Tuesday, October 18, 2022

ಬ್ರಾಹ್ಮಣ ಪ್ರಿಯ

  ಬ್ರಾಹ್ಮಣ ಪ್ರಿಯ 




ಆಯುರ್ವೇದ ಮತ್ತು ಯೋಗ ವಿಜ್ಞಾನಗಳ ಮತ್ತು ವೇದಾಂತದ ಪ್ರಕಾರ ಮಾನವರನ್ನು ಐದು ಕೋಶಗಳಿಂದ ಮಾಡಲಾಗಿದೆ ಎಂದು ಹೇಳಬಹುದು. ಅವುಗಳಿಗೆ ಪಂಚ ಕೋಶಗಳೆಂದು ಕರೆಯುತ್ತಾರೆ. ಮಾನವನು ಪಂಚ ಕೋಶಗಳಿಂದ ಉಂಟಾಗಿರುವನೆಂದು ವೇದಾಂತವೂ ಹೇಳುತ್ತದೆ. ತೈತ್ತರೀಯ ಉಪನಿಷತ್ ನಲ್ಲಿ ಇದರ ಸೂಕ್ಷ್ಮ ನಿರೂಪಣೆ ಇದೆ. ಶ್ರೀ ಆದಿ ಶಂಕರರು ರಚಿಸಿರುವ ವಿವೇಕ ಚೂಡಾಮಣಿಯಲ್ಲಿಯೂ ಇದರ ವರ್ಣನೆ ಬರುತ್ತದೆ.

ಮಾನವ ದೇಹವನ್ನು ರೂಪಿಸಿರುವ ಈ ಐದು ಕೋಶಗಳು ಹೀಗಿವೆ:

1. ಅನ್ನಮಯ (ದೇಹ), 

2. ಪ್ರಾಣಮಯ (ಉಸಿರು), 

3. ಮನೋಮಯ (ಮನಸ್ಸು), 

4. ವಿಜ್ಞಾನಮಯ (ಜ್ಞಾನ). 

5. ಆನಂದಮಯ (ಸಂತೋಷ)

1. ಅನ್ನಮಯಕೋಶ

ಈ ಶರೀರವು ಅನ್ನದಿಂದ ಹುಟ್ಟಿದೆ, ಅನ್ನಮಯ ಕೋಶವಾಗಿದೆ. ಇದು ಅನ್ನದಿಂದ ಬದುಕಿರುವುದು. ಅದು ಇಲ್ಲದಿದ್ದರೆ ನಾಶವಾಗುತ್ತದೆ. ಚರ್ಮ (ತ್ವಕ್), ಮಾಂಸ, ರಕ್ತ, ಮೂಳೆ, ಮಜ್ಜೆ, ಸ್ನಾಯು... ಇವುಗಳ ರಾಶಿಯಾಗಿರುವ ಈ ಶರೀರವು ನಿತ್ಯ ಶುದ್ಧವಾದ ಆತ್ಮವಾಗಿರಲಾರದು. 

ಜಡನಾದ ಮನುಷ್ಯನು ತಾನೇ ಶರೀರವೆಂದು ಭಾವಿಸಿಕೊಳ್ಳುತ್ತಾನೆ . ಲೌಕಿಕ ಪಂಡಿತನಾದವನು ಸ್ಥೂಲ ಶರೀರದಲ್ಲಿಯೂ ಮತ್ತು ಜೀವನಲ್ಲಿಯೂ ನಾನು ಎಂಬ ಬುದ್ಧಿಯನ್ನು ಮಾಡುತ್ತಾನೆ . ಆತ್ಮಾನಾತ್ಮ ವಿವೇಚನದಲ್ಲಿ ನಿಪುಣನಾದ ಮಹಾತ್ಮನಿಗೆ ಅವಿನಾಶಿಯಾದ ಆತ್ಮಸ್ವರೂಪದಲ್ಲಿಯೇ ನಾನು ಬ್ರಹ್ಮ ಎಂಬ ಬುದ್ದಿಯುಂಟಾಗುತ್ತದೆ. 

ಕರ್ಮೇಂದ್ರಿಯಗಳು ಅನ್ನಮಯ ಕೋಶಕ್ಕೆ ಸೇರಿದ್ದರೂ ಪ್ರಾಣಮಯಕೋಶದಲ್ಲಿ ಹೇಳಿದೆ. (ವಾಕ್, ಪಾಣಿ, ಪಾದ, ಪಾಯು, ಉಪಸ್ತ.)

2. ಪ್ರಾಣಮಯಕೋಶ:

ಪಂಚ ಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು ಪ್ರಾಣಮಯಕೋಶವಾಗಿರುತ್ತದೆ. ಅನ್ನಮಯಕೋಶವು ಪ್ರಾಣಮಯ ಕೋಶದಿಂದ ತುಂಬಲ್ಪಟ್ಟು ಆತ್ಮವಂತನಾಗಿ ಎಲ್ಲಾ ಕ್ರಿಯೆಗಳಲ್ಲಿಯೂ ಪ್ರವರ್ತಿಸುತ್ತದೆ. 

ಈ ಪ್ರಾಣಮಯ ಕೋಶವು ವಾಯುವಿನ ರೂಪಾಂತರವಾಗಿರುವುದರಿಂದ ಆತ್ಮವಲ್ಲ ; ಏಕೆಂದರೆ ವಾಯುವಿನಂತೆ ಒಳಕ್ಕೆ ಹೋಗುತ್ತಲೂ ಹೊರಕ್ಕೆ ಬರುತ್ತಲೂ ಇರುತ್ತದೆ. ಇದು ಎಲ್ಲಿಯೂ ಇಷ್ಟವನ್ನಾಗಲೀ ಅನಿಷ್ಟವನ್ನಾಗಲೀ ಸ್ವಲ್ಪವೂ ಅರಿತುಕೊಳ್ಳಲಾರದು. ತನ್ನನ್ನಾಗಲೀ ಮತ್ತೊಂದನ್ನಾಗಲೀ ಸ್ವಲ್ಪವೂ ಅರಿಯಲಾರದು. ಯಾವಾಗಲೂ ಪರಾಧೀನವಾಗಿರುತ್ತದೆ. 

ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ  – ಇವು ಪಂಚಪ್ರಾಣಗಳು

3. ಮನೋಮಯ ಕೋಶ:

ಜ್ಞಾನೇಂದ್ರಿಯಗಳೂ ಮನಸ್ಸೂ ಸೇರಿಕೊಂಡು ಮನೋಮಯ ಕೋಶವಾಗಿದೆ. ಇದು ನಾನು ನನ್ನದು ಎಂಬ ವಸ್ತುಗಳ ಭೇದಗಳ ಕಾರಣವಾಗಿದೆ. ನಾಮವೇ ಮೊದಲಾದ ಭೇದಗಳ ಕಲ್ಪನೆಯಿಂದ ಕೂಡಿರುತ್ತದೆ, ಬಲಿಷ್ಟವಾಗಿರುತ್ತದೆ. ಹಿಂದಿನ ಪ್ರಾಣಮಯ ಕೋಶವನ್ನು ವ್ಯಾಪಿಸಿಕೊಂಡು ಹರಡುತ್ತದೆ.

ಪಂಚೇಂದ್ರಿಯಗಳೆಂಬ ಪಂಚಹೋತೃಗಳು ಸುರಿಯುತ್ತಿರುವ ತುಪ್ಪದ ಧಾರೆಯಿಂದ ವರ್ಧಿಸುತ್ತಿರುವ , ಬಹುಬಗೆಯ ವಾಸನೆಗಳೆಂಬ ಕಟ್ಟಿಗೆಗಳಿಂದ ಪ್ರಜ್ವಲಿಸುತ್ತಿರುವ ಮನೋಮಯ ಕೋಶವೆಂಬ ಅಗ್ನಿಯು ಇಡೀ ಪ್ರಪಂಚವನ್ನೇ ಸುಡುತ್ತಿರುವುದು.

ಮನಸ್ಸಿಗಿಂತ ಬೇರೆಯಾದ ಅವಿದ್ಯೆಯು ಇಲ್ಲವೇ ಇಲ್ಲ. ಮನಸ್ಸೇ ಸಂಸಾರಕ್ಕೇ ಕಾರಣವಾದ ಅವಿದ್ಯೆಯು. ಅದು ನಷ್ಟವಾದಾಗ ಎಲ್ಲವೂ ನಷ್ಟವಾಗುತ್ತದೆ. ಅದು ವಿಜೃಂಭಿಸುತ್ತಿರುವಾಗ ಎಲ್ಲವೂ ವಿಜೃಂಭಿಸುತ್ತದೆ.

ಯಾವುದೊಂದು ಬಾಹ್ಯವಸ್ತುವೂ ಇಲ್ಲದಿರುವ ಸ್ವಪ್ನಾವಸ್ತೆಯಲ್ಲಿ ಮನಸ್ಸೇ ತನ್ನ ಶಕ್ತಿಯಿಂದ ಭೋಕ್ತೃವೇ ಮೊದಲಾದ ಪ್ರಪಂಚವೆಲ್ಲವನ್ನೂ ಸೃಜಿಸುತ್ತದೆ . ಹಾಗೆಯೇ ಜಾಗ್ರದವಸ್ಥೆಯಲ್ಲಿಯೂ ಯಾವ ವಿಶೇಷವೂ ಇರುವುದಿಲ್ಲ . ಆದುದರಿಂದ ಇದೆಲ್ಲವೂ ಮನಸ್ಸಿನ ವಿಜೃಂಭಣೆಯೇ .

ಈಮನಸ್ಸು ದೇಹವೇ ಮೊದಲಾದ ಸಮಸ್ತ ವಿಷಯಗಳಲ್ಲಿಯೂ ಆಸಕ್ತಿಯನ್ನು ಉಂಟುಮಾಡಿ, ಅದರಿಂದಲೇ ಮನಷ್ಯನನ್ನು ಹಗ್ಗದಿಂದ ಪಶುವನ್ನು ಕಟ್ಟುವಂತೆ ಕಟ್ಟುತ್ತದೆ. ಆ ಮನಸ್ಸೇ ಅನಂತರ ಈ ವಿಷಯಗಳಲ್ಲಿ ವೈರಾಗ್ಯವನ್ನುಂಟುಮಾಡಿ ಈ ಜೀವನನ್ನು ಬಿಡಿಸುತ್ತದೆ. 

ಆದುದರಿಂದ ಈ ಜೀವನಿಗೆ ಬಂಧನವನ್ನಾಗಲೀ ಮೋಕ್ಷವನ್ನಾಗಲೀ ಉಂಟುಮಾಡುವ ವಿಷಯದಲ್ಲಿ ಮನಸ್ಸೇ ಕಾರಣವಾಗಿರುತ್ತದೆ. ರಜೋಗುಣಗಳಿಂದ ಮಲಿನವಾದ ಈ ಮನಸ್ಸೇ ಬಂಧಕ್ಕೆ ಕಾರಣವು. ರಜಸ್ತಮೋಗುಣಗಳಿಂದ ರಹಿತವಾದ ಶುದ್ಧವಾದ ಮನಸ್ಸು ಮೋಕ್ಷಕ್ಕೆ ಕಾರಣವು. 

ಮನಸ್ಸೇ ಸಂಸಾರಿಗೆ ಸ್ಥೂಲರೂಪದಿಂದಲೂ ಸೂಕ್ಷ್ಮರೂಪದಿಂದಲೂ ವಿಷಯಗಳೆಲ್ಲವನ್ನೂ ಉಂಟುಮಾಡುತ್ತದೆ. ಮತ್ತು ಶರೀರ, ವರ್ಣ, ಆಶ್ರಮ, ಜಾತಿ ಇವುಗಳನ್ನೂ ಗುಣ, ಕ್ರಿಯೆ, ಹೇತು, ಫಲ, ಇವುಗಳನ್ನು ಯಾವಾಗಲೂ ಉಂಟುಮಾಡುತ್ತದೆ. 

ಆದುದರಿಂದ ತತ್ವದರ್ಶಿಗಳಾದ ಜ್ಞಾನಿಗಳು ಮನಸ್ಸನ್ನೇ ಅವಿದ್ಯೆಯೆಂದು ಹೇಳುತ್ತಾರೆ. ಗಾಳಿಯು ಮೇಘಮಂಡಲವನ್ನು ಸುತ್ತುವಂತೆ ಈ ಮನಸ್ಸು ವಿಶ್ವವೆಲ್ಲವನ್ನೂ ಸುತ್ತುತ್ತಿರುವುದು.

4. ವಿಜ್ಞಾನಮಯಕೋಶ

ಜ್ಞಾನೇಂದ್ರಿಯಗಳಿಂದ ಕೂಡಿದ ವೃತ್ತಿ ಸಹಿತವಾದ ಬುದ್ಧಿಯು ಕರ್ತೃವಿನ ಲಕ್ಷಣವುಳ್ಳ ವಿಜ್ಞಾನಮಯ ಕೋಶವಾಗಿರುತ್ತದೆ. ಇದು ಮನುಷ್ಯನ ಸಂಸಾರಕ್ಕೆ ಕಾರಣವು. 

ಚಿದಾತ್ಮನ ಪ್ರತಿಬಿಂಬದ ಶಕ್ತಿಯಿಂದ ಅನುಸರಿಸಲ್ಪಟ್ಟ ವಿಜ್ಞಾನವೆಂಬ ಪ್ರಕೃತಿಯ ವಿಕಾರವು ಜ್ಞಾನಕ್ರಿಯೆಗಳುಳ್ಳದ್ದು. ಇವು ದೇಹ ಇಂದ್ರಿಯ ಇವೇ ಮೊದಲಾದವುಗಳಲ್ಲಿ ನಾನು ಎಂಬ ಅಭಿಮಾನವನ್ನು ಪಡೆಯುತ್ತದೆ.

(ವಿಜ್ಞಾಮಯ ಕೋಶವು ಅಚೇತನವು ; ಚಿತ್ ಶಕ್ತಿಯ ಪ್ರಭಾವದಿಂದ ಚೇತನವಾಗಿರುವಂತೆ ತೋರುತ್ತದೆ)

ವಿಜ್ಞಾನಮಯನಿಗೆ ಆದಿ ಇಲ್ಲ. ಇವನು ದೇಹೇಂದ್ರಿಯಾದಿಗಳಲ್ಲಿ ನಾನು ಎಂಬ ಬುದ್ಧಿಯುಳ್ಳವನು. ಜೀವನೆಂಬ ಹೆಸರುಳ್ಳವನು. ಸಮಸ್ತ ವ್ಯವಹಾರಗಳನ್ನೂ ಮಾಡುವವನು. (ಎಲ್ಲಾ ಕರ್ಮಗಳನ್ನೂ ಮಾಡಿ ಅದರ ಫಲವನ್ನು ಉಣ್ಣುವವನು). ಇವನು ಪೂರ್ವ ವಾಸನೆಯಿಂದ ಸುಕೃತ – ದುಷ್ಕೃತಗಳನ್ನು ಮಾಡುತ್ತಾನೆ. ಅವುಗಳ ಫಲವನ್ನೂ ಉಣ್ಣುತ್ತಾನೆ. ಬಗೆ ಬಗೆಯ ಯೋನಿಗಳಲ್ಲಿ ಪ್ರವೇಶಿಸಿ ಕೆಳಕ್ಕೇ ಬರುತ್ತಾನೆ , ಮೇಲಕ್ಕೆ ಹೋಗುತ್ತಾನೆ. ಜಾಗ್ರತ್ -ಸ್ವಪ್ನ-ಸುಷುಪ್ತಿ ಮೊದಲಾದ ಅವಸ್ಥೆಗಳೂ , ಸುಖ ದುಃಖಗಅನುಭವವೂ ಈ ವಿಜ್ಞಾನಮಯನಿಗೆ ಉಂಟಾಗುತ್ತವೆ.

ಇದು ದೇಹಾದಿ – ಸಂಘಾತಗಳಲ್ಲಿ ಕಲ್ಪಿತವಾದ ವರ್ಣಾಶ್ರಮ ಧರ್ಮಗಳ ಕರ್ಮಗಳು, ಗುಣಗಳು -ಇವುಗಳಲ್ಲಿ ಯಾವಾಗಲೂ ನನ್ನವು ಎಂದು ಅಭಿಮಾನವನ್ನು ಮಾಡುತ್ತದೆ. ಈ ವಿಜ್ಞಾನಮಯಕೋಶವು ಪರಮಾತ್ಮನ ಪ್ರಬಲ ಸಾಮೀಪ್ಯದಿಂದ ವಿಶೇಷ ಪ್ರಕಾಶವುಳ್ಳದ್ಧಾಗಿರುತ್ತದೆ. ಆದುದರಿಂದ ಈ ಆತ್ಮನಿಗೆ ಇದು ಉಪಾದಿಯಗಿರುತ್ತದೆ. ಈ ಉಪಾದಿಯಲ್ಲಿ ನಾನು ಎಂಬ ಬುದ್ಧಿಯುಳ್ಳವನಾಗಿ ಆತ್ಮನು ಭ್ರಮೆಯಿಂದ ಸಂಸಾರ ಬಂಧನಕ್ಕೆ ಸಿಕ್ಕಿಬೀಳುತ್ತಾನೆ. 

ಈ ಆತ್ಮನು ನಿರ್ವಿಕಾರನಾಗಿದ್ದರೂ, ಉಪಾದಿ ವಶದಿಂದ ಕರ್ತೃವೂ ಭೋಕ್ತೃವೂ ಆಗುತ್ತಾನೆ. ಇವನು ಈ ಕಾರಣದಿಂದ ತನ್ನನ್ನೇ ತನಗಿಂತ ಬೇರೆಯಾಗಿ ನೋಡುತ್ತಾನೆ. ನಾನು ಸುಖಿ ದುಃಖಿ ಇತ್ಯಾದಿ ಉಪಾದಿಯ ಧರ್ಮವನ್ನು ಅನುಸರಿಸುತ್ತಾನೆ.

5. ಆನಂದಮಯ ಕೋಶ

ಆನಂದದ ಪ್ರತಿಬಿಂಬವಾದ ವ್ಯಾಪ್ತವಾದ ಸ್ವರೂಪವುಳ್ಳ ಅವಿದ್ಯೆಯೆಂಬ ತಮಸ್ಸಿನಿಂದ ಹುಟ್ಟಿದ ವೃತ್ತಿಯು ಆನಂದ ಮಯ ಕೋಶವಾಗುತ್ತದೆ. (ಎಂದರೆ ಅವಿದ್ಯಾ ಪರಿಣಾಮ ವೃತ್ತಿಯಲ್ಲಿ ಆತ್ಮ ಚೈತನ್ಯವು ಪ್ರತಿಬಿಂಬಿಸುತ್ತದೆ.) ಇದು ಪ್ರಿಯವೇ ಮೊದಲಾದ ಗುಣವನ್ನು ಪಡೆದಿದೆ. ಇಷಾರ್ಥವು ಕೈಗೂಡಿದಾಗ ಉದಯವಾಗುತ್ತದೆ. ಪುಣ್ಯವಂತರಿಗೆ ಪುಣ್ಯ ಕರ್ಮಫಲದ ಅನುಭವವಾದಾಗ ತೋರಿಕೊಳ್ಳುತ್ತದೆ; ಈ ಆನಂದ ಮಯ ಕೋಶದಲ್ಲಿ ಶರೀರವುಳ್ಳವನು ಪ್ರಯತ್ನ ಮಾಡದೆಯೇ ಸ್ವಯಂ ಆನಂದರೂಪನಾಗಿ ಚೆನ್ನಾಗಿ ಸಂತೋಷಿಸುತ್ತಾನೆ.

ಸುಷುಪ್ತಿಯಲ್ಲಿ ಆನಂದಮಯ ಕೋಶದ ಸ್ಫೂರ್ತಿಯು ಪೂರ್ಣವಾಗಿರುತ್ತದೆ. ಕನಸು ಎಚ್ಚರ ಇವುಗಳಲ್ಲಿ ಪ್ರಿಯ ವಸ್ತುಗಳ ದರ್ಶನವೇ ಮೊದಲಾದ ಕಾರಣಗಳಿಂದ ಸ್ವಲ್ಪವಾಗಿ ತೋರುತ್ತದೆ. 

ಈ ಆನಂದಮಯ ಕೋಶವೂ ಪರಮಾತ್ಮನಲ್ಲ. ಏಕೆಂದರೆ ಇದು ಉಪಾದಿಯಿಂದ ಕೂಡಿದೆ ; ಪ್ರಕೃತಿಯ ವಿಕಾರವಾಗಿದೆ. ಪುಣ್ಯ ಕರ್ಮದ ಫಲವಾಗಿದೆ ಮತ್ತು ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿದೆ. 

ಆತ್ಮನು ಕೇವಲ ಸಾಕ್ಷಿ

ಶ್ರುತಿಯಿಂದಲೂ ಯುಕ್ತಿಯಿಂದಲೂ ಈ ಐದು ಕೋಶಗಳನ್ನೂ ನಿರಾಕರಿಸಿದರೆ , ಅವುಗಳ ನಿಷೇಧವೇ ಎಲ್ಲೆಯಾಗಿ ಸಾಕ್ಷಿಯೂ ಜ್ಞಾನ ಸ್ವರೂಪನೂ ಆದ ಪರಮಾತ್ಮನು ಉಳಿದುಕೊಳ್ಳುತ್ತಾನೆ.

From WhatsApp


No comments:

Post a Comment