎನ್ನುವ ಅರಿವು ಈ ಪುಸ್ತಕ ಮೂಡಿಸುತ್ತದೆ. ಆ ಪುಸ್ತಕದಲ್ಲೊಂದು ಸಾಲಿದೆ " ಬಹಳಷ್ಟು ಜನ ತೊಳಲಾಟದಲ್ಲೇ ಆಯುಷ್ಯ ನೀಗುತ್ತಾರೆ”. ಎಷ್ಟು ಸತ್ಯದ ಮಾತಲ್ಲವೆ? ಅಲ್ಲಿ ಇನ್ನೂ ಒಂದು ವಿಷಯ ಬರುತ್ತದೆ “ಧರ್ಮದ ಹುಟ್ಟಿಗೆ ಭೀತಿ ಎಷ್ಟು ಕಾರಣವೋ, ಸೃಷ್ಟಿಯು ಮನುಷ್ಯನಲ್ಲಿ ಪ್ರಚೋದಿಸಿದ ಕುತೂಹಲವೂ ಅಷ್ಟೇ ಕಾರಣ”. ಒಪ್ಪುವ ಮಾತು ತಾನೆ? ನನ್ನನ್ನು ತಟ್ಟಿದ ಇನ್ನೊಂದು ಸಾಲೆಂದರೆ" ಸತ್ಯದ ಅನ್ವೇಷಣೆ ವಸ್ತುನಿಷ್ಠವಾದಾಗ ವಿಜ್ಞಾನವಾಯಿತು, ಭಾವನಿಷ್ಠವಾದಾಗ ಸಾಹಿತ್ಯ ಮತ್ತು ಕಲೆಯಾಯಿತು….” ಈ ಪುಸ್ತಕದ ಪೀಠಿಕೆಯಲ್ಲಿ ವೇದದ ಉಗಮ, ವೇದದ ಮೂಲ ಉದ್ದೇಶ, ಜೀವನದ ಅರ್ಥ, ನಾನು ಯಾರು, ನಾನೇಕೆ ಇಲ್ಲಿಗೆ ಬಂದಿದ್ದೇನೆ ಎನ್ನುವಂತಹ ತಾತ್ವಿಕ ವಿಷಯಗಳು, ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳ ಬಗ್ಗೆ ಸರಳವಾದ ವಿವರಣೆ ಇದೆ.

ವೇದೋಪನಿಷತ್ತುಗಳ ಬಗ್ಗೆ ಅಂತಹ ತಿಳುವಳಿಕೆ ಇಲ್ಲದ ನನ್ನಂತಹವರೂ ಸಹಾ ಅವುಗಳ ಕುರಿತು ಅರಿಯುವಂತೆ, ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು ಈ ಕೃತಿ ಸಹಾಯಕವಾಗಿದೆ. ಇದರಲ್ಲಿ ದೃಷ್ಟಾಂತ ಕಥೆಗಳಿವೆ, ಪ್ರಸಂಗ - ಪ್ರಹಸನಗಳಿವೆ. ಇದರಿಂದ ಓದು ಸರಳವಾಗುತ್ತದೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಹುಮ್ಮಸ್ಸಿನಲ್ಲಿ ಈ ಪುಸ್ತಕವನ್ನು ಓದಲು ಪ್ರಾರಂಭಿಸಿ ‘ಪ್ರಾಜ್ಞ’ಳಾಗುವ ಪ್ರಯತ್ನ ಮಾಡುತ್ತಿದ್ದೇನೆ. ಇದೊಂದು ಯಶಸ್ವಿ ಓದಾಗಬಹುದಲ್ಲವೆ?          

Posted 6/7/2026 

No comments:

Post a Comment