Sunday, September 22, 2024

ಶಿವರಾಮ ಕಾರಂತ ವೇದಿಕೆ - ಸಪ್ಟಂಬರ್ ತಿಂಗಳ ಕಾರ್ಯಕ್ರಮ

 ಭಾನುವಾರ, ಸಪ್ಟಂಬರ 22, 2024

ವಿನಾಯಕ ದೇವಸ್ಥಾನ ಸಭಾಂಗಣ, ಅರ.ಟಿ. ನಗರ, ಬೆಂಗಳೂರು.



ಶಿವರಾಮ ಕಾರಂತ ವೇದಿಕೆಯ ಸಪ್ಟಂಬರ ತಿಂಗಳ ಕಾರ್ಯಕ್ರಮ, "ನಮ್ಮ ಆಹಾರ, ನಮ್ಮ ಆರೋಗ್ಯ", ವಿಷಯವಾಗಿ ಡಾ. ಪ್ರಸನ್ನ ಸಂತೆಕಡೂರು ಇವರ ಅರ್ಥಪೂರ್ಣವಾದ ಉಪನ್ಯಾಸದೊಂದಿಗೆ ಸಂಪನ್ನ ಗೊಂಡಿತು.




ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿ:

ಸಪ್ಟೆಂಬರ್ ತಿಂಗಳ ಕಾರ್ಯಕ್ರಮ ದ ಸಂಕ್ಷಿಪ್ತ ವರದಿ.

ಮೊದಲಿಗೆ ಬಂದಿದ್ದ ಅತಿಥಿಗಳಾದ ಡಾ. ಪ್ರಸನ್ನ ಸಂತೇಕಡೂರು. ಪ್ರಾಧ್ಯಾಪಕರು ಹಾಗೂ ಸಾಹಿತಿಗಳು. ಜೆ ಎಸ್ ಎಸ್ ಮೆಡಿಕಲ್ ಕಾಲೇಜು. ಮೈಸೂರು. ಮತ್ತು ಬಿ. ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಭೈರಮಂಗಲ ರಾಮೇಗೌಡ ಸರ್  ಅವರನ್ನು, ಶಿವರಾಮ ಕಾರಂತರ ವೇದಿಕೆಯ ಅಧ್ಯಕ್ಷರಾದ ಡಾ. ದೀಪಾ ಫಡ್ಕೆಯವರೊಂದಿಗೆ  ವೇದಿಕೆಗೆ ಆಹ್ವಾನಿಸಲಾಯಿತು.


ನಂತರ ನಚಿಕೇತ್ 6ನೇ ತರಗತಿ. ಕೆನ್ ಶ್ರೀ ಶಾಲೆಯ ವಿದ್ಯಾರ್ಥಿ ಒಂದು ಗಣಪತಿಯ ಶ್ಲೋಕವನ್ನು ಹೇಳಿ ತನ್ನ ಮಧುರ ಕಂಠದಿಂದ ಅತ್ಯಂತ ಸುಶ್ರಾವ್ಯವಾಗಿ ಸರಸ್ವತಿಯ ಪ್ರಾರ್ಥನೆಯನ್ನು ಮಾಡಿದ.  ಮತ್ತು ಪುಟ್ಟ ಕಾಣಿಕೆಯೊಂದಿಗೆ ಕುಮಾರ ನಚಿಕೇತ್ ನನ್ನು ಗೌರವಿಸಲಾಯಿತು.

ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತಭಾಷಣದೊಂದಿಗೆ ಅಧ್ಯಕ್ಷರಾದ ದೀಪಾ ಮೇಡಂ ತಮ್ಮ ಚಿಕ್ಕ ಹಾಗೂ ಚೊಕ್ಕ ಮಾತುಗಳಿಂದ ಎಲ್ಲಾ ಹಿರಿಯರನ್ನು, ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನೊಳಗೊಂಡಂತೆ ಪ್ರತಿಯೊಬ್ಬರಿಗೂ ಸ್ವಾಗತ ಕೋರಿದರು. ಡಾ.ಪ್ರಸನ್ನ ಸರ್ ಮತ್ತು ರಾಮೇಗೌಡ ಸರ್ ರವರ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಅತ್ಯಂತ ಸರಳ ಹಾಗೂ ರಸವತ್ತಾದ ನುಡಿಗಳಿಂದ ತಮ್ಮ ಪ್ರಾಸ್ತಾವಿಕ ಮಾತುಗಳನ್ನು... ಮುಗಿಸಿದರು.

ನಂತರ ಡಾ. ಪ್ರಸನ್ನ ಸಂತೇಕಡೂರು ರವರು ತಮ್ಮ ಉಪನ್ಯಾಸವನ್ನು ಆರಂಭಿಸಿದರು.ನಿಜಕ್ಕೂ ಅವರ ಉಪನ್ಯಾಸವು ಅತ್ಯಂತ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದ್ದವು.


ಅವರು ಅಲ್ಲಿದ್ದ ಹಿರಿಯ ಜೀವಗಳನ್ನು ಕಂಡು,ತುಂಬಾ ಸಂತೋಷ ವ್ಯಕ್ತಪಡಿಸಿದರು... ಆರೋಗ್ಯದ ಬಗ್ಗೆ ಮಾತನಾಡುತ್ತಾ, ತಬರನ ಕಥೆಯನ್ನು ಉದಾಹರಣೆಯಾಗಿ ಕೊಟ್ಟು ತಮ್ಮ ಮಾತುಗಳನ್ನು ಇನ್ನಷ್ಟು ಮೆರುಗುಗೊಳಿಸಿದರು. ನಮ್ಮ ಜೀವನ ಶೈಲಿಯಲ್ಲಿ ಯಾವ ರೀತಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಮತ್ತು ಯಾವ ಕ್ರಮಗಳನ್ನು ಪಾಲಿಸಿದರೆ ನಮ್ಮ ದೇಹವು ಸಧೃಡವಾಗಿ ಇರುತ್ತದೆ ಎಂಬುದನ್ನು ಅತ್ಯಂತ ಸ್ಪಷ್ಟ ಹಾಗೂ ಸರಳವಾಗಿ ವಿವರಿಸಿದರು.ಭಾರತದಲ್ಲಿ ಹಲವಾರು ಪ್ರಮುಖರಿಗೆ ಕ್ಯಾನ್ಸರ್ ಇದ್ದ ಉದಾಹರಣೆಗಳನ್ನು ಹೇಳಿದರು... ಮತ್ತು ಅವರುಗಳಲ್ಲಿ ಹಲವಾರು ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿ ಒಳ್ಳೇಯ ಸ್ವಾಸ್ತ್ಯ ಹೊಂದಿರುವ ಆರೋಗ್ಯವನ್ನು, ಜೀವನ ಶೈಲಿಯನ್ನು  ಹೆಸರಿಸಿದರು. ಅತ್ಯಂತ ಮಾರಕ ಕಾಯಿಲೆ ಎಂದು ಪರಿಗಣಿಸಲ್ಪಟ್ಟ, ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ, ನಮ್ಮ ದೇಹದಲ್ಲಿ ಬೊಜ್ಜು ಮತ್ತು ಕೊಲೆಸ್ಟ್ರೋಹಾಲ್ ಎಂಥ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದರು. ಹೆಚ್ಚು ಸೊಪ್ಪು ತರಕಾರಿಗಳನ್ನು ಸೇವಿಸುವುದು, ಪ್ರತಿ ದಿನ ನಡಿಗೆ ವ್ಯಾಯಾಮಗಳನ್ನು ಮಾಡುವುದರ ಅಭ್ಯಾಸವನ್ನು ರೂಢಿಸಿಕೊಂಡರೆ, ನಮ್ಮ ಆರೋಗ್ಯದಲ್ಲಾಗುವ ಸಕಾರಾತ್ಮಕ ಬದಲಾವಣೆಗಳು ಎಂಥ ಗಮನಾರ್ಹವಾಗಿರುತ್ತವೆ ಎಂಬುದನ್ನು ಸಹ ಅಚ್ಚುಕಟ್ಟಾಗಿ ತಿಳಿಸಿದರು.




ಇದಾದ ಮೇಲೆ ವೇದಿಕೆಯ ಪರವಾಗಿ, ಅತಿಥಿಗಳನ್ನು ಗೌರವಿಸಲಾಯಿತು.ನಂತರ ಸ್ವಲ್ಪ ಸಮಯವೇ ಮಾತನಾಡಿದರೂ ಕೂಡ, ಭೈರಮಂಗಲ ರಾಮೇಗೌಡ ಸರ್ ರವರೂ ಸಹ  ತಮ್ಮ ಅಮೂಲ್ಯವಾದ ಮಾತುಗಳಿಂದ ಜನರನ್ನು ಮಾತೇ ಮಾಣಿಕ್ಯವೆಂಬುದನ್ನು ಮತ್ತೊಮ್ಮೆ ಮೌಲ್ಯ ಮಾಪನ ಮಾಡಿಕೊಳ್ಳುವoತೆ ಮಾಡಿದರು. ನಮ್ಮ ವೇದಿಕೆಯ ಬೆನ್ನೆಲುಬಾದ ಚಡಗ ಸರ್ ರವರ ಮಾತುಗಳನ್ನು ಮೆಲುಕು ಹಾಕುತ್ತಾ, ಚಡಗ ಸರ್ ರವರ ಅನ್ಯೂನ್ಯತೆಯ ಬಗ್ಗೆ, ಭಾವ ತುಂಬಿ ಮಾತನಾಡಿದರು. 
ಅಷ್ಟೇ ಅಲ್ಲಾ, ಸಮಿತಿಯಲ್ಲಿ ಪ್ರತ್ಯಕ್ಷವಾಗಿ, ಹಾಗೂ ಪರೋಕ್ಷವಾಗಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವ, ಕಾರ್ಯಕಾರಿ ಸಮಿತಿಯಲ್ಲಿನ ಪ್ರತಿಯೊಬ್ಬರನ್ನು ನೆನೆಯುತ್ತಾ ಶಿವರಾಮ ಕಾರಂತರ ವೇದಿಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು... ಕಡೆಯದಾಗಿ, ಸಮಿತಿಯ ಸದಸ್ಯರಾದ ಸುದೀoದ್ರ ಸರ್ ರವರು ವಂದನಾರ್ಪಣೆಯನ್ನು ಮಾಡಿದರು. 

ಧನ್ಯವಾದಗಳೊಂದಿಗೆ.

ಮಂಜುಳಾ ಭಾರ್ಗವಿ.



Posted 23/9/2024

No comments:

Post a Comment